ಓಟಿಟಿ ಬದಲು ಯೂಟ್ಯೂಬ್ನಲ್ಲಿ ಕನ್ನಡ ಚಿತ್ರ ರಿಲೀಸ್ ಆದರೆ ಪ್ರೇಕ್ಷಕರು ನೋಡ್ತಾರಾ? X&Y ನಿರ್ದೇಶಕ ಸತ್ಯಪ್ರಕಾಶ್ ಮಾತು
ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಆಮಿರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಆಮಿರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್ನ ಗೇಮ್ ಚೇಂಜರ್ ಕೂಡ ಹೌದು. ಎಲ್ಲರೂ ಏಕಕಾಲಕ್ಕೆ ನಾಲ್ಕೈದು ಚಿತ್ರಗಳ ಚಿತ್ರೀಕರಣವನ್ನೂ ಮಾಡುವ ಸಮಯದಲ್ಲಿ ನಾನು ಒಂದು ಚಿತ್ರ ಮುಗಿಯುವವರೆಗೆ..
ಇನ್ನೊಂದು ಚಿತ್ರ ಮಾಡಲಾರೆ ಎಂದ ಆಮಿರ್ ಖಾನ್, ಆ ನಂತರ ವಿಭಿನ್ನವಾಗಿ ಚಿತ್ರಗಳ ಪ್ರಚಾರ ಮಾಡುವುದು ಹೇಗೆ ಎನ್ನುವುದನ್ನೂ ಕೂಡ ಬಾಲಿವುಡ್ನಲ್ಲಿ ಅನೇಕರಿಗೆ ತೋರಿಸಿದರು. ಮಾದರಿಯಾದರು. ಇಂಥಾ ಆಮಿರ್ ಖಾನ್ ಸದ್ಯಕ್ಕೆ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.

ತಮ್ಮ ಮುಂಬರುವ ಸಿತಾರೆ ಜಮೀನ್ ಪರ್ ಚಿತ್ರದ ಹಕ್ಕುಗಳನ್ನೂ ಅಮೆಜಾನ್, ನೆಟ್ಪ್ಲಿಕ್ಸ್, ಡಿಸ್ನಿ ಹಾಟ್ ಸ್ಟಾರ್ ಸೇರಿ ಉಳಿದ ಓಟಿಟಿ ಫ್ಲ್ಯಾಟ್ ಫಾರ್ಮ್ಗೆ ಮಾರದಿರಲು ನಿರ್ಧರಿಸಿದ್ದಾರೆ.
ಹೌದು, ನಿಮಗೆ ಗೊತ್ತು. ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡುತ್ತಿದ್ದರು. ಆ ಚಿತ್ರ ಟಿವಿಯಲ್ಲಿ ಪ್ರಸಾರವಾಗಲು ಬಹುತೇಕ ಒಂದು ವರ್ಷದ ಸಮಯ ಹಿಡಿಯುತ್ತಿತ್ತು.
ಆದರೆ. ಈಗ ಬದಲಾದ ಕಾಲದಲ್ಲಿ ಚಿತ್ರ ತೆರೆಗೆ ಬಂದು ನಾಲ್ಕು ವಾರ ಕೂಡ ಆಗಿರುವುದಿಲ್ಲ. ಆಗಲೇ ಆ ಚಿತ್ರ ಮೊಬೈಲ್ ಹಾಗೂ ಟಿವಿಗಳ ಮೂಲಕ ಎಲ್ಲರನ್ನೂ ತಲುಪಿರುತ್ತೆ. ಓಟಿಟಿ ಪ್ಲ್ಯಾಟ್ಫಾರ್ಮ್ನಲ್ಲಿ ಪ್ರಸಾರವಾಗುತ್ತೆ.
ಈ ಹಿನ್ನೆಲೆ ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಚಿತ್ರ ಹೇಗೂ ಇನ್ನೊಂದೆರಡು ವಾರದಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತೆ, ಆಗ ನೋಡಿದರೆ ಆಯಿತು ಎನ್ನುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಪ್ರೇಕ್ಷಕರ ಈ ಮನಸ್ಥಿತಿಯನ್ನು ಆಮಿರ್ ಖಾನ್ ಈಗ ಬದಲಿಸಲು ಮುಂದಾಗಿದ್ದಾರೆ. ಓಟಿಟಿಯಲ್ಲಿ ಬಿಡುಗಡೆ ಮಾಡದೇ ಸಮಯ ಸಂದರ್ಭ ನೋಡಿಕೊಂಡು ತಮ್ಮ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ಮಾಡಿದ್ದಾರೆ.

