Ranganayaka OTT: ಜಗ್ಗೇಶ್- ಗುರುಪ್ರಸಾದ್ ಜೋಡಿ 'ರಂಗನಾಯಕ' ಓಟಿಟಿ ರಿಲೀಸ್ ಎಲ್ಲಿ, ಯಾವಾಗ?
ನವರಸ ನಾಯಕ ಜಗ್ಗೇಶ್ ನಟನೆಯ 'ರಂಗನಾಯಕ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಗುರುಪ್ರಸಾದ್ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ. ಸಿನಿಮಾ ನೋಡಿದ ಬಹುತೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಡಬಲ್ ಮೀನಿಂಗ್, ಪೋಲಿ ಡೈಲಾಗ್ಗಳೇ ಸಿನಿಮಾನಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾಗಳಲ್ಲಿ ಜಗ್ಗೇಶ್, ಗುರುಪ್ರಸಾದ್ ಒಟ್ಟಿಗೆ ಕೆಲಸ ಮಾಡಿದ್ದರು. ಆ ಎರಡೂ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿದ್ದವು. ಸಣ್ಣಪುಟ್ಟ ಡಬಲ್ ಮೀನಿಂಗ್ ಡೈಲಾಗ್ಗಳು ಆ ಚಿತ್ರದಲ್ಲಿ ಇದ್ದವು. ಆದರೂ ಗುರುಪ್ರಸಾದ್ ಬರವಣೆಗೆ, ಜಗ್ಗೇಶ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. 'ಮಠ' ಚಿತ್ರ ಅಂತೂ ಜಗ್ಗಣ್ಣನಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು ಸುಳ್ಳಲ್ಲ.

'ರಂಗನಾಯಕ' ಚಿತ್ರದಲ್ಲೂ ಜಗ್ಗೇಶ್ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋಲಲಿಲ್ಲ. ನವರಸ ನಾಯಕನ ಸ್ಕ್ರೀನ್ ಪ್ರಸೆನ್ಸ್, ಹಾವಭಾವ, ಡೈಲಾಗ್ ಡೆಲಿವರಿ ಚೆನ್ನಾಗಿದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಸೋತಿದ್ದಾರೆ. ಅತಿರೇಕದ ಹಾಸ್ಯ, ಅಶ್ಲೀಲ ಡೈಲಾಗ್ಗಳು ವಾಕರಿಕೆ ತರಿಸುವಂತಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಮೊದಲಾರ್ಧ ನಿರ್ದೇಶಕ ಗುರುಪ್ರಸಾದ್ ಹೆಚ್ಚು ಕಾಣಿಸಿಕೊಂಡರೆ ಜಗ್ಗೇಶ್ ಅವರದ್ದು ಅತಿಥಿ ಪಾತ್ರದಂತೆ ಭಾಸವಾಗುತ್ತದೆ.
ನಿರ್ದೇಶಕ ಗುರುಪ್ರಸಾದ್ ಹಿಂದಿನ ಜನ್ಮದಲ್ಲಿ ಭಾರತದ ಮೊದಲ ಸಿನಿಮಾ ನಿರ್ದೇಶಕ ಪದ್ಮನಾಭ ಶರ್ಮ ಆಗಿದ್ದರು ಎನ್ನುವ ಕಾಲ್ಪನಿಕ ಕಥೆಯನ್ನು ಹೇಳಲಾಗಿದೆ. ಆತ ಮಾಡಿದ ಸಿನಿಮಾ ಹೆಸರು 'ರಂಗನಾಯಕ'. ಬಿಡುಗಡೆ ಆಗದ ಆ ಚಿತ್ರದ ನಾಯಕನಾಗಿ ಜಗ್ಗೇಶ್ ನಟಿಸಿದ್ದರು. ಆಗ ಇಬ್ಬರ ಸಿನಿಮಾ ಬಿಡುಗಡೆ ಆಗಲಿಲ್ಲ. ಈ ಜನ್ಮದಲ್ಲಿ ಇಬ್ಬರು ಸೇರಿ 'ಮಠ', 'ಎದ್ದೇಳು ಮಂಜುನಾಥ' ಸಿನಿಮಾ ಮಾಡಿದ್ದೀವಿ ಎಂದು ಹೇಳುವ ಸಾಹಸ ಮಾಡಲಾಗಿದೆ.
ಅನೂಪ್ ಸಿಳೀನ್ ಸಂಗೀತದ ಎರಡು ಹಾಡುಗಳು ಚೆನ್ನಾಗಿದೆ. ಜಗ್ಗೇಶ್, ಗುರುಪ್ರಸಾದ್ ಜೊತೆಗೆ ಚೈತ್ರಾ ಕೋಟೂರು, ಯೋಗರಾಜ್ ಭಟ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಹಾಗೆ 'ರಂಗನಾಯಕ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಜೀ ಸಂಸ್ಥೆಯ ಪಾಲಾಗಿದೆ. ಜೀ5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 'ಎ' ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತಾರಾ? ಎನ್ನುವ ಅನುಮಾನವೂ ಕೆಲವರನ್ನು ಕಾಡುತ್ತಿದೆ.

