Don't Miss!
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಲುವಿನ ಹಾದಿಗೆ ಪ್ರೀತಿಯದೊಂದು ‘ಆದಿ’
- ಮಹಾಂತೇಶ ಬಹಾದುಲೆ
ಚಿತ್ರದಲ್ಲಿ ಬರುವ ಪಾತ್ರಗಳು ಹಾಗೂ ಸನ್ನಿವೇಶಗಳು ಕಾಲ್ಪನಿಕವಾದರೂ, ಇಲ್ಲಿಯ ಬಹುತೇಕ ಸಂದರ್ಭಗಳು ಎಲ್ಲರ ಬದುಕಿನಲ್ಲಿ ಇರುವಂಥವೆ ಎಂಬುದು ವಾಸ್ತವ. ಒಳ್ಳೆಯ ಸಂದೇಶ ಇಟ್ಟುಕೊಂಡೇ ಹೆಣೆಯಲಾದ ಸದಭಿರುಚಿಯ ಚಿತ್ರ ಇದು ಎಂದು ಅಳುಕಿಲ್ಲದೇ ಹೇಳಬಹುದು.
ತುಂಬಿದ ಕುಟುಂಬದಲ್ಲೊಬ್ಬ ದಂಡ ಪಿಂಡ(ಆದಿತ್ಯ). ನೌಕರಿಗಾಗಿ ಅವನ ಗಿರಕಿ. ಚಿತ್ರದ ಕಥೆ ಸುತ್ತುವುದು ಸೋಮಾರಿಯಲ್ಲದ ಇಂಥ ಅಲೆಮಾರಿಯ ಸುತ್ತ. ಬದುಕಿನ ಇಂಥ ಹುಡುಕಾಟದಲ್ಲೇ ಇವನಿಗೆ ಹುಡುಗಾಟದ ಹುಡುಗಿ(ರಮ್ಯ)ಯಾಬ್ಬಳ ತೊಡಕು. ಇವರಿಬ್ಬರ ಪ್ರೇಮಾಂಕುರಕ್ಕೆ ನೆರವಾಗಲು ಬಂದೊದಗುವ ಸನ್ನಿವೇಶಗಳು. ಈ ಪ್ರೇಮ ಪರೀಕ್ಷೆಗೆ ಕೆಲವು ವಿಘ್ನಗಳು. ಕೊನೆಗೆ ನಿಜವಾದ ಪ್ರೇಮ ಗೆಲ್ಲುತ್ತೊ, ಇಲ್ಲವೋ ಎಂಬುದು ಕ್ಲೈಮ್ಯಾಕ್ಸ್.
ಇಂಥ ಹುಡುಗನ ತಂದೆ(ಶ್ರೀನಿವಾಸ ಮೂರ್ತಿ) ಮಗನ ಬಗ್ಗೆ ಅಂತರಂಗದಲ್ಲಿ ಪ್ರೀತಿ ಇಟ್ಟುಕೊಂಡು ಅವನನ್ನು ಬೈಯ್ದು, ಹೀಯಾಳಿಸಿ ದಾರಿಗೆ ತರುವ ಸನ್ನಿವೇಶಗಳು ಅನೇಕರ ಮನೆಯಲ್ಲಿ ನಡೆಯುವ ಘಟನೆಗಳಷ್ಟು ಸಹಜವಾಗಿ ಮೂಡಿಬಂದಿವೆ. ‘ಗಂಡನಾದವನು ಕೇವಲ ಗಳಿಸುವ ತಾಕತ್ತಿದ್ದರೆ ಸಾಲದು, ಹೆಂಡತಿಯನ್ನು ರಕ್ಷಿಸುವ ಗುಂಡಿಗೆಯೂ ಬೇಕು’ ಎಂಬಂಥ ಮಾತುಗಳು ಸಂಭಾಷಣೆಯ ತೂಕ ಹೆಚ್ಚಿಸಿವೆ. ನಾಯಕನ ಹುಡುಗಾಟ, ನಾಯಕಿಯ ಕೊಬ್ಬು ಸಹನೀಯ. ಒಂದೆರಡು ನವಿರು ಹಾಸ್ಯಗಳು ಸೊಗಸು ಎನಿಸುತ್ತವೆ. ಖಳನಾಯಕನ ಪಾತ್ರಕ್ಕೆ ಶೋಭರಾಜ್ ಶೋಭೆ ತಂದಿದ್ದಾರೆ. ಅಭಿನಯ ಹಾಗೂ ನೋಟದಲ್ಲೂ ಮಿಂಚುತ್ತಾರೆ.
