ಯೂಟ್ಯೂಬ್ನಲ್ಲಿ ಸಿತಾರೆ ಜಮೀನ್ ಪರ್ ; ಆಮಿರ್ ಖಾನ್ ಅವರ ಈ ನಡೆ ಅನುಸರಿಸಲು ಹೊಸಬರಿಗೆ ಇರುವ ಅಡೆತಡೆಗಳೇನು ?
ಭಾರತದಲ್ಲಿ ಡಿಜಿಟಲ್ ವೇದಿಕೆ ಜನ್ಮವೆತ್ತಿ ಹದಿನೈದು-ಹದಿನಾರು ವರ್ಷಗಳಾಗಿವೆ. 2008ರಲ್ಲಿ ಮೊದಲ ಬಾರಿ ರಿಲಯನ್ಸ್ ಬಿಗ್ಫ್ಲಿಕ್ಸ್ ಎಂಬ ಹೆಸರಿನಲ್ಲಿ ಓಟಿಟಿ ಲೋಕಕ್ಕೆ ಮುನ್ನುಡಿ ಬರೆಯಿತು. ಆ ನಂತರ ನೆಕ್ಸ್ ಜಿಟಿವಿ, 2013ರಲ್ಲಿ ಡಿಟ್ಟೋ, 2015ರಲ್ಲಿ ಹಾಟ್ ಸ್ಟಾರ್ ಆ ನಂತರ ಅಮೆಜಾನ್ ಹೀಗೆ ಕೆಲವೇ ವರ್ಷಗಳ ಅಂತರದಲ್ಲಿ ಎಣಿಕೆಗೆ ನಿಲುಕದ ಸಂಖ್ಯೆಯಲ್ಲಿ ಓಟಿಟಿ ವೇದಿಕೆಗಳು ಹುಟ್ಟಿಕೊಂಡವು. ಕೊರೊನಾ ಕಾಲಘಟ್ಟ ಡಿಜಿಟಲ್ ಲೋಕಕ್ಕೆ ಅವಕಾಶದ ದಿಡ್ಡಿ ಬಾಗಿಲಾಯಿತು.
ಮಿಲೇನಿಯಲ್ಸ್ ಅಂದರೆ 18 ರಿಂದ 35ರ ವಯೋಮಾನದವರನ್ನೇ ಗುರಿಯಾನ್ನಾಗಿಸಿಕೊಂಡು ದಿನಗಳೆದಂತೆ ವೇಗವಾಗಿ ಬೆಳೆದ ಈ ಓಟಿಟಿ ವೇದಿಕೆಯಲ್ಲಿ ಹಲವರು ತಮ್ಮ ವರಸೆಯನ್ನು ಈಗ ಬದಲಿಸಿದ್ದಾರೆ. ಮೊದಲೆಲ್ಲ ಮುಗಿ ಬಿದ್ದು ಚಿತ್ರಗಳನ್ನು ಖರೀದಿ ಮಾಡುತ್ತಿದ್ದವರು ಈಗ ಚಿತ್ರಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.ಹೊಸತಂಡದ ಪ್ರಯತ್ನ ಪ್ರಯೋಗ ಅವರ ಶ್ರಮಗಳನ್ನೆಲ್ಲಾ ಕಡೆಗಣಿಸಿ ಸ್ಟಾರ್ ಚಿತ್ರಗಳಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ.

ಹಾಗಂಥ ಸ್ಟಾರ್ ಗಳ ಚಿತ್ರಕ್ಕಾದರೂ ಕೈ ತುಂಬಾ ಹಣ ಕೊಡ್ತಾರಾ ಅಂದರೆ ಅದು ಇಲ್ಲ. ಕೇಳಿದ ಹಣದಲ್ಲಿ ಅರ್ಧ ಹಣ ಮಾತ್ರನೀಡಿ ಕೈ ತೊಳೆದುಕೊಳ್ಳುತ್ತಾರೆ. ಸಾಲದಕ್ಕೆ ಚಿತ್ರ ಬಿಡುಗಡೆಯಾಗಿ ನಾಲ್ಕು ವಾರ ಕೂಡ ಆಗಿರುವುದಿಲ್ಲ ಅದನ್ನು ತಮ್ಮ ವೇದಿಕೆಯಲ್ಲಿ ಪ್ರಸಾರವನ್ನು ಕೂಡ ಮಾಡಿಬಿಡುತ್ತಾರೆ.
