ಪ್ರೇಮದ ಸೂಕ್ಷ್ಮತೆ, ಮನೋಜ್ಞತೆಯನ್ನು ಹಿಡಿದಿಡುವ ಸಣ್ಣ ಪ್ರಯತ್ನವನ್ನೂ ನಿರ್ದೇಶಕ ಮಲ್ಲೇಶ್ ಮಾಡಿಲ್ಲ. ಎಲ್ಲೋ ಇಷ್ಟವಾಗೋ ಒಂದೆರಡು ದೃಶ್ಯಗಳಿಗೆ ‘ನೀನಂದ್ರೆ ಇಷ್ಟ’ ಅನ್ನೋದು ಬೇಜಾನ್ ಕಷ್ಟ !
ಹೊಡೆದಾಟ, ಸೆಂಟಿಮೆಂಟು ಎರಡರಲ್ಲೂ ಹರೀಶ್ರಾಜ್ ಮಿಂಚಿದ್ದಾರೆ. ಆದರೆ ಕಮರ್ಶಿಯಲ್ ಚಿತ್ರದ ಹೀರೋ ಆಗುವ ವ್ಯಕ್ತಿತ್ವ ಈ ಹುಡುಗನಿಗೆ ಕೊಂಚ ಕಡಿಮೆ. ಇಂತಹ ಕೆಲಸಕ್ಕೆ ಬಾರದ ಪಾತ್ರದಲ್ಲಿಯೂ ನಟಿಸಬಲ್ಲೆ ಎಂದು ದರ್ಶನ್ ತೂಗುದೀಪ ತೋರಿಸಿಕೊಟ್ಟಿದ್ದಾರೆ.
ಮತ್ತೊಮ್ಮೆ ಪೂರ್ಣಪ್ರಮಾಣದ ನಾಯಕಿಯಾಗಿರುವ ಅಖಿಲಾ ಸುಮ್ಮಸುಮ್ಮನೆ ಅತ್ತಿದ್ದಾಳೆ. ಸುಮ್ಮನೆ ನಕ್ಕಿದ್ದಾಳೆ. ಅಭಿನಯದ ಮಟ್ಟಿಗೆ ಪರವಾಗಿಲ್ಲ ಅಷ್ಟೆ . ಹರೀಶ್ ರಾಜ್ಗೆ ಅಕ್ಕನಂತೆ ಕಾಣುವ ಅಖಿಲಾ ಅದ್ಯಾವ ಕೋನದಲ್ಲಿ ನಿರ್ದೇಕರಿಗೆ ‘ಟೀನ್ ಏಜ್’ ಹುಡುಗಿಯಂತೆ ಕಂಡಳೊ?
ಮಾಡೆಲಿಂಗ್ ಮತ್ತು ಅಭಿನಯದ ನಡುವಿನ ವ್ಯತ್ಯಾಸ ಮತ್ತೊಬ್ಬ ನಾಯಕಿ ಮಾಳವಿಕಾಗೆ ಗೊತ್ತಿಲ್ಲ. ಫೋಟೋಗ್ರಫಿ, ಸಂಕಲನ ಮತ್ತು ಹೊಡೆದಾಟ ಮೂರೂ ವೇಸ್ಟು. ‘ನಮ್ ಮನೇಲಿ ನಿಂಗೆ ಕನಸು ಬಿತ್ತಾ?’ ಇದು ಸಂಭಾಷಣೆಯ ಸಾಲು.
ಮನೆ ಯಾರದೆಂದು ವಿಳಾಸ ಸಿಕ್ಕ ನಂತರ ಕನಸು ಬೀಳುತ್ತೆ ಅನ್ನುವ ಹೊಸ ಸಂಶೋಧನೆ ಮಾಡಿದ್ದಾರೆ ಮಾತು ಬರೆದವರು. ಭಾರದ್ವಾಜ್ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಬಿ.ಜಯಶ್ರೀ ಹಾಡುವ ಕೊನೆಯ ಹಾಡಿನಲ್ಲಿ ಬಳಸಿದ ರೊಮ್ಯಾಂಟಿಕ್ ಸಂಕೇತಗಳು ಅಚ್ಚರಿ ಹುಟ್ಟಿಸುವಷ್ಟು ಸೊಗಸಾಗಿವೆ. ಆದರೆ ಎಲ್ಲೋ ಇಷ್ಟವಾಗುವ ಒಂದೆರಡು ದೃಶ್ಯಗಳಿಗಾಗಿ ‘ನೀನಂದ್ರೆ ಇಷ್ಟ’ ಅನ್ನುವುದು ಬೇಜಾನ್ ಕಷ್ಟ ಕಣಪ್ಪೋ !
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











