ಕುರ್ಚಿಯ ತುದಿಯಲ್ಲಿ ಕೂರಿಸುವ ಭೀಮಾತೀರದಲ್ಲಿ
ನಾಯಕಿ ಪ್ರಣಿತಾ ಕಡೆಯಿಂದ ಹೆಚ್ಚು ಅಭಿನಯ ಎಕ್ಸ್ಪೆಕ್ಟ್ ಮಾಡುವುದು ತಪ್ಪು. ಮುದ್ದೆಯ ಹತ್ತಿರ ಹೋಗಿ ಉಪ್ಪು-ಹುಳಿ-ಖಾರ ಕೇಳಿದರೆ ಅದು ಏನು ತಾನೇ ಕೊಟ್ಟೀತು? ಆದರೆ ಜರಾಸಂಧ, ಪೊರ್ಕಿ ಮೊದಲಾದ ಚಿತ್ರಗಳಿಗೆ ಹೋಲಿಸಿದರೆ ಪ್ರಣಿತಾ ತಕ್ಕ ಮಟ್ಟಿಗೆ ಸುಧಾರಿಸಿಕೊಂಡಿದ್ದಾಳೆ. ಸುಧಾರಾಣಿಯಂತಾಗಲು ಇನ್ನೂ ಒಂದಷ್ಟು ಸುಧಾರಣೆ ಬೇಕು!
ಇನ್ನು ಉಮಾಶ್ರೀ. ಆ ಯಮ್ಮನ ಪಾತ್ರ ನೆನೆಸಿಕೊಂಡರೆ ಈಗಲೂ ಮೈ ಜುಂ ಎನ್ನುತ್ತದೆ. ಚಂದ್ಯಾನ ತಾಯಿಯಾಗಿ ಉಮಾಶ್ರೀ ಪಾತ್ರಕ್ಕೆ ಬೇರೆ ಉಪಮೇಯವಿಲ್ಲ. ಅವರಿಂದ ಮಾತ್ರ ಅಂಥದ್ದೊಂದು ವ್ಯಾಘ್ರ ಮತ್ತು ವಿಶೇಷ ಪಾತ್ರ ಮಾಡಲು ಸಾಧ್ಯ. ಮುಂದಿನ ಸಾಲಿನ ಸಾಲು ಸಾಲು ಪ್ರಶಸ್ತಿಗಳು ಖಂಡಿತ ಉಮಾಶ್ರೀ ಮುಡಿಗೇರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ!
ಇನ್ನು ನಟರ ದಂಡೇ ಚಿತ್ರದಲ್ಲಿದೆ. ಶರತ್ ಲೋಹಿತಾಶ್ವ ಪಾತ್ರವನ್ನು ತಿಂದು ತೇಗಿ ನೀರು ಕುಡಿದಿದ್ದಾರೆ. ಶ್ರೀನಿವಾಸ ಮೂರ್ತಿ, ಭರತ್ ರೆಡ್ಡಿ, ಲೋಕನಾಥ್, ಸುಚೇಂದ್ರ ಪ್ರಸಾದ್ ಎಲ್ಲರಿಗೂ ಬೆವರಿಳಿಸಿ ನಟನೆ ತೆಗೆಸಿದ್ದಾರೆ ಓಂ ಪ್ರಕಾಶ್ ರಾವ್. ನಿರ್ಮಾಪಕ ಅಣಜಿ ಕಾಸು ಹೂಡುವುದರ ಜೊತೆಗೆ ಕ್ಯಾಮೆರಾ ಕೂಡ ಹಿಡಿದಿದ್ದಾರೆ. ಅಚ್ಚುಕಟ್ಟಾಗಿದೆ ಅವರ ಕೈಚಳಕ. ಎಲ್ಲೆಲ್ಲಿ ಕ್ಯಾಮೆರಾ ಇಟ್ಟಿದ್ದಾರೆ ಎನ್ನುವುದೇ ಒಮ್ಮೊಮ್ಮೆ ಅಚ್ಚರಿ ಹುಟ್ಟಿಸುವ ಸಂಗತಿ. ಅಭಿಮನ್ ರಾಯ್ ಸಂಗೀತ ಸಪ್ಪೆ ಆಫ್ ದಿ ಸಿನಿಮಾ. ಒಂದೇ ಒಂದು ಹಾಡೂ ನೆನಪಿನಲ್ಲಿ ಉಳಿಯುವುದಿಲ್ಲ. ಮನಸಿನಲ್ಲಿ ಗುನುಗುವುದಿಲ್ಲ. ಎಡಿಟಿಂಗ್ ಫಾಸ್ಟ್ ಆಗಿದೆ. ಎಂ.ಎಸ್.ರಮೇಶ್ ಸಂಭಾಷಣೆ ಚಿತ್ರದುದ್ದಕ್ಕೂ ಕಿವಿಗಳನ್ನು ರೊಚ್ಚಿಗೆಬ್ಬಿಸುತ್ತದೆ.