ಓಟಿಟಿಯವರ ಈ ಧೋರಣೆಯಿಂದ ಚಿತ್ರರಂಗದಲ್ಲಿ ಮೆಲ್ಲನೆ ಅಪಸ್ವರ ಕೇಳಿ ಬರುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ತಮ್ಮ ಸಿತಾರೆ ಜಮೀನ್ಪರ್ ಚಿತ್ರವನ್ನು ಓಟಿಟಿಗೆ ಸೆಡ್ಡು ಹೊಡೆದು ಯೂಟ್ಯೂಬ್ ನಲ್ಲಿ ನೇರವಾಗಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಪ್ರೇಕ್ಷಕರಿಂದ ಹಣ ಪಡೆದು ಯೂಟ್ಯೂಬ್ ನಲ್ಲಿ ಚಿತ್ರ ತೋರಿಸಲು ಮುಂದಾಗಿದ್ದಾರೆ. ಇದು ಈಗ ಚರ್ಚೆಗೆ ಕಾರಣವಾಗಿದೆ.

ಓಟಿಟಿಯಲ್ಲಿ ಸಬ್ ಸ್ಕ್ರಿಪ್ಷನ್ ಪಡೆದು ಚಿತ್ರವನ್ನು ನೋಡುವ ಜನ ಯೂಟ್ಯೂಬ್ ನಲ್ಲಿ ಕೇವಲ ಒಂದು ಚಿತ್ರ ನೋಡಲು ಹಣ ಖರ್ಚು ಮಾಡ್ತಾರಾ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡದ ಭರವಸೆಯ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
ಹೌದು ಅಸಲಿಗೆ ರಾಮೇನಹಳ್ಳಿ ಜಗನ್ನಾಥ ತಮ್ಮ ಹೊಂದಿಸಿ ಬರೆಯಿರಿ ಚಿತ್ರವನ್ನು ಅಮೆಜಾನ್ ಪ್ರೈಂನವರಿಗೆ ಕೊಟ್ಟಿದ್ದರು. ಆದರೆ ಅಮೆಜಾನ್ ಇವರ ಚಿತ್ರವನ್ನು ಕೇವಲ ಭಾರತದ ಪ್ರೇಕ್ಷಕರಿಗೆ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಇನ್ನೂ ಓಟಿಟಿ ಇವತ್ತು ಕೂಡ ಕೇವಲ ನಗರ ಭಾಗಕ್ಕೆ ಮಾತ್ರ ಪರಿಚಿತ. ಹಳ್ಳಿಯ ಕಡೆ ಓಟಿಟಿ ಜ್ವರ ಇನ್ನೂ ಸಂಪೂರ್ಣವಾಗಿ ಹಬ್ಬಿಲ್ಲ.

ಈ ಹಿನ್ನೆಲೆ ತಮ್ಮ ಚಿತ್ರ ಎಲ್ಲ ವರ್ಗದ ಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದ ಉಚಿತವಾಗಿ ಯೂಟ್ಯೂಬ್ ನಲ್ಲಿ ನೋಡುವ ಅವಕಾಶವನ್ನು ರಾಮೇನಹಳ್ಳಿ ಜಗನ್ನಾಥ ಕಲ್ಪಿಸಿದ್ದರು.
