ಶೇಷಾದ್ರಿಯ ಲೇಟೆಸ್ಟ್ ಪ್ರಯೋಗ ‘ಅತಿಥಿ’ ಪ್ರಶಸ್ತಿ ಹೊತ್ತುಕೊಂಡೇ ಪ್ರೇಕ್ಷಕರ ಬಳಿಗೆ ಬಂದಿದೆ. ಭಯೋತ್ಪಾದನೆಯನ್ನು ಶಾಂತವಾಗಿಯೇ ವಿರೋಧಿಸುವ ಚಿತ್ರ ವಿಚಾರಗಳ ಮಥನಕ್ಕೆ ಪುಟ್ಟ ಸ್ಫೂರ್ತಿ !
‘ಗೆಲುವು’ ಸಂಪಾದಿಸಲು ಯತ್ನಿಸುವ ಭಯೋತ್ಪಾಕರು...
ಹಸಿರು ಹಸಿರು ಊರಿನಲ್ಲಿ ತೂರಿಕೊಂಡು ಹೋಗುವ ರಸ್ತೆಗಳು, ಬೆಟ್ಟಗಳು, ತಣ್ಣನೆಯ ಮನೆಗಳು ಕಣ್ಣು ತುಂಬುತ್ತವೆ. ಬೃಹತ್ ಸಮಾರಂಭಗಳಲ್ಲಿ, ಮುಖಂಡರು ಸೇರುವ ಸ್ಥಳಗಳಲ್ಲಿ ಬಾಂಬು ಸಿಡಿಸಿ ‘ಗೆಲುವು’ ಸಂಪಾದಿಸಲು ಯತ್ನಿಸುವ ಭಯೋತ್ಪಾಕರು ಹಳ್ಳಿಯ ಕಾಡಿನಲ್ಲಿ ಸೇರಿಕೊಳ್ಳುತ್ತಾರೆ. ಅಲ್ಲಿ ಬಾಂಬು ತಯಾರಿಸುತ್ತಿರುವಾಗ ಆದ ಆಸ್ಫೋಟದಿಂದ ಗಾಯಗೊಂಡ ನಾಯಕ ಹಳ್ಳಿಯ ಡಾಕ್ಟರೊಬ್ಬರ ಮನೆಗೆ ಚಿಕಿತ್ಸೆಗೆಂದು ಬರುತ್ತಾನೆ. ಡಾಕ್ಟರ ಹೆಂಡತಿಯನ್ನು ಅಪಹರಿಸಿ ಚಿಕಿತ್ಸೆಗೆಂದು ಡಾಕ್ಟರ ಮನೆಯಲ್ಲಿ ಉಳಿಯುತ್ತಾನೆ.
ಡಾಕ್ಟರ ಜೊತೆಗಿನ ಮಾತುಕತೆ, ಡಾಕ್ಟರ ಮನೆಗೆ ಬರುವ ಪುಟ್ಟ ಮಗುವಿನ ಸಹವಾಸ...ಆ ಹಳ್ಳಿ ಜನರ ಮುಗ್ಧತೆ, ಭಯೋತ್ಪಾದಕತೆಯಿಂದ ಮುಗ್ಧ ಹಳ್ಳಿಗರ ಮೇಲಾಗುವ ಪರಿಣಾಮಗಳನ್ನು ನೋಡಿದ ಭಯೋತ್ಪಾದಕನ ಮನ ಪರಿವರ್ತನೆಯಾಗುತ್ತದಾ...? ಈತ ಭಯೋತ್ಪಾದಕ ಎಂದು ತಿಳಿದ ಸಾಧು ಡಾಕ್ಟರು ಆತನನ್ನು ಹೇಗೆ ವಿರೋಧಿಸುತ್ತಾರೆ ಎಂಬುದು ಕಥೆಯ ತಿರುಳು.
ಬುದ್ಧಿ ಜೀವಿ ಪ್ರೇಕ್ಷಕರಿಗೆ
‘ನಿಘಂಟಿನಲ್ಲಿ ಹಿಂಸೆ ಮೂಲ ಪದ, ಅಹಿಂಸೆ ವಿರುದ್ಧ ಪದ ಗೊತ್ತೇ’ ಅಂತ ಕೇಳುವ ದೋಸ್ತ್ಗೆ ಡಾಕ್ಟರ ಉತ್ತರ ‘ಶಾಂತಿ ಮೂಲಪದ, ಅಶಾಂತಿ ವಿರುದ್ಧಪದ !’, ಮಾರ್ಕ್ಸ್ ಕ್ರಾಂತಿ ಬಗ್ಗೆ ಏನು ಹೇಳಿದ್ದ...ನಾಗರಿಕತೆ ಎಂದರೆ ಏನು, ಅನ್ಯಾಯವನ್ನು ಪ್ರತಿಭಟಿಸುವ ಜನರ ಪರಿಮಿತಿ ಏನು... ಹೀಗೆ ವಾದ ಪ್ರತಿವಾದಗಳು ಬುದ್ಧಿ ಜೀವಿ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ಅತಿಥಿ ಪ್ರಕಾಶ್ ರೈ ನಟನೆ ರೂಪಾಯಿಗೆ ಹದಿನಾರಣೆ ಪರ್ಫೆಕ್ಟ್. ಬೇಬಿ ರಕ್ಷಾ, ಹಿರಿಯ ನಟ ದತ್ತಾತ್ರೇಯ, ಲಕ್ಷ್ಮೀ ಚಂದ್ರಶೇಖರ್ ತಮಗೆ ಸಿಕ್ಕಿದ ಪಾತ್ರಗಳಿಗೆ ಎಲ್ಲೂ ಮೋಸ ಮಾಡಿಲ್ಲ.
ಆದರೆ ಸಿನೆಮಾ ಎಂದ ಮೇಲೆ ಕನಿಷ್ಠ ಒಬ್ಬಳು ತೆಳ್ಳಗೆ ಬೆಳ್ಳಗಿನ ಹೀರೋಯಿನ್, ದಾರಿ ಮೇಲೂ ಗುನುಗುತ್ತಾ ಸಾಗಬಹುದಾದ ಲವ್ಲೀ ಹಾಡನ್ನು ಪ್ರೇಕ್ಷಕ ನಿರೀಕ್ಷಿಸಿದರೆ, ಕ್ಷಮಿಸಿ...ಅದೆಲ್ಲಾ ಈ ಚಿತ್ರದಲ್ಲಿ ಇಲ್ಲ. ಥಿಯೇಟರು ತುಂಬದೇ ಇರುವುದಕ್ಕೂ ಇದೇ ಕಾರಣವಿರಬಹುದಾ ಎಂಬುದು ಡಿಬೇಟೇಬಲ್ ವಿಷ್ಯ. ಆದರೆ ಶಾಂತವಾಗಿರುವ ಈ ಚಿತ್ರ ಪ್ರದರ್ಶಿಸುತ್ತಿರುವ ಥಿಯೇಟರೂ ಶಾಂತವಾಗಿದೆ ಎಂಬುದು ಮಾತ್ರ ಬೇಜಾರಿನ ಸಂಗತಿ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











