ಮಧ್ಯರಾತ್ರಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್: ದಿಢೀರ್ ಓಟಿಟಿಗೆ ಬಂತು ದರ್ಶನ್ ಸಿನಿಮಾ
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಈಗಾಗಲೇ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದು ಎಲ್ಲರ ಹುಬ್ಬೇರಿಸಿದೆ. ದರ್ಶನ್ ಅಭಿನಯಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.
ಈಗಾಗಲೇ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 16ಕ್ಕೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. 'ಕಾಟೇರ' ಸೂಪರ್ ಹಿಟ್ ಹಿನ್ನೆಲೆ ಈ ಬಾರಿ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ. 'ಕಾಟೇರ' ಚಿತ್ರವನ್ನು ತೆಲುಗು ಹಾಗೂ ತಮಿಳಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನಗಳು ನಡೀತಿದೆ. ಇದರ ನಡುವೆ 'ಕಾಟೇರ' ಓಟಿಟಿ ರಿಲೀಸ್ ಬಗ್ಗೆಯೂ ಚರ್ಚೆ ಶುರುವಾಗಿದೆ.

ಜೀ 5 ಸಂಸ್ಥೆ 'ಕಾಟೇರ' ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಸಾಮಾನ್ಯವಾಗಿ ಸಿನಿಮಾ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ 45 ದಿನಗಳ ಬಳಿಕ ಓಟಿಟಿ ರಿಲೀಸ್ ಒಪ್ಪಂದ ಆಗಿರುತ್ತದೆ. ಆದರೆ 'ಕಾಟೇರ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಅದು ಸಾಧ್ಯವಿಲ್ಲ ಎನ್ನಲಾಗ್ತಿದೆ. ಆದರೂ ದರ್ಶನ್ ಹುಟ್ಟುಹಬ್ಬಕ್ಕೆ 'ಕಾಟೇರ' ಸ್ಮಾಲ್ ಸ್ಕ್ರೀನ್ಗೆ ಎಂಟ್ರಿ ಕೊಡುತ್ತಾ? ಎನ್ನುವ ಊಹಾಪೋಹ ಕೆಲವರದ್ದು.
'ಕಾಟೇರ' ಓಟಿಟಿ ರಿಲೀಸ್ ವಿಚಾರ ಪಕ್ಕಕ್ಕಿಟ್ಟರೆ ಇದೀಗ ದಿಢೀರನೆ ದರ್ಶನ್ ನಟನೆಯ ಸಿನಿಮಾವೊಂದು ಅಮೇಜಾನ್ ಪ್ರೈಂಗೆ ಎಂಟ್ರಿಕೊಟ್ಟಿದೆ. ಆದರೆ ಇದು ದರ್ಶನ್ ಹೀರೊ ಆಗಿ ನಟಿಸಿದ ಸಿನಿಮಾ ಅಲ್ಲ. ಬದಲಿಗೆ ವಿಶೇಷ ಪಾತ್ರದಲ್ಲಿ ಮಿಂಚಿದ್ದ ಸಿನಿಮಾ. ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾ ಓಟಿಟಿಗೆ ಬಂದಿದೆ.

ಯಶಸ್ ಸೂರ್ಯ ಹೀರೊ ಆಗಿ ನಟಿಸಿದ್ದ 'ಗರಡಿ' ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು. ಹಳ್ಳಿ ಸೊಗಡಿನ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಚಿತ್ರದಲ್ಲಿ ನಾಯಕ ಸೂರಿಯ ಅಣ್ಣ ಶಂಕರನ ಪಾತ್ರದಲ್ಲಿ ನಟಿಸಿ ದರ್ಶನ್ ಗೆದ್ದಿದ್ದರು. ಚಾಲೆಂಜಿಂಗ್ ಸ್ಟಾರ್ ಎಂಟ್ರಿ ಆಕ್ಷನ್ ಧಮಾಕ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಆದರೆ ದರ್ಶನ್ ಅಪಿಯರೆನ್ಸ್ ಮಾತ್ರ ಚಿತ್ರವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ.
ಬಿ. ಸಿ ಪಾಟೀಲ್ 'ಗರಡಿ' ಸಿನಿಮಾ ನಿರ್ಮಿಸಿ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಯಶಸ್ ಸೂರ್ಯ ಜೋಡಿಯಾಗಿ ಸೋನಲ್ ಮಂಥೆರೊ ಮಿಂಚಿದ್ದರು. ಆರ್ಮುಗ ರವಿಶಂಕರ್ ಚಿತ್ರದ ಮುಖ್ಯ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ನಿಶ್ವಿಕಾ ನಾಯ್ಡು ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ವಿ. ಹರಿಕೃಷ್ಣ ಸಂಗೀತ 'ಗರಡಿ' ಚಿತ್ರಕ್ಕಿದೆ.
ರಾಜ್ಯೋತ್ಸವ ಸಂಭ್ರಮದಲ್ಲಿ ನವೆಂಬರ್ 10ಕ್ಕೆ ಸಿನಿಮಾ ತೆರೆಕಂಡಿತ್ತು. ಬರೀ ರೊಮ್ಯಾಂಟಿಕ್ ಹಾಗೂ ಕಾಮಿಡಿ ಟಚ್ ಇರುವ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದ ಯೋಗರಾಜ್ ಭಟ್ 'ಗರಡಿ' ಎನ್ನುವ ಆಕ್ಷನ್ ಸಿನಿಮಾ ಕಟ್ಟಿ ಕೊಟ್ಟಿದ್ದರು. ದೇಸಿ ಕ್ರೀಡೆ ಹಿನ್ನೆಲೆಯಲ್ಲಿ ಒಂದು ಹಳ್ಳಿ ಸೊಗಡಿನ ವಿಭಿನ್ನ ಪ್ರೇಮಕಥೆಯನ್ನು ತೆರೆಗೆ ತಂದಿದ್ದರು.
ಶಂಕರನ ಪಾತ್ರದಲ್ಲಿ ದರ್ಶನ್ ಎಂಟ್ರಿ ಚಿತ್ರದ ಹೈಲೆಟ್. ಅತಿಥಿ ಪಾತ್ರವೇ ಆಗಿದ್ದರೂ ಅದಕ್ಕೆ ತೂಕವಿದೆ. ಅದೇ ಕಾರಣಕ್ಕೋ ಏನೋ 'ಗರಡಿ' ದರ್ಶನ್ ಸಿನಿಮಾ ಎನ್ನುವಂತೆ ಬಿಂಬಿತವಾಗಿತ್ತು. ಇನ್ನು ದರ್ಶನ್ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಸದ್ಯ ಸಿನಿಮಾ ಓಟಿಟಿಗೆ ಬಂದಿದೆ. ಇನ್ನು 'ಕಾಟೇರ' ಡಿಜಿಟಲ್ ಸ್ಟ್ರೀಮಿಂಗ್ಗಾಗಿ ಕೂಡ ಅಭಿಮಾನಿಗಳು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.


Click it and Unblock the Notifications











