ಆರಕ್ಷಕ ವಿಮರ್ಶೆ: ರಿಯಲ್ ಉಪ್ಪಿ ಅರ್ಧ ಸಿನ್ಮಾ ಮಾಯ
ಕನ್ನಡದಲ್ಲಿ ಡಬ್ಬಿಂಗ್ ಚಿತ್ರಕ್ಕೆ ಅವಕಾಶ ನೀಡದಿರುವುದು ಒಳ್ಳೆಯದೇ ಆಯ್ತು. ಶಟರ್ ಐಲ್ಯಾಂಡ್" ಎಂಬ ಚಿತ್ರ, ಕನ್ನಡ ಚಿತ್ರಗಳ ಪ್ರೇಕ್ಷಕರಿಗೆ ಡಬ್ ಚಿತ್ರವಾಗಿ ನೋಡುವ ಅವಕಾಶ ಇದ್ದಿದ್ದರೆ.. ಉಪೇಂದ್ರ ಅಭಿನಯದ 'ಆರಕ್ಷಕ" ಚಿತ್ರಕ್ಕೆ ಕಾಸು ಹುಟ್ಟೋದು ಕಷ್ಟವಿತ್ತೇನೋ.
ಆಪ್ತಮಿತ್ರ, ಆಪ್ತರಕ್ಷಕ ಖ್ಯಾತಿಯ ಪಿ ವಾಸು ಕಥೆ, ಚಿತ್ರಕಥೆ ನಿರ್ದೇಶನವಿರುವ ಆರಕ್ಷಕ ಚಿತ್ರ ಲಿಯಾನಾರ್ಡೊ ಡಿಕಾಪ್ರಿಯೋ ಅಭಿನಯದ 'ಶಟರ್ ಐಲ್ಯಾಂಡ್" ಚಿತ್ರ ಅಥವಾ 'ಡೆನ್ ಲೆಹಾನೆ" ಬರೆದ ಕಾದಂಬರಿಯೊಂದರ ಆಧಾರಿತ ಇರಬಹುದು.
ಆದರೆ, ಕನ್ನಡದ ಮಟ್ಟಿಗೆ ಉತ್ತಮ ಗುಣಮಟ್ಟದ ಕಥೆಯಾಧಾರಿತ ಚಿತ್ರ ಬಂದಿರುವುದು ಸ್ವಾಗತಾರ್ಹ. ತುಂಬಾ ದಿನದಿಂದ ಉಪೇಂದ್ರ ಶೈಲಿಯ ಚಿತ್ರಗಳ ದಾಹದಿಂದ ಬಳಲಿದ್ದ ಪ್ರೇಕ್ಷಕರಿಗೆ ಅಮೃತಕೊಟ್ಟರೂ ಒಂದೇ, ಬಿಸ್ಲೇರಿ ನೀರು ಕೊಟ್ಟರೂ ಒಂದೇ. ಒಟ್ಟಿನಲ್ಲಿ ದಾಹ ಇಂಗುವುದು ಮುಖ್ಯ.
ಪ್ರೇಕ್ಷಕರ ಪರಿಸ್ಥಿತಿ ಅರಿತು ಅಗತ್ಯಕ್ಕೆ ತಕ್ಕಂತೆ ದಾಹ ನೀಗಿಸಿದ್ದಾರೆ ವಾಸು. ಕೊಟ್ಟ ಕಾಸಿಗೆ ಮೋಸವಂತೂ ಆಗಲ್ಲ. ಮೋಸವಾಯಿತು ಎಂದುಕೊಂಡರೆ ಅದು ಅವರ ತಪ್ಪಲ್ಲ. ಚಿತ್ರದ ಪೋಸ್ಟರ್ ನಲ್ಲಿ ಇದು 2 ಡಿ, 3ಡಿ ಚಿತ್ರ ಎಂದು ಹಾಕಿಲ್ಲ.