ಆಮಿರ್ ಖಾನ್ ಅವರ ನಿರ್ಧಾರದ ಕುರಿತು ಚಿತ್ರರಂಗದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಅನೇಕರಿಗೆ ಆಮಿರ್ ಖಾನ್ ಅವರ ನಿರ್ಧಾರ ಆಶಾಕಿರಣದಂತೆ ಕೂಡ ಕಾಣುತ್ತಿದೆ. ಆದರೆ ಇದೇ ವೇಳೆ ಓಟಿಟಿಗಳಿಂದ ನಿರ್ಲಕ್ಷ್ಯಕ್ಕೊಳಗಾದ ಹೊಸಬರಲ್ಲಿ ಆಮಿರ್ ಖಾನ್ ಅವರ ಈ ನಡೆ ಅನುಸರಿಸಿದರೆ ಎದುರಾಗುವ ಅಡೆತಡೆಗಳೇನು ? ಎನ್ನುವ ಪ್ರಶ್ನೆ ಕೂಡ ಕಾಡುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಮಾ ರಾಮಾ ರೇ.. ಒಂದಲ್ಲ ಎರಡಲ್ಲ.. ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಸದ್ಯ ಈ ಜೂನ್ 26ಕ್ಕೆ ಬಿಡುಗಡೆಯಾಗುತ್ತಿರುವ 'ಎಕ್ಸ್ & ವೈ' ಚಿತ್ರದ ನಿರ್ದೇಶಕ ಡಿ ಸತ್ಯ ಪ್ರಕಾಶ್ ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ವೆಬ್ ಸೈಟ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಯೂಟ್ಯೂಬ್ನಲ್ಲಿ ನೇರವಾಗಿ ಚಿತ್ರವನ್ನು ಕನ್ನಡದ ನಿರ್ಮಾಪಕರು, ನಿರ್ದೇಶಕರು ಬಿಡುಗಡೆ ಮಾಡಬಹುದಾ? ಹೀಗೆ ಬಿಡುಗಡೆಯಾದ ಚಿತ್ರವನ್ನು ಕನ್ನಡದ ಪ್ರೇಕ್ಷಕರು ದುಡ್ಡು ಕೊಟ್ಟು ನೋಡುತ್ತಾರಾ? ಕನ್ನಡ ಚಿತ್ರರಂಗದವರು ಏನು ಮಾಡಬೇಕು ? ಎಂಬ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಹಾಗಿದ್ದರೆ ಡಿ ಸತ್ಯ ಪ್ರಕಾಶ್ ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.

ಕನ್ನಡದಲ್ಲಿ ಯೂಟ್ಯೂಬ್ ಮಾಡೆಲ್ ವರ್ಕ್ ಆಗುತ್ತಾ ?
''ಕನ್ನಡದಲ್ಲಿ ಆನ್ಲೈನ್ನಲ್ಲಿ ಕನ್ನಡದ ಚಿತ್ರ ನೋಡುವ ಪ್ರೇಕ್ಷಕರ ಸಂಖ್ಯೆ ತುಂಬಾ ಕಡಿಮೆ ಇದೆ. ಯಾಕೆಂದರೆ ನಮ್ಮಲ್ಲಿ ಬೆಂಗಳೂರು, ಮೈಸೂರು ಮುಂತಾದ ಭಾಗಗಳಲ್ಲಿರುವ ಕನ್ನಡದ ಪ್ರೇಕ್ಷಕರು ಬೇರೆ ಭಾಷೆಯ ವೆಬ್ ಸರಣಿ ಮತ್ತು ಚಿತ್ರಗಳನ್ನು ಸತತವಾಗಿ ನೋಡುತ್ತಾರೆ. ಹೀಗಾಗಿ ಡಿಜಿಟಲ್ ಮಾಧ್ಯಮದಲ್ಲಿ ಕನ್ನಡದ ಚಿತ್ರವನ್ನು ನೋಡುವ ಕನ್ನಡಿಗರ ಸಂಖ್ಯೆ ತುಂಬಾನೇ ಕಡಿಮೆ ಇದೆ.
