ಶುಕ್ರವಾರ (ಆಗಸ್ಟ್ 8) ಓಟಿಟಿಗೆ 3 ಹೊಚ್ಚ ಹೊಸ ಕನ್ನಡ ಚಿತ್ರಗಳು ಲಗ್ಗೆ; ಈಗ್ಲೆ ನೋಡಿ
ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಆರ್ಭಟ ಜೋರಾಗಿದೆ. 'ಸು ಫ್ರಂ ಸೋ' ಸಿನಿಮಾ 3ನೇ ವಾರಕ್ಕೆ ಕಾಲಿಟ್ಟಿದೆ. ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಭಾಷೆಯ ಎಲ್ಲೆ ಮೀರಿ ಎಲ್ಲಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. 'ಎಕ್ಕ' ಹಾಗೂ 'ಜ್ಯೂನಿಯರ್' ಚಿತ್ರಗಳು ಗೆದ್ದಿವೆ. 'ಕೊತ್ತಲವಾಡಿ' ಸಿನಿಮಾ ಕೂಡ ಮೆಚ್ಚುಗೆ ಪಡೆದಿದೆ.
ಕನ್ನಡ ಮಾತ್ರವಲ್ಲ ಬಾಲಿವುಡ್ ಸಿನಿಮಾ 'ಸಯ್ಯಾರ', ತಮಿಳಿನ 'ತಲೈವನ್ ತಲೈವಿ', ತೆಲುಗಿನ 'ಹರಿಹರ ವೀರಮಲ್ಲು' ಹಾಗೂ 'ಕಿಂಗ್ಡಮ್' ಚಿತ್ರಗಳು ಕೂಡ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಎಲ್ಲಾ ಸಿನಿಮಾಗಳನ್ನು 'ಮಹಾವತಾರ್ ನರಸಿಂಹ' ಹಾಗೂ 'ಸು ಫ್ರಂ ಸೋ' ಚಿತ್ರಗಳು ಹಿಂದಿಕ್ಕಿದೆ. ಇತ್ತ ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿದೆ.

ಕಳೆದ 'ಸೀಸ್ಕಡ್ಡಿ' ಎಂಬ ಕನ್ನಡ ಸಿನಿಮಾ ಪ್ರೈಂ ವೀಡಿಯೋಗೆ ಬಂದಿತ್ತು. ಕನ್ನಡದಲ್ಲಿ ವೆಬ್ ಸೀರಿಸ್ ಮಾಡುವವರೇ ಇಲ್ಲ ಎನ್ನುವ ಆರೋಪ ಕೆಲವರದ್ದು. 'ಅಯ್ಯನ ಮನೆ' ಬಳಿಕ 'ಶೋಧ' ಹಾಗೂ 'ರೂಮ್ಮೇಟ್ಸ್' ಎಂಬ 2 ಕನ್ನಡ ವೆಬ್ ಸೀರೀಸ್ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೆಲ್ಲದರ ನಡುವೆ 3 ಕನ್ನಡ ಸಿನಿಮಾಗಳು ಈ ವಾರ ಓಟಿಟಿಗೆ ಲಗ್ಗೆ ಇಟ್ಟಿವೆ.
1. ಫೋಟೊ
ಕಳೆದ ವರ್ಷ ತೆರೆಗೆ ಬಂದಿದ್ದ ಸಿನಿಮಾ 'ಫೋಟೊ'. ಕೋವಿಡ್ ಸಮಯದಲ್ಲಿ ಲಾಕ್ಡೌನ್ ಘೋಷಣೆಯಾಗಿ ಸಾಕಷ್ಟು ಜನ ಕೂಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರೆಳುವ ವೇಳೆ ದುರ್ಘಟನೆಗಳು ಸಂಭವಿಸಿತ್ತು. ಅಂತಹ ಕರಾಳ ದಿನಗಳ ಬಗ್ಗೆ ಬೆಳಕು ಚೆಲ್ಲುವ ಕಥೆ ಈ ಚಿತ್ರದಲ್ಲಿದೆ. ಇದೇ ರೀತಿ ಪ್ರಯಾಣಿಸುವಾಗ ಕೊನೆಯುಸಿರೆಳೆದ ಗಂಗಮ್ಮ ಎಂಬ 29 ವರ್ಷದ ಮಹಿಳೆಯ ನಿಜ ಜೀವನದ ಕಥೆಯಿಂದ ಪ್ರೇರಣೆಗೊಂಡು ಸಿನಿಮಾ ಮಾಡಲಾಗಿದೆ. ಕೆಆರ್ಜಿ ಸಂಸ್ಥೆ ಚಿತ್ರ ವಿತರಣೆ ಮಾಡಿತ್ತು.

