ಓಟಿಟಿಯಿಂದ ಅಪ್ಪು 'ಗಂಧದಗುಡಿ' ದಿಢೀರ್ ಮಾಯ!: ಅಭಿಮಾನಿಗಳಲ್ಲಿ ಗೊಂದಲ
ಪುನೀತ್ ರಾಜ್ಕುಮಾರ್ ನಟನೆಯ ಡಾಕ್ಯು ಸಿನಿಮಾ 'ಗಂಧದಗುಡಿ' ಎರಡು ವರ್ಷಗಳ ಹಿಂದೆ ತೆರೆಕಂಡಿತ್ತು. ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಪ್ಪು ನಟಿಸಿದ ಕೊನೆಯ ಸಿನಿಮಾಗಳಲ್ಲಿ 'ಗಂಧದಗುಡಿ' ಕೂಡ ಒಂದು. ಬಳಿಕ ಸಿನಿಮಾ ಓಟಿಟಿಗೂ ಬಂದಿತ್ತು. ಆದರೆ ಈಗ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಸಿನಿಮಾ ಸಿಗ್ತಿಲ್ಲ.
ಅಮೋಘವರ್ಷ ನಿರ್ದೇಶನದಲ್ಲಿ ಪುನೀತ್ ರಾಜ್ಕುಮಾರ್ ಅಪರೂಪದ ಪ್ರಯತ್ನ 'ಗಂಧದಗುಡಿ'. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಚಯಿಸುವ ಕನಸು ಹಾಗೂ ಹಂಬಲದಿಂದ ಈ ಸಿನಿಮಾ ನಿರ್ಮಾಣವಾಗಿತ್ತು. ಈ ಡಾಕ್ಯು ಸಿನಿಮಾಗಾಗಿ ಅಮೋಘವರ್ಷ ಜೊತೆ ಅಪ್ಪು ಕರ್ನಾಟಕದ ಕಾಡು ಮೇಡು ಅಲೆದಿದ್ದರು.

2022, ಅಕ್ಟೋಬರ್ 28ರಂದು 'ಗಂಧದಗುಡಿ' ಡಾಕ್ಯುಡ್ರಾಮ ತೆರೆಕಂಡಿತ್ತು. ಇಡೀ ಕನ್ನಡ ಚಿತ್ರರಂಗ ಬೆಂಬಲವಾಗಿ ನಿಂತಿತ್ತು. ಪ್ರೀಮಿಯರ್ ಶೋನಿಂದಲೇ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಕರ್ನಾಟಕದ ಪ್ರಾಕೃತಿಕ ಶ್ರೀಮಂತಿಕೆ, ಜೀವ ವೈವಿಧ್ಯ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಈ ಡಾಕ್ಯುಡ್ರಾಮ ಭರ್ಜರಿ ಪ್ರದರ್ಶನ ಕಂಡಿತ್ತು. ಕಳೆದ ವರ್ಷ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು.
ಕಳೆದೊಂದು ವಾರದಿಂದ ಅಮೇಜಾನ್ ಪ್ರೈಂನಲ್ಲಿ 'ಗಂಧದಗುಡಿ' ಡಾಕ್ಯುಡ್ರಾಮ ಸಿನಿಮಾ ಸಿಗುತ್ತಿಲ್ಲ. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಅರೇ ಅಮೇಜಾನ್ ಪ್ರೈಂ ಯಾಕೆ ಸಿನಿಮಾ ತೆಗೆದುಬಿಡ್ತು? ಇದಕ್ಕೆ ಕಾರಣ ಏನು? ಎಂದು ತಲೆ ಕೆಡಿಸಿಕೊಂಡಿದ್ದಾರೆ. ಕೆಲವರು ಪದೇ ಪದೇ ಸರ್ಚ್ ಮಾಡಿ ಮಾಡಿ ಸುಸ್ತಾಗಿದ್ದಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಸಿಗುತ್ತಿಲ್ಲ.

