ಓಟಿಟಿಗೆ ಥ್ರಿಲ್ಲರ್ ಸಿನಿಮಾ; ತಮನ್ನಾ- ವಸಿಷ್ಠ ಏಟು-ಎದಿರೇಟು ಈಗ್ಲೇ ನೋಡಿ
ಚಿತ್ರಮಂದಿರಗಳಿಗಿಂತ ಈಗ ಓಟಿಟಿಗೆ ಬರುವ ಸಿನಿಮಾಗಳ ಆರ್ಭಟವೇ ಜೋರಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು 20 ದಿನಕ್ಕೆ ಓಟಿಟಿಗೆ ಬಂದುಬಿಡ್ತಿವೆ. ಮುಂದೆ ಚಿತ್ರಮಂದಿರಗಳೆಲ್ಲಾ ಮುಚ್ಚಿ ಓಟಿಟಿಯಲ್ಲೇ ಸಿನಿಮಾ ನೋಡುವ ದಿನಗಳು ಬಂದರೂ ಅಚ್ಚರಿ ಪಡಬೇಕಿಲ್ಲ.
ಕೇವಲ 20 ದಿನಗಳ ಹಿಂದೆ ತೆರೆಗೆ ಬಂದಿದ್ದ ತೆಲುಗಿನ ಸೂಪರ್ನ್ಯಾಚುರಲ್ ಥ್ರಿಲ್ಲರ್ ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಒಂದು ವಾರ ತಡವಾಗಿ ಬರುತ್ತದೆ ಎಂದುಕೊಂಡಿದ್ದ ಸಿನಿಮಾ ಬೇಗ ಬಂದು ಅಚ್ಚರಿ ಮೂಡಿಸಿದೆ. ಈ ಚಿತ್ರದಲ್ಲಿ ಕನ್ನಡ ಕಲಾವಿದರು, ತಂತ್ರಜ್ಞರು ಕೆಲಸ ಮಾಡಿರುವುದು ವಿಶೇಷ.

ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದ್ದು ಇದು ಕೂಡ 3 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಚಿತ್ರವೊಂದರ ಮುಂದುವರೆದ ಭಾಗ. ಚಿತ್ರದಲ್ಲಿ ಕನ್ನಡ ನಟ ವಸಿಷ್ಠ ಸಿಂಹ ವಿಲನ್ ಆಗಿ ಅಬ್ಬರಿಸಿದ್ದಾರೆ. ಶಿವಶಕ್ತಿಯಾಗಿ ತಮನ್ನಾ ಅಬ್ಬರಿಸಿದ್ದಾರೆ. ಇವರಿಬ್ಬರ ಪೈಪೋಟಿ ಕಥೆಯೇ 'ಓದೆಲಾ-2'.
ಹೌದು ಏಪ್ರಿಲ್ 17ಕ್ಕೆ ತೆರೆಗೆ ಬಂದಿದ್ದ 'ಓದೆಲಾ-2' ಸಿನಿಮಾ ಮಧ್ಯರಾತ್ರಿಯಿಂದಲೇ ಓಟಿಟಿಗೆ ಬಂದಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿರೋದು ವಿಶೇಷ. 2022ರಲ್ಲಿ ಬಂದಿದ್ದ 'ಓದೆಲಾ ರೈಲ್ವೆ ಸ್ಟೇಷನ್' ಚಿತ್ರದ ಸೀಕ್ವೆಲ್ ಇದು. 'ಓದೆಲಾ' ಎಂಬ ಗ್ರಾಮದಲ್ಲಿ ನಡೆಯುವ ಕಾಲ್ಪನಿಕ ಕಥೆಯಿದು.

