Thalaivan Thalaivii: ಓಟಿಟಿಗೆ ವಿಜಯ್- ನಿತ್ಯಾ 'ತಲೈವನ್ ತಲೈವಿ'; ಕನ್ನಡದಲ್ಲೇ ನೋಡಿ
ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಸಿನಿಮಾಗಳ ಆರ್ಭಟ ಜೋರಾಗಿದೆ. ಕನ್ನಡದ 'ಎಕ್ಕ', 'ಸು ಫ್ರಂ ಸೋ' ಜೊತೆಗೆ ತಮಿಳಿನ 'ಕೂಲಿ', ಬಾಲಿವುಡ್ 'ವಾರ್- 2' ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಆನಿಮೇಟೆಡ್ ಸಿನಿಮಾ 'ಮಹಾವತಾರ್ ನರಸಿಂಹ' ಕೂಡ ಬಾಕ್ಸಾಫೀಸ್ನಲ್ಲಿ ಇತಿಹಾಸ ನಿರ್ಮಿಸಿದೆ.
ಕಳೆದ ಮೂರು ವಾರಗಳಲ್ಲಿ ಬಂದಿದ್ದ ಬಹುನಿರೀಕ್ಷಿತ 'ಕಿಂಗ್ಡಮ್', 'ಹರಿಹರ ವೀರಮಲ್ಲು' ಹಾಗೂ 'ಕೊತ್ತಲವಾಡಿ' ಸಿನಿಮಾಗಳು ಸೋತು ಸುಣ್ಣವಾದವು. ಇಂತಹ ದೊಡ್ಡ ಸಿನಿಮಾಗಳ ನಡುವೆ ಕನ್ನಡದ 'ಸು ಫ್ರಂ ಸೋ' ಹಾಗೂ ತಮಿಳಿನ 'ತಲೈವನ್ ತಲೈವಿ' ಚಿತ್ರಗಳು ಗೆದ್ದು ಬೀಗಿವೆ. ಇತ್ತ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಈ ವಾರ ಸ್ಟ್ರೀಮಿಂಗ್ ಆರಂಭಿಸಿವೆ.

ಜುಲೈ 25ರಂದು ತೆರೆಗೆ ಬಂದಿದ್ದ 'ತಲೈವನ್ ತಲೈವಿ' ಸಿನಿಮಾ ಇದೀಗ ಓಟಿಟಿಗೆ ಬರಲು ಸಜ್ಜಾಗಿದೆ. ಪಾಂಡಿರಾಜ್ ನಿರ್ದೇಶನದ ಕಾಮಿಡಿ ಫ್ಯಾಮಿಲಿ ಎಂಟರ್ಟೈನರ್ ಚಿತ್ರದಲ್ಲಿ ವಿಜಯ್ ಸೇತುಪತಿ ಹಾಗೂ ನಿತ್ಯಾ ಮೆನನ್ ಜೋಡಿಯಾಗಿ ನಟಿಸಿದ್ದಾರೆ. ಸಿಂಪಲ್ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು. ವಿಜಯ್- ನಿತ್ಯಾ ನಟನೆ ಮೋಡಿ ಮಾಡಿತ್ತು. ಇದೇ ಚಿತ್ರದ ಜೀವಾಳ.
ಆಗಸ್ಟ್ 22ಕ್ಕೆ ಓಟಿಟಿಗೆ
ಅಮೇಜಾನ್ ಪ್ರೈಂ ಸಂಸ್ಥೆ 'ತಲೈವನ್ ತಲೈವಿ' ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಆಗಸ್ಟ್ 22ಕ್ಕೆ ಸಿನಿಮಾ ಸ್ಟ್ರೀಮಿಂಗ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬರಲಿದೆ. ಮುಂದಿನ ಶುಕ್ರವಾರ ಮನೆಯಲ್ಲೇ ಕೂಡ ಈ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ನೋಡಬಹುದು.
ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್
ಅಂದಾಜು 25 ಕೋಟಿ ರೂ. ಬಜೆಟ್ನಲ್ಲಿ 'ತಲೈವನ್ ತಲೈವಿ' ಸಿನಿಮಾ ನಿರ್ಮಾಣವಾಗಿತ್ತು. 80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದಾರೆ. ವಿಜಯ್ ಸೇತುಪತಿ, ನಿತ್ಯಾ ಮೆನನ್ಗೆ ಸಿನಿಮಾ ಒಳ್ಳೆ ಬ್ರೇಕ್ ಕೊಟ್ಟಿದೆ. ಯಾವುದೇ ಆರ್ಭಟ ಇಲ್ಲದೇ ಸೈಲೆಂಟ್ ಆಗಿ ಬಂದು ಸಿನಿಮಾ ಗೆದ್ದಿದೆ.
ಸಿನಿಮಾ ಕಥೆ
ಸಣ್ಣ ಹೋಟೆಲ್ ನಡೆಸುತ್ತಿರುವ ಚಿತ್ರದ ಆಗಸವೀರನ್(ವಿಜಯ್ ಸೇತುಪತಿ). ವೆರೈಟಿ ವೆರೈಟಿ ಪರೋಟ ಮಾಡುವುದರಲ್ಲಿ ಎತ್ತಿದ ಕೈ. ನಾಯಕಿ ಪೇರರಸಿ(ನಿತ್ಯಾ ಮೆನನ್) ಜೊತೆ ಮದುವೆ ನಿಶ್ಚಯವಾಗುತ್ತದೆ. ಒಂದಷ್ಟು ಸುಳ್ಳುಗಳನ್ನು ಹೇಳಿ ಹುಡುಗಿ ಮನೆಯವರನ್ನು ಒಪ್ಪಿಸುತ್ತಾರೆ. ಆತನ ಪರೋಟ ರುಚಿಗೆ ಮಾರುಹೋಗಿ ಎಲ್ಲರೂ ಮದುವೆಗೆ ಒಪ್ಪಿಕೊಳ್ಳುತ್ತಾರೆ. ಆದರೆ ಬಳಿಕ ಪೋಷಕರ ವಿರೋಧ ಕಟ್ಟಿಕೊಂಡು ಮನೆಯಿಂದ ಓಡಿ ಬಂದು ಪೇರರಸಿ ಆತನೊಟ್ಟಿಗೆ ಮದುವೆ ಆಗುತ್ತಾಳೆ. ಅತ್ತೆ ಮನೆಗೆ ಬಂದ ಮೇಲೆ ಗಂಡ ಹೆಂಡತಿ ನಡುವೆ ಕಿರಿಕಿರಿ, ಜಗಳ ನಡೆದು ಡಿವೋರ್ಸ್ವರೆಗೆ ಹೋಗುತ್ತದೆ. ಇಷ್ಟೆಕ್ಕೆಲ್ಲಾ ಕಾರಣ ಯಾರು? ಕೊನೆಗೆ ಇಬ್ಬರೂ ಒಂದಾಗುತ್ತಾರಾ, ಇಲ್ವಾ? ಎನ್ನುವುದು ಇನ್ನುಳಿದ ಕಥೆ.
ದೇವಸ್ಥಾನ, ನಾಯಕನ ಮನೆ, ಹೋಟೆಲ್ ಹಾಗೂ ನಾಯಕಿಯ ಮನೆ. ಈ ನಾಲ್ಕು ಕಡೆಗಳಲ್ಲೇ ಇಡೀ ಸಿನಿಮಾ ಕಥೆ ನಡೆಯುತ್ತದೆ. ದೇವಸ್ಥಾನದಲ್ಲಿ ಶುರುವಾಗುವ ಕಥೆ ಅಲ್ಲೇ ಮುಕ್ತಾಯವಾಗುತ್ತದೆ. ಫ್ಲ್ಯಾಶ್ಬ್ಯಾಕ್ ತಂತ್ರ ಬಳಸಿ ಪಾಂಡಿರಾಜ್ ಕಥೆ ಹೇಳುತ್ತಾ ಸಾಗುತ್ತಾರೆ. ವಿಜಯ್ ಹಾಗೂ ನಿತ್ಯಾ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಅವರಿಬ್ಬರ ನಟನೆಯೇ ಚಿತ್ರದಲ್ಲಿ ಹೈಲೆಟ್ ಎನಿಸಿಕೊಂಡಿದೆ.


Click it and Unblock the Notifications