ಹೀಗಾಗಿ ಆಮಿರ್ ಖಾನ್ ಅವರಂತೆಯೇ ಯೂಟ್ಯೂಬ್ ನಲ್ಲಿ ದರ ನಿಗದಿ ಪಡಿಸಿ ಕನ್ನಡದ ನಿರ್ದೇಶಕರು ನಿರ್ಮಾಪಕರು ತಮ್ಮ ಚಿತ್ರ ಬಿಡುಗಡೆ ಮಾಡಿದರೆ ಅಲ್ಲಿ ಲಾಭವಾಗುತ್ತಾ ಎನ್ನುವ ಪ್ರಶ್ನೆಗೆ ಉತ್ತರ ಪಡೆಯಲು ಫಿಲ್ಮಿ ಬೀಟ್ ತಂಡ ರಾಮೇನಹಳ್ಳಿ ಜಗನ್ನಾಥ್ ಅವರನ್ನು ಸಂಪರ್ಕಿಸಿತ್ತು. ಆಗ ಕೆಲ ವಿಚಾರಗಳನ್ನು ರಾಮೇನಹಳ್ಳಿ ಜಗನ್ನಾಥ್ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವರು ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಯೂಟ್ಯೂಬ್ ಮೂಲಕ ಹೆಚ್ಚು ಜನರನ್ನು ತಲುಪಬಹುದು
''ನಮ್ಮ ಹೊಂದಿಸಿ ಬರೆಯಿರಿ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ ಕನ್ನಡಿಗರ ಸಂಖ್ಯೆ ಕೇವಲ 38,000 ಮಾತ್ರ. ಇನ್ನು ನನ್ನ ದೃಷ್ಟಿಯಲ್ಲಿ ಚಿತ್ರ ಎಷ್ಟು ದಿನ ಓಡಿದೆ ಎನ್ನುವುದಕ್ಕಿಂತ ಚಿತ್ರ ಎಷ್ಟು ಜನಕ್ಕೆ ತಲುಪಿದೆ ಎನ್ನುವುದು ಮುಖ್ಯ. ಹೀಗಾಗಿ ನಮ್ಮ ಚಿತ್ರವನ್ನು ನಾವು ಓಟಿಟಿಯಲ್ಲಿ ಬಿಡುಗಡೆ ಮಾಡಿದ್ವಿ. ಅಲ್ಲಿಯೂ ಕೂಡ ಒಳ್ಳೆಯ ಪ್ರತಿಕ್ರಿಯೆ ಸಿಕ್ತು.
ಇನ್ನು ಟೆಲಿಗ್ರಾಮ್ ಸೇರಿ ಅನೇಕ ಕಡೆ ನಮ್ಮ ಚಿತ್ರ ಇತ್ತು. ಆದರೂ ಕೂಡ ಇನ್ನು ಹೆಚ್ಚಿನ ಜನರನ್ನು ತಲುಪುವ ಉದ್ದೇಶ ನಮಗೆ ಇತ್ತು. ಯಾಕೆಂದರೆ ಅಮೆಜಾನ್ ಪ್ರೈಮ್ ಮೂಲಕ ನಮ್ಮ ಚಿತ್ರ ಕೇವಲ ಭಾರತದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಬೇರೆ ದೇಶಗಳಲ್ಲಿ ನೋಡುವ ಅವಕಾಶ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರ ಬಳಿ ಓಟಿಟಿ ಸಬ್ಸ್ಕ್ರಿಪ್ಷನ್ ಇರಲ್ಲ.
ಇನ್ನು ಮೊದಲ ಚಿತ್ರ ಬಂದಾಗ ನಿರ್ದೇಶಕರಿಗೆ ನಮ್ಮ ಚಿತ್ರ ಹೆಚ್ಚೆಚ್ಚು ಜನರಿಗೆ ತಲುಪಬೇಕೆನ್ನುವ ಉದ್ದೇಶ ಇರುತ್ತೆ. ಹೀಗಾಗಿಯೇ ಯೂಟ್ಯೂಬ್ನಲ್ಲಿ ನಾವು ನಮ್ಮ ಚಿತ್ರ ಬಿಡುಗಡೆ ಮಾಡಿದ್ವಿ. ಇವತ್ತು ಕೂಡ ನಮ್ಮ ಚಿತ್ರವನ್ನ ಜನ ನೋಡಿ ಅಭಿಪ್ರಾಯ ಹೇಳಿದಾಗ ನನಗೆ ಪ್ರೇಕ್ಷಕರ ಜೊತೆ ಕನೆಕ್ಟ್ ಆಗಿರುವ ಖುಷಿ ಸಿಗುತ್ತೆ.
