ಗಣೇಶ್, ಎಸ್ ನಾರಾಯಣ್ ಚಿತ್ರ 'ಶೈಲೂ' ವಿಮರ್ಶೆ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಚಿತ್ರ 'ಶೈಲೂ' ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ತಮಿಳು ಚಿತ್ರ 'ಮೈನಾ' ರೀಮೇಕ್, ಕನ್ನಡದ ಈ 'ಶೈಲೂ'. ಚಿತ್ರದ ಶೀರ್ಷಿಕೆ ಶೈಲೂ ಅಡಿಬರಹ 'ಇದು ಪ್ರೀತಿಯ ಇನಿದನಿ'. ಅಡಿಬರಹಕ್ಕೆ ನ್ಯಾಯ ಸಲ್ಲಿಸುವಂತಹ ಕಥೆ-ಚಿತ್ರಕಥೆ ಹಾಗೂ ನಿರೂಪಣೆಯನ್ನು ಹೊಂದಿರುವ ಚಿತ್ರ ಶೈಲೂ.
ಶೈಲೂ ಕಥೆ ಇದು. ಭೂತಯ್ಯ ಎಂಬ ಸಾಕ್ಷಾತ್ ಪ್ರತ್ಯಕ್ಷ ಭೂತ 'ಪದಕ್ಕಿಂತ'ಲೂ ಭಯಂಕರವಾದ ಅಪ್ಪನ ಏಕೈಕ ಮಗ ಮಂಜ. ತಿಂಗಳಿಗೊಮ್ಮೆ ಸ್ಕೂಲಿಗೆ ಹೋಗುತ್ತಿದ್ದ ಮಂಜ, ತನ್ನ ಕಣ್ಮುಂದೆ ನಡೆಯುವ ಯಾವುದೋ ಅಮ್ಮ, ಚಿಕ್ಕ ಮಗಳ ಬಡತನ, ಅಸಹಾಯಕತೆಗೆ ಕರಗಿ ಅವರ ಸಹಾಯಕ್ಕೆ ನಿಂತು ಪೂರ್ತಿಯಾಗಿ ಸ್ಕೂಲನ್ನೇ ಬಿಟ್ಟುಬಿಡುತ್ತಾನೆ. ತನ್ನ ಅನಾಥ ಅಜ್ಜಿಯ ಮನೆಯಲ್ಲಿ ಅವರಿಗೆ ಆಶ್ರಯ ಕೊಡಿಸುತ್ತಾನೆ. ದಿಕ್ಕು-ದೆಸೆ ಇಲ್ಲದ ಅವರಿಗೆ ಸರ್ವಸ್ವವನ್ನೂ ಧಾರೆ ಎರೆದು ಜೊತೆಗೆ ಶೈಲೂವನ್ನು ಮನಸ್ಸಿನಲ್ಲಿ ತುಂಬಿಸಿಕೊಳ್ಳುತ್ತಾನೆ. ಅದಕ್ಕೆ ಶೈಲೂ ಕೂಡ ಸ್ಪಂದಿಸಿ ಒಬ್ಬರಿಗೊಬ್ಬರು, ಬೇರೊಬ್ಬರಿಗೆ ಪ್ರವೇಶವೇ ಇಲ್ಲ ಅನ್ನವಂತಿರುತ್ತಾರೆ.
ಶೈಲೂ ಚೆನ್ನಾಗಿ ಓದಿರುತ್ತಾಳೆ ಅನ್ನುವುದಕ್ಕಿಂತ ಮಂಜ ಓದಿಸಿರುತ್ತಾನೆ ಅನ್ನುವದೇ ಸೂಕ್ತ. ಆದರೂ ಆಕೆ ಮಂಜನನ್ನೇ ಇಷ್ಟಪಡುತ್ತಾಳೆ. ಆದರೆ ಆಕೆಯ ತಾಯಿ 'ಮುನಿಯಮ್ಮ' ಹೆಸರಿಗೂ ಮೀರಿ ಮಂಜನ ಮೇಲೆ ಮುನಿಸಿಕೊಳ್ಳುತ್ತಾಳೆ. ಗತಿಯಿಲ್ಲದಿರುವಾಗ ಆಶ್ರಯ ನೀಡಿದ ಮಂಜನ ಉಪಕಾರವನ್ನೇ ಮರೆತು ಇವರಿಬ್ಬರ ಪ್ರೀತಿಗೆ ವಿಲನ್ ಆಗಿಬಿಡುತ್ತಾಳೆ. ಓದಿರುವ ತನ್ನ ಮಗಳಿಗೆ ಅವಳಂತೆ ಓದಿರುವ ಸಾಹುಕಾರನ ಮಗನನ್ನು ಮದುವೆ ಮಾಡುವ ಕನಸು ಕಟ್ಟಿ ಇವರಿಬ್ಬರನ್ನೂ ಬೇರೆ ಮಾಡುತ್ತಾಳೆ.
ಶೈಲೂ ತಾಯಿಯ ಕೊಲೆಯ ಪ್ರಯತ್ನದಲ್ಲಿ ಜೈಲು ಸೇರುವ ನಾಯಕ ಅಲ್ಲಿ ಜೈಲರ್ ಹಾಗೂ ಪೊಲೀಸ್ ಪೇದೆಯ ಜೀವ ಉಳಿಸಿ ಅವರ ಪ್ರೀತಿಗೆ ಪಾತ್ರನಾಗುತ್ತಾನೆ. ಅವರಿಬ್ಬರೂ ಸೇರಿ ಮಂಜನಿಗೆ ಜಾಮೀನು ಕೊಡಿಸಿ ಇವರಿಬ್ಬರ ಗಾಢ, ನಿಷ್ಕಲ್ಮಶ ಪ್ರೇಮಕ್ಕೆ ಮದುವೆಯೆಂಬ ಹೆಸರಿನ ಮೂಲಕ ಸಹಾಯ ಮಾಡಲು ನಿರ್ಧರಿಸುತ್ತಾರೆ. ಎಲ್ಲವೂ ಸುಖಾಂತ್ಯವಾಗುತ್ತದೆ ಎನ್ನುವಾಗ ಇನ್ನೇನೋ ಆಗುತ್ತದೆ. ಜನರು ಉಸಿರು ಬಿಗಿಹಿಡಿದು ನೋಡಬಹುದಾದ ಚಿತ್ರದ 'ಕ್ಲೈಮ್ಯಾಕ್ಸ್' ಅನ್ನು ತೆರೆಯ ಮೇಲೆ ನೋಡಿ ಅನುಭವಿಸಿ. ವಿಮರ್ಶೆ ಮುಂದಿನ ಪುಟದಲ್ಲಿ ಮುಂದುವರಿದಿದೆ...


Click it and Unblock the Notifications











