twitter
    For Quick Alerts
    ALLOW NOTIFICATIONS  
    For Daily Alerts

    ಕನಸಿನ ಕಲಾಕಾರಂಜಿ ಕಲಾಕಾರ್!

    By Staff
    |

    Movie Kalakar review
    ಪಕ್ಕದ ಮನೆ ಕಾಂಪೌಂಡ್ ಮೇಲೆ ಕುಳಿತಿರುವ ಚಿಟ್ಟೆ ಯನ್ನಾದರೂ ಹಿಡಿಯಬಹುದು, ಆದರೆ ಈ ಚಿತ್ರರಂಗದ ಚಿತ್ರಾನ್ನ ತಿನ್ನುವ ಸಹವಾಸ ಮಾತ್ರ ಬೇಡಪ್ಪಾ. ನಟನಾಗುವುದು ಕ್ಲ್ಯಾಪ್ ಮಾಡಿದಷ್ಟು ಸುಲಭವಲ್ಲ. ನಾಯಕನಾಗಬೇಕಾದರೆ ಹತ್ತಾರು ವರ್ಷ ಹದವಾಗಬೇಕು. ಅದಕ್ಕೆ ತಾಕತ್ತು, ಗತ್ತು, ಜತೆಗೆ ಅದೃಷ್ಟದ ಬಲವೂ ಬೇಕು ಎನ್ನುವುದು ಗಣೇಶ್ ಹಾಗೂ ವಿಜಿ ಆಣೆಗೂ ಸತ್ಯ ! ಹೀಗೆನ್ನಿಸುವುದು ಕಲಾಕಾರ್ ಚಿತ್ರದ ಮೊದಲಾರ್ಧ ಮುಗಿದಾಗ, ಬಾಯಿಗೆ ಪಾಪ್‌ಕಾರ್ನ್ ಬಿದ್ದಾಗ... ಹರೀಶ್ ರಾಜ್ ಮೊದಲ ಚುಂಬನದಲ್ಲೇ ಸಿನಿ ಕನಸು ಹೊತ್ತ ನಟನೊಬ್ಬ ಹೇಗೆ, ಯಾರ್‍ಯಾರಿಂದ ದಂತಭಗ್ನಕ್ಕೆ ಒಳಗಾಗಿ, ಮುಖಭಂಗ ಅನುಭವಿಸುತ್ತಾನೆ ಎಂಬ ಕಲಾಬದುಕಿಗೆ ಮುನ್ನುಡಿ ಬರೆದಿದ್ದಾರೆ.

    *ದೇವಶೆಟ್ಟಿ ಮಹೇಶ್

    ಕಲಾಕಾರ್ ಒಂದು ಕಲಾವಿದನ ಕಲಾತ್ಮಕ ಬದುಕಿನ ಕಮರ್ಷಿಯಲ್ ಚಿತ್ರಣ. ಇಲ್ಲಿ ಅವನ ನೋವಿದೆ, ಆಸೆಯ ಪ್ರತಿರೂಪವಿದೆ. ಹೀರೊ ಆಗುವ ಹೊಂಗನಸಿದೆ. ಅದು ಫಲಿಸದೇ ಆತ ಪರಿತಪಿಸುವ ತವಕವಿದೆ. ಕಸಿವಿಸಿಯಿದೆ. ಬಿಸಿ ಬಿಸಿ ಎನಿಸುವ ದೃಶ್ಯಗಳಿವೆ. ಹಸಿ ಹಸಿ ವಯಸಿನ ತುಮುಲ ಇದೆ. ಕಸಿ ಮಾಡಿದ ಚಿತ್ರಕತೆಯಿದೆ. ಮುದ ನೀಡುವ ಸಂಭಾಷಣೆಯಿದೆ. ಸಕ್ಕರೆಯ ಸವಿಯೂಟ ನೀಡುವ ದೀವಾನ್ ಸಂಗೀತವಿದೆ. ಜತೆಗೆ ಮೂರು ಮನಸುಗಳ ನಡುವೆ ನಡೆಯುವ ಪ್ರೇಮ ಕಾಳಗವಿದೆ. ಅದನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ ಎಸ್.ರಾಮಚಂದ್ರ. ಹರೀಶ್ ರಾಜ್ ಮೊದಲ ನಿರ್ದೇಶನದಲ್ಲಿ ಭರವಸೆ ಮೂಡಿಸಿದ್ದಾರೆ. ಸಿನಿ ಜಗತ್ತಿನ ಇನ್ನೊಂದು ರೂಪ, ಪಾಪಕೂಪಕ್ಕೆ ಕನ್ನಡಿ ಹಿಡಿದಿದ್ದಾರೆ. ಹೊಸ ಹುಡುಗರನ್ನು ಛಾನ್ಸ್ ಕೊಡಿಸುತ್ತೇನೆ. ನಿನ್ನನ್ನೇ ನಾಯಕನನ್ನಾಗಿ ಮಾಡುತ್ತೇನೆ ಎಂದು ತಲೆಯ ಮೇಲೆ ಐಸ್ ಇಡುವವರ ಬಗ್ಗೆ ಕೂಲಂಕಷ ಚಿತ್ರಣವಿದೆ. ಒಟ್ಟಾರೆ ಹರೀಶ್ ಹೊಸ ರೂಪದ ನಿರೂಪಣೆ ಮಾಡುವಲ್ಲಿ ಗೆದ್ದಿದ್ದಾರೆ.