ಇನ್ನು ಪ್ರೇಕ್ಷಕರ ವಿಮರ್ಶೆ ಅವರೇನು ಹೇಳ್ತಾರೆ, ಅವರಿಗೆ ಚಿತ್ರದಲ್ಲಿ ಇಷ್ಟವಾದ ಅಂಶ ಯಾವುದು, ಎಲ್ಲಿ ನಮ್ಮಿಂದ ತಪ್ಪಾಯ್ತು ಎನ್ನುವುದು ಯೂಟ್ಯೂಬ್ಗೆ ಬಂದ ನಂತರವಷ್ಟೇ ನನಗೆ ಗೊತ್ತಾಗಿದ್ದು. ಒಂದು ಡೇಟಾ ಬೇಸ್ ಪ್ರಕಾರ ಅಮೆಜಾನ್ ಮತ್ತು ಯೂಟ್ಯೂಬ್ ಸೇರಿ ನಮ್ಮ ಚಿತ್ರವನ್ನು ಈಗ ಹತ್ ಹತ್ರ ಒಂದು ಕೋಟಿ ಕನ್ನಡಿಗರು ನೋಡಿದ್ದಾರೆ. ಕೇವಲ ಯೂಟ್ಯೂಬ್ನಲ್ಲಿಯೇ 28 ಲಕ್ಷ ಜನ ನೋಡಿದ್ದಾರೆ. ಯೂಟ್ಯೂಬ್ ಮೂಲಕ ನಾವು ಹೆಚ್ಚು ಜನರನ್ನು ತಲುಪಲು ಸಾಧ್ಯವಾಯ್ತು'' ಎಂದು ರಾಮೇನಹಳ್ಳಿ ಜಗನ್ನಾಥ್ ಹೇಳಿದ್ಧಾರೆ.

ಓಟಿಟಿಯಲ್ಲಿ ಪೇ ಪರ್ ವ್ಯೂ
''ಶೇಕಡಾ 90 % ಚಿತ್ರಗಳನ್ನು ಓಟಿಟಿ ಅವರ ಪೇ ಪರ್ ವ್ಯೂವ್ ಕಾನ್ಸೆಪ್ಟ್ನಡಿಯಲ್ಲಿಯೇ ಖರೀದಿ ಮಾಡುತ್ತಿದ್ದಾರೆ. ಈ ಪ್ರಕಾರ 25 ದಿನದೊಳಗೆ ಚಿತ್ರ ಓಟಿಟಿಯಲ್ಲಿ ಬಂದರೆ, ಒಂದು ಗಂಟೆ ಸಿನಿಮಾ ನೋಡಿದರೆ ಆರು ರೂಪಾಯಿ ಸಿಗುತ್ತೆ. ಅದೇ ಎರಡು ಗಂಟೆ ನೋಡಿದರೆ 12 ರೂಪಾಯಿ ಸಿಗುತ್ತೆ.
ಇನ್ನು 50 ದಿನದ ಒಳಗಡೆ ಪ್ರಸಾರವಾದರೆ ಅಮೆಜಾನ್ ಪ್ರೈಂನವರು ನಾಲ್ಕು ರೂಪಾಯಿ ಕೊಡ್ತಾರೆ. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 50 ದಿನದ ನಂತರ ಪ್ರದರ್ಶನಗೊಂಡರೆ ಮೂರು ರೂಪಾಯಿ ಕೊಡ್ತಾರೆ.
ಹೀಗಿದ್ದಾಗ ನಮ್ಮ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 51 ದಿನ ಆಗಿತ್ತು. ಹೀಗಾಗಿ ನಮಗೆ ನಾಲ್ಕು ರೂಪಾಯಿ ಸಿಕ್ಕಿತ್ತು. ನಮ್ಮ ಚಿತ್ರ ಎರಡು ಗಂಟೆ ಹನ್ನೊಂದು ನಿಮಿಷ ಇದ್ದ ಕಾರಣ ಎಂಟು ರೂಪಾಯಿ ನಮಗೆ ಸಿಕ್ಕಿತ್ತು. ನಿಜಾ ಹೇಳಬೇಕು ಅಂದರೆ ಚಿತ್ರಮಂದಿರಗಳಿಗಿಂತ ಅಮೆಜಾನ್ನಲ್ಲಿಯೇ ನಮಗೆ ಹೆಚ್ಚಿನ ಹಣ ಬಂತು. ಕೇವಲ ಅಮೆಜಾನ್ ಮಾತ್ರವಲ್ಲ ಸನ್ ನೆಕ್ಸ್ಟ್ ಮತ್ತು ಬೇರೆ ಕಡೆ ಕೂಡ ಈಗ ಈ ಪೇ ಪರ್ ವ್ಯೂ ಸಿಸ್ಟಮ್ ಚಾಲ್ತಿಯಲ್ಲಿದೆ'' ಎಂದು ರಾಮೇನಹಳ್ಳಿ ಜಗನ್ನಾಥ್ ಹೇಳಿದ್ದಾರೆ.
