twitter
    For Quick Alerts
    ALLOW NOTIFICATIONS  
    For Daily Alerts

    ಇದು ಅಪ್ಪಟ ಸ್ವಮೇಕ್‌ ಚಿತ್ರವೆಂದು ನಿರ್ದೇಶಕ, ನಾರಾಯಣ ಮಹಾಶಯ ತಮ್ಮ ಸೀರಿಯಲ್‌ ಮೇಲೆ ಪ್ರಮಾಣ ಮಾಡಿ ಹೇಳಿದ್ರೂ ಅವರ ಚಿತ್ರವೇ ಕಳ್ಳತನವನ್ನು ಸೋಧಾರ ಸಮೇತ ನಿರೂಪಿಸುತ್ತದೆ

    By Staff
    |

    ತೆಲುಗು, ತಮಿಳಿನಲ್ಲೂ ಇಂತಹ ದೃಶ್ಯಗಳಿದ್ದರೆ ನಿರ್ದೇಶಕರ ತಪ್ಪಾ

    ಇದುವರೆಗೆ ಜಮೀನ್ದಾರನ ಜನ್ಮರಹಸ್ಯದ ಕೀರ್ತನೆಯನ್ನು ಆಲಿಸಿದ ನಿಮಗೆ ಕತೆಯಲ್ಲಿ ಹೊಸತನವಿಲ್ಲವೆಂಬುದು ಮೆದುಳಿಗೆ ಮುಟ್ಟಿರುತ್ತದೆ. ಬೆಟ್ಟಪ್ಪನನ್ನೇ ಹೋಲುವ ಪಾತ್ರವೊಂದನ್ನು ತೆಲುಗು ನಟ ಕೃಷ್ಣಂ ರಾಜು ಕೋಟಿ ವರ್ಷಗಳ ಹಿಂದೆಯೇ ಮಾಡಿದ ದಾಖಲೆ ಇದೆ. ತಮಿಳು ನಟ ಭಾರತೀರಾಜಾ ಕೂಡ ಇದಕ್ಕೆ ಸ್ಪರ್ಧೆ ನೀಡಬಲ್ಲ. ಇದೊಂದು ಅಪ್ಪಟ ಸ್ವಮೇಕ್‌ ಚಿತ್ರವೆಂದು ನಿರ್ದೇಶಕ ಮಹಾಶಯ ತಮ್ಮ ಸೀರಿಯಲ್‌ ಮೇಲೆ ಪ್ರಮಾಣ ಮಾಡಿ ಹೇಳಿದರೂ ಅವರ ಚಿತ್ರವೇ ಕಳ್ಳತನವನ್ನು ಸೋಧಾರ ಸಮೇತ ನಿರೂಪಿಸಬಲ್ಲುದು.

    ಹೆಂಗಸರ ಕರುಳನ್ನು ಬಗೆಯಲು ಮಗುವಿಗೆ ಎದೆಹಾಲು ಉಣಿಸಲು ಇಬ್ಬರೂ ತಾಯಂದಿರು ಪಡುವ ಪಾಡನ್ನು ತೋರಿಸಬಾರದಿತ್ತು. ಹಾಗೆಯೇ ಹಾವು ಕಡಿದಾಗ ಬ್ರಹ್ಮಚಾರಿಯಾಬ್ಬ ಕೆಂಡ ತುಳಿದರೆ ಪ್ರಾಣ ಬರುತ್ತದೆನ್ನುವ ನಂಬಿಕೆಯನ್ನು ಬಿತ್ತುವ ದೃಶ್ಯವೂ ಬೇಕಾಗಿರಲಿಲ್ಲ. ಆದರೂ ಇದು ಇಷ್ಟವಾಗುತ್ತದೆ. ವಿಷ್ಣು ಮೊದಲ ಕಾರಣವಾದರೆ, ಶ್ರೀನಿವಾಸ ಮೂರ್ತಿ ಎರಡನೇ ಕಾರಣ. ಬೆಟ್ಟಪ್ಪನಾಗಿ ವಿಷ್ಣು ತುಂಬಾ ದಿನ ನೆನಪಿನಲ್ಲಿ ಉಳಿಯಬಹುದು. ವಿಷ್ಣು ಅತ್ತಾಗ, ಅತ್ತು, ನಕ್ಕಾಗ ನಕ್ಕು ಖುಷಿಪಡುವ ಅಭಿಮಾನಿಗಳಿಗೆ ಅವರು ನಿರಾಸೆ ಮಡಿಲ್ಲ. ‘ ನಿಮಗೆ ಹೃದಯವಿಲ್ಲ, ಅಲ್ಲಿರೋದು ಕಗ್ಗಲ್ಲು’ ಎಂದು ಅನುಪ್ರಭಾಕರ್‌ ಹೇಳಿದಾಗ ಮೂಕವಾಗಿ ರೋಧಿಸುವ ದೃಶ್ಯವೊಂದೇ ವಿಷ್ಣು ಎಂಥ ಕಲಾವಿದ ಅನ್ನೋದನ್ನು ಸಾಬೀತುಪಡಿಸುತ್ತದೆ. ಆದರೆ ಮನುಷ್ಯರ ಕತ್ತು, ಕಾಲು ಮತ್ತು ಕೈಗಳನ್ನು ಸವತೆ ಕಾಯಿಯಷ್ಟು ಸಲೀಸಾಗಿ ಮುರಿಯುವುದು ಸಾಹಸಸಿಂಹನಿಗಷ್ಟೇ ಸಾಧ್ಯವೆಂದು ತಿಳಿದು ಮರೆತುಬಿಡಿ.

