Viduthalai-2 OTT: ವಿಜಯ್ ಸೇತುಪತಿ 'ವಿಡುತಲೈ- 2' ಓಟಿಟಿಗೆ ಬಂತು; ಈಗ್ಲೇ ನೋಡಿ
ಸಂಕ್ರಾಂತಿ ಬಳಿಕ ಚಿತ್ರರಂಗ ಸೈಲೆಂಟ್ ಆಗಿದೆ. ಯಾವುದೇ ದೊಡ್ಡ ಸಿನಿಮಾಗಳು ಸದ್ಯಕ್ಕೆ ತೆರೆಗೆ ಬರುತ್ತಿಲ್ಲ. ಆದರೆ ಕ್ರಿಸ್ಮಸ್ ಸಂಭ್ರಮದಲ್ಲಿ ತೆರೆಗೆ ಬಂದ ಸಿನಿಮಾಗಳು ಒಂದೊಂದಾಗಿ ಓಟಿಟಿಗೆ ಬರ್ತಿವೆ. ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಸೂರಿ ನಟನೆಯ 'ವಿಡುತಲೈ ಪಾರ್ಟ್- 2' ಸಿನಿಮಾ ಇದೀಗ ಸ್ಟ್ರೀಮಿಂಗ್ ಆರಂಭಿಸಿದೆ.
ವೆಟ್ರಿಮಾರನ್ ನಿರ್ದೇಶನದ ಪೊಲಿಟಿಕಲ್ ಥ್ರಿಲ್ಲರ್ 'ವಿಡುತಲೈ ಪಾರ್ಟ್- 2' ಸಿನಿಮಾ ಡಿಸೆಂಬರ್ 20ರಂದು ತೆರೆಗೆ ಬಂದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಸರಣಿಯ ಹಿಂದಿನ ಸಿನಿಮಾ 2 ವರ್ಷಗಳ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅದಕ್ಕೆ ಹೋಲಿಸಿದರೆ ಸೀಕ್ವೆಲ್ ಹೆಚ್ಚು ಸದ್ದು ಮಾಡಲಿಲ್ಲ. ಇದೀಗ ಓಟಿಟಿಯಲ್ಲಿ ಎರಡೂ ಸಿನಿಮಾಗಳು ವೀಕ್ಷಣೆಗೆ ಲಭ್ಯವಿದೆ. ಓಟಿಟಿ ಚಂದಾದಾರರು ಮನೆಯಲ್ಲೇ ಕೂತು ಸಿನಿಮಾ ನೋಡಿ ಎಂಜಾಯ್ ಮಾಡಬಹುದು.

ಪೊಲೀಸ್ ಪೇದೆ ಕುಮರೇಶನ್(ಸೂರಿ) ಕೊಟ್ಟ ಸುಳಿವು ಆಧರಿಸಿ ಪ್ರಜಾದಳನ ನಾಯಕ, ನಕ್ಸಲ್ ಪೆರುಮಾಳ್ನನ್ನು ಬಂಧಿಸುವುದರೊಂದಿಗೆ 'ವಿಡುತಲೈ ಪಾರ್ಟ್- 1' ಕತೆ ಮುಗಿದಿತ್ತು. ಅಲ್ಲಿಂದ ಮುಂದೆ ಪಾರ್ಟ್-2 ಕಥೆ ಶುರುವಾಗುತ್ತದೆ. ಸೀಕ್ವೆಲ್ನಲ್ಲಿ ಆತನ ಹೋರಾಟವನ್ನು ಕಟ್ಟಿಕೊಡುವುದಾಗಿ ಕೊನೆಯಲ್ಲಿ ಸುಳಿವು ಕೊಟ್ಟಿದ್ದರು. ಅದರಂತೆ ಇದೀಗ ಸೀಕ್ವೆಲ್ ಸಿನಿಮಾ ಬಂದಿದೆ.
ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಪೆರುಮಾಳ್ ಅಲಿಯಾಸ್ ಮಾಸ್ಟರ್ ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಹೇಗೆ ಸಮರ ಸಾರುತ್ತಾನೆ. ಪ್ರಜಾದಳನ ನಾಯಕನಾಗಿ ಬದಲಾಗಿದ್ದೇಗೆ? ಈ ಹಾದಿಯಲ್ಲಿ ಮಹಾಲಕ್ಷ್ಮಿ ಜೊತೆ ಪ್ರೀತಿ, ಹಿಂಸೆ ಬೇಡ ಬೇಡ ಎಂದುಕೊಂಡರೂ ಆತನ ಕೈಗೆ ರಕ್ತ ಮೆತ್ತಿಕೊಳ್ಳುವುದು ಯಾಕೆ? ಪೆರುಮಾಳ್ನನ್ನು ಹಿಡಿದುಕೊಟ್ಟ ಕಾನ್ಸ್ಸ್ಟೇಬಲ್ ಕುಮರೇಶನ್ ಕಥೆ ಏನಾಗುತ್ತದೆ? ಎನ್ನುವುದನ್ನು 'ವಿಡುತಲೈ ಪಾರ್ಟ್- 2' ಸಿನಿಮಾದಲ್ಲಿ ನೋಡಬೇಕು.
