Thaai Kizhavi OTT: ಸೂಪರ್ ಹಿಟ್ 'ಥಾಯ್ ಕಿಳವಿ' ಓಟಿಟಿಗೆ; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್
ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾಗಿ ಹಿಟ್ ಲಿಸ್ಟ್ ಸೇರಿರುವ ತಮಿಳು ಸಿನಿಮಾ 'ಥಾಯ್ ಕಿಳವಿ'. ನಟ ಶಿವಕಾರ್ತಿಕೇಯನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 5ನೇ ವಾರವೂ 150ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಇದೀಗ 'ಥಾಯ್ ಕಿಳವಿ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆಯಾಗಿದೆ.
ರಾಧಿಕಾ ಶರತ್ಕುಮಾರ್ ನಟನೆಯ ಹಳ್ಳಿ ಸೊಗಡಿನ ಸಿನಿಮಾ ಇದು. ಶಿವಕುಮಾರ್ ಮುರುಗೇಶನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫೆಬ್ರವರಿ 27ರಂದು ಸಿನಿಮಾ ಬಿಡುಗಡೆ ಆಗಿತ್ತು. ಅಂದಾಜು 8 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 80 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಹುಬ್ಬೇರಿಸಿದೆ. ಈ ವರ್ಷದ ತಮಿಳಿನ ಮೊದಲ ಹಿಟ್ ಸಿನಿಮಾ ಎನಿಸಿಕೊಂಡಿದೆ.

ಸ್ಟಾರ್ ನಟರಿಲ್ಲದೇ ಮಹಿಳಾ ಪ್ರಧಾನ ಸಿನಿಮಾವೊಂದು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ಯಿಯಾಗಿತ್ತು. ಮಹಿಳಾ ಸಬಲೀಕರಣ, ಮಹಿಳಾ ಆರ್ಥಿಕ ಸ್ವಾತಂತ್ರ್ಯ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಕೆಲವೇ ಹೊತ್ತು ತೆರೆಮೇಲೆ ಕಾಣಿಸಿಕೊಂಡು ರಾಧಿಕಾ ಮೋಡಿ ಮಾಡಿದ್ದಾರೆ. ಇವತ್ತಿಗೂ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಿದೆ. ತಮಿಳಿನ ಸ್ಟಾರ್ ನಟರೇ ಒಂದು ಹಿಟ್ ಕೊಡಲು ತಿಣುಕಾಡುತ್ತಿರುವಾಗ 'ಥಾಯ್ ಕಿಳವಿ' ಸಿನಿಮಾ ಚಮತ್ಕಾರ ಮಾಡಿದೆ. ಪ್ರೇಕ್ಷಕರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕೇಳ್ತಿಲ್ಲ, ಸಣ್ಣ ಸಿನಿಮಾ ಆದರೂ ಒಳ್ಳೆ ಸಿನಿಮಾ ಕೊಡಿ ಎನ್ನುತ್ತಿದ್ದಾರೆ. ಆ ಮಾತು ಈ ಚಿತ್ರದಿಂದ ಮತ್ತೊಮ್ಮೆ ಸಾಬೀತಾಗಿದೆ.