ಉತ್ಸವ್ ಗೋನವಾರ ನಿರ್ದೇಶನದ 'ಫೋಟೊ' ಚಿತ್ರಕ್ಕೆ ನಟ ಪ್ರಕಾಶ್ ರಾಜ್ ಬೆಂಬಲವಾಗಿ ನಿಂತಿದ್ದರು. ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಚಂದಾದಾರರು 99 ರೂ. ಪಾವತಿಸಿ ಸಿನಿಮಾ ವೀಕ್ಷಿಸಬಹುದು.
2. ಹೆಬ್ಬುಲಿ ಕಟ್
ಕಿಚ್ಚ ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾ ಹಿಟ್ ಆಗಿತ್ತು. ಅದರಲ್ಲಿ ಸುದೀಪ್ ಹೇರ್ಸ್ಟೈಲ್ ಬಹಳ ಟ್ರೆಂಡ್ ಆಗಿ ಗಮನ ಸೆಳೆದಿತ್ತು. ಹೆಬ್ಬುಲಿ ಕಟ್ ಎಂದೇ ಜನಪ್ರಿಯವಾಗಿತ್ತು. ಇದೇ ಟೈಟಲ್ನಲ್ಲಿ ಸಿನಿಮಾ ಕೂಡ ಬಂದಿತ್ತು. ನೀನಾಸಂ ಸತೀಶ್ ಚಿತ್ರದ ಬೆನ್ನಿಗೆ ನಿಂತಿದ್ದರು. ಭೀಮರಾವ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ನಾಯಕಿ ನಟ ಸುದೀಪ್ ಅಭಿಮಾನಿ. ಅದು ಗೊತ್ತಾಗಿ ಹೆಬ್ಬುಲಿ ಕಟ್ ಹೇರ್ ಸ್ಟೈಲ್ ಮಾಡಿಸಿಕೊಳ್ಳಲು ನಾಯಕ ಮುಂದಾಗುತ್ತಾನೆ. ಮುಂದೇನು ಎನ್ನುವುದು ಇನ್ನುಳಿದ ಕಥೆ. ಸನ್ ನೆಕ್ಸ್ಟ್ ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
3. ತಿಮ್ಮನ ಮೊಟ್ಟೆಗಳು
ಮನುಷ್ಯ ಹಾಗೂ ಪ್ರಕೃತಿ ನಡುವಿನ ಕಥಾಹಂದರ ಇರುವ 'ತಿಮ್ಮನ ಮೊಟ್ಟೆಗಳು' ಸಿನಿಮಾ ಇದೀಗ ಪ್ರೈಂ ವೀಡಿಯೋಗೆ ಬಂದಿದೆ. ರಕ್ಷಿತ್ ತೀರ್ಥಹಳ್ಳಿ ಬರೆದ 'ಕಾಡಿನ ನೆಂಟರು' ಕಥಾ ಸಂಕಲನದನ ಒಂದು ಕಥೆ ಇದು. ಸ್ವತಃ ರಕ್ಷಿತ್ ಆಕ್ಷನ್ ಕಟ್ ಹೇಳಿದ್ದಾರೆ. ಜೂನ್ 27ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಹಲವು ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿತ್ತು. ಶೃಂಗೇರಿಯ ಕೇಶವ ಗುತ್ತಳಿಕೆ, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್ ಚಿತ್ರದ ತಾರಾಗಣದಲ್ಲಿದ್ದಾರೆ.


Click it and Unblock the Notifications











