ಒಂದೇ ಪ್ರಶ್ನೆಗೆ ಸುದೀಪ್ ಹಾಗೂ ಚಿರು ತದ್ವಿರುದ್ದ ಉತ್ತರ ಕೊಟ್ಟಿದ್ಯಾಕೆ?
ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು ಎನ್ನುವ ಕೂಗು ಎಲ್ಲಾ ಚಿತ್ರರಂಗಗಳಲ್ಲಿ ಕೇಳಿ ಬರ್ತಿದೆ. ಸ್ಟಾರ್ ನಟರ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಚಿತ್ರಮಂದಿರಗಳಿಗೆ ಓಟಿಟಿ ವೇದಿಕೆ ಕಂಟಕವಾಗಿ ಪರಿಣಮಿಸಿದೆ.
ಸಿನಿಮಾ ತೆರೆಕಂಡ ತಿಂಗಳಿಗೆ ಓಟಿಟಿಗೆ ಬರ್ತಿದೆ. ಹಾಗಾಗಿ ಪ್ರೇಕ್ಷಕರು ಎಲ್ಲಾ ಸಿನಿಮಾಗಳನ್ನು ನೋಡಲು ಚಿತ್ರಮಂದಿರಕ್ಕೆ ಹೋಗುತ್ತಿಲ್ಲ. ಅಯ್ಯೋ 30 ದಿನ ಕಳೆದರೆ ಓಟಿಟಿಗೆ ಬರುತ್ತೆ ಬಿಡು ಎಂದು ಸುಮ್ಮನಾಗುತ್ತಿದ್ದಾರೆ. ಇನ್ನು ಕೆಲ ಸಿನಿಮಾಗಳು ನೇರವಾಗಿ ಓಟಿಟಿಗೆ ಬಂದುಬಿಡುತ್ತವೆ. ಬಾಲಿವುಡ್ ಸ್ಟಾರ್ ನಟರೇ ಓಟಿಟಿಗಾಗಿ ಸಿನಿಮಾ, ವೆಬ್ ಸೀರಿಸ್ ಮಾಡುತ್ತಿದ್ದಾರೆ. ಓಟಿಟಿ ಕಂಟೆಂಟ್ನಲ್ಲಿ ನಟಿಸಬೇಕೋ ಬೇಡೋ ಎನ್ನುವ ಬಗ್ಗೆ ಸ್ಟಾರ್ ನಟರಲ್ಲಿ ಭಿನ್ನ ಅಭಿಪ್ರಾಯಗಳಿವೆ.

ಓಟಿಟಿ ಒರಿಜಿನಲ್ ಸಿನಿಮಾ ಅಥವಾ ವೆಬ್ ಸೀರಿಸ್ನಲ್ಲಿ ನಟಿಸುವ ಬಗ್ಗೆ ಕಿಚ್ಚನಿಗೆ ಕೇಳಿದ ಪ್ರಶ್ನೆಗೆ ನೋ ಎನ್ನುವ ಉತ್ತರ ಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ನಟ ಚಿರಂಜೀವಿ ಮಾತನಾಡುತ್ತಾ ಎಲ್ಲಾ ತರಹದ ಪಾತ್ರಗಳನ್ನು ಮಾಡುತ್ತೇನೆ. ಹೀರೊ ಆಗಿ ಮಾತ್ರ ನಟಿಸಬೇಕು ಅಂತ ಏನಿಲ್ಲ. ಅವಶ್ಯಕತೆ ಬಿದ್ದರೆ ಓಟಿಟಿಗೆ ಕೂಡ ನಟಿಸುತ್ತೇನೆ, ಎಂತಹ ಪಾತ್ರ ಆಗಿದ್ದರೂ ಸರಿ ಎಂದಿದ್ದಾರೆ. ದೊಡ್ಡ ಪರದೆಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲು ಬಹಳ ಜನ ಬಯಸುತ್ತಾರೆ. ತೆರೆ ಚಿಕ್ಕದೋ ದೊಡ್ಡದೋ ಯಾವುದಾದರೆ ಏನು ಒಳ್ಳೆ ಪಾತ್ರ, ಸಂಭಾವನೆ ಮುಖ್ಯ ಎನ್ನುವವರು ಇದ್ದಾರೆ.
ಇತ್ತೀಚೆಗೆ ರಿಪಬ್ಲಿಕ್ ಕನ್ನಡ ವಾಹಿನಿ ಸಂದರ್ಶನದಲ್ಲಿ ನಟ ಸುದೀಪ್ ಭಾಗಿ ಆಗಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು. ಸುದೀಪ್ ಅವರಿಗೆ ನಾವು ಓಟಿಟಿ ಎಕ್ಸ್ಕ್ಲೂಸಿವ್ ನಿರೀಕ್ಷೆ ಮಾಡಬಹುದಾ? ಎನ್ನುವ ಪ್ರಶ್ನೆ ಕೂಡ ಎದುರಾಗಿತ್ತು. ಅದಕ್ಕೆ ಉತ್ತರಿಸಿದ್ದ ಕಿಚ್ಚ "ನಾನು ಇಂಜಿನಿಯರ್ ಮಾಡುತ್ತಿದ್ದಾಗಲೇ ಬೆಳ್ಳಿತೆರೆಯಲ್ಲಿ ನಾಯಕನಾಗಬೇಕು ಎಂದು ಆಸೆ ಪಟ್ಟಿದ್ದೆ. ಅಲ್ಲೇ ಚೆನ್ನಾಗಿದ್ದೀನಿ. ಕನ್ನಡವನ್ನು ಬೆಳೆಸುವ ಪ್ರಯತ್ನ ಮಾಡಿದ್ದೀವಿ. ಬೆಳ್ಳಿತೆರೆಯಲ್ಲಿ ಬರುವುದನ್ನು ಬಳಿಕ ಓಟಿಟಿಗೆ ಹಾಕುತ್ತಾರೆ. ಅಲ್ಲೇ ಚೆನ್ನಾಗಿದ್ದೀವಿ" ಎಂದಿದ್ದರು.