ಸೈಕಾಲಜಿಕಲ್ ಥ್ರಿಲ್ಲರ್ ಚಿತ್ರಗಳಿಗೆ ಬೇಕಾದ ಸೌಂಡ್ ಎಫೆಕ್ಟ್ ಅಲ್ಲಲ್ಲಿ ಮಾಯ. ನೆರಳು ಬೆಳಕಿನಾಟದಲ್ಲಿ ಪಾತ್ರಧಾರಿಗಳೇ ಮಾಯ. ಹಾಡುಗಳಲ್ಲಿ... ಛೀ ಬೇಡ ಬಿಡಿ ಎಲ್ಲಾ ಮಾಯ. ಹೌದು ಮಾಯಾ ಸ್ಯಾರಿ ಅಂಡ್ ಶರ್ಟ್ ಉಡುಪುಗಳಿಗೆ ಸಂಪರ್ಕಿಸಿ ಮಾಯಾ... ಅಲ್ಲಲ್ಲ, ರಾಗಿಣಿ ದ್ವಿವೇದಿಯನ್ನ.
ಕೊನೆಗೆ ಇನ್ನೇನು ಚಿತ್ರ ಮುಗಿತಪ್ಪ ಎನ್ನುವಾಗ ಪ್ರೇಕ್ಷಕರಿಗೆ ಏನೋ ಆಗುತ್ತಿದೆ ಅನ್ನಿಸುತ್ತದೆ. ಇದು ವಾಸು ಪ್ಲಸ್ ಪಾಯಿಂಟ್ ಅಂಡ್ ಮೈನಸ್ ಪಾಯಿಂಟ್. ಉಪೇಂದ್ರ ಇದ್ದ ಮೇಲೆ ಅಪ್ತಮಿತ್ರ, ರಕ್ಷಕ ಶೈಲಿ ನಿರೂಪಣೆಗೆ ಸ್ವಲ್ಪ ಸುಧಾರಣೆ ಮಾಡಬಹುದಿತ್ತು.
ಇಲ್ಲಿ ವಾಸು 'ಅಗರಬತ್ತಿ"ಯಂತೆ ಅಲ್ಲಲ್ಲಿ ಪರಿಮಳ ಬೀರುತ್ತಾರೆ. ಕೆಲವು ಕಡೆ ನಿಜಕ್ಕೂ ಇದು ಸುರೇಶ್ ಅರಸ್ ಸಂಕಲನ ಮಾಡಿರೋ ಚಿತ್ರನಾ ಎಂದು ಡೌಟು ಹುಟ್ಟಿಸಿಬಿಡುತ್ತದೆ. ಏನು ಮಾಡೋದು ಕತ್ತರಿಸುವ ಕೈ ಕೆಲವೊಮ್ಮೆ ಹಿಡಿಯುತ್ತದೆ.
ಹಾಡು ಇಷ್ಟಪಡುವವರಿಗೆ ಒಂದಷ್ಟು ಸಾಂಗ್ಸ್ ಇದೆ. ಲೊಕೇಷನ್, ವಸ್ತ್ರವಿನ್ಯಾಸ ನಾಯಕ, ನಾಯಕಿ ಮೈಮಾಟ ನೋಡಿ ಮೈಮುರಿಯಬಹುದು. ಚಿತ್ರದ ಓಟಕ್ಕೆ ಹಾಡು ಬೇಡವಿತ್ತೇನೋ ಅನ್ನಿಸುವುದಿದೆ.
ನಿರ್ಮಾಪಕರು ಹಾಡು ಇಲ್ಲದಿದ್ದರೂ ಓಕೆ ಅಂದಿದ್ದರಂತೆ. ಆದ್ರೆ ನಿರ್ದೇಶಕರು ಸಿನ್ಮಾ ಲೆಂಗ್ತ್, ಗ್ಲಾಮರ್ ಮಣ್ಣು ಮಸಿ ಇತ್ಯಾದಿ ನೆಪದಲ್ಲಿ ಎಲ್ಲವನ್ನೂ ತುರುಕಿದ್ದಾರೆ.