ಹಾಗಂಥ ಆಮಿರ್ ಖಾನ್ ಅವರ ತಂತ್ರಗಾರಿಕೆ ತಪ್ಪು, ಅವರ ನಡೆ ಅನುಸರಿಸುವುದು ತಪ್ಪು ಅಂತಲ್ಲ. ಯಾಕೆಂದರೆ .. ಎಲ್ಲ ಪ್ರಯೋಗಗಳು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗುವುದಿಲ್ಲ. ನಿರಂತರವಾದ ಪ್ರಯತ್ನಗಳು ನಡೆಯಬೇಕು. ಒಳ್ಳೊಳ್ಳೆಯ ಚಿತ್ರಗಳನ್ನು ರೆಗ್ಯೂಲರ್ ಆಗಿ ನಾವು ನೀಡಿ ಆ ಚಿತ್ರಗಳನ್ನು ಅವರು ಹೇಳಿರುವಂತೆ ರೆಂಟಲ್ ಮಾಡೆಲ್ನಲ್ಲಿ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದರೆ ಅದು ಒಂದಿಲ್ಲೊಂದು ದಿನ ಕೈ ಹಿಡಿಯುತ್ತೆ, ಇದು ಮಾಡದೇ ಕೇವಲ ಒಂದು ಚಿತ್ರವನ್ನು ಹಾಕುವುದರಿಂದ ಯಾವುದೇ ಪ್ರಯೋಜನ ಇಲ್ಲ'' ಎಂದು ಡಿ ಸತ್ಯ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಮಿರ್ ಖಾನ್ ಅವರಿಗೆ ಅನುಭವ ಹೆಚ್ಚಿದೆ.
''ಇನ್ನು ಆಮಿರ್ ಖಾನ್ ಅವರದ್ದು 30- 35 ವರ್ಷದ ಅನುಭವ. ಅವರ ಚಿತ್ರಗಳನ್ನು ಜನ ಹಿಂದೆ ನೋಡಿದ್ದಾರೆ. ಅವರು ಚಿತ್ರಕ್ಕೆ ಹಾಕುವ ಶ್ರಮವನ್ನು ನೋಡಿದ್ದಾರೆ. ಅವರ ಮೇಲೆ ಪ್ರೇಕ್ಷಕರಿಗೆ ಇರುವ ಗೌರವ ಬೇರೆ. ಇದೆಲ್ಲವೂ ಇಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತೆ. ಅವರಂತೆಯೇ ನಾವು ಮಾಡ್ತೀವಿ ಅಂದರೆ ನಾವು ಕೂಡ ಒಳ್ಳೊಳ್ಳೆಯ ಚಿತ್ರಗಳನ್ನು ಮಾಡಿ ಜನರ ನಂಬಿಕೆ ಗಳಿಸಿಕೊಳ್ಳಬೇಕು. ಹೀಗೆ ಜನರಿಗೆ ನಮ್ಮ ಮೇಲೆ ನಂಬಿಕೆ ಬಂದಾಗ ನಮ್ಮ ಯಾವ ಪ್ರಯತ್ನಗಳು ವಿಫಲವಾಗುವುದಿಲ್ಲ ಪ್ರೇಕ್ಷಕರೇ ಆಗ ನಮಗೆ ಬೆಂಬಲ ಕೊಡ್ತಾರೆ'' ಎಂದು ಸತ್ಯ ಪ್ರಕಾಶ್ ಹೇಳಿದ್ದಾರೆ.
