ಕತೆ-ಚಿತ್ರಕತೆ-ಹಾಡು-ಸಂಗೀತ-ಸಂಭಾಷಣೆ-ನಿರ್ದೇಶನದೊಂದಿಗೆ ನಾಯಕನೂ ಆಗಿರುವ ಎಸ್.ನಾರಾಯಣ್ ಅವರೇ ತಮ್ಮ ಚಿತ್ರದ ಬಗ್ಗೆ ವಿಮರ್ಶೆ ಬರೆದರೆ ಹೇಗಿರಬಹುದು ಅನ್ನುವುದನ್ನು ಊಹಿಸಿಕೊಂಡು ಕೆಳಗಿನ ಲೇಖನ ಬರೆಯಲಾಗಿದೆ !
‘ಚಿತ್ರದುದ್ದಕ್ಕೂ ನಾನು ಮತ್ತು ರಮೇಶ್ ಬಂಗಾರ ಬಣ್ಣದ ಕೂದಲಿನ ವಿಗ್ ಹಾಕಿದ್ದೇವೆ. ಅದು ಕೆಲವರಿಗೆ ಕೋಡಂಗಿತನದಂತೆ ಕಂಡಿತು. ಎಷ್ಟೋ ಜನ ಕಿವಿಗೆ ಕೇಳಿಸುವಂತೆ ಪೆಕರ ನನ್ಮಕ್ಕಳು ಅಂದರು. ನಿಜ ಹೇಳಬೇಕೆಂದರೆ ಅದೆಲ್ಲ ಸಾಮ್ರಾಜ್ಯ ಶಾಹಿಯ ಗಾಢ ಪರಿಣಾಮದ ಪ್ರತಿಫಲವೆಂದು ತೆಗಳುವವರಿಗೆ ಗೊತ್ತೇ ಇಲ್ಲ .’
‘ರಮೇಶ್ ಯಾವ ಮಟ್ಟದ ಕಲಾವಿದನೆಂದು ಅರಿಯಲು ಅದೊಂದು ದೃಶ್ಯ ಸಾಕೆನಿಸುತ್ತದೆ. ಅಮೃತ ವರ್ಷಿಣಿಯ ಈ ಅದ್ಭುತ ನಟ ರಸ್ತೆಯಲ್ಲಿ ಬರಿ ಚೆಡ್ಡಿ ತೊಟ್ಟು ಓಡುವುದೆಂದರೆ ಸುಮ್ಮನೇನಾ ? ಆಗ ಅವರ ಮುಖದಲ್ಲಿ ಒಂದಗುಳಿನಷ್ಟೂ ನಾಚಿಕೆ, ಸಂಕೋಚ ಇರಲಿಲ್ಲ . ಅದು ನಿಜವಾದ ಕಲಾವಿದನ ಲಕ್ಷಣ. ನಾಯಕಿಯರಾದ ರುಚಿತಾ ಪ್ರಸಾದ್ ಮತ್ತು ಮಹಾಲಕ್ಷ್ಮಿ ಎಷ್ಟು ಚಿಕ್ಕ ಬಟ್ಟೆ ತೊಡಲೂ ಹಿಂಜರಿಯಲಿಲ್ಲ . ಬಾಲಿವುಡ್ ಹುಡುಗಿಯರಿಗೆ ಈ ಕನ್ನಡತಿಯರು ಸವಾಲು ಹಾಕುವ ತಂತ್ರ ಬಳಸಿದ್ದೇನೆ.’
‘ದೊಡ್ಡಣ್ಣನ ಕಿರುಚಾಟ ಜಾಸ್ತಿಯಾಯಿತು. ಹಿನ್ನೆಲೆ ಸಂಗೀತ ಕರ್ಕಶವಾಗಿದೆ- ಹೀಗನ್ನುವವರು ಆಧುನಿಕ ಮನಃಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಜಾಗತೀಕರಣದ ಫಲವಾಗಿ ಟ್ರಾಫಿಕ್ಕಿನಿಂದ ಶಬ್ದ ಮಾಲಿನ್ಯ ಹೆಚ್ಚಾಗಿದೆ. ಜನರ ಕಿವಿಯ ತಮಟೆ ಅದಕ್ಕೆ ಹೊಂದಿಕೊಂಡಿದೆ. ಅದಕ್ಕೆ ಪೂರಕವಾಗಿ ಚಿತ್ರದ ಪಾತ್ರಗಳು ಮತ್ತು ಸಂಗೀತವಿದೆ. ಈ ಚಿತ್ರದಲ್ಲಿರುವಷ್ಟು ಸೆನ್ಸ್ ಆಫ್ ಕ್ಯಾಮರಾ ಮತ್ತು ಸೆನ್ಸ್ ಆಫ್ ಹ್ಯೂಮರ್ ಯಾವ ಬಾಲಿವುಡ್ ಚಿತ್ರದಲ್ಲೂ ಇರಲು ಸಾಧ್ಯವಿಲ್ಲ .’
‘ಪಕ್ಕಚುಕ್ಕಕ್ಕೆ ಆಸ್ಕರ್ ಕೊಡದಿದ್ರೆ ನನ್ನ ಮೀಸೆ ಮಟಾಶ್.’
(ಸೂಚನೆ : ಈ ಚಿತ್ರ ನೋಡಿದರೆ ಮುಂದಾಗಬಹುದಾದ ಮನೋವೈಕಲ್ಯ, ಮಾನಸಿಕ ಮತ್ತು ದೈಹಿಕ ಹಿಂಸೆ ಹಾಗೂ ಇತರ ಅವಘಡಗಳಿಗೆ ನಾವು ಜವಾಬ್ದಾರರಲ್ಲ .)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