ಸುದೀಪ್ ನೇರವಾಗಿಯೇ ನಾನು ಓಟಿಟಿ ಎಕ್ಸ್ಕ್ಲೂಸಿವ್ ಸಿನಿಮಾ ಅಥವಾ ವೆಬ್ ಸೀರಿಸ್ಗಳಲ್ಲಿ ನಟಿಸುವುದಿಲ್ಲ ಎಂದು ನೇರವಾಗಿಯೇ ಉತ್ತರಿಸಿದ್ದರು. ಇತ್ತೀಚೆಗೆ 'ಕುಬೇರ' ಚಿತ್ರದ ಸಕ್ಸಸ್ ಮೀಟ್ನಲ್ಲಿ ತೆಲುಗು ನಟ ಚಿರಂಜೀವಿ ಭಾಗಿ ಆಗಿದ್ದರು. ಧನುಷ್ ಹೀರೊ ಆಗಿ ನಟಿಸಿರುವ ಈ ಚಿತ್ರದಲ್ಲಿ ನಾಗಾರ್ಜುನಾ ಮುಖ್ಯವಾದ ಪಾತ್ರ ನಿಭಾಯಿಸಿದ್ದಾರೆ. ಈ ವೇಳೆ ವೇದಿಕೆಯಲ್ಲಿ ನಟ ಚಿರಂಜೀವಿ ಮಾತನಾಡಿ ನಾಗಾರ್ಜುನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದರು.
"ಕುಬೇರ ಸಿನಿಮಾ ಬಗ್ಗೆ ನಾಗಾರ್ಜುನ ಜೊತೆ ಮಾತನಾಡುತ್ತಾ ಧನುಷ್ ಹೀರೊ ಆಗಿ ನಟಿಸುವಾಗ ನೀನು ಹೇಗೆ ಈ ಪಾತ್ರ ಮಾಡೋಕೆ ಒಪ್ಪಿಕೊಂಡೆ ಎಂದು ಕೇಳಿದ್ದೆ. ಆಗ ನಾಗಾರ್ಜುನ ಒಂದೇ ಮಾತು ಹೇಳಿದ್ದು. ಯಾವಾಗಲೂ ಹೀರೊ ಆಗಿ ನಟಿಸಿ ಸುಸ್ತಾಗಿದ್ದೀನಿ. ಅದಕ್ಕೆ ಹೊಸದಾಗಿ ಟ್ರೈ ಮಾಡ್ತಿದ್ದೀನಿ. ಇದು ವರ್ಕೌಟ್ ಆದ್ರೆ ಮುಂದೆ ಇಂತಹ ಸಾಕಷ್ಟು ಅವಕಾಶಗಳು ಬರುತ್ತವೆ ಎಂದರು. ನೀನು ಹೇಳಿದ್ದು ನಿಜ ನಾಗಾರ್ಜುನ, ನಿನ್ನ ಜೊತೆ ನಾನು ಕೂಡ ಬರ್ತೀನಿ. ಹೀರೊ ಪಾತ್ರ ಮಾತ್ರವಲ್ಲ, ನಾಳೆ ಓಟಿಟಿ ಎಕ್ಸ್ಕ್ಲೂಸಿವ್ಗೆ ಯಾವುದಾದರೂ ಪಾತ್ರ ಮಾಡಬೇಕು ಅಂದರೆ ಮಾಡ್ತೀನಿ" ಎಂದು ಚಿರು ಹೇಳಿದ್ದಾರೆ.
ಬಾಲಿವುಡ್ನಲ್ಲಿ ಅಜಯ್ ದೇವಗನ್, ಸೈಫ್ ಅಲಿಖಾನ್ ಸೇರಿದಂತೆ ಕೆಲ ಸ್ಟಾರ್ ನಟ, ನಟಿಯರು ಓಟಿಟಿ ಎಕ್ಸ್ಕ್ಲೂಸಿವ್ ಕಂಟೆಂಟ್ಗಾಗಿ ನಟಿಸುತ್ತಿದ್ದಾರೆ. ತೆಲುಗು ನಟ ವೆಂಕಟೇಶ್ ಕೂಡ 'ರಾಣಾ ನಾಯ್ಡು' ವೆಬ್ ಸೀರಿಸ್ನಲ್ಲಿ ನಟಿಸಿದ್ದಾರೆ. ಬಾಲಕೃಷ್ಣ ಸೇರಿದಂತೆ ಕೆಲವರು ಓಟಿಟಿ ಶೋಗಳನ್ನು ನಿರೂಪಣೆ ಮಾಡುತ್ತಿದ್ದಾರೆ.


Click it and Unblock the Notifications











