ಓಟಿಟಿಗೆ ಬಂದ 'ಬಘೀರ'ನ ಕಥೆ ಏನಾಯ್ತು? ಹೊಂಬಾಳೆ ಬಗ್ಗೆ ಸಿನಿರಸಿಕರ ಬೇಸರ ಯಾಕೆ?
ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ ಓಟಿಟಿಗೂ ಬಂದು ಸದ್ದು ಮಾಡ್ತಿದೆ. ನೆಟ್ಫ್ಲಿಕ್ಸ್ನಲ್ಲಿ ಕಳೆದೆರಡು ದಿನಗಳಿಂದ ಸ್ಟ್ರೀಮಿಂಗ್ ಆಗುತ್ತಿದೆ. ಡಾ. ಸೂರಿ ನಿರ್ದೇಶನದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ. ಪರಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.
ಪ್ರಶಾಂತ್ ನೀಲ್ ಬರೆದ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಡಾ. ಸೂರಿ ಗೆದ್ದಿದ್ದಾರೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ 'ಬಘೀರ' ಸಿನಿಮಾ ನಿರ್ಮಿಸಿದೆ. ಕನ್ನಡದ ಚಿತ್ರರಂಗದ ಮೊದಲ ಸೂಪರ್ ಹೀರೊ ಸಿನಿಮಾ ಎನ್ನುವ ಮೆಚ್ಚುಗೆಯೂ ಸಿಕ್ಕಿದೆ. ನಾಯಕಿಯಾಗಿ ರುಕ್ಮಿಣಿ ವಸಂತ್ ಮಿಂಚಿದ್ದು ಪ್ರಕಾಶ್ ರಾಜ್, ರಂಗಾಯ ರಘು, ಸುಧಾರಾಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಕಳೆದ 3 ವರ್ಷಗಳಲ್ಲಿ ನಟ ಶ್ರೀಮುರಳಿ 'ಬಘೀರ' ಚಿತ್ರಕ್ಕಾಗಿ ಹಗಳಿರುಳು ಶ್ರಮಿಸಿದ್ದರು. ಅವರ ಶ್ರಮಕ್ಕೆ ಫಲ ಸಿಕ್ಕಿದೆ. ಬಾಕ್ಸಾಫೀಸ್ನಲ್ಲಿ 18 ದಿನಕ್ಕೆ ಸಿನಿಮಾ 35 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ನೆಟ್ಫ್ಲಿಕ್ಸ್ಗೆ ಒಳ್ಳೆ ಮೊತ್ತಕ್ಕೆ ಸಿನಿಮಾ ಮಾರಾಟವಾಗಿತ್ತು. ನೆಟ್ಫ್ಲಿಕ್ಸ್ ಕೊಂಡುಕೊಂಡ ಮೊದಲ ದೊಡ್ಡ ಕನ್ನಡ ಸಿನಿಮಾ 'ಬಘೀರ' ಎನಿಸಿಕೊಂಡಿದೆ.
ಸದ್ಯ ನೆಟ್ಫ್ಲಿಕ್ಸ್ನಲ್ಲಿ 'ಬಘೀರ' ಸಿನಿಮಾ ಟ್ರೆಂಡಿಂಗ್ನಲ್ಲಿದೆ. ಮೊದಲ ಸ್ಥಾನದಲ್ಲಿ ನಯನತಾರ; ಬಿಯಾಂಡ್ ದಿ ಫೇರಿ ಟೇಲ್ ಡಾಕ್ಯುಮೆಂಟರಿ ಇದೆ. 2ನೇ ಸ್ಥಾನದಲ್ಲಿ 'ಬಘೀರ' ಸಿನಿಮಾ ಸದ್ದು ಮಾಡ್ತಿದೆ. ಪರಭಾಷಿಕರು ಕೂಡ ಓಟಿಟಿಯಲ್ಲಿ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಕೆಲವರು ಹೊಂಬಾಳೆ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲರಿಗೂ ಇಷ್ಟವಾಗುವಂತೆ 'ಬಘೀರ' ಸಿನಿಮಾ ಇದೆ. ಆದರೆ ಕನ್ನಡ ಹಾಗೂ ತೆಲುಗಿನಲ್ಲಿ ಮಾತ್ರ ಸಿನಿಮಾ ಬಿಡುಗಡೆ ಆಗಿದೆ. ಹಿಂದಿಗೆ ಡಬ್ ಮಾಡಲಿಲ್ಲ. ಸಾಕಷ್ಟು ಜನ ಹಿಂದಿಗೆ ಡಬ್ ಮಾಡಿ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವಂತೆ ಕೋರಿದ್ದರು. ಅದು ಆಗಲಿಲ್ಲ. ಕೊನೆ ಪಕ್ಷ ಹಿಂದಿ ವರ್ಷನ್ ಓಟಿಟಿಗೆ ಬಂದಿದ್ದರೆ ಚೆನ್ನಾಗಿತ್ತು. ನೆಟ್ಫ್ಲಿಕ್ಸ್ನಲ್ಲಿ ಈಗ ನಂಬರ್ 1 ಸ್ಥಾನದಲ್ಲಿ ಟ್ರೆಂಡಿಂಗ್ ಆಗುತಿತ್ತು ಎಂದು ಬೇಸರ ಹೊರ ಹಾಕಿದ್ದಾರೆ.