ಸಿನಿಮಾ ಚಿತ್ರೀಕರಣ ಬೆಂಗಳೂರು ಹಾಗೂ ಮೈಸೂರಿಗೇ ಸೀಮಿತವಾಗಿದ್ದರೂ, ಇದರ ಹಾಡುಗಳೆಲ್ಲ ಶೂಟ್ ಮಾಡಿದ್ದು ದೂರದ ಮಲೇಶಿಯಾದಲ್ಲಿ. ಕಣ್ಣುಗಳು ತಂಪಾಗುವಂತೆ ಸುಂದರ ತಾಣಗಳನ್ನು ಸೆರೆ ಹಿಡಿಯಲಾಗಿದೆ. ಒಂದೆರಡು ಹಾಡುಗಳಲ್ಲಿ ಸಂಗೀತ ಮಧುರವಾಗಿದೆ. ಸಂಭಾಷಣೆಗಳು ಹಿತಮಿತವಾಗಿವೆ.
ಆದರೆ ಕಥೆಯಲ್ಲಿ ಅಂಥ ಯಾವ ಏರಿಳಿತಗಳಿಲ್ಲವೋ ಅಥವಾ ಅದು ನಿರೂಪಣೆಯಲ್ಲಿರುವ ಲೋಪವೋ ಎಂಬುದನ್ನು ಪ್ರೇಕ್ಷಕರೇ ನಿರ್ಧರಿಸಲಿ. ನೋಡುಗರನ್ನು ನಿಬ್ಬೆರಗಾಗಿಸುವಂಥ ದೃಶ್ಯಗಳು ಇಲ್ಲದೇ ಹೋದರೂ, ಕೊನೆಗೆ ಕಾತರ ಕಾಯ್ದುಕೊಂಡು ಹೋಗುವ ಶೈಲಿಯನ್ನಾದರೂ ಅನುಸರಿಸಬಹುದಿತ್ತು.
ನಾಯಕ ಆದಿತ್ಯನಿಗೆ ಇದು ಎರಡನೇ ಚಿತ್ರ. ಅವರ ಪ್ರತಿಭೆಯನ್ನು ಹೊರತರಲು ನಿರ್ದೇಶಕ ಎಂ.ಎಸ್.ರಮೇಶ್ ಪ್ರಯತ್ನಿಸಿದ್ದಾರೆ. ಸೆಣಸಾಟದ ದೃಶ್ಯಗಳಲ್ಲಿ ಆದಿ ಸೈ ಎನಿಸಿಕೊಳ್ಳುತ್ತಾರೆ. ನಾಯಕಿ ರಮ್ಯಳ ಅಭಿನಯಕ್ಕೆ ಇನ್ನೂ ಪ್ರಬುದ್ಧತೆ ಬರಬೇಕಿದೆ. ಶ್ರೀನಿವಾಸ ಮೂರ್ತಿ ಅವರ ಜತೆ ಸುಂದರ್ರಾಜ್, ರಂಗಾಯಣ ರಘು, ಸತ್ಯಜಿತ್, ಅವಿನಾಶ್ ಸೇರಿದಂತೆ ಅನೇಕ ಫೋಷಕ ಕಲಾವಿದರನ್ನು ಒಟ್ಟಿಗೆ ನೋಡಬಹುದು.
ಪ್ರೀತಿಯಲ್ಲಿ ಕೇವಲ ಪ್ರೇಮದ ಹುಡುಗಾಟವಷ್ಟೇ ಅಲ್ಲ. ಬದುಕಿನ ಹುಡುಕಾಟವೂ ಇದೆ ಎಂಬುದನ್ನು ನಿರೂಪಿಸಲು ನಿರ್ಮಾಪಕರಾದ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ಸಫಲ ಯತ್ನ ಮಾಡಿದ್ದಾರೆ.
(ಸ್ನೇಹ ಸೇತು : ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್