ಬಿಡುಗಡೆಯಾಗಿ ಕೇವಲ ಒಂದು ತಿಂಗಳಿನಲ್ಲೇ ಓಟಿಟಿಗೆ ಬಂತು ಆಶಿಕಾ ರಂಗನಾಥ್ ಅಭಿನಯದ ಸಿನಿಮಾ..!
ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ.
ಇನ್ನೂ ಹೀಗೆ ಗುಳೆ ಹೋಗುವರಲ್ಲಿ ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ. ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಸದ್ಯ ಹೀಗೆ ಕನ್ನಡದಿಂದ ಪರಭಾಷೆಗೆ ತೆರಳಿ ಅಲ್ಲಿ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳುತ್ತಿರುವ ಆಶಿಕಾ ರಂಗನಾಥ್ ಅವರ ಚಿತ್ರವೊಂದು ಓಟಿಟಿಯಲ್ಲಿ ತೆರೆಗೆ ಬಂದಿದೆ. ಆ ಚಿತ್ರದ ಹೆಸರು ಮಿಸ್ ಯು.

ಭಾರತದೆಲ್ಲೆಡೆ ಪುಷ್ಪ 2 ಚಿತ್ರದ ಅಬ್ಬರ ಶುರುವಾದ ಸಮಯದಲ್ಲಿ ಮಿಸ್ ಯು ಚಿತ್ರಮಂದಿರದಲ್ಲಿ ತೆರೆಗೆ ಬಂದಿತ್ತು. ಹೀಗಾಗಿ ಚಿತ್ರಕ್ಕೆ ಸಿಗಬೇಕಿದ್ದ ಪ್ರಚಾರ ಸಿಗಲಿಲ್ಲ. ಆಶಿಕಾ ರಂಗನಾಥ್ ಅವರ ಎದುರು ಸಿದ್ಧಾರ್ಥ್ ನಾಯಕನಾಗಿ ಕಾಣಿಸಿಕೊಂಡಿದ್ದರು ಕೂಡ ಪ್ರಯೋಜನವಾಗಲಿಲ್ಲ. ಇನ್ನು ಚಿತ್ರದ ಬಿಡುಗಡೆಯ ಸಮಯದಲ್ಲಿ ಮಿಸ್ ಯು ಚಿತ್ರಕ್ಕಿಂತ ಪುಷ್ಪ 2 ಚಿತ್ರ ಕುರಿತೇ ಸಿದ್ಧಾರ್ಥ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದರಿಂದ ರೋಸಿ ಹೋದ ಸಿದ್ದಾರ್ಥ್ ಜೆಸಿಬಿ ನೋಡಲು ಕೂಡ ನಮ್ಮ ದೇಶದಲ್ಲಿ ಜನ ಸೇರ್ತಾರೆ ಎಂದು ಹೇಳಿದ್ದರು. ಹೀಗೆ ಪುಷ್ಪರಾಜ್ ಮುಂದೆ ಬಂದ ಮಿಸ್ ಯು ಒಂದು ವಾರದಲ್ಲಿ ಹತ್ ಹತ್ರ 5 ಕೋಟಿಯನ್ನು ಗಳಿಸಿತ್ತು. ಆ ನಂತರ ಚಿತ್ರಮಂದಿರದಿಂದ ಕಾಣೆಯಾಯಿತು.
ಇಂತಹ ಮಿಸ್ ಯು ಚಿತ್ರ ಈಗ ತೆರೆಗೆ ಬಂದು ಒಂದು ತಿಂಗಳಾಗಿದೆ. ಅಷ್ಟರಲ್ಲಿಯೇ ಚಿತ್ರ ಓಟಿಟಿ ವೇದಿಕೆಗೆ ಬಂದಿದೆ. ಮೊನ್ನೆ.. ಶುಕ್ರವಾರದಿಂದ ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗುತ್ತಿದೆ. ಅಂದ್ಹಾಗೇ ಮಿಸ್ ಯು ಚಿತ್ರ ಹಳೆಯ ಪ್ರಿಯತಮೆ ಮತ್ತು ಬದ್ಧ ವೈರಿಯನ್ನು ಮರೆತ ವ್ಯಕ್ತಿಯೊಬ್ಬನ ಕಥೆ ಮತ್ತು ವ್ಯಥೆ. ರಾಜ್ಯದ ಮುಖ್ಯಮಂತ್ರಿಯ ಕುತಂತ್ರದಿಂದ ಅಪಘಾತಕ್ಕೀಡಾಗುವ ಚಿತ್ರದ ಕಥಾನಾಯಕ ವಾಸುದೇವನ್ನ {ಸಿದ್ಧಾರ್ಥ್} ಎರಡು ವರ್ಷದ ಮೆಮೋರಿ ಡಿಲೀಟ್ ಆಗಿರುತ್ತೆ. ಮುಖ್ಯಮಂತ್ರಿಯೇ ನನ್ನ ವೈರಿ ಎನ್ನುವುದು ಕೂಡ ವಾಸುದೇವನ್ಗೆ ನೆನಪಿರುವುದಿಲ್ಲ.

