'ಸ್ವಾತಿ ಮುತ್ತಿನ ಮಳೆ ಹನಿಯೇ' ಓಟಿಟಿ ರಿಲೀಸ್ ಡೇಟ್ ಘೋಷಣೆ: ಎಲ್ಲಿ, ಯಾವಾಗ ಸ್ಟ್ರೀಮಿಂಗ್?
ರಾಜ್ ಬಿ. ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಥಿಯೇಟರ್ಗಳಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಇದೀಗ ಸಿನಿಮಾ ಓಟಿಟಿ ಎಂಟ್ರಿಗೆ ಸಿದ್ಧವಾಗಿದೆ. ಚಿತ್ರದಲ್ಲಿ ಸಿರಿ ರವಿಕುಮಾರ್ ನಾಯಕಿಯಾಗಿ ನಟಿಸಿದ್ದರು.
ನವೆಂಬರ್ 24ಕ್ಕೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ತೆರೆಗಪ್ಪಳಿಸಿತ್ತು. ಆದರೆ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಓಟಿಟಿಗೆ ಸೂಕ್ತವಾದ ಸಿನಿಮಾ ಎಂದುಬಿಟ್ಟಿದ್ದರು. ಹಾಗಾಗಿ ಇದೀಗ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ಗೆ ಸಿದ್ಧವಾಗಿದ್ದು ಕುತೂಹಲ ಮೂಡಿಸಿದೆ. ಮೋಹಕ ತಾರೆ ರಮ್ಯಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ರಾಜ್ ಬಿ. ಶೆಟ್ಟಿ ನಿರ್ದೇಶನ, ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು. ಅಸಲಿಗೆ ರಮ್ಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಬಳಿಕ ಆ ಜಾಗಕ್ಕೆ ಸಿರಿ ರವಿಕುಮಾರ್ ಎಂಟ್ರಿ ಆಗಿತ್ತು. ಪ್ರವೀಣ್ ಸಿರಿಯಾನ್ ಸಿನಿಮಾಟೋಗ್ರಫಿ, ಮಿಥುನ್ ಮುಕುಂದನ್ ಸಂಗೀತ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿತ್ತು.
ಒಂದು ಹಾಸ್ಪಿಸ್ನಲ್ಲೇ ಇಡೀ ಸಿನಿಮಾ ಕಥೆ ಕಟ್ಟಿಕೊಡಲಾಗಿತ್ತು. ರಾಜ್ ಬಿ. ಶೆಟ್ಟಿ 'ಗರುಡ ಗಮನ ವೃಷಭ ವಾಹನ', 'ಟೋಬಿ' ಸಿನಿಮಾಗಳಲ್ಲಿದ್ದ ಆರ್ಭಟ ಬಿಟ್ಟು ಬಹಳ ಸೌಮ್ಯವಾದ ಪಾತ್ರದಲ್ಲಿ ಎಲ್ಲವನ್ನು ದಾಟಿಸುವ ಪ್ರಯತ್ನ ಮಾಡಿದ್ದರು. ಸದ್ಯ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಈ ಶುಕ್ರವಾರ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಧಿಕೃತವಾಗಿ ಈ ವಿಚಾರವನ್ನು ಚಿತ್ರತಂಡ ಘೋಷಿಸಿದೆ. ಸಿನಿಮಾ ತೆರೆಕಂಡು ತಿಂಗಳು ಕಳೆಯುತ್ತಿದ್ದಂತೆ ಓಟಿಟಿಗೆ ಬರ್ತಿದೆ.
'ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆ ಏನು ಎಂದು ನೋಡುವುದಾದರೆ 'ಆಸರೆ' ಎನ್ನುವ ಹಾಸ್ಪೈಸ್ನಲ್ಲಿ(ಗುಣವಾಗದ ಕಾಯಿಲೆಯಿಂದ ಬಳಲುವವರನ್ನು ನೋಡಿಕೊಳ್ಳುವ ಕೇಂದ್ರ) ಪ್ರೇರಣಾ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಸಾವು ಬದುಕಿನ ನಡುವೆ ಹೋರಾಟ ನಡೆಸುವವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುತ್ತಾರೆ. ಅಲ್ಲಿಗೆ ಕ್ಯಾನ್ಸರ್ ಕೊನೆ ಹಂತ ತಲುಪಿದ ಅನಿಕೇತ್ ಬಂದು ದಾಖಲಾಗುತ್ತಾನೆ. ಆತನ ಆಗಮನದಿಂದ ಅದಾಗಲೇ ಮದುವೆ ಆಗಿರುವ ಪ್ರೇರಣಾ ಜೀವನದಲ್ಲಿ ಆಗುವ ಬದಲಾವಣೆಯ ಕಥೆ ಚಿತ್ರದಲ್ಲಿದೆ.
ಒಂದು ಮುಕ್ಕಾಲು ಗಂಟೆಯ ಸಣ್ಣ ಸಿನಿಮಾ ಇದು. ಮೊದಲಿಗೆ ಈ ಚಿತ್ರದಲ್ಲಿ ನಟಿಸಲು ನಟಿ ರಮ್ಯಾ ಒಪ್ಪಿಕೊಂಡಿದ್ದರು. ಬಳಿಕ ಹೊರ ಬಂದಿದ್ದರು. ಕೆಲ ದಿನಗಳ ಹಿಂದೆ ಅದಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದರು. "ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದಿದ್ದು ಏಕೆಂದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದು ಎಂದು ನಿರ್ಧರಿಸಿದ್ದೆವು. ನನ್ನ ಕಮ್ ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಬೇಕು ಎಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ್ದ ಓಟಿಟಿ ವೇದಿಕೆ ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ,. ಆದರೆ, ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ನಾವು ಹುಡುಕುತ್ತೇವೆ" ಎಂದು ಪೋಸ್ಟ್ ಮಾಡಿದ್ದರು.
ಅಮೇಜಾನ್ ಸಂಸ್ಥೆ ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಅಷ್ಟಾಗಿ ಕೊಂಡುಕೊಳ್ಳುತ್ತಿಲ್ಲ. ಬಹಳ ಹಿಂದೆಯೇ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಒಪ್ಪಂದವಾಗಿತ್ತು. ಸಿನಿಮಾ ತೆರೆಕಂಡು ಒಂದು ತಿಂಗಳ ಬಳಿಕ ಈಗ ಓಟಿಟಿ ರಿಲೀಸ್ಗೆ ಸಿದ್ಧವಾಗಿದೆ.


Click it and Unblock the Notifications