ವಿಜಿ ತನ್ನ ತಾಯಿ ಉಮಾಶ್ರೀಗೆ ಬಲೂನೊಂದನ್ನು ಕೊಟ್ಟು, ಅದರ ತುಂಬಾ ಗಾಳಿ ತುಂಬಿ, ಅವ್ವಾ.. ಇದ್ರಾಗೆ ನನ್ ಉಸಿರು ತುಂಬ್ಕಂಡೈತೆ. ಇದನ್ನ ನಿನ್ನ ಹತ್ರಾನೇ ಮಡೀಕಾ.. ನಾನೇ ನಿನ್ನ್ ಹತ್ರಾ ಇದ್ದಂಗಿರ್ತೈತಿ.. ಎಂದಾಗ ಕಣ್ಣುಗಳು ಹನಿಯೊಡೆಯುತ್ತವೆ. ಯಮನಿಗೇ ಸಮ ಸಮ ಹೊಡೆದಾಡೋನು ಈ ಚಂದ್ಯಾ.. ಭಯಾ ಅಂದ್ರೇನೇ ಗೊತ್ತಿಲ್ಲಾ.. ಎಂದು ವಿಜಿ ಕೆಕ್ಕರಿಸಿ ಎದುರಾಳಿಯನ್ನು ನೋಡಿದಾಗ ಇಡೀ ಥಿಯೇಟರ್ ಚಪ್ಪಾಳೆಯ ಚಾವಡಿಯಾಗುತ್ತದೆ!
ಹಾಗಂತ ಇಡೀ ಚಿತ್ರದಲ್ಲಿ ಎಲ್ಲವೂ ಸರಿ ಇದೆ ಎಂದಲ್ಲ. ಅತಿಯಾದ ಅರಚಾಟ, ಕಿರುಚಾಟ ಕುಟುಂಬಸ್ಥರನ್ನು ಚಿತ್ರಮಂದಿರಕ್ಕೆ ಕರೆತರುವುದಿಲ್ಲ. ರಕ್ತಪಾತವೇ ಜೀವನ ಸಾಕ್ಷಾತ್ಕಾರವಾದರೆ ಜನಕ್ಕೆ ಅವನ್ನೆಲ್ಲಾ ಮನೆಯಲ್ಲೇ ಕೂತು ಕ್ರೈಮ್ ಸ್ಟೋರಿಯಲ್ಲಿ ನೋಡಿಕೊಳ್ಳಬಹುದು. ಅದನ್ನು ಬಿಟ್ಟು ಐವತ್ತು-ನೂರು ಸುರಿದು ಸಿನಿಮಾಗ್ಯಾಕೆ ಬರುತ್ತಾರೆ. ಇರುವಷ್ಟು ಹೊತ್ತು ಕಣ್ಣಿಗೆ ತಂಪು-ಕಿವಿಗೆ ಇಂಪು ಇರಬೇಕು. ಒಂದಷ್ಟು ಮನರಂಜನಾತ್ಮಕ ಅಂಶಗಳು ಅದರಲ್ಲಿ ಸೇರಿಕೊಂಡಿರಬೇಕು. ಅವೆಲ್ಲವನ್ನೂ ಯೋಚಿಸಿದಾಗ ಭೀಮಾತೀರದಲ್ಲಿ ಚಿತ್ರ ಎಲ್ಲಾ ಆಯಾಮದಲ್ಲೂ ಮೈನಸ್ ಆಫ್ ಮೈನಸ್ ಎನಿಸುತ್ತದೆ.
ಜೊತೆಗೆ ಇಡೀ ಚಿತ್ರದಲ್ಲಿ ಐದು ನಿಮಿಷ ರಾಜು ತಾಳೀಕೋಟೆ ಬಂದು ತನ್ನ ಹಳೇ ವಾದ್ಯಗಳನ್ನು ಊದುವುದನ್ನು ಬಿಟ್ಟರೆ ಬೇರೆಲ್ಲೂ ಹಾಸ್ಯದ ಅಲೆ ಏಳುವುದಿಲ್ಲ. ಇವಿಷ್ಟನ್ನು ಹೊರತಾಗಿ ಭೀಮಾತೀರದಲ್ಲಿ ಒಂದು ನೀಟ್ ಸಿನಿಮಾ. ಕನ್ನಡದ ಮಟ್ಟಿಗೆ, ದುನಿಯಾ ವಿಜಯ್ ಮಟ್ಟಿಗೆ, ಇತ್ತೀಚೆಗೆ ಬಂದುಹೋದ ಕಮರ್ಷಿಯಲ್ ಚಿತ್ರಗಳಲ್ಲಿ ಭೀಮಾತೀರದಲ್ಲಿ ದೀ ಬೆಸ್ಟ್! ಉಳಿದಿದ್ದು ಸೌದತ್ತಿ ಯಲ್ಲವಂಗೆ ಬಿಟ್ಟಿದ್ದು...


Click it and Unblock the Notifications











