ನೆಟ್ಫ್ಲಿಕ್ಸ್ ವಿರುದ್ಧ ಮುಸ್ಲಿಂ ಸಮುದಾಯದ ಅಸಮಾಧಾನ: ಬ್ಯಾನ್ಗೆ ಒತ್ತಾಯ
ವಿಶ್ವದ ನಂಬರ್ 1 ಒಟಿಟಿ ಫ್ಲ್ಯಾಟ್ಫಾರ್ಮ್ ನೆಟ್ಫ್ಲಿಕ್ಸ್ ಭಾರತದಲ್ಲಿ ಗಟ್ಟಿಯಾಗಿ ಬೇರೂರಿದೆ. ಆಂಗ್ಲ ಹಾಗೂ ಹಿಂದಿ ಸಿನಿಮಾ, ವೆಬ್ ಸರಣಿಗಳು ಮಾತ್ರವೇ ಅಲ್ಲದೆ ಪ್ರಾದೇಶಿಕ ಭಾಷೆಯ ಹಲವು ಸಿನಿಮಾಗಳನ್ನು ನೆಟ್ಫ್ಲಿಕ್ಸ್ ಬಿಡುಗಡೆ ಮಾಡಿ ಜನಪ್ರಿಯತೆ ಹೆಚ್ಚಿಸಿಕೊಂಡಿದೆ.
ಕೆಲವು ದಿನಗಳ ಹಿಂದಷ್ಟೆ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ಮಿಸಿದ್ದ 'ನವರಸ' ಹೆಸರಿನ ಅಂಥಾಲಜಿ (ಸಣ್ಣ-ಸಣ್ಣ ಸಿನಿಮಾಗಳ ಗುಚ್ಛ)ವನ್ನು ನೆಟ್ಫ್ಲಿಕ್ಸ್ ಬಿಡುಗಡೆ ಮಾಡಿದ್ದು, ಈ ಅಂಥಾಲಜಿ ಸಿನಿಮಾ ಸಖತ್ ಹಿಟ್ ಆಗಿದೆ.
ಸೂರ್ಯಾ, ವಿಜಯ್ ಸೇತುಪತಿ, ಸಿದ್ಧಾರ್ಥ್, ಪಾರ್ವತಿ ಮಿಲ್ಟನ್, ಗೌತಮ್ ವಾಸುದೇವ್ ಮೆನನ್ ಇನ್ನೂ ಹಲವು ಸ್ಟಾರ್ ನಟರು ನಟಿಸಿರುವ ಈ ಅಂಥಾಲಜಿ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಈ ಸಿನಿಮಾದ ಪೋಸ್ಟರ್ ಒಂದು ಮುಸ್ಲಿಂ ಸಮುದಾಯದ ಕೆಲವರ ವಿರೋಧಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ನೆಟ್ಫ್ಲಿಕ್ಸ್ ಅನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಲಾಗಿದೆ.

ಪತ್ರಿಕೆಗಳಲ್ಲಿ ಜಾಹೀರಾತು ಮುದ್ರಿಸಿರುವ ನೆಟ್ಫ್ಲಿಕ್ಸ್
'ನವರಸ' ಅಂಥಾಲಜಿಯ ಸಿನಿಮಾದಲ್ಲಿ 'ಇನ್ಮಾಯ್' ಹೆಸರಿನ ಭಾಗವೊಂದಿದೆ ಈ ಭಾಗದಲ್ಲಿ ಸಿದ್ಧಾರ್ಥ್ ಹಾಗೂ ಪಾರ್ವತಿ ತಿರುವೊತ್ತೂರು (ಪಾರ್ವತಿ ಮಿಲ್ಟನ್) ನಟಿಸಿದ್ದಾರೆ. ಈ ಸಿನಿಮಾದ ಬಗೆಗಿನ ಜಾಹೀರಾತನ್ನು ನೆಟ್ಫ್ಲಿಕ್ಸ್ ಪತ್ರಿಕೆಗಳಿಗೆ ನೀಡಿದ್ದು, ಜಾಹೀರಾತಿನಲ್ಲಿ ಮುಸಲ್ಮಾನರ ಪವಿತ್ರ ಗ್ರಂಥ ಖುರಾನ್ನ ಸಾಲನ್ನು ಮುದ್ರಿಸಲಾಗಿದೆ. ಇದು ಕೆಲವು ಮುಸಲ್ಮಾನರ ಅಸಮಾಧಾನಕ್ಕೆ ಕಾರಣವಾಗಿದೆ.

