ಮಿಸ್ ಮಾಡದಿರಿ, ಒಳ್ಳೆ ಚಿತ್ರಕ್ಕೆ ‘ಸೈನೈಡ್’ ಮಾದರಿ
ಸಾಹಿತ್ಯ ಲೋಕದ ಚಂದ್ರಶೇಖರ ಕಂಬಾರ, ಗಿರೀಶ್ ಕಾಸರವಳ್ಳಿ, ಯು.ಆರ್.ಅನಂತಮೂರ್ತಿ ಅವರಿಂದ ಹಿಡಿದು ಜನಸಾಮಾನ್ಯರ ವರೆಗೂ ‘ಸೈನೈಡ್’ ಪ್ರಶಂಸೆಗೆ ಪಾತ್ರವಾಗಿದೆ. ಚಿತ್ರದ ವಿಶೇಷತೆಗಳತ್ತ ಒಂದು ನೋಟ.
- ಚೇತನ್ ನಾಡಿಗೇರ್
ಇಲ್ಲಿ ಯಾವುದೇ ನಾಯಕನ ಅನಗತ್ಯ ವೈಭವೀಕರಣ ಇಲ್ಲ, ಕಿವಿಗಡಚಿಕ್ಕುವ ಶಬ್ದವಿಲ್ಲ, ವಾಕರಿಕೆ ತರುವ ಹೊಡೆದಾಟಗಳಿಲ್ಲ, ಕರ್ಕಶ ಹಾಡುಗಳಿಲ್ಲ, ಅಳು ತರಿಸುವ ಕಾಮಿಡಿ ಅಥವಾ ನಗು ತರಿಸುವ ಸೆಂಟಿಮೆಂಟ್ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ಸ್ಟಾರ್ಗಳಿಲ್ಲ. ಹಾಗಂತ ಇದೊಂದು ಕಲಾತ್ಮಕ ಚಿತ್ರವಲ್ಲ. ಇದು ಕಮಿರ್ಷಿಯಲ್ ಚಿತ್ರವೂ ಅಲ್ಲ ಅನ್ನುವಂತಿಲ್ಲ. ಅದು ಸೈನೈಡ್- ದಿ ಲಾಸ್ಟ್ ವೆಪನ್.
ಸುಮಾರು 15ವರ್ಷಗಳ ಹಿಂದೆ ಸೈನೈಡ್ ಎಂದರೇನು ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಆದರೆ ಈಗ ಅಂಥ ಸಮಸ್ಯೆ ಏನಿಲ್ಲ. ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಿ, ತಲೆಮರೆಸಿಕೊಂಡು ಬೆಂಗಳೂರಿಗೆ ಬಂದಿದ್ದ ಶಿವರಸನ್, ಶುಭ ಮತು ಇತರರು ಅದೇ ಸೈನೈಡ್ ತಿಂದು ಸತ್ತುಹೋದರು ಎಂಬುದು ಎಲ್ಲರಿಗೂ ಗೊತ್ತು. ಏಕೆಂದರೆ ಪೊಲೀಸರು ಅವರನ್ನು ಬೆಂಬಿಡದೆ ಬೇಟೆಯಾಡುತ್ತಿದ್ದರು. ಅವರಿದ್ದ ಮನೆಯನ್ನು ಸುತ್ತುವರಿದಿದ್ದರು ಎಂಬುದೂ ಗೊತ್ತು.
ಇನ್ನೇನು ಶಿವರಸನ್ ತಂಡವನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಅವರೆಲ್ಲರನ್ನು ಸೈನೈಡ್ ಆಹುತಿ ತೆಗೆದುಕೊಂಡಿತ್ತು ಎನ್ನುವ ವಿಷಯವೂ ಗೊತ್ತು. ಗೊತ್ತಿರದ ವಿಷಯವೆಂದರೆ ಸಾಯುವ ಹಂತದಲ್ಲಿ ಅವರು ಎಂಥ ಮಾನಸಿಕ ಸ್ಥಿತಿಯಲ್ಲಿದ್ದರು ಎಂಬುದು. ಗೊತ್ತಿಲ್ಲದ ಸುದ್ದಿಯೆಂದರೆ ಅವರಿಗೆ ಆಶ್ರಯ ಕೊಟ್ಟವರು ಎಂಥ ಯಾತನೆ ಅನುಭವಿಸಿದರು ಎಂಬುದು. ಇಂಥ ಸೂಕ್ಷ್ಮಗಳನ್ನು ನಿರ್ದೇಶಕ ಎ.ಎಂ.ಆರ್.ರಮೇಶ್ ‘ಸೈನೈಡ್’ನಲ್ಲಿ ಕಟ್ಟಿಕೊಟ್ಟಿದ್ದಾರೆ.
ಹಾಗೆ ನೋಡಿದರೆ ಈ ಕತೆ ಇಷ್ಟರಲ್ಲಾಗಲೇ ಜನಜನಿತ. ಶಿವರಸನ್, ಶುಭಾ ಮತ್ತು ತಂಡ ಬೆಂಗಳೂರಿಗೆ ಬರುವುದರಿಂದ ಚಿತ್ರ ಪ್ರಾರಂಭವಾಗುತ್ತದೆ. ಅವರ ಸಾವಿನೊಂದಿಗೆ ಮುಗಿಯುತ್ತದೆ. ಇವಿಷ್ಟನ್ನೇ ರಮೇಶ್ ಎರಡು ಗಂಟೆಗಳ ಕಾಲ ನಿರೂಪಿಸಿದ್ದಾರೆ.
