Beast OTT Release Date: ಚಿತ್ರಮಂದಿರದಿಂದ ಒಟಿಟಿಯತ್ತ ಓಟಕಿತ್ತ 'ಬೀಸ್ಟ್'
ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದೆ. ಆದರೆ ಸಿನಿಮಾಕ್ಕೆ ನಿರೀಕ್ಷಿತ ಜನಪ್ರತಿಕ್ರಿಯೆ ದೊರೆತಿಲ್ಲ. ಸಿನಿಮಾದ ರಂಜನೀಯವಾಗಿಲ್ಲವೆಂದು ಸ್ವತಃ ವಿಜಯ್ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾದ ಬಿಡುಗಡೆಗೆ ಮುನ್ನವೇ ಸಿನಿಮಾದ ಬಗ್ಗೆ ವಿಜಯ್ ಹಾಗೂ ನಿರ್ಮಾಪಕ ಕಲಾನಿಧಿ ಮಾರನ್ಗೆ ಅನುಮಾನಗಳಿದ್ದಂತಿತ್ತು. ಹಾಗಾಗಿ ಸಿನಿಮಾಕ್ಕೆ ಹೆಚ್ಚಿನ ಪ್ರಚಾರವನ್ನೇ ಮಾಡಲಿಲ್ಲ. ಆಡಿಯೋ ರಿಲೀಸ್ ಕಾರ್ಯಕ್ರಮ, ಪ್ರೀ ರಿಲೀಸ್ ಕಾರ್ಯಕ್ರಮಗಳನ್ನೆಲ್ಲ ವಿನಾ ಕಾರಣ ರದ್ದು ಮಾಡಲಾಯ್ತು.
ಚಿತ್ರತಂಡದ ನಿರೀಕ್ಷೆಯಂತೆಯೇ ಸಿನಿಮಾ ಫ್ಲಾಪ್ ಆಗುವತ್ತ ಸಾಗಿದೆ. ಸ್ಟಾರ್ ನಟನ ಸಿನಿಮಾ ಆಗಿರುವ ಕಾರಣ ಮೊದಲ ದಿನ ಉತ್ತಮ ಓಪನಿಂಗ್ ಕಂಡಿದೆಯಾದರೂ, ಸಿನಿಮಾ ನೋಡಿದವರು ಸಿನಿಮಾ ಬಗ್ಗೆ ಋಣಾತ್ಮಕ ವಿಮರ್ಶೆಗಳು ಹೇಳುತ್ತಿರುವ ಕಾರಣ ಒಂದೇ ವಾರದಲ್ಲಿ ಸಿನಿಮಾ ಬಹುತೇಕ ರಾಜ್ಯಗಳಲ್ಲಿ ಎತ್ತಂಗಡಿ ಆಗಲಿದೆ. ಕರ್ನಾಟಕದಲ್ಲಿಯಂತೂ ಒಂದೇ ದಿನಕ್ಕೆ ಎತ್ತಂಗಡಿ ಆಗಲಿಕ್ಕಿದೆ. ಅದಕ್ಕೆ ಕಾರಣ 'ಕೆಜಿಎಫ್ 2'.

ನಿರ್ಮಾಪಕರಿಗೆ ಮೋಸ ಮಾಡೊಲ್ಲ ವಿಜಯ್ ಸಿನಿಮಾ
ಸ್ಟಾರ್ ನಟ ವಿಜಯ್ರ ಸಿನಿಮಾಗಳು ಚೆನ್ನಾಗಿರಲಿ, ಇಲ್ಲದಿರಲಿ ನಿರ್ಮಾಪಕರಿಗೆ ಮೋಸವನ್ನಂತೂ ಮಾಡುವುದಿಲ್ಲ. ಅದರಲ್ಲೂ ಕಲಾನಿಧಿ ಮಾರನ್ ಅಂತೂ ಬಹಳ ಜಾಗೃತ ನಿರ್ಮಾಪಕ. ಹಣ ಕಳೆದುಕೊಳ್ಳುವುದಿಲ್ಲ, ಹಾಗಾಗಿಯೇ 'ಬೀಸ್ಟ್' ಸಿನಿಮಾ ಬಿಡುಗಡೆಗೆ ಮುನ್ನವೇ ಅವರು ಸೇಫ್ ಆಗಿಬಿಟ್ಟಿದ್ದಾರೆ. ಸಿನಿಮಾವನ್ನು ಒಳ್ಳೆಯ ಬೆಲೆಗೆ ಒಟಿಟಿಗೆ ಮಾರಾಟ ಮಾಡಿದ್ದಾರೆ.

