ರಾಜಿ ಪಾತ್ರದಲ್ಲಿ ನಟಿಸಿದ್ದಕ್ಕೆ ತಮಿಳಿಗರ ಕ್ಷಮೆ ಕೇಳಿದ ಸಮಂತಾ
'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ವೆಬ್ ಸರಣಿಯಲ್ಲಿ 'ರಾಜಿ' ಪಾತ್ರದಲ್ಲಿ ನಟಿಸಿದ್ದಕ್ಕೆ ನಟಿ ಸಮಂತಾ ಅಕ್ಕಿನೇನಿ ತಮಿಳಿಗರ ಕ್ಷಮೆ ಕೇಳಿದ್ದಾರೆ.
ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ವೆಬ್ ಸರಣಿಯು ಎಲ್ಟಿಟಿಇ ಸಂಬಂಧಿತ ಕತೆಯನ್ನು ಹೊಂದಿತ್ತು. ಸರಣಿಯಲ್ಲಿ ರಾಜಿ ಹೆಸರಿನ ಎಲ್ಟಿಟಿಇ ಸದಸ್ಯೆಯ ಪಾತ್ರದಲ್ಲಿ ನಟಿ ಸಮಂತಾ ನಟಿಸಿದ್ದರು. ಇದಕ್ಕೆ ತೀವ್ರ ವಿರೋಧವನ್ನು ತಮಿಳಿನ ಕೆಲವು ರಾಜಕೀಯ ಮುಖಂಡರು ಮತ್ತು ಜನರು ವ್ಯಕ್ತಪಡಿಸಿದ್ದರು.
ತಮ್ಮ ಪಾತ್ರದ ಬಗ್ಗೆ ಸಾಕಷ್ಟು ವಿವಾದ ಎದ್ದಿದ್ದಾಗ ಬಹುತೇಕ ಮೌನವಾಗಿದ್ದ ನಟಿ ಸಮಂತಾ ಇದೀಗ ಮಾತನಾಡಿದ್ದು, ಪಾತ್ರದಲ್ಲಿ ನಟಿಸಿದ್ದಕ್ಕೆ ತಮಿಳು ಜನರ ಕ್ಷಮಾಪಣೆ ಕೇಳಿದ್ದಾರೆ.

ರಾಜಿ ಪಾತ್ರದಲ್ಲಿ ನಟಿಸಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ: ಸಮಂತಾ
ಬಾಲಿವುಡ್ ಹಂಗಾಮಾಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸಮಂತಾ, ''ಜನರು ತಮ್ಮದೇ ಆದ ಸ್ವಂತ ಅಭಿಪ್ರಾಯಗಳನ್ನು ಹೊಂದುವುದನ್ನು ನಾನು ಬೆಂಬಲಿಸುತ್ತೇನೆ. ಪಾತ್ರದ ಬಗ್ಗೆ ಅವರು ಅದೇ ಅಭಿಪ್ರಾಯವನ್ನು ಈಗಲೂ ಹೊಂದಿದ್ದರೆ ಆ ಪಾತ್ರ ನಿರ್ವಹಿಸಿದ್ದಕ್ಕೆ ನಾಣು ಬೇಷರತ್ ಕ್ಷಮೆ ಕೇಳುತ್ತೇನೆ. ಬೇಕೆಂದು ಯಾರ ಮನಸ್ಸಿಗೆ ಘಾಸಿಗೊಳಿಸುವ ಉದ್ದೇಶದಿಂದ ನಾನು ಆ ಪಾತ್ರದಲ್ಲಿ ನಟಿಸಲಿಲ್ಲ. ನಾನು ನಟಿಸಿದ ಪಾತ್ರದಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ನನ್ನನ್ನು ಕ್ಷಮಿಸಿ'' ಎಂದಿದ್ದಾರೆ ಸಮಂತಾ.

''ವೆಬ್ ಸರಣಿ ಬಿಡುಗಡೆ ನಂತರ ವಿರೋಧ ಕಡಿಮೆಯಾಯ್ತು''
ಮುಂದುವರೆದು, ''ವೆಬ್ ಸರಣಿ ಬಿಡುಗಡೆ ಆದ ಬಳಿಕ ಅದರ ವಿರುದ್ಧ ಎದ್ದಿದ್ದ ಕೂಗು ತುಸು ಅಡಗಿತು. ವೆಬ್ ಸರಣಿ ನೋಡಿದ ಬಳಿಕ ಹಲವರಿಗೆ ಅನಿಸಿರಬಹುದು ಯಾರ ಬಗ್ಗೆಯೂ ಕೆಟ್ಟದಾಗಿ ತೋರಿಸಿಲ್ಲ ಎನಿಸಿರಬಹುದು. ವೆಬ್ ಸರಣಿ ನೋಡಿದ ಮೇಲೆಯೂ ಅಭಿಪ್ರಾಯ ಬದಲಾಗದವರು ಇರಬಹುದು ಅವರಿಗೆ ನಾನು ಬೇಷರತ್ ಕ್ಷಮೆ ಕೇಳುತ್ತಿದ್ದೇನೆ. ನಾನು ಉದ್ದೇಶಪೂರ್ವಕವಾಗಿ ಯಾರಿಗೂ ನೋವು ಮಾಡುವ ಉದ್ದೇಶದಿಂದ ಆ ಪಾತ್ರದಲ್ಲಿ ನಟಿಸಿಲ್ಲ'' ಎಂದಿದ್ದಾರೆ.

