ವಿಷ್ಣು ಮತ್ತು ಸುದೀಪ್ ಅಭಿಮಾನಿಗಳಿಗೆ ಪಂಚಕಜ್ಜಾಯ
ವಿಷ್ಣುವರ್ಧನ ಚಿತ್ರದಲ್ಲಿ ಸುದೀಪ್ಗೆ ಕಳ್ಳನ ಪಾತ್ರವಂತೆ! ಹೀಗೊಂದು ಸುದ್ದಿ ಅದು ಹೇಗೋ ಗಾಂಧಿನಗರದಿಂದ ರಾಮನಗರದವರೆಗೂ ಹಬ್ಬಿಬಿಟ್ಟಿದೆ. ಅದಕ್ಕೆ ಸರಿಯಾಗಿ ವಿಷ್ಣು ಫ್ಯಾಮಿಲಿ ಅಲ್ಲೊಮ್ಮೆ ಇಲ್ಲೊಮ್ಮೆ ಕೆಮ್ಮಲು ಶುರುಮಾಡಿದೆ. ಈ ಮಧ್ಯೆ ಒಂದಷ್ಟು ಉದ್ಯಮದ ಕಿಡಿಗೇಡಿಗಳು ಯಾರದ್ದೋ ಸುದ್ದಿಗೆ ಸುಣ್ಣಬಣ್ಣ ಬಳಿದು ವಿಷ್ಣುವರ್ಧನ ಚಿತ್ರಕ್ಕೆ ತಡೆಯೊಡ್ಡುವ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದಾರೆ!
ಈ ಎಲ್ಲ ಊಹಾಪೋಹಗಳಿಗೂ ಈಗ ತೆರೆಬಿದ್ದಿದೆ. ಸುದೀಪ್ ಅಭಿನಯದ ವಿಷ್ಣುವರ್ಧನ ಚಿತ್ರದಲ್ಲಿ ವಿಷ್ಣುಗೆ ಅವಮಾನವಾಗುವ ಯಾವುದೇ ದೃಶ್ಯಗಳು ಇಲ್ಲ ಎಂಬುದನ್ನು ಮನಗಂಡ ಅಭಿಮಾನಿಗಳಲ್ಲಿ ಹರ್ಷೋದ್ಗಾರ ಮೂಡಿದೆ. ಹಾಗಾದರೆ ಸಿನಿಮಾ ಹೇಗಿದೆ? ಇದಕ್ಕೆ ಉತ್ತರಿಸುವ ಮೊದಲು ಸಿನಿಮಾ ಮೇಕಿಂಗ್ ಬಗ್ಗೆ ಹೇಳಲೇಬೇಕು.
ಸುದೀಪ್ ಎಲ್ಲಾ ಕಡೆ ತಮ್ಮ ಕೈಚಳಕ ತೋರಿದ್ದಾರೆ. ಸಿನಿಮಾ ಕೇವಲ ಸುದೀಪ್ ಅಭಿಮಾನಿಗಳಿಗಷ್ಟೇ ಹೇಳಿ ಮಾಡಿಸಿದ ಹಾಗಿಲ್ಲ. ಬದಲಾಗಿ ವಿಷ್ಣುವರ್ಧನ್ ಆರಾಧಕರಿಗೂ ಮಾಡಿ ಹೇಳಿಸಿದಂತಿದೆ. ಎಲ್ಲಾ ಹಂತದಲ್ಲೂ ರಿಚ್ನೆಸ್ ಕಾಪಾಡಿಕೊಂಡು ಹೋಗುವಲ್ಲಿ ನಿರ್ಮಾಪಕ ದ್ವಾರಕೀಶ್ ಗೆದ್ದಿದ್ದಾರೆ!