'ಬೀಸ್ಟ್' ಒಟಿಟಿ ಬಿಡುಗಡೆ ದಿನಾಂಕ ಇದು!?
'ಬೀಸ್ಟ್' ಸಿನಿಮಾ ಬಿಡುಗಡೆ ಆದ ದಿನವೇ ಸಿನಿಮಾ ಒಟಿಟಿಗೆ ಎಂದು ಬರಲಿದೆ ಎಂಬುದು ಸಹ ಘೋಷಣೆ ಆಗಿಬಿಟ್ಟಿದೆ. ನಿರ್ಮಾಪಕ ಕಲಾನಿಧಿ ಮಾರನ್ ಅವರದ್ದೇ ಒಡೆತನದ ಸನ್ ನೆಕ್ಸ್ಟ್ ಜೊತೆಗೆ ನೆಟ್ಫ್ಲಿಕ್ಸ್ನಲ್ಲಿಯೂ ಒಟ್ಟಿಗೆ 'ಬೀಸ್ಟ್' ಸಿನಿಮಾ ಬಿಡುಗಡೆ ಆಗಲಿದೆ. 'ಬೀಸ್ಟ್' ಸಿನಿಮಾವು ಇಂದಿಗೆ ಒಂದು ತಿಂಗಳ ಬಳಿಕ ಅಂದರೆ ಮೇ 13 ರಂದು ನೆಟ್ಫ್ಲಿಕ್ಸ್ನಲ್ಲಿ ಹಾಗೂ ಸನ್ ನೆಕ್ಸ್ಟ್ ಒಟಿಟಿಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ದುಬಾರಿ ಮೊತ್ತಕ್ಕೆ ನೆಟ್ಫ್ಲಿಕ್ಸ್ ಖರೀದಿಸಿದೆ ಎನ್ನಲಾಗುತ್ತಿದೆ. ಬರೋಬ್ಬರಿ 50 ಕೋಟಿ ರುಪಾಯಿಗೆ ಸಿನಿಮಾ ಮಾರಾಟವಾಗಿದೆ ಎನ್ನಲಾಗುತ್ತಿದೆ.

ದಾಖಲೆ ನಿರ್ಮಿಸಿದ್ದ 'ಮಾಸ್ಟರ್'
ವಿಜಯ್ರ ಈ ಹಿಂದಿನ ಸಿನಿಮಾ 'ಮಾಸ್ಟರ್' ಸಹ ಬಿಡುಗಡೆ ಆದ ಕೇವಲ ಒಂದೇ ತಿಂಗಳಿಗೆ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಆದರೆ ಆ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಭುತ ಯಶಸ್ಸು ಗಳಿಸಿತ್ತು. ಚಿತ್ರಮಂದಿರಗಳಲ್ಲಿ ಶೇ 50 ಅಷ್ಟೆ ಆಕ್ಯುಪೆನ್ಸಿ ಇದ್ದ ಸಮಯದಲ್ಲಿ ಬಿಡುಗಡೆ ಆಗಿದ್ದ 'ಮಾಸ್ಟರ್' ಗಳಿಕೆಯಲ್ಲಿ ದಾಖಲೆಗಳನ್ನು ಬರೆದಿತ್ತು. ಆದರೆ 'ಬೀಸ್ಟ್' ಸಿನಿಮಾ ಆ ಮಾದರಿಯ ಯಶಸ್ಸು ಗಳಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.

ನೆಲ್ಸನ್ ನಿರ್ದೇಶನದ ಸಿನಿಮಾ
'ಬೀಸ್ಟ್' ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ನಟಿಸಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದು, ಸಿನಿಮಾವು ಆಕ್ಷನ್ ಕಾಮಿಡಿ ಕತೆಯನ್ನು ಹೊಂದಿದೆ. ಮಾಜಿ ಸೈನಿಕನ ಪಾತ್ರದಲ್ಲಿ ನಟಿಸಿರುವ ವಿಜಯ್, ಭಯೊತ್ಪಾದಕರಿಂದ ಒತ್ತೆಯಾಗಿಸಿಕೊಳ್ಳಲಾಗಿರುವ ಮಾಲ್ ಅನ್ನು ಅದರಲ್ಲಿನ ಜನರನ್ನು ಹೇಗೆ ಕಾಪಾಡುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾದಲ್ಲಿ ನಟ ಯೋಗಿ ಬಾಬು ಸಹ ಇದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸನ್ ನೆಟ್ವರ್ಕ್ಸ್ನ ಕಲಾನಿಧಿ ಮಾರನ್.


Click it and Unblock the Notifications