ಮೊದಲಿನಿಂದಲೂ 'ಬಘೀರ' ಚಿತ್ರವನ್ನು 'KGF' ಹಾಗೂ 'ಕಾಂತಾರ' ಚಿತ್ರಗಳ ರೀತಿ ಹೊಂಬಾಳೆ ಸಂಸ್ಥೆ ಪ್ರಚಾರ, ವಿತರಣೆ ಮಾಡಲಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೊನೆ ಪಕ್ಷ ಈಗ ಸಿನಿಮಾ ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು 'ಬಘೀರ' ಓಟಿಟಿಗೆ ಬಂದಿದ್ದರೂ ಕೆಲವೆಡೆ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ.
ನೆಟ್ಫ್ಲಿಕ್ಸ್ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿತ್ತು. 'ಬಘೀರ' ಚಿತ್ರದಿಂದ ತನ್ನ ನಿರ್ಧಾರ ಬದಲಿಸಿತ್ತು. ಇನ್ನು ಈ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ಸಿಕ್ಕರೆ ಮುಂದೆ ಮತ್ತಷ್ಟು ಕನ್ನಡ ಸಿನಿಮಾಗಳನ್ನು ಸಂಸ್ಥೆ ಕೊಂಡುಕೊಳ್ಳುತ್ತದೆ. ಇದೇ ಕಾರಣಕ್ಕೆ ಕೆಲವರು ನೆಟ್ಫ್ಲಿಕ್ಸ್ನಲ್ಲಿ ಎಲ್ಲರೂ 'ಬಘೀರ' ಸಿನಿಮಾ ನೋಡಿ ಎಂದು ಮನವಿ ಮಾಡುತ್ತಿದ್ದಾರೆ. ಇದೀಗ ಸಿನಿಮಾ ಟ್ರೆಂಡಿಂಗ್ನಲ್ಲಿ ಬಂದಿರುವುದು ಖುಷಿ ತಂದಿದೆ.
ಕನ್ನಡದಲ್ಲಿ ವೆಬ್ ಸೀರಿಸ್ಗಳ ಟ್ರೆಂಡ್ ಇಲ್ಲ. ದೊಡ್ಡಮಟ್ಟದಲ್ಲಿ ಸೀರಿಸ್ಗಳ ನಿರ್ಮಾಣ ಆಗುತ್ತಿಲ್ಲ. ಆದರೆ ಹೊಂಬಾಳೆ ಸಂಸ್ಥೆ ಈ ದಿಶೆಯಲ್ಲಿ ಯೋಚಿಸುತ್ತಿದೆ. ಈಗಾಗಲೇ ನೆಟ್ಫ್ಲಿಕ್ಸ್ ಜೊತೆ ಈ ಬಗ್ಗೆ ಚರ್ಚಿಸಿರುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದಾರೆ. ದೊಡ್ಡ ಮಟ್ಟದಲ್ಲಿ ಸೀರಿಸ್ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ಶುರುವಾಗಲಿದೆ. ಆದಷ್ಟು ಬೇಗ ಈ ಕೆಲಸ ಆಗಲಿ ಎಂದು ಕನ್ನಡ ಸಿನಿರಸಿಕರು ಮನವಿ ಮಾಡುತ್ತಿದ್ದಾರೆ.


Click it and Unblock the Notifications