    ಶ್ರೀನಿವಾಸ್‌ ಮೂರ್ತಿ, ಭೇಷ್‌ !!

    ಚಿತ್ರದುದ್ದಕ್ಕೂ ಅಚ್ಚರಿ ಮೂಡಿಸುತ್ತಾ ಹೋಗುವುದು ನಟ ಶ್ರೀನಿವಾಸ ಮೂರ್ತಿ. ಹರೆಯದಿಂದ ಮುಪ್ಪಾನ ಮುದುಕನವರೆಗೆ ಆಯಾವಯಸ್ಸಿಗೆ ಮೆದುಳು ಮತ್ತು ದೇಹವನ್ನು ಅವರು ಪ್ರಸ್ತುತಪಡಿಸಿದ ರೀತಿಯೇ ಅದ್ಭುತ. ಅವರಲ್ಲಿ ಈ ಮಟ್ಟದ ಕಲಾವಿದ ಇದ್ದಾನೆನ್ನೋದು ಗೊತ್ತಾಗಿದ್ದೇ ಈ ಚಿತ್ರದಿಂದ. ಕಂಗ್ರಾಟ್ಸ್‌ ಮೂರ್ತಿಜಿ !

    ಹೀಗೆ ಬಂದು ಹಾಗೆ ಹೋದರೂ ಅನುಪ್ರಭಾಕರ್‌ ಅಲ್ಲಲ್ಲೇ ಮನಸ್ಸಿನಲ್ಲಿ ಹೆಜ್ಜೆ ಮೂಡಿಸುತ್ತಾಳೆ. ಇಡೀ ಚಿತ್ರವನ್ನು ಎತ್ತಿ ಹಿಡಿಯುವುದು ಚಿತ್ರದ ಸಂಭಾಷಣೆ. ಮಾತು ನೀಡಿದ ನಾರಾಯಣ್‌ ಮೈಮರೆಸುತ್ತಾರೆ. ಆದರೆ ಇದೇ ಸಂಭಾಷಣಾ ಚತುರ, ದೊಡ್ಡಣ್ಣ ಮತ್ತು ಮುಖ್ಯಮಂತ್ರಿ ಚಂದ್ರು ಅವರ ಬಾಯಿಯಿಂದ ಕಕ್ಕಸ್ಸು ಜೋಕು ಹೇಳಿಸೋದು, ಮಾಡಿಸೋದು ಅವರ ಹುಟ್ಟು ಗುಣವೆನ್ನದೇ ದಾರಿಯಿಲ್ಲ. ಹಾಡುಗಳು ನೆನಪಿನಲ್ಲಿ ಉಳಿಯುವುದು ಭೋ ಕಷ್ಟ. ಅನು ಹಾಡೊಂದೇ ಬಹುಷಃ ಇಷ್ಟ. ಕೀರವಾಣಿ ಹಿನ್ನೆಲೆ ಸಂಗೀತ ಹೋಳಿ ಹಬ್ಬದ ಹಲಗಿ ಸದ್ದಿಗಿಂತ ಒಂದಿಂಚೂ ಭಿನ್ನವಾಗಿಲ್ಲ. ಮ್ಯಾಥ್ಯೂ ಫೋಟೋಗ್ರಫಿ ಕೆಲವೊಮ್ಮೆ ವಿಷ್ಣು ಹಣೆ, ಕೈಯನ್ನು ನುಂಗಿಹಾಕುತ್ತದೆ. ಏನೇ ಆದರೂ ವಿಷ್ಣು ಅಭಿಮಾನಿಗಳಿಗೆ ಮೃಷ್ಟಾನ್ನಭೋಜನವಂತೂ ಸಿಕ್ಕಂತಾಗಿದೆ. ಅಂದಹಾಗೆ ನಿರ್ದೇಶಕ ನಾರಾಯಣ್‌ ಇಲ್ಲಿ ಅಭಿನಯ ಕೌಶಲ್ಯ ತೋರುವ ಧೈರ್ಯ ಮಾಡಿಲ್ಲ. ಹೀಗಾಗಿ ಮನೆ ಮಂದಿಯೆಲ್ಲಾ ನಿರಾತಂಕವಾಗಿ ಚಿತ್ರವನ್ನು ನೋಡಬಹುದು.

    ನೋಡಿ ‘ ನಾರಾಯಣ, ನಾರಾಯಣ ಎಂದು ಮಾತ್ರ ಹೇಳಬೇಡಿ. ಏಕೆಂದರೆ, ನಿರ್ಮಾಪಕ ಮಂಜು ಈಗ ‘ಗಂಡುಗಲಿ ಮಂಜು’ ಆಗಿದ್ದಾರೆ. ಎಚ್ಚರಿಕೆ ’!

    (ವಿಜಯ ಕರ್ನಾಟಕ)

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 20:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X