ದರ ನಿಗದಿ ಮಾಡಿದರೆ ಕಷ್ಟ
''ಆಮಿರ್ ಖಾನ್ ಅವರಂತೆ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡದೇ ನೇರವಾಗಿ ಯೂಟ್ಯೂಬ್ಗೆ ಬಿಡುಗಡೆ ಮಾಡಿದರೆ ಅಲ್ಲಿ ದರ ನಿಗದಿ ಮಾಡಬೇಕಾಗುತ್ತೆ. ಆಮಿರ್ ಖಾನ್ ಕೂಡ ದರ ನಿಗದಿ ಮಾಡಿರುತ್ತಾರೆ. ಆದರೆ ಹೀಗೆ ನಾವು ನಿಗದಿ ಮಾಡುವ ರೇಟ್ನ ಜನ ನಮಗೆ ನೀಡಿ ಸಿನಿಮಾ ನೋಡುವ ಸಾಧ್ಯತೆ ಯೂಟ್ಯೂಬ್ನಲ್ಲಿ ತುಂಬಾನೇ ಕಡಿಮೆ ಇದೆ.
ಆಮಿರ್ ಖಾನ್ ದೊಡ್ಡ ಸ್ಟಾರ್ ಹೀಗಾಗಿ ಅವರ ಚಿತ್ರ ಆದ ಕಾರಣಕ್ಕೆ ಕೆಲವರು ಯೂಟ್ಯೂಬ್ ರೆಂಟಲ್ ಮಾಡೆಲ್ಗೆ ಹಣ ನೀಡಿ ಚಿತ್ರ ನೋಡಬಹುದು ಆದರೆ ಬೇರೆ ಚಿತ್ರಗಳಿಗೆ ಅದರಲ್ಲಿಯೂ ಹೊಸಬರ ಚಿತ್ರಗಳಿಗೆ ದರ ನಿಗದಿ ಮಾಡಿ ಯೂಟ್ಯೂಬ್ನಲ್ಲಿ ಹಾಕಿದರೆ ನೋಡಲು ಅನೇಕರು ಹಿಂದೇಟು ಹಾಕುತ್ತಾರೆ. ಯಾಕೆಂದರೆ ಅಮೆಜಾನ್ ಮತ್ತು ಇತರೆ ಓಟಿಟಿಗಳಲ್ಲಿ ಒಮ್ಮೆ ಸಬ್ಸ್ಕ್ರಿಪ್ಷನ್ ಪಡೆದರೆ ಹಲವು ಚಿತ್ರಗಳನ್ನು ಹಲವು ದಿನಗಳವರೆಗೆ ನೋಡಬಹುದು.
ಆದರೆ ಅದೇ ಯೂಟ್ಯೂಬ್ಗೆ ಬಂದರೆ ಈ ಅವಕಾಶ ಇಲ್ಲ. ಕೇವಲ ಒಂದು ಚಿತ್ರ ನೋಡಲು ಹಣ ಕೊಡಬೇಕಾಗುತ್ತೆ. ಹೀಗಾಗಿ ಯೂಟ್ಯೂಬ್ನಲ್ಲಿ ದರ ನಿಗದಿ ಮಾಡಿ ಬಿಡುಗಡೆ ಮಾಡುವುದು ಕನ್ನಡ ಚಿತ್ರರಂಗದ ಹೊಸಬರ ಪಾಲಿಗೆ ತುಂಬಾನೇ ಕಷ್ಟ'' ಎಂದು ಫಿಲ್ಮಿ ಬೀಟ್ ಕನ್ನಡಗೆ ಪ್ರತಿಕ್ರಿಯಿಸಿದ್ದಾರೆ ರಾಮೇನಹಳ್ಳಿ ಜಗನ್ನಾಥ್.
