ಅಲ್ಲು ಕುಟುಂಬಕ್ಕೆ ಸಾಥ್ ಕೊಡುತ್ತಾ ಸ್ಯಾಂಡಲ್ವುಡ್ ದೊಡ್ಮನೆ?
ಇದು ಒಟಿಟಿ ಯುಗ. ಚಿತ್ರಮಂದಿರಗಳು ತೆರೆದಿಲ್ಲ ಅಂದ್ರೂ ಒಟಿಟಿ ಮೂಲಕ ಜನರನ್ನು ತಲುಪಬಹುದು ಎನ್ನುವ ವಿಶ್ವಾಸ ಸೃಷ್ಟಿಯಾಗಿರುವ ಸಮಯ. ಕಳೆದ ಎರಡು ವರ್ಷಗಳಲ್ಲಿ ಒಟಿಟಿ ವೇದಿಕೆಗಳು ಪ್ರಭಾವ ಬೀರಿದೆ. ಹಲವು ಸ್ಟಾರ್ ನಟರ ಚಿತ್ರಗಳು ಎಕ್ಸ್ಕ್ಲೂಸಿವ್ ಆಗಿ ಒಟಿಟಿಯಲ್ಲಿ ತೆರೆಕಂಡಿದೆ. ಒಟಿಟಿಯಲ್ಲಿ ರಿಲೀಸ್ ಮಾಡುವುದರಿಂದ ಹೆಚ್ಚು ಲಾಭ ಸಿಗುತ್ತದೋ ಇಲ್ಲವೋ, ಆದರೆ ನಿರ್ಮಾಪಕ ನಷ್ಟ ಅಂತೂ ಅನುಭವಿಸಲ್ಲ ಎಂಬ ಧೈರ್ಯ ಸಿಗುತ್ತಿದೆ. ಹಾಗಾಗಿ, ನಿರ್ಮಾಪಕರೂ ಸಹ ಹೆಚ್ಚು ಆಲೋಚನೆ ಮಾಡದೆ ಹಾಕಿದ ಬಂಡವಾಳದ ಜೊತೆಗೆ ದೊಡ್ಡ ಲಾಭವಿಲ್ಲದಿದ್ದರೂ ಸಮಾಧಾನಕರ ಲಾಭವಾದರೂ ಸಿಗಲಿ ಎಂದು ನಿರೀಕ್ಷಿಸುತ್ತಿದ್ದಾರೆ.
ಪ್ರಸ್ತುತ ಭಾರತದಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ, ನೆಟ್ಫ್ಲಿಕ್ಸ್, ಡಿಸ್ನಿ ಹಾಟ್ಸ್ಟಾರ್ ಹೆಚ್ಚು ಪರಿಣಾಮಕಾರಿಯಾಗಿ ವಿಸ್ತರಿಸಿದೆ. ಇದರ ಜೊತೆಗೆ ಕೆಲವು ಪ್ರಾದೇಶಿಕ ಒಟಿಟಿಗಳು ಹುಟ್ಟಿಕೊಂಡಿರುವುದು ವಿಶೇಷವೂ ಸರಿ. ಹಾಗ್ನೋಡಿದ್ರೆ, ತೆಲುಗಿನಲ್ಲಿ 'ಆಹಾ' (Aha) ಎನ್ನುವ ಒಟಿಟಿ ಹೆಚ್ಚು ಗಮನ ಸೆಳೆಯುತ್ತಿದೆ. ಅಲ್ಲು ಅರ್ಜುನ್-ಅಲ್ಲು ಅರ್ಜುನ್ ಅವರ ಮಾಲೀಕತ್ವದಲ್ಲಿ ಕೆಲಸ ಮಾಡ್ತಿರುವ ಆಹಾ ಒಟಿಟಿ ಎಕ್ಸ್ಕ್ಲೂಸಿವ್ ಆಗಿ ಕಿರುಚಿತ್ರ, ವೆಬ್ ಸಿರೀಸ್ ಹಾಗೂ ಫೀಚರ್ ಸಿನಿಮಾಗಳನ್ನು ಖರೀದಿಸಿ ಪ್ರಸಾರ ಮಾಡ್ತಿದೆ.
ಟಾಲಿವುಡ್ ಮಟ್ಟಿಗೆ 'ಆಹಾ' ಬಹಳ ಚೆನ್ನಾಗಿ ಹೋಗ್ತಿದೆ ಎಂಬ ಮಾತಿದೆ. ಇದೀಗ, ಆಹಾ ಒಟಿಟಿ ಕನ್ನಡದ ಕಡೆಯೂ ಒಲವು ತೋರಿರುವ ವಿಚಾರ ಈ ಹಿಂದೆಯೇ ಫಿಲ್ಮಿಬೀಟ್ ವರದಿ ಮಾಡಿತ್ತು. ಈಗ ಅಲ್ಲು ಅರ್ಜುನ್ ಅವರ ಈ ಒಟಿಟಿಗೆ ಸ್ಯಾಂಡಲ್ವುಡ್ ದೊಡ್ಮನೆ ಸಾಥ್ ಕೊಡಬಹುದು ಎಂಬ ಮಾತು ಕೇಳಿಬರುತ್ತಿದೆ.

