ಹಳಸಲು ಕತೆ, ಜೀವವಿಲ್ಲದ ನಿರೂಪಣೆ, ಬೇಕಾರ್ ಸಂಕಲನ, ಬರಬಾದ್ ಸಂಗೀತ...
ಹೊಸತನ ಎಲ್ಲಿದೆ ?
ನಾಯಕ ನಿರುದ್ಯೋಗಿ. ಅದಕ್ಕಾಗಿಯೇ ಮುಂಗೋಪಿ. ಸಂದರ್ಶನ ಮಾಡುವವರನ್ನೇ ಎಕ್ಕಾ ಮಕ್ಕಾ ಒದೆಯುವುದು, ಒಂದು ರೂಪಾಯಿಗಾಗಿ ತೂಕದ ಯಂತ್ರವನ್ನೇ ಚಿಂದಿ ಮಾಡುವುದು ಅದಕ್ಕೆ ಪುರಾವೆ ನೀಡುತ್ತವೆ. ಈತನ ಅತಿ ಮುಗೋಪಿತನದಿಂದ ಮನೆವರೆಗೂ ಪೊಲೀಸರು ಬರುತ್ತಾರೆ. ಈತನ ತಂದೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆಗ ನಾಯಕ, ಯಾರು ಏನಾದರೂ ಸರಿ ತಾನು ಮತ್ರ ಚೆನ್ನಾಗಿರಬೇಕು ಎಂದು ಸಭ್ಯ ಮನುಷ್ಯನಾಗುತ್ತಾನೆ. ಹಾಗಂತ ತಾಯಿಗೆ ಮಾತುಕೊಡುತ್ತಾನೆ. ಹೆಂಡತಿಗೆ ರೌಡಿಯಾಬ್ಬ ಕೆನ್ನೆಗೆ ಹೊಡೆದರೂ, ಸೊಂಟ ಜಿಗುಟಿದರೂ ಸುಮ್ಮನಿದ್ದು ಬಿಡು ಎನ್ನುವಷ್ಟು ಸಂಭಾವಿತನಾಗುತ್ತಾನೆ. ಆತ ಮತ್ತೆ ಆ್ಯಂಗ್ರಿಮ್ಯಾನ್ ರೂಪ ತಾಳಿ ಏನು ಮಾಡುತ್ತಾನೆ ಎನ್ನುವುದು ರಹಸ್ಯವೇನೂ ಅಲ್ಲ.
ಇದರಲ್ಲಿ ಯಾವ ಹೊಸತನವಿದೆ ಎಂದು ನಿರ್ದೇಶಕನಿಗೆ ಬಿಟ್ಟರೆ ಬೇರಾರಿಗೂ ತಿಳಿಯುವ ಸಂಭವವಿಲ್ಲ. ತೆಲುಗಿಗೆ ಸರಿಹೊಂದುವ ಉದ್ದುದ್ದ ಸಂಭಾಷಣೆ ತಲೆ ಚಿಟ್ಟು ಹಿಡಿಸುತ್ತವೆ. ಕುತೂಹಲ ಹುಟ್ಟಿಸದ ಕತೆಗೆ ಸಂಕಲನಕಾರನ ಚಾಕಚಕ್ಯತೆಯೇ ಭಯಾನಕ ತಿರುವು ತಂದಿದೆ. ಹೀಗೆ ನಡೆಯಲು ಸಾಧ್ಯವೇ ಎನ್ನುವ ಘಟನೆಗಳು ಎಲ್ಲಿಗೂ ತಟ್ಟುವುದಿಲ್ಲ. ಹಿನ್ನೆಲೆ ಸಂಗೀತ ಕಂಪೆನಿ ನಾಟಕದ ಪಡಿಯಚ್ಚು. ಬರೆದವರಿಗೆ ಮಾತ್ರ ಹಾಡುಗಳು ನೆನಪಿನಲ್ಲಿ ಉಳಿದಿರಬಹುದು. ಹೊಡೆದಾಟದಲ್ಲಿ ವೆಂಕಟೇಶ್ ಅಪ್ಪಟ ಧೀರ. ಅಭಿನಯದಲ್ಲಿ ಪೊಗದಸ್ತಾದ ರಾಕ್. ಬರೀ ಬಾಯಿ ಮಾತ್ರವಲ್ಲ, ದೇಹವನ್ನೂ ಅಭಿನಯದಲ್ಲಿ ಬಳಸಬಹುದು ಎಂಬ ಕಿವಿ ಮಾತನ್ನು ಯಾರೂ ಅವರಿಗೆ ಹೇಳಿದಂತಿಲ್ಲ. ಸಾಂಘವಿ, ಜಯಂತಿ, ರಾಜೇಶ್ , ಮೋಹನ್ ಹೆಸರಿಗೆ ಇದ್ದಾರೆ.
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