ಸಾಮಾನ್ಯವಾಗಿ ಇಂಥ ಚಿತ್ರಗಳು ತೀರಾ ಸಾಕ್ಷ್ಯ ಚಿತ್ರಗಳಾಗಿ ಬಿಡುವ ಸಾಧ್ಯತೆಗಳಿವೆ. ಇಲ್ಲ ತೀರಾ ಕಮರ್ಷಿಯಲ್ ಚಿತ್ರಗಳಾಗಿ ಬಿಡುತ್ತವೆ. ಇದ್ಯಾವುದೂ ಆಗದಂತೆ ರಮೇಶ್ ನೋಡಿಕೊಂಡಿದ್ದಾರೆ. ಮತ್ತು ಅದರಲ್ಲಿ ಸಂಪೂರ್ಣವಾಗಿ ಗೆದ್ದಿದ್ದಾರೆ. ಒಂದು ನಿಮಿಷವೂ ಬೋರಾಗದಂತೆ ನಿರೂಪಿಸಿದ್ದಾರೆ. ಮಧ್ಯೆ ಮಧ್ಯೆ ಪಾತ್ರಗಳ ಮುಗ್ಧತೆಯಿಂದ ರಂಜಿಸುತ್ತಾ ಹೋಗುತ್ತಾರೆ. ಆ ಮೂಲಕ ಇಂಥ ಚಿತ್ರಗಳನ್ನೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಚಿತ್ರ ಗೆಲ್ಲಿಸುವುದಕ್ಕೆ ಕಲಾವಿದರು ಹಾಗೂ ತಂತ್ರಜ್ಞರು ರಮೇಶ್ ಜೊತೆ ಸಮನಾಗಿ ದುಡಿದಿದ್ದಾರೆ. ಕಲಾವಿದರ ಆಯ್ಕೆಯಲ್ಲೇ ಚಿತ್ರವನ್ನು ಅರ್ಧ ಗೆಲ್ಲಿಸಿದ್ದಾರೆ ರಮೇಶ್. ಸ್ಟಾರ್ಗಳಿಗಿಂತ ಕಲಾವಿದರಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಅದಕ್ಕೆ ಸರಿಯಾಗಿ ಕಲಾವಿದರು ಪೈಪೋಟಿಯಿಂದ ನಟಿಸಿದ್ದಾರೆ.
ಅದರಲ್ಲೂ ರಂಗಾಯಣ ರಘು ಅವರ ಸಹಜ ಅಭಿನಯವನ್ನು ನೀವೆಂದೂ ಯಾವ ಚಿತ್ರದಲ್ಲೂ ಕಂಡಿರಲಿಕ್ಕಿಲ್ಲ. ಅಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ. ತಾರಾ ಕೂಡ ಹಿಂದಿಬಿದ್ದಿಲ್ಲ. ಎಂಥ ಗಂಭೀರ ದೃಶ್ಯದಲ್ಲೂ ಅವರು ತಮ್ಮ ಮುಗ್ಧ ಅಭಿನಯದಿಂದ ನಗು ತರಿಸುತ್ತಾರೆ. ರವಿಕಾಳೆ, ಮಾಳವಿಕಾ, ಅವಿನಾಶ್, ಮುನಿರಾಜು, ಸುರೇಶ್ ಹೆಬ್ಳೀಕರ್, ನಾಜರ್ ಎಲ್ಲರೂ ತಮ್ಮ ತಮ್ಮ ಪಾತ್ರಗಳಲ್ಲಿ ಅಚ್ಚುಕಟ್ಟು.
ಚಿತ್ರದ ನಿಜವಾದ ಹೀರೋ ಕ್ಯಾಮೆರಾಮನ್ ರತ್ನವೇಲು ಅಲಿಯಾಸ್ ರ್ಯಾಂಡಿ. ಅವರ ಕ್ಯಾಮೆರಾ ಕೆಲಸ ನೋಡಿಯೇ ಆನಂದಿಸಬೇಕು. ಒಂದೊಂದು ಶಾಟ್, ಅದಕ್ಕೆ ಅವಶ್ಯಕವಾದ ಲೈಟಿಂಗು... ಎಲ್ಲವನ್ನೂ ಬಹಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ ರ್ಯಾಂಡಿ. ಸಂಕಲನಕಾರ ಆ್ಯಂಟನಿ ಕೆಲಸವೂ ಕಡಿಮೆಯೇನಿಲ್ಲ. ಚಿತ್ರ ಎಲ್ಲೂ ಬೋರಾಗದಂತೆ ನೋಡಿಕೊಂಡಿರುವವರೇ ಅವರು. ಸಂದೀಪ್ ಚೌಟ ಹಿನ್ನೆಲೆ ಸಂಗೀತವೂ ಅದ್ಭುತವಾಗಿದೆ.
ಬಹಳ ದಿನಗಳ ನಂತರ ಕನ್ನಡದಲ್ಲಿ ಇಂಥದೊಂದು ಚಿತ್ರ ಬಂದಿದೆ. ಮಿಸ್ ಮಾಡಬೇಡಿ.
(ಸ್ನೇಹ ಸೇತು : ವಿಜಯ ಕರ್ನಾಟಕ)
ಇದನ್ನೂ ಓದಿ :
ಸೈನೈಡ್: ರಾಜೀವ್ ಗಾಂಧಿ ಹಂತಕರ ಒಳನೋಟ


Click it and Unblock the Notifications