ಒಂದ್ಕಾಲದಲ್ಲಿ ನಾಯಕಿಯಾಗಿ ಮೆರೆದ ರಾಧಿಕಾ ಈಗ ಪೋಷಕ ಪಾತ್ರಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ 'ಥಾಯ್ ಕಿಳವಿ'ಯಾಗಿ ನೋಡುಗರ ಮೆಚ್ಚುಗೆ ಗಳಿಸಿದ್ದಾರೆ. ಇದೇ ಮೊದಲ ಬಾರಿಗೆ ಪಾಸ್ಥೆಟಿಕ್ ಮೇಕಪ್ ಹಾಕಿಕೊಂಡು ವಯಸ್ಸಾದ ಮುದುಕಿಯ ವೇಷದಲ್ಲಿ ಕಾಣಿಸಿಕೊಂಡು ಗೆಲುವು ಕಂಡಿದ್ದಾರೆ. ಆಕೆಯ ನಟನೆ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಸಾಕಷ್ಟು ಜನ ಓಟಿಟಿಯಲ್ಲಿ 'ಥಾಯ್ ಕಿಳವಿ' ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ. ಏಪ್ರಿಲ್ 10ರಂದು ಜಿಯೋ ಹಾಟ್ಸ್ಟರ್ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ತಮಿಳು ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ವೀಕ್ಷಣಗೆ ಲಭ್ಯವಾಗಲಿದೆ. ರಾಧಿಕಾ ಜೊತೆಗೆ ಸಿಂಗಪುಲಿ, ಅರುಲ್ ದಾಸ್, ಬಾಲ ಶರವಣನ್, ಇಳವರಸು, ಜಾರ್ಜ್ ಮರಿಯನ್ ಚಿತ್ರದ ತಾರಾಗಣದಲ್ಲಿದ್ದಾರೆ.
ವಿವೇಕ್ ವಿಜಯ್ ಕುಮಾರ್ ಛಾಯಾಗ್ರಹಣ, ನಿವಾಸ್ ಪ್ರಸನ್ನ ಸಂಗೀತ ಚಿತ್ರಕ್ಕಿದೆ. ವಿಮರ್ಶಕರಿಂದಲೂ 'ಥಾಯ್ ಕಿಳವಿ' ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಎಜಿಎಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿ ಸಕ್ಸಸ್ ಕಂಡಿದೆ. ಸ್ಟಾರ್ ಸಂಸ್ಥೆಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಓಟಿಟಿಗೆ ಬಂದ ಬಳಿಕ ಟಿವಿಯಲ್ಲಿ ಪ್ರೀಮಿಯರ್ ಆಗಲಿದೆ. ಚಿತ್ರಕ್ಕೆ ಸಿಕ್ಕ ಗೆಲುವಿನಿಂದ ಚಿತ್ರತಂಡ ಖುಷಿಯಾಗಿದೆ. ಓಟಿಟಿಗೆ ಬಂದು ಮತ್ತಷ್ಟು ಸಿನಿರಸಿಕರನ್ನು ಸಿನಿಮಾ ತಲುಪಲಿದೆ.
ಚಿತ್ರದ ಕಥೆ ಬಹಳ ಸಿಂಪಲ್.. ಹಳ್ಳಿಯೊಂದರ ಹಿರಿಯ ಜೀವ ಪವುನುತಾಯಿ(ರಾಧಿಕಾ ಶರತ್ಕುಮಾರ್). ಆದರೆ ಅಷ್ಟೇ ಘಾಟಿ. ಊರಿನ ಜನರಿಗೆ ಸಾಲು ಕೊಟ್ಟು ಬಡ್ಡಿ ಎಣಿಸುತ್ತಿರುತ್ತಾಳೆ. ಬಹಳ ಖಡಕ್ ಆಗಿ ಊರಿನಲ್ಲಿ ದರ್ಬಾರ್ ನಡೆಸುತ್ತಿರುತ್ತಾಳೆ. ಆಕೆಗೆ ಹೆದರಿ ಜನ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಒಮ್ಮೆ ದಿಢೀರನೆ ಪವುನುತಾಯಿ ಪಾರ್ಶವಾಯು ತಗುಲಿ ಹಾಸಿಗೆ ಹಿಡಿಯುತ್ತಾಳೆ. ಮುಂದೆ ಊರಿನ ಜನ ಪ್ರತಿಕ್ರಿಯೆ ಹೇಗಿರುತ್ತದೆ? ತಾಯಿಯ ಆರೋಗ್ಯ ಸಮಸ್ಯೆ ಗುಣಪಡಿಸಲು ಮಕ್ಕಳ ಪ್ರಯತ್ನ, ಅದಕ್ಕೆ ಕಾರಣ ಏನು ಎನ್ನುವುದು ಸಿನಿಮಾ ಕಥೆ.


Click it and Unblock the Notifications