'ಗಂಧದಗುಡಿ' ಸಿನಿಮಾ ಯಾಕೆ ಅಮೇಜಾನ್ ಪ್ರೈಂನಲ್ಲಿ ಸಿಗುತ್ತಿಲ್ಲ ಎನ್ನುವ ಬಗ್ಗೆ ಚರ್ಚೆ ನಡೀತಿದೆ. ಇತ್ತೀಚೆಗೆ ಓಟಿಟಿ ಫ್ಲಾಟ್ಫಾರ್ಮ್ಗಳು 6 ತಿಂಗಳು, 9 ತಿಂಗಳ ಮಟ್ಟಿಗೆ ಮಾತ್ರ ಸಿನಿಮಾಗಳನ್ನು ಕೊಂಡುಕೊಳ್ಳುತ್ತಿವೆ. ಅದಕ್ಕೆ ತಕ್ಕಂತೆ ಒಪ್ಪಂದವಾಗಿರುತ್ತದೆ. ಅದೇ ರೀತಿ 'ಗಂಧದಗುಡಿ' ಸಿನಿಮಾ ವಿಚಾರದಲ್ಲೂ ಆಗಿರಬಹುದಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾ ಕಥೆ ಹೀಗೆ ಆಗಿದೆ.
ಕೆಲವೊಮ್ಮೆ ಒಂದು ಓಟಿಟಿ ಪ್ಲಾಟ್ಫಾರ್ಮ್ನಿಂದ ತೆಗೆದು ಮತ್ತೊಂದು ಕಡೆ ಸಿನಿಮಾ ಪ್ರದರ್ಶಿಸುವ ಪ್ರಯತ್ನಗಳು ನಡೆಯುತ್ತದೆ. ಆದರೆ 'ಗಂಧದಗುಡಿ' ಸಿನಿಮಾ ತೆಗೆಯಲು ಕಾರಣ ಏನು ಎನ್ನುವುದು ಗೊತ್ತಾಗಿಲ್ಲ. ಈ ಬಗ್ಗೆ ಪಿಆರ್ಕೆ ಸಂಸ್ಥೆಯವರನ್ನು ಕೇಳಿದರೆ "ಸದ್ಯಕ್ಕೆ 'ಗಂಧದಗುಡಿ' ಸಿನಿಮಾವನ್ನು ಪ್ರೈಂನಿಂದ ಆಫ್ ಮಾಡಿಸಿದ್ದೇವೆ. ಶೀಘ್ರದಲ್ಲೇ ಮತ್ತೆ ಸ್ಟ್ರೀಮಿಂಗ್ ಆಗಲಿದೆ. ಚಿತ್ರಕ್ಕೆ ಹೊಸ ಸನ್ನಿವೇಶಗಳನ್ನು ಕೂಡ ಸೇರಿಸುವ ಸಾಧ್ಯತೆಯಿದೆ" ಎಂದಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ 'ಗಂಧದಗುಡಿ' ಚಿತ್ರಕ್ಕೆ ಶುಭ ಕೋರಿದ್ದರು. ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು. ತೆರೆಮೇಲೆ ಸದಾ ಪವರ್ ಸ್ಟಾರ್ ಆಗಿ ನಟಿಸುತ್ತಿದ್ದ ಪುನೀತ್ ರಾಜ್ಕುಮಾರ್ ಈ ಚಿತ್ರದಲ್ಲಿ ತಾವು ತಾವಾಗಿಯೇ ಕಾಣಿಸಿಕೊಂಡಿದ್ದರು. ಕರ್ನಾಟಕದ ಬಯಲುಸೀಮೆಯಿಂದ ಹಿಡಿದು ಕಡಲ ತೀರದವರೆಗೆ, ಬರಡು ಭೂಮಿಯಿಂದ ಪಶ್ಚಿಮಘಟ್ಟಗಳವರೆಗೆ ಸುತ್ತಾಡಿ ಅಪ್ಪು- ಅಮೋಘವರ್ಷ ಜೋಡಿ ಈ ಡಾಕ್ಯುಮೆಂಟರಿ ಸಿನಿಮಾ ಸೆರೆಹಿಡಿದು ತಂದಿತ್ತು.
ತೆರೆಮೇಲೆ ಅಪ್ಪು ಜೊತೆಗೆ ಕನ್ನಡನಾಡಿನ ಕಾಡು, ನದಿ, ಬೆಟ್ಟ, ಜಲಪಾತವನ್ನು ಕಣ್ತುಂಬಿಕೊಂಡಿದ್ದರು. ಪ್ರೇಕ್ಷಕರು ಮಕ್ಕಳನ್ನು ಕೂಡ ಚಿತ್ರಮಂದಿರಗಳನ್ನು ಕರೆತಂದು ಸಿನಿಮಾ ತೋರಿಸಿದ್ದರು. ಪ್ರೀಮಿಯರ್ ಶೋಗಳಿಂದಲೇ 18 ಲಕ್ಷ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಒಂದೇ ವಾರದಲ್ಲಿ 20 ಕೋಟಿ ರೂ. ಗಳಿಕೆ ಕಂಡಿತ್ತು ಎಂದು ಕೆಲವರು ಅಂದಾಜಿಸಿದ್ದರು. 200ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ 'ಗಂಧದಗುಡಿ' ದರ್ಶನವಾಗಿತ್ತು. ಕರ್ನಾಟಕದ ಪ್ರಕೃತಿ ಸೌಂದರ್ಯದ ಜೊತೆ ಅಪ್ಪು ಪಯಣವನ್ನು ನೋಡಿ ಅಭಿಮಾನಿಗಳು ಪುನೀತರಾಗಿದ್ದರು.


Click it and Unblock the Notifications