ಹೀಗಿರುವಾಗ ಬೆಂಗಳೂರಿಗೆ ಬರುವ ವಾಸು ಅದೊಂದು ದಿನ ಸುಬ್ಬಲಕ್ಷ್ಮಿಯನ್ನು {ಆಶಿಕಾ ರಂಗನಾಥ್} ನೋಡುತ್ತಾನೆ. ನೋಡಿದ ಕೂಡಲೇ ಪ್ರೀತಿಯಲ್ಲಿ ಬೀಳುತ್ತಾನೆ. ಸುಬ್ಬಲಕ್ಷ್ಮಿಯ ಧೈರ್ಯ ಮತ್ತು ಮುಗ್ದತೆಗೆ ಮನ ಸೋಲುತ್ತಾನೆ. ಮದುವೆಯಾದರೆ ಇವಳನ್ನೇ ಮದುವೆಯಾಗಬೇಕೆಂದುಕೊಂಡು ಸುಬ್ಬಲಕ್ಷ್ಮಿಯ ಫೋಟೊವನ್ನು ಕೈಯಲ್ಲಿ ಹಿಡಿದು ಮನೆಗೆ ಬರುತ್ತಾನೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಮುಂದೇನಾಗುತ್ತೆ ? ಮರೆತು ಹೋದ ಎರಡು ವರ್ಷದ ಘಟನೆಯೆಲ್ಲ ವಾಸುದೇವನ್ಗೆ ನೆನಪಾಗುತ್ತಾ ? ಸುಬ್ಬಲಕ್ಷ್ಮಿಯನ್ನು ಮದ್ವೆಯಾಗ್ತಾನಾ ? ಮುಖ್ಯಮಂತ್ರಿ ವಿರುದ್ದ ಸೇಡು ತೀರಿಸಿಕೊಳ್ಳುತ್ತಾನಾ ಎನ್ನುವ ಪ್ರಶ್ನೆಗೆ ಉತ್ತರವನ್ನು ನೀವು ಚಿತ್ರವನ್ನು ನೋಡಿಯೇ ಪಡೆಯಬೇಕು.
ಸಿದ್ದಾರ್ಥ್ ಮತ್ತು ಆಶಿಕಾ ರಂಗನಾಥ್ ಹೊರತು ಪಡಿಸಿದರೆ ಚಿತ್ರದಲ್ಲಿ ಕರುಣಾಕರಣ್, ಜಯಪ್ರಕಾಶ್, ಬಾಲಾ ಸರವಣನ್ ಮುಂತಾದವರು ಇದ್ದಾರೆ. ಗಿಬ್ರಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಇನ್ನು ರಾಜಶೇಖರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಶೋಕ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರೆ ಕೆಜಿ ವೆಂಕಟೇಶ್ ಕ್ಯಾಮರಾ ಕೆಲಸವನ್ನು ನಿರ್ವಹಿಸಿದ್ದಾರೆ. 7 ಮೈಲ್ಸ್ ಪರ್ ಸೆಕೆಂಡ್ ಸಂಸ್ಥೆ ಈ ರೊಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ನಿರ್ಮಾಣ ಮಾಡಿದೆ.


Click it and Unblock the Notifications