ಊರಿನಲ್ಲಿ ಮದುವೆಯಾದ ಯುವತಿಯರನ್ನು ಅನುಭವಿಸಿ ಕೊಲ್ಲುವ ಕಿರಾತಕ ತಿರುಪತಿ(ವಸಿಷ್ಠ ಸಿಂಹ) ಆತನ ಪತ್ನಿಯೇ ಕೊಲ್ಲುವುದರೊಂದಿಗೆ 'ಓದೆಲಾ ರೈಲ್ವೆ ಸ್ಟೇಷನ್' ಕಥೆ ಮುಗಿದಿತ್ತು. ಇದೀಗ ಎರಡನೇ ಭಾಗದಲ್ಲಿ ಆತನ ಆತ್ಮ ಪ್ರೇತಾತ್ಮವಾಗಿ ಮರಳಿ ಬಂದು ಮತ್ತೆ ಊರಿನಲ್ಲಿ ಅಟ್ಟಾಹಾಸ ಮೆರೆಯುವ ಕಥೆ ಚಿತ್ರದಲ್ಲಿದೆ. ತಿರುಪತಿಗೆ ಶಿವಶಕ್ತಿ ಭೈರವಿ(ತಮನ್ನಾ) ಕಂಟಕವಾಗುತ್ತಾಳೆ. ಮುಂದೆ ಇವರಿಬ್ಬರ ಎಟು- ಎದಿರೇಟು ಹೇಗಿರುತ್ತದೆ? ಕೊನೆಗೆ ತಿರುಪತಿ ಪ್ರೇತಾತ್ಮ ನಾಶವಾಗುತ್ತಾ? ಎನ್ನುವುದನ್ನೆಲ್ಲಾ ಸಿನಿಮಾದಲ್ಲೇ ನೋಡಬೇಕು.
'ಓದೆಲಾ ರೈಲ್ವೆ ಸ್ಟೇಷನ್' ಸಿನಿಮಾ ನೇರವಾಗಿ ಅಹಾ ಓಟಿಟಿಗೆ ಬಂದಿತ್ತು. ಆದರೆ 'ಓದೆಲಾ-2' ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಇದೀಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸದ್ಯಕ್ಕೆ ತೆಲುಗು, ಹಿಂದಿ, ತಮಿಳು ಆಡಿಯೋದಲ್ಲಿ ಸಿನಿಮಾ ವೀಕ್ಷಿಸಬಹುದು. ಶೀಘ್ರದಲ್ಲೇ ಕನ್ನಡ ಆಡಿಯೋದಲ್ಲಿ ಕೂಡ ಸಿನಿಮಾ ನೋಡುವ ಅವಕಾಶ ಸಿಗಲಿದೆ.
ಸಂಪತ್ ನಂದಿ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡಿರುವ 'ಓದೆಲಾ'-2 ಚಿತ್ರಕ್ಕೆ ಅಶೋಕ್ ತೇಜ ಆಕ್ಷನ್ ಕಟ್ ಹೇಳಿದ್ದಾರೆ. ಹೆಬ್ಬಾ ಪಟೇಲ್, ಮುರಳಿ ಶರ್ಮಾ, ಶರತ್ ಲೋಹಿತಾಶ್ವ, ಯುವ, ವಂಶಿ, ಸುರೇಂದರ್ ರೆಡ್ಡಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವಿಮರ್ಶಕರಿಂದ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಬಂತು ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿತ್ತು.
'ಓದೆಲಾ'-2 ಚಿತ್ರದ ಓಟಿಟಿ ರೈಟ್ಸ್ ಬರೋಬ್ಬರಿ 18 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ಹೇಳಲಾಗಿತ್ತು. ಹಾಗಾಗಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಸೋತರೂ ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮೊದಲ 3 ದಿನಕ್ಕೆ ಚಿತ್ರ 6.25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿತ್ತು. ತಿರುಪತಿ ಪಾತ್ರದಲ್ಲಿ ವಸಿಷ್ಠ ಸಿಂಹ ಆರ್ಭಟ ಜೋರಾಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ. ಅವರಿಗೆ ಮುಂದೆ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಸಿಗುವ ನಿರೀಕ್ಷೆಯಿದೆ.
ದೈವಶಕ್ತಿ ಹಾಗೂ ದುಷ್ಠಶಕ್ತಿಯ ನಡುವಿನ ಹೋರಾಟದ ಕಥೆ 'ಓದೆಲಾ-2' ಚಿತ್ರದಲ್ಲಿದೆ. ಕೆಲವರು ಈ ಚಿತ್ರವನ್ನು ಅನುಷ್ಕಾ ಶೆಟ್ಟಿ ನಟನೆಯ 'ಅರುಂಧತಿ' ಚಿತ್ರದ ಕಾಪಿ ಪೇಸ್ಟ್ ರೀತಿಯಿದೆ ಎಂದಿದ್ದರು. ಇದೀಗ ಓಟಿಟಿಯಲ್ಲಿ ನೀವು ಸಿನಿಮಾ ನೋಡಿ.


Click it and Unblock the Notifications