ಖುರಾನ್ ಸಾಲು ಮುದ್ರಿಸಿದ್ದಕ್ಕೆ ಆಕ್ರೋಶ
ರಝಾ ಅಕಾಡೆಮಿ ಸೇರಿದಂತೆ ಹಲವು ಖುರಾನ್ ಸಾಲನ್ನು ಪತ್ರಿಕೆಯ ಮೇಲೆ ಮುದ್ರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನೆಟ್ಫ್ಲಿಕ್ಸ್ ಅನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಮುಸಲ್ಮಾನರ ನಂಬಿಕೆಯಂತೆ ಖುರಾನ್ ಅನ್ನು ಮುದ್ರಿಸಿದ ಹಾಳೆಗಳೂ ಸಹ ಪವಿತ್ರವಾಗಿದ್ದು ಅವು ಸುಡದಂತೆ, ಹಾಳಾಗದಂತೆ ರಕ್ಷಿಸಬೇಕಾಗುತ್ತದೆ ಹಾಗಾಗಿ ಪತ್ರಿಕೆಯ ಮೇಲೆ ಖುರಾನ್ ಸಾಲು ಮುದ್ರಿಸಿ ಖುರಾನ್ಗೆ ನೆಟ್ಫ್ಲಿಕ್ಸ್ ಅಪಮಾನ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಒಂಬತ್ತ ರಸವನ್ನು ಪ್ರತಿನಿಧಿಸುವ ಒಂಬತ್ತು ಸಿನಿಮಾಗಳು
'ನವರಸ' ಅಂಥಾಲಜಿ ಸಿನಿಮಾವು ಶೃಂಗಾರ, ಕರುಣ, ಹಾಸ್ಯ, ಭಯಾನಕ, ಭೀಬತ್ಸ, ರೌದ್ರ, ವೀರ, ಅದ್ಭುತ, ಶಾಂತ ಈ ಒಂಬತ್ತು ರಸಗಳನ್ನು ಪ್ರತಿನಿಧಿಸುವ ಸಿನಿಮಾ ಆಗಿದೆ. 'ನವರಸ' ಅಂಥಾಲಜಿ ಸಿನಿಮಾದಲ್ಲಿ ಒಂಬತ್ತು ಪ್ರತ್ಯೇಕ ಸಿನಿಮಾಗಳಿದ್ದು ಪ್ರತಿಯೊಂದು ಒಂದೊಂದು ರಸವನ್ನು ಪ್ರತಿನಿಧಿಸುತ್ತದೆ. ಒಂಬತ್ತು ಭಿನ್ನ ನಿರ್ದೇಶಕರು ನಿರ್ದೇಶಿಸಿರುವ ಈ ಸಿನಿಮಾವನ್ನು ಮಣಿರತ್ನಂ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರಾದ ಬಿಜೊಯ್ ನಂಬಿಯಾರ್, ಪ್ರಿಯದರ್ಶನ್, ಕಾರ್ತಿಕ್ ನರೇನ್, ವಸಂತ್, ಕಾರ್ತಿಕ್ ಸುಬ್ಬರಾಜು, ಅರವಿಂದ ಸ್ವಾಮಿ, ರತೀಂದ್ರ ಆರ್ ಪ್ರಸಾದ್, ಸರ್ಜುನ್ ಕೆ.ಎಂ, ಗೌತಮ್ ವಾಸುದೇವ ಮೆನನ್ ಅವರುಗಳು ಒಂಬತ್ತು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಭಯಾನಕ ರಸಕ್ಕೆ ಸಂಬಂಧಿಸಿದ ಸಿನಿಮಾ
ಇದೀಗ ವಿವಾದಕ್ಕೆ ಕಾರಣವಾಗಿರುವ 'ಇನ್ಮಾಯ್' ಸಿನಿಮಾವು ಭಯಾನಕ ರಸಕ್ಕೆ ಸಂಭಂಧಿಸಿದ್ದಾಗಿದ್ದು, ಸಿನಿಮಾದಲ್ಲಿ ಸಿದ್ಧಾರ್ಥ್, ಪಾರ್ವತಿ ತಿರುವೋತು (ಪಾರ್ವತಿ ಮಿಲ್ಟನ್) ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮುಸ್ಲಿಂ ಹೆಣ್ಣುಮಗಳು ಹಾಗೂ ಯುವಕನೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಮಹಿಳೆ ಮಾಡಿದ ಪಾಪವನ್ನು ಯುವಕನೊಬ್ಬ ನೆನಪು ಮಾಡಿಸಿ ಆಕೆಯನ್ನು ಭಯಕ್ಕೆ ನೂಕಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಕತೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ಪಾರ್ವತಿ ತಿರುವೋತು ಹಣದ ಆಸೆಗೆ ರೋಗಪೀಡಿತ ವ್ಯಕ್ತಿಯನ್ನು ಮದುವೆಯಾಗಿ ನಂತರ ಆತನನ್ನು ಮಾಟ ಮಂತ್ರ ಮಾಡಿಸಿ ಕೊಲ್ಲಿಸಿರುತ್ತಾಳೆ. ನಂತರ ಸಿದ್ಧಾರ್ಥ್ ಬಂದು ಆಕೆಯ ಅಪರಾಧವನ್ನೆಲ್ಲ ಆಕೆಯ ಎದುರೇ ಹೇಳಿ ಆಕೆಯ ಪಾಪವನ್ನು ಆಕೆಯ ಮುಂದೆ ತೆರೆದಿಟ್ಟು ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾನೆ. ಸಿದ್ಧಾರ್ಥ್ಗೆ ಪಾರ್ವತಿ ಮಾಡಿರುವ ಪಾಪ ಗೊತ್ತಾಗಿದ್ದು ಹೇಗೆ? ಪಾರ್ವತಿ ನಿಜವಾಗಿಯೂ ತಪ್ಪಿತಸ್ಥಳೆ ಹೀಗೆ ಹಲವು ಕುತೂಹಲಕಾರಿ ಅಂಶಗಳು ಈ ಸಿನಿಮಾದಲ್ಲಿದೆ.


Click it and Unblock the Notifications