ಎಂದಿನಂತೆ ವಿಜಯ್ ಸೇತುಪತಿ ತಮ್ಮ ಇಂಟೆನ್ಸ್ ಆಕ್ಟಿಂಗ್ನಿಂದ ಗಮನ ಸೆಳೆಯುತ್ತಾರೆ. ಮಹಾಲಕ್ಷ್ಮಿ ಪಾತ್ರದಲ್ಲಿ ಮಂಜು ವಾರಿಯರ್ ಮೋಡಿ ಮಾಡುತ್ತಾರೆ. ಹಾಸ್ಯ ಕಲಾವಿದ ಸೂರಿ ಗಂಭೀರ ಪಾತ್ರದಲ್ಲಿ ಹುಬ್ಬೇರಿಸುವಂತೆ ನಟಿಸಿದ್ದಾರೆ. ಇಳಯರಾಜಾ ಸಂಗೀತ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದೆ. 60-70 ದಶಕದ ಕಾಲಘಟ್ಟವನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ.
'ಪೊಲ್ಲಾದವನ್', 'ವಿಸಾರಣೈ', 'ಅಸುರನ್' ರೀತಿಯ ಕಲ್ಟ್ ಸಿನಿಮಾಗಳನ್ನು ವೆಟ್ರಿಮಾರನ್ ಕೊಟ್ಟಿದ್ದರು. ಕಳೆದ ವರ್ಷ ಜನವರಿ 31ಕ್ಕೆ ರೋಟರ್ಡ್ಯಾಮ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ವಿಡುತಲೈ ಪಾರ್ಟ್- 2' ಸಿನಿಮಾ ಪ್ರದರ್ಶನ ಕಂಡಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಸಾಕಷ್ಟು ಜನ ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದರು. ಇದೀಗ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ.
ಕನ್ನಡಕ್ಕೂ ಡಬ್ ಆಗಿ 'ವಿಡುತಲೈ ಪಾರ್ಟ್- 2' ಸಿನಿಮಾ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಕನ್ನಡ ನಟ ಕಿಶೋರ್, ಗೌತಮ್ ವಾಸುದೇವ್ ಮೆನನ್, ರಾಜೀವ್ ಮೆನನ್, ಮನೋಬಲ, ಅನುರಾಗ್ ಅಶ್ಯಪ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮೊದಲಿಗೆ ಒಂದೇ ಚಿತ್ರದಲ್ಲಿ ಸಂಪೂರ್ಣ ಕಥೆ ಹೇಳಲು ವೆಟ್ರಿಮಾರನ್ ಮುಂದಾಗಿದ್ದರು. ಬಳಿಕ ಎರಡು ಭಾಗಗಳಾಗಿ ಸಿನಿಮಾ ಕಟ್ಟಿಕೊಟ್ಟರು.
ಪೆರುಮಾಳ್ ಪೊಲೀಸ್ ಅಧಿಕಾರಿಗಳಿಗೆ ತನ್ನ ಕಥೆಯನ್ನು ಹೇಳುವುದರೊಂದಿಗೆ ಅಸಲಿ ಕಥೆ ಆರಂಭವಾಗುತ್ತದೆ. ಆಕಸ್ಮಿಕವಾಗಿ ಸ್ನೇಹಿತ ಕರುಪನ್ನನ್ನು ಕೊಂಡಿದ್ದು. ಮುಂದೆ ಇದು ಹೇಗೆ ಆತನನ್ನು ಕಮ್ಯುನಿಷ್ಟ್ ಪಕ್ಷ ಸೇರುವಂತೆ ಮಾಡಿತು ಎನ್ನುವುದನ್ನು ಹೇಳುತ್ತಾ ಹೋಗುತ್ತಾನೆ. ಜಯಮೋಹನ ಬರೆದ 'ತುಣೈವ' ಎಂಬ ಸಣ್ಣ ಕಥೆ ಆಧರಿಸಿ 'ವಿಡುತಲೈ ಪಾರ್ಟ್- 2' ಸಿನಿಮಾ ತೆರೆಗೆ ತರಲಾಗಿದೆ.
ಕಳೆದ ವರ್ಷ ವಿಜಯ್ ಸೇತುಪತಿ ನಟನೆಯ 'ಕ್ರಿಸ್ಮಸ್' ಹಿಂದಿ ಸಿನಿಮಾ ಗೆಲ್ಲಲಿಲ್ಲ. ವಿಜಯ್ ಬಾಲಿವುಡ್ ಎಂಟ್ರಿ ನಿರಾಸೆ ಮೂಡಿಸಿತ್ತು. ಆದರೆ ಬಳಿಕ ಬಂದ 'ಮಹಾರಾಜ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ 'ವಿಡುತಲೈ ಪಾರ್ಟ್- 2' ಸಿನಿಮಾ ಬಂದಿತ್ತು. 'ಗಾಂಧಿ ಟಾಕ್ಸ್', 'ಏಸ್'ಹಾಗೂ 'ಟ್ರೈನ್' ಎಂಬ ಮೂರು ಸಿನಿಮಾಗಳು ಸೇತುಪತಿ ಕೈಯಲ್ಲಿದೆ. ತಮಿಳು ಬಿಗ್ಬಾಸ್ ನಿರೂಪಕರಾಗಿಯೂ ವಿಜಯ್ ಗಮನ ಸೆಳೆದಿದ್ದಾರೆ.


Click it and Unblock the Notifications