ಹಾಸ್ಯ ಹೊನಲಾಗಿ ಹರಿಯದಿದ್ದರೂ ಕಡಲಂತೆ ಆಗಾಗ ಅಪ್ಪಳಿಸುತ್ತದೆ. ಯಾವುದು ಈ ಲೋಕೇಷನ್ ಎನ್ನುವಷ್ಟರ ಮಟ್ಟಿಗೆ ಹುಚ್ಚಾಸ್ಪತ್ರೆ ಪ್ರೇಕ್ಷಕರ ಕಣ್ಣಿಗೆ ಕಂಡಿದೆ. ನಾಯಿಗಳ ಹಾಸ್ಯ ಹಳೆಯದಾದರೂ ಬೇಸತ್ತ ಪ್ರೇಕ್ಷಕನಿಗೆ ಮತ್ತೆ ಮತ್ತೆ ನಾಯಿಗಳ ಅಭಿನಯ ನೋಡಬೇಕೆನಿಸುತ್ತದೆ.
ಕಲಾವಿದರ ಆಯ್ಕೆಯಲ್ಲಿ ಜಾಣ್ಮೆ ತೋರಿದ್ದಾರೆ. ಅಲ್ಲಿಗೂ ಇಲ್ಲಿಗೂ ಸಲ್ಲುವ ಕಲಾವಿದರನ್ನು ಆರಿಸಿರುವ ವಾಸು, ಡಬ್ ಮಾಡಿ ಅಲ್ಲೂ ನಾಲ್ಕು ಕಾಸು ಹುಟ್ಟಿಸಿಕೊಳ್ಳುವ ವ್ಯವಹಾರ ಕೌಶಲ್ಯ ಮೆರೆದಿದ್ದಾರೆ. ಶಿಂಧೆ ಸಾಹೇಬ್ರು ಸಾಫ್ಟ್ ಆಗಿ ನಟಿಸಿರುವುದರಿಂದ ಡೈಲಾಗ್ ಡೆಲವರಿ ಕೊಂಚ ತೊಡಕಾಗಿದೆ. ಅಡ್ಜಸ್ಟ್ ಮಾಡಿಕೊಳ್ಳೋಣ.
ಚಿತ್ರ ಗೆದ್ದರೆ ಔಟ್ ಡೇಟೇಡ್ ಹೀರೋಯಿನ್ ಸದಾಗಂತೂ ಭರ್ಜರಿ ಗಿಫ್ಟ್ ಆಗುತ್ತದೆ. ಆದಿ ಲೋಕೇಶ್ ಪುಟ್ಟ ಪಾತ್ರ. ಹೆಚ್ಚಿನ ಕೆಲಸವಿಲ್ಲ. ಉಳಿದಂತೆ ಸೀತಾ, ವಿಜಯಕಾಶಿ ಎಲ್ಲರ ನಟನೆ ಅಗತ್ಯವಾದಷ್ಟಿದೆ.
ಚಿತ್ರ ನೋಡಿದ ಮೇಲೆ ಏನಾದರೂ ಅನ್ನಿಸಬೇಕು. ಇಲ್ಲ ಥೂ ನನ್ಮಕ್ಕಳು ಏನ್ ಸಿನಿಮಾ ಮಾಡಿದಾರೋ ಅಂಥಾನಾದ್ರೂ ಉಗಿಯೊ ಹಾಗೇ ಇರ್ಬೇಕು. ಇಲ್ಲ ಒಳ್ಳೆ ಪ್ರಯತ್ನ ಅನ್ನೋ ರೀತಿನಾದ್ರೂ ಇರ್ಬೇಕು. ಅಷ್ಟಾದರೇ ಅಪ್ಪಟ ಕನ್ನಡ ಪ್ರೇಕ್ಷಕ ಬಚಾವ್.