ಪ್ರೇಕ್ಷಕರ ನಂಬಿಕೆ ಗಳಿಸುವುದು ಮುಖ್ಯ
''ಜನರಿಗೆ ಹಣ ಖರ್ಚು ಮಾಡುವುದು ಸಮಸ್ಯೆ ಅಲ್ಲ. ಉದಾಹರಣೆಗೆ ಯೂಟ್ಯೂಬ್ನಲ್ಲಿ ಒಂದು ಚಿತ್ರಕ್ಕೆ ನಾವು ನೂರು ರೂಪಾಯಿ ದರ ನಿಗದಿ ಮಾಡಿದರೆ, ನೂರು ರೂಪಾಯಿ ನೀಡಿ ಮನೆಯಲ್ಲಿಯೇ ಅವರು ನಾಲ್ಕು ಜನ ಸಿನಿಮಾ ನೋಡ್ತಾರೆ, ಆದರೆ ಜನರಿಗೆ ನಂಬಿಕೆ ಮುಖ್ಯ. ಕೊಡುವ ದುಡ್ಡಿಗೆ ತಕ್ಕ ಮನರಂಜನೆ ಚಿತ್ರದಲ್ಲಿದೆ. ಚಿತ್ರ ಚೆನ್ನಾಗಿದೆ ಎಂದು ಗೊತ್ತಾದರೆ ಅವರು ಖರ್ಚು ಮಾಡಲು ಹಿಂದೆ ಮುಂದೆ ನೋಡಲ್ಲ ಆದರೆ ಆಗಲೇ ಹೇಳಿದಂತೆ ನಂಬಿಕೆ ಮುಖ್ಯ. ಇವನು ಚೆನ್ನಾಗಿ ಸಿನಿಮಾ ಮಾಡ್ತಾನೆ. ಈ ತಂಡದ ಹಿಂದಿನ ಚಿತ್ರಗಳು ಚೆನ್ನಾಗಿದ್ದವು ಈ ಬಾರಿ ಚೆನ್ನಾಗಿರುತ್ತೆ ಎನ್ನುವ ನಂಬಿಕೆ ಇದ್ದರೆ ಆ ನಂಬಿಕೆಯೇ ಮುಂದೆ ಕೈ ಹಿಡಿಯುತ್ತೆ. ಈ ನಿಟ್ಟಿನಲ್ಲಿ ನಾವು ಮೊದಲು ಜನರ ನಂಬಿಕೆಯನ್ನು ಗಳಿಸಬೇಕು ಹೀಗಾದಾಗ ಮುಂಬರುವ ದಿನಗಳಲ್ಲಿ ಯೂಟ್ಯೂಬ್ ಮಾದರಿ ವರ್ಕ್ ಆಗುತ್ತೆ'' ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಡಿ ಸತ್ಯಪ್ರಕಾಶ್.
ಒಟ್ನಲ್ಲಿ ಸದ್ಯ ಆಮಿರ್ ಖಾನ್ ಅವರ ಯೂಟ್ಯೂಬ್ ಆಲೋಚನೆಯ ಕುರಿತು ಚಿತ್ರರಂಗದಲ್ಲಿ ಹಲವು ಚರ್ಚೆಗಳಾಗುತ್ತಿವೆ. ಆಮಿರ್ ಖಾನ್ ತಮ್ಮ ಸಿತಾರೆ ಜಮೀನ್ ಪರ್ ಚಿತ್ರವನ್ನು ಹೇಳಿದಂತೆ ಯೂಟ್ಯೂಬ್ನಲ್ಲಿಯೇ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಿದರೆ ಈ ತರಹದ ಪ್ರಯತ್ನಕ್ಕೆ ಇನ್ನು ಹಲವರು ಮುಂದಾಗಬಹುದು. ಯೂಟ್ಯೂಬ್ನಲ್ಲಿ ಬರುವ ಆದಾಯ ಕಥೆಯನ್ನೇ ನಂಬಿ ಚಿಕ್ಕ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಹೆಚ್ಚಿಸಬಹುದು.
ಇನ್ನುಳಿದಂತೆ ಡಿ ಸತ್ಯಪ್ರಕಾಶ್ ಸದ್ಯ 'ಎಕ್ಸ್ & ವೈ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಷ್ಟೇ ಅಲ್ಲ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಕೂಡ ಬಣ್ಣ ಹಚ್ಚಿದ್ದಾರೆ. ಈ ಜೂನ್ 26ಕ್ಕೆ ಈ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ನೀಡಿದೆ.


Click it and Unblock the Notifications