2020ರಲ್ಲಿ 'ಆಹಾ' ಆರಂಭ
ಕೊರೊನಾ ವೈರಸ್ ಹಿನ್ನೆಲೆ ಮೊದಲ ಲಾಕ್ಡೌನ್ ಘೋಷಣೆಯಾದ ಸಮಯದಲ್ಲಿ' ಆಹಾ' ಒಟಿಟಿ ಲಾಂಚ್ ಆಯಿತು. ತೆಲುಗಿನ ಕೆಲವು ಸಿನಿಮಾಗಳ ಹಕ್ಕು ಖರೀದಿಸಿದ ಎಕ್ಸ್ಕ್ಲೂಸಿವ್ ಆಗಿ ಪ್ರಸಾರ ಮಾಡಿವೆ. ಮೂಲ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಹಲವು ಶೋಗಳನ್ನು ಸಹ ಆಹಾ ಪ್ರಸ್ತುತ ಪಡಿಸಿದೆ. ಸಮಂತಾ ನಿರೂಪಣೆಯ 'ಸ್ಯಾಮ್ ಜಾಮ್' ಶೋ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಬರಿ ತೆಲುಗಿನಲ್ಲಿ ಪ್ರಭಾವ ಬೀರಿರುವ ಆಹಾ ಈಗ ಕನ್ನಡ ಸಿನಿಮಾನ್ನು ಖರೀದಿಸಿ ಪ್ರಸಾರ ಮಾಡುವ ಆಸಕ್ತಿ ತೋರಿದೆ. ಇನ್ನು ಕನ್ನಡದಿಂದಲೂ ಎಕ್ಸ್ಕ್ಲೂಸಿವ್ ಕಂಟೆಂಟ್ ನಿರ್ಮಿಸಲು ಸಹ ಮುಂದಾಗಿದೆ.

ಕರ್ನಾಟಕದಲ್ಲಿ ಸಮೀಕ್ಷೆ ಆಗಿದೆ
ಕರ್ನಾಟಕದಲ್ಲಿ ಆಹಾ ಘಟಕ ವಿಸ್ತರಿಸುವುದು, ಕನ್ನಡ ಸಿನಿಮಾಗಳ ಹೆಚ್ಚು ಫೋಕಸ್ ಮಾಡುವ ಬಗ್ಗೆ ಅದಾಗಲೇ ಸಮೀಕ್ಷೆ ಸಹ ಆಗಿದೆ ಎಂಬ ಮಾತಿದೆ. ಆಹಾ ತಂಡದಿಂದ ಕರ್ನಾಟಕಕ್ಕೆ ಬಂದು ಸರ್ವೆ ಮಾಡಿದ್ದಾರೆ ಹಾಗೂ ಆಹಾಗೆ ಕರ್ನಾಟಕದಲ್ಲಿ ಎಷ್ಟು ಜನ ಚಂದಾದಾರರಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದೆ ಎನ್ನುವ ವಿಚಾರವೂ ವರದಿಯಾಗಿದೆ.

ಆಹಾಗೆ ಬೇಕು ದೊಡ್ಮನೆ ಸಾಥ್?
ದೊಡ್ಮನೆ ಕುಟುಂಬದ ಜೊತೆ ಅಲ್ಲು ಅರ್ಜುನ್ ಕುಟುಂಬ ಒಳ್ಳೆಯ ಸ್ನೇಹ ಹೊಂದಿದೆ. ಕರ್ನಾಟಕದಲ್ಲಿ ಆಹಾ ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ದೊಡ್ಮನೆ ಸಾಥ್ ಬೇಕು ಎನ್ನುವುದನ್ನು ಅರಿತಿರುವು ಅಲ್ಲು ಕುಟುಂಬ ಈಗಾಗಲೇ ದೊಡ್ಮನೆಗೆ ಭೇಟಿ ನೀಡಿ ಈ ಸಂಬಂಧ ಚರ್ಚಿಸಿದೆ ಎನ್ನುವ ವಿಷಯವೂ ಕುತೂಹಲ ಮೂಡಿಸಿದೆ. ಅಲ್ಲು ಸಿರೀಶ್ ಬೆಂಗಳೂರಿನ ಸದಾಶಿವನಗರದಲ್ಲಿರುವ ರಾಘಣ್ಣ ಮತ್ತು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಬೆಂಬಲಿಸಲು ವಿನಂತಿಸಿದ್ದಾರೆ ಎನ್ನಲಾಗಿದೆ.

'ಆಹಾ' ಜೊತೆ ದಯಾಳ್-ಪವನ್ ಕುಮಾರ್
ತೆಲುಗಿನ 'ಆಹಾ' ಜೊತೆ ಕನ್ನಡದ ಖ್ಯಾತ ನಿರ್ದೇಶಕರಾದ ದಯಾಳ್ ಪದ್ಮನಾಭನ್ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಕೈ ಜೋಡಿಸಿದ್ದು, ಈಗಾಗಲೇ ಸ್ವತಂತ್ರವಾಗಿ ಸಿನಿಮಾ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳನ್ನು ಖರೀದಿಸುವುದು ಹಾಗೂ ಕರ್ನಾಟಕದಲ್ಲಿ 'ಆಹಾ' ವಿಸ್ತರಿಸುವ ಲೆಕ್ಕಾಚಾರದಲ್ಲಿ ಅಲ್ಲು ಕುಟುಂಬ ಚಿಂತಿಸುತ್ತಿರುವುದು ಗಾಂಧಿನಗರದಲ್ಲಿ ಚರ್ಚೆಯ ವಿಷಯವಾಗಿದೆ.


Click it and Unblock the Notifications