ರಾಜಿ ಪಾತ್ರಕ್ಕೆ ಭಾರಿ ಪ್ರಶಂಸೆ
'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯಲ್ಲಿ ಎಲ್ಟಿಟಿಇ ಸದಸ್ಯರು ಭಯೋತ್ಪಾದಕ ಸಂಘಟನೆ ಜೊತೆ ಕೈಜೋಡಿಸಿ ಭಾರತದಲ್ಲಿ ಆತಂಕ ಸೃಷ್ಟಿಸಲು ಯತ್ನಿಸಿರುವಂತೆ ತೋರಿಸಲಾಗಿತ್ತು. ಎಲ್ಟಿಟಿಇಯ ಯೋಧೆ ರಾಜಿ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಸಮಂತಾ ನಟನೆಗೆ ಅದ್ಭುತವಾದ ಪ್ರತಿಕ್ರಿಯೆಗಳು ಬಂದಿದ್ದವು. ಸಮಂತಾ ಈವರೆಗೆ ನಟಿಸಿರುವ ಅದ್ಭುತ ಪಾತ್ರ ಮತ್ತು ನಟನೆ ಎಂದು ಹಲವರು ಹೊಗಳಿದ್ದರು. ಆದರೆ ತಮಿಳಿನ ಕೆಲವು ರಾಜಕೀಯ ಮುಖಂಡರು ಹಾಗೂ ಕೆಲವು ಸಂಘಟನೆಗಳವರು ವೆಬ್ ಸರಣಿ ಹಾಗೂ ಸಮಂತಾ ವಿರುದ್ಧ ಆಕ್ಷೇಪಣೆ ಎತ್ತಿ ಪ್ರತಿಭಟನೆ ಸಹ ಮಾಡಿದ್ದರು.

ವೆಬ್ ಸರಣಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು
'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ಬಿಡುಗಡೆ ಆಗುವ ಮುನ್ನ ಹಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿ ವೆಬ್ ಸರಣಿಯನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು ಎಂಡಿಎಂಕೆ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ವೈಕೋ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ಗೆ ಪತ್ರ ಬರೆದು ವೆಬ್ ಸರಣಿಯನ್ನು ನಿಷೇಧ ಮಾಡುವಂತೆ ಒತ್ತಾಯಿಸಿದ್ದರು. 'ವೆಬ್ ಸರಣಿಯಲ್ಲಿ ತಮಿಳರನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ. ತಮಿಳರು ಉಗ್ರಗಾಮಿಗಳು, ಅವರಿಗೆ ಪಾಕಿಸ್ತಾನದ ಐಎಸ್ಐ ಜೊತೆಗೆ ನಂಟಿದೆ' ಎಂಬಂತೆ ವೆಬ್ ಸರಣಿಯಲ್ಲಿ ತೋರಿಸಲಾಗಿದೆ. ಇದು ತಮಿಳರಿಗೆ ಮಾಡಿರುವ ಅವಮಾನ' 'ಮುಖ್ಯವಾಗಿ 'ತಮಿಳ್ ಇಳಮ್' (ಶ್ರೀಲಂಕಾ ಸರ್ಕಾರದ ವಿರುದ್ಧ ಹೋರಾಡಿದ ತಮಿಳರು)ಗೆ ವೆಬ್ ಸರಣಿಯಲ್ಲಿ ಅವಮಾನ ಮಾಡಲಾಗಿದೆ. 'ತಮಿಳ್ ಇಳಮ್' ಯೋಧರು ಮಾಡಿರುವ ತ್ಯಾಗಕ್ಕೆ ಅಪಮಾನ ಮಾಡಲಾಗಿದೆ. 'ತಮಿಳ್ ಇಳಮ್' ಯೋಧರು ಪಾಕಿಸ್ತಾನದ ಜೊತೆಗೆ ನಂಟು ಹೊಂದಿದ್ದಾರೆ ಎಂಬಂತೆ ವೆಬ್ ಸರಣಿಯಲ್ಲಿ ಚಿತ್ರಿಸಲಾಗಿದೆ' ಎಂದು ಹೇಳಿದ್ದಾರೆ ವೈಕೋ ಪ್ರಕಾಶ ಜಾವಡೇಕರ್ಗೆ ಬರೆದ ಪತ್ರದಲ್ಲಿ ಹೇಳಿದ್ದರು. ತಮಿಳರ್ ಕಚ್ಚಿ ರಾಜಕೀಯ ಪಕ್ಷದ ಮುಖಂಡ ಸೀಮನ್ ಸಹ ವೆಬ್ ಸರಣಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ವೆಬ್ ಸರಣಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.


Click it and Unblock the Notifications