ದರ ನಿಗದಿ ಮಾಡುವ ಬದಲು ಸ್ಕ್ಯಾನ್ ಕೋಡ್ ಹಾಕಬಹುದು
''ಯೂಟ್ಯೂಬ್ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿ ಅದಕ್ಕೆ ದರ ನಿಗದಿ ಮಾಡುವ ಬದಲು, ಸ್ಕ್ಯಾನ್ ಕೋಡ್ನ್ನು ಹಾಕಬಹುದು. ನಾವು ನಮ್ಮ ಹೊಂದಿಸಿ ಬರೆಯಿರಿ ಚಿತ್ರದ ಸಮಯದಲ್ಲಿ ಹೆಚ್ಚು ಪ್ರಚಾರ ಮಾಡದೇ ಸ್ಕ್ಯಾನ್ ಕೋಡ್ ಹಾಕಿ ಬಿಡುಗಡೆ ಮಾಡಿದ್ವಿ, ಅಚ್ಚರಿ ಎನ್ನುವಂತೆ ಅನೇಕರು ನಮಗೆ ಸ್ಕ್ಯಾನ್ ಕೋಡ್ ಮೂಲಕ ಹಣ ಕಳುಹಿಸಿದರು. ಈ ಮೊತ್ತ ಹತ್ ಹತ್ರ ಒಂದು ಲಕ್ಷ ಇದೆ.
ಇವತ್ತು ಕೂಡ ಅನೇಕರು ನೋಡಿ ನಮಗೆ ಚಿತ್ರ ಇಷ್ಟ ಆಯ್ತು ಎಂದು ಅವರಿಗೆ ತೋಚಿದಷ್ಟು ಹಣ ಹಾಕ್ತಾರೆ , ನಾವು ಉಚಿತವಾಗಿ ಸಿನಿಮಾ ನೋಡಿ ಇಷ್ಟ ಆದರೆ ಹಣ ಕೊಡಿ ಎಂದು ಎಲ್ಲಿಯೂ ಹೇಳಲಿಲ್ಲ ಆದರೆ ಜನಕ್ಕೆ ಚಿತ್ರ ಇಷ್ಟವಾದರೆ ಅವರು ದುಡ್ಡು ಕೊಡ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಕೆಲಸದ ಒತ್ತಡ ಅಥವಾ ಬೇರೆ ಬೇರೆ ಕಾರಣಗಳಿಂದ ಚಿತ್ರಮಂದಿರಕ್ಕೆ ಹೋಗಲು ಸಾಧ್ಯವಾಗದೇ ಇದ್ದವರು ಹೀಗೆ ಚಿತ್ರಗಳನ್ನು ನೋಡಿದಾಗ ಆ ಚಿತ್ರ ಅವರ ಹೃದಯಕ್ಕೆ ಹತ್ತಿರವಾದರೆ ಅವರು ಹಣ ಹಾಕುತ್ತಾರೆ'' ಎನ್ನುವುದು ರಾಮೇನಹಳ್ಳಿ ಜಗನ್ನಾಥ್ ಅವರ ವಿಶ್ವಾಸ.
ಬೇರೆ ಚಾನೆಲ್ನವರಿಗೆ ಮಾರುವ ಬದಲು ನಿಮ್ಮದೇ ಚಾನೆಲ್ನಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಒಳ್ಳೆಯದು
''ಹೊಂದಿಸಿ ಬರೆಯಿರಿ ಚಿತ್ರವನ್ನು ಅನೇಕರು ನಮ್ಮ ಯೂಟ್ಯೂಬ್ ಚಾನೆಲ್ಗೆ ಇಷ್ಟು ಹಣಕ್ಕೆ ಮಾರಿಬಿಡಿ ನಾವು ನಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಾಕಿಕೊಳ್ಳುತ್ತೇವೆ ಎಂದು ಹೇಳಿದರು. ಆದರೆ ನಾನು ನನ್ನದೇ ಚಾನೆಲ್ನಲ್ಲಿ ಬಿಡುಗಡೆ ಮಾಡಿದೆ. ಆಗ ಜನ ನೀಡಿದ ಒಂದು ಲಕ್ಷ ಹಣ ಒಂದು ಕಡೆಯಾದರೆ ಯೂಟ್ಯೂಬ್ನಿಂದನೇ ನನಗೆ 3 ಲಕ್ಷ ಹಣ ಬಂತು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರ ಜೊತೆ ಈ ಮೂಲಕ ನೇರವಾಗಿ ಸಂಪರ್ಕದಲ್ಲಿರಬಹುದು ಅವರಿಗೆ ನಮ್ಮ ಕೆಲಸದ ಕುರಿತು ಒಂದು ಸ್ಪಷ್ಟತೆ ಇರುತ್ತೆ'' ಎಂದು ಹೇಳಿದ್ದಾರೆ ರಾಮೇನಹಳ್ಳಿ ಜಗನ್ನಾಥ್


Click it and Unblock the Notifications