ಇನ್ನು ಕಥೆ. ಒಂದು ಮೊಬೈಲ್ ಫೋನ್ನಿಂದ ಸಿನಿಮಾ ಆರಂಭವಾಗುತ್ತದೆ. ಅದು ಮಿಸ್ ಆಗುವುದಷ್ಟೇ ಅಲ್ಲ, ಅದು ನಾಯಕನ ಕೈ ಸೇರುತ್ತದೆ. ಅಲ್ಲಿಂದ ಆಟ ಶುರು.
ರೋಗಿ ಬಯಸಿದ್ದೂ ಅದನ್ನೇ, ವೈದ್ಯ ಸಜೆಸ್ಟ್ ಮಾಡಿದ್ದೂ ಅದನ್ನೇ ಎನ್ನುವ ಹಾಗೆ ವಿಷ್ಣುವರ್ಧನ ಡಾಕ್ಟರ್ ರೂಪ ತಾಳುತ್ತಾನೆ. ಇಲ್ಲಿ ಅವನಿಗೆ ಯಾರೂ ಡಾಕ್ಟರೇಟ್ ಕೊಟ್ಟು ಗೌರವಿಸುವುದಿಲ್ಲ. ಆತ ಯಾವ ಮೆಡಿಕಲ್ ಕಾಲೇಜಿಗೂ ಹೋಗಿರುವುದಿಲ್ಲ. ಬಟ್ ಒಬ್ಬ ಹುಡುಗಿಗೋಸ್ಕರ ಕೋಟ್ ಹಾಕುತ್ತಾನೆ. ಸ್ಟೆತಾಸ್ಕೋಪ್ ಹಿಡಿಯುತ್ತಾನೆ. ಜೊತೆಗೆ ಫೋನ್ ಕಳೆದುಕೊಂಡ ರೌಡಿಗೆ ಆಟ ಆಡಿಸಲು ಶುರುಮಾಡುತ್ತಾನೆ!
ಡಾಕ್ಟರ್, ಚೀಟಿಂಗ್, ಹುಡುಗಿ, ಲವ್ವು ಎಂದಾಗ ನಿಮಗೆ ಸಂಜಯ್ ದತ್ ನೆನಪಾಗಬಹುದು. ಮುನ್ನಾ ಬಾಯಿ ಎಂಬಿಬಿಎಸ್ ಸಿನಿಮಾ ದೃಶ್ಯಗಳು ಪಾಸ್ ಆಗಬಹುದು. ಆದರೆ, ವಿಷ್ಣುವರ್ಧನ ಪೂರ್ಣ ಕಥೆಗೂ ಮುನ್ನಾಬಾಯಿಗೂ ಏನೇನೂ ಸಂಬಂಧವಿಲ್ಲ! ನಿರ್ದೇಶಕ ಪಿ. ಕುಮಾರ್ ಪಕ್ಕಾ ಕಮರ್ಷಿಯಲ್ ಸೂತ್ರಕ್ಕೆ ಮೊರೆಹೋಗಿದ್ದಾರೆ.
ಹಾಡು ಪ್ಲಸ್ ಡ್ಯಾನ್ಸು ಪ್ಲಸ್ ಫೈಟು ಪ್ಲಸ್ ಅಲ್ಲಲ್ಲಿ ತಿರುಗಾ ಮುರುಗಾ ತಿರುವು ಪ್ಲಸ್ ಪ್ಲಸ್ ಪ್ಲಸ್ ಈಸ್ ಇಕ್ವಲ್ಸ್ ಟು ವಿಷ್ಣುವರ್ಧನ. ಸುದೀಪ್ ಎಂಬ ಸುಂಟರಗಾಳಿ ಇಟ್ಟುಕೊಂಡು ಏನೆಲ್ಲಾ ಸಿನಿ ಪ್ರವಾಹ ಹರಿಸಬಹುದೋ ಅವೆಲ್ಲವನ್ನೂ ಮಾಡಿ ಮುಗಿಸಿದ್ದಾರೆ ಕುಮಾರ್.


Click it and Unblock the Notifications