ಜಗ್ಗೇಶ್- ಗುರುಪ್ರಸಾದ್ ಹ್ಯಾಟ್ರಿಕ್ ಸಿನಿಮಾ ಎನ್ನುವ ಕಾರಣಕ್ಕೆ 'ರಂಗನಾಯಕ' ಭಾರೀ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಆದರೆ ಆ ನಿರೀಕ್ಷೆ ಹುಸಿಯಾಗಿ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಒಂದೊಳ್ಳೆ ಅವಕಾಶವನ್ನು ಇಬ್ಬರು ವ್ಯರ್ಥಮಾಡಿಕೊಂಡಿಕೊಂಡಿರುವುದು ಸುಳ್ಳಲ್ಲ.
ಮೊದಲ ಎರಡು ಸಿನಿಮಾಗಳ ಬಳಿಕ ಜಗ್ಗೇಶ್ ಹಾಗೂ ಗುರುಪ್ರಸಾದ್ ದೂರಾಗಿದ್ದರು. ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ವೇದಿಕೆಗಳಲ್ಲಿ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡಿದ್ದು ಇಷ್ಟವಾಗದೇ ಮತ್ತೆ ಒಟ್ಟಿಗೆ ಸಿನಿಮಾ ಮಾಡುವುದು ಬೇಡ ಎಂದುಕೊಂಡಿದ್ದರು. ನಿರ್ಮಾಪಕ ವಿಖ್ಯಾತ್ ಇಬ್ಬರು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿ ಗೆದ್ದಿದ್ದಾರೆ. ಆದರೆ ಸಿನಿಮಾ ಭವಿಷ್ಯ ಏನಾಗುತ್ತೋ ಕಾದು ನೋಡಬೇಕಿದೆ.
ಇತ್ತೀಚೆಗೆ ತಿಂಗಳಿಗೂ ಮೊದ್ಲೆ ಸಿನಿಮಾಗಳು ಓಟಿಟಿಗೆ ಬರ್ತಿದೆ. ಸಾಮಾನ್ಯವಾಗಿ 45 ದಿನಗಳ ಬಳಿಕ ಸ್ಟ್ರೀಮಿಂಗ್ಗೆ ಒಪ್ಪಂದವಾಗುತ್ತದೆ. ಆದರೆ ಅದಕ್ಕೂ ಮುನ್ನ ಸಿನಿಮಾಗಳು ಸ್ಮಾಲ್ ಸ್ಕ್ರೀನ್ಗೆ ಬರುತ್ತಿವೆ. 'ಕಾಟೇರ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಜೀ5ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಆ ಬಳಿಕ ಕೂಡ ಸಿನಿಮಾ ಥಿಯೇಟರ್ಗಳಲ್ಲಿ 50 ದಿನ ಪೂರೈಸಿತ್ತು. 'ರಂಗನಾಯಕ' ಕೂಡ ತಿಂಗಳಿಗೂ ಮುನ್ನ ಅಂದ್ರೆ ಏಪ್ರಿಲ್ ಮೊದಲ ವಾರದಲ್ಲೇ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.


Click it and Unblock the Notifications