    ಹರೀಶ್ ನಟನೆಯಲ್ಲೂ ಗೆದ್ದಿದ್ದಾರೆ. ಮೊದಲ ದೃಶ್ಯದಲ್ಲಿ ಡೈಲಾಗ್ ಹೇಳುವಾಗ ಒದ್ದಾಡುವ ಪರಿ, ತಂದೆ-ಲೇ ಮಗನೇ ಗೆಟ್ ಔಟ್ ಎಂದು ಮನೆಯಿಂದ ಹೊರಹಾಕಿದಾಗ, ಮನೆ ಬಾಡಿಗೆ ಕಟ್ಟಲಾಗದೇ ಹುಡುಗಿ ವೇಶದಲ್ಲಿಮನೆ ಸೇರಿಕೊಳ್ಳುವಾಗ, ಥೇಟ್ ಹಳೆ ಆಂಟಿಯ ಹಾಗೆ ಥಳುಕು ಬಳುಕುವಾಗ ಬೊಂಬಾಟ್ ಬಾದಶಹ. ಸೆಂಟಿಮೆಂಟ್ ದೃಶ್ಯಗಳಂತೂ ಸೂಪರ್... ಸುಮ್‌ಸುಮ್ನೇ ಡ್ಯಾನ್ಸು ಮಾಡೊ ಸುಂದರಿ ಸುಮನ್ ರಂಗನಾಥ್ ಈ ವಯಸ್ಸಲ್ಲೂ ಸಖತ್ ಹಾಟಪ್ಪಾ ಹಾಟು. ನಟನೆಯಲ್ಲೂ ಸೋ ಸ್ವೀಟು. ಪೂಜಾ ಗಾಂಧಿ ಸೋದರಿ ರಾಧಿಕಾ ಗಾಂಧಿ ಆಹಾ ಈ ಬೆಣ್ಣೆ ಬೊಂಬೆಗೆ, ಜೀವ ಬಂದಿ ರುವ ಹಾಗಿದೆ... ನಟನೆ ಬಿಟ್ಟು ಉಳಿದಿದ್ದೆಲ್ಲಾ ತುಂಬಿದ ಕೊಡ...ದ್ವಾರಕೀಶ್ ನಿರ್ದೇಶಕನ ಪಾತ್ರಕ್ಕೆ ಜೀವಕಳೆ ನೀಡಿದ್ದಾರೆ. ಮತ್ತೊಮ್ಮೆ ಕನ್ನಡ ಕುಳ್ಳಂಗೇ ಜೈ ಹೋ... ವಿಶ್ವನಕಾಮಿಡಿ ನುಣುಪಾಗಿದೆ. ಕಿಶೋರಿ ಬಲ್ಲಾಳ್, ಸುಧಾ ನರಸಿಂಹರಾಜು ನಟನೆ ಹರಿತವಾಗಿದೆ. ಅವಿನಾಶ್, ಧರ್ಮ ಹಾಗೂ ರಾಮಕೃಷ್ಣ ಪಾತ್ರದ ಬಗ್ಗೆ 2-3-4 ಮಾತಿಲ್ಲ.

    ಗಿರಿಧರ್ ದೀವಾನ್ ಸಂಗೀತ ಸುಂದರ, ಸುಕೋಮಲ, ಸುಲಲಿತ, ಸಸ್ಯ ಶ್ಯಾಮಲಾ...ಗುಣಮಟ್ಟದ ರಾಮಚಂದ್ರಛಾಯಾಗ್ರಹಣ ಚಿಂದಿ ಚಿಂದಿ. ಕೇವಲ ಕಲಾತ್ಮಕ ಚಿತ್ರಗಳಿಗಷ್ಟೇ ಅಲ್ಲ, ಈ ಕ್ಯಾಮೆರಾ ಎಲ್ಲಕ್ಕೂ ಒಗ್ಗುತ್ತದೆ ಎಂಬುದನ್ನು ರಾಮಣ್ಣ ನಿರೂಪಿಸಿದ್ದಾರೆ. ಸಂಭಾಷಣೆಯಲ್ಲಿ ಕೆಲವೊಂದು ಇಷ್ಟವಾಗುತ್ತೆ-ಕಚಗುಳಿ ಕೀಚಕ, ಬಾಡಿ-ಬಾಡಿಗೆ... ಇನ್ನಷ್ಟು ಪಳಗಿದರೆ ಹರೀಶ್ ನಿರ್ದೇಶನ ವೃತ್ತಿಯಲ್ಲಿ ಮುಂದುವರಿಯಬಹುದು. ಅದೇ ರೀತಿ ಕತೆ ಆಯ್ಕೆಯಲ್ಲೂ ಕೊಂಚ ಹೊಸ ಹೊಳಪಿನತ್ತ ಮುಖ ಮಾಡಿದರೆ...

    Sunday, June 7, 2009, 12:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X