ಚಿತ್ರಮಂದಿರದಿಂದ ಹೊರ ಬಿದ್ದ ಪ್ರೇಕ್ಷಕನೊಬ್ಬ ಮತ್ತೊಬ್ಬನಿಗೆ 'ಲೇ ಅಲ್ನೋಡೋ ನಮ್ಮಣ್ಣ ಇದ್ದ ಹಾಗೆ ಇದ್ದಾನೆ.." ಎನ್ನುತ್ತಿದ್ದ. ಆತ ಚಿತ್ರದ ದ್ವಿತೀಯಾರ್ಧ ನೋಡಿದ ಮೇಲೆ ಚಿತ್ರದಲ್ಲೇ ಮುಳುಗಿಬಿಟ್ಟಿದ್ದ. ಆದರೆ, ಈ ರೀತಿಯ ಪ್ರಭಾವವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಉಳಿಸಿಕೊಳ್ಳುವಲ್ಲಿ ಚಿತ್ರ ವೈಫಲ್ಯ ಕಂಡಿದೆ.
ನಾಯಕನ ತಂದೆ ತಂದ ಇನ್ವಿಟೇಷನ್ನಲ್ಲಿ ಏನಿತ್ತು? ಸ್ಪಷ್ಟವಿಲ್ಲ. ಖಡಕ್ ಪೊಲೀಸ್ ಅಧಿಕಾರಿಯನ್ನು ಮೊದಲಿನಿಂದಲೇ ಮೆಂಟಲ್ ಥರಾ ತೋರಿಸಲಾಗಿರುವ ಅಗತ್ಯವೇನು? ರಾಗಿಣಿ ಜಾಬ್ ಪ್ರೊಫೈಲ್ ಏನು?
ಸಸ್ಪೆನ್ಸ್ ಸೀನ್ ಗಳಲ್ಲೂ ಕ್ಲೋಸ್ ಅಪ್ ಶಾಟ್ ಮಾಯ ಏಕೆ? ಹೀಗೆ ಚಿತ್ರವನ್ನು ಕನಿಷ್ಟ ರೀತಿಯಲ್ಲೂ ಲಾಜಿಕಲ್ ಆಗಿ ನೋಡಲಾಗುವುದಿಲ್ಲ. ಆರಕ್ಷಕ ಶೀರ್ಷಿಕೆ ಬದಲಿಗೆ 'ಉಪ್ಪಿ ಸದಾ ಮಾಯ" ಎಂದು ಇಟ್ಟಿದ್ದರೆ ಚೆನ್ನಿತ್ತು.
ವಾಸು ಅವರಿಗೆ ಹೂಸು ಐಡ್ಯಾ ಯಾರು ಕೊಟ್ಟರೋ ಪರಮಾತ್ಮ...! ಚಿತ್ರ ಉಪ್ಪಿ ಅಬ್ಬರದ ಅಭಿನಯ ಮೆಚ್ಚುವವರಿಗೆ ಮಾತ್ರ ಎಂದರೆ ತಪ್ಪಾದೀತು. ನೋಡಬಹುದು ಒಂದ್ಸಲ; ನೋಡದಿದ್ದರೆ ಕಳ್ಕೊಳ್ಳುವಂತದ್ದು ಏನೂ ಇಲ್ಲ.
ಹೇಳೋಕೆ ನೆಪ ಉಂಟಲ್ಲ. ಸ್ಯಾಲರಿ ಆಗಿಲ್ಲ... ಗುರು ಕೈಲಿ ಕಾಸಿಲ್ಲ, ಇನ್ನು ಸಿನ್ಮಾ ಎಲ್ಲಿ ನೋಡೋದು...ಅದೂ ಉಪೇಂದ್ರಂದು.


Click it and Unblock the Notifications











