ಸಿಂಗೀತಂ ಬದಲು ಜಗ್ಗೇಶ್ ಅವರೇ ನಿರ್ದೇಶನ ಮಾಡಿದ್ದರೆ...
ಜಗ್ಗೇಶ್ ಹೊಸದೇನನ್ನೊ ಮಾಡಲು- ತೋರಿಸಲು ಶ್ರಮ ಪಟ್ಟಿದ್ದಾರೆ. ದೊಡ್ಡಮ್ಮನ ವೇಷಕ್ಕಾಗಿ ಮೈತುಂಬಾ ಹಲವು ಕೇಜಿ ಭಾರ ಹೇರಿಕೊಂಡು ನಿಜಕ್ಕೂ ಪರಿಶ್ರಮ ಪಟ್ಟಿದ್ದಾರೆ. ಆದ್ದರಿಂದಲೇ ಚಿತ್ರವನ್ನು ತಕ್ಕಮಟ್ಟಿಗೆ ಸಹನೀಯಗೊಳಿಸಿದ್ದಾರೆ. ಆದರೆ ಅಂಥದೊಂದು ಮೇಕಪ್ನಲ್ಲಿ ತಾವು ನಿಜಕ್ಕೂ ಹೇಗೆ ಕಾಣಬಹುದೆಂಬುದನ್ನು ಮೊದಲೇ ಪರೀಕ್ಷಿಸಿಕೊಂಡಿದ್ದರೆ ಒಳ್ಳೆಯದಿತ್ತು . ಆದರೂ ತಮ್ಮ ಮಾಮೂಲಿ ‘ಜಗ್ಗೇಶ್ತನ’ದಿಂದ ಹೊರಬರಲು ಸಾಕಷ್ಟು ತಿಣುಕಾಡಿದ್ದಾರೆ. ಮತ್ತೊಮ್ಮೆ ಅದೇ ಹಳೆಯ ವರಸೆಗೆ ಜಾರುವ ಚಪಲ ತೋರಿಸುತ್ತಾರೆ. ಇಷ್ಟಾದರೂ ಜಗ್ಗೇಶ್ ಹಳೆಯ ಮ್ಯಾನರಿಸಂ ನೆನಪಿಸಿಕೊಂಡು ನಟಿಸಿದಾಗಲೇ ಹತ್ತಿರವಾಗುತ್ತಾರೆ. ಅದು ಅವರ ಮಿತಿಯೂ ಹೌದು.
ಅಲ್ಲೊಂದು ಇಲ್ಲೊಂದು ಕಾಮಿಡಿ ಬಿಟ್ಟರೆ ಚಿತ್ರಕ್ಕೆ ಬೇಕಾದ ಪಂಚಿಂಗ್ ಮಾತುಗಳನ್ನು ಬರೆಯುವಲ್ಲಿ ನಂಜುಂಡ ಎಡವಿಬಿದ್ದಿದ್ದಾರೆ. ನಾಯಕಿ ಲೈಲಾ ಪಟೇಲ್ಳನ್ನು ಹುಡುಗಿ ಎಂದು ಸಾಬೀತುಪಡಿಸಲೆಂದೇ ನೀಳವಾದ ಕಾಲುಗಳ ಕಡೆಗೆ ಕೆಮರಾ ಮತ್ತೆ ಮತ್ತೆ ಗಿರಕಿ ಹೊಡೆಯುತ್ತದೆ. ಜಗ್ಗೇಶ್ ಬಿಟ್ಟರೆ ನೆನಪಿನಲ್ಲಿ ಉಳಿಯುವುದು ಮಿಮಿಕ್ರಿ ದಯಾನಂದ್ ಮತ್ತು ಕೋಮಲ್.
ಜಾನ್ ಸಂಗೀತದಲ್ಲಿ ಹಾಡು ಕೇಳುವುದು ಕಷ್ಟ . ಫೋಟೊಗ್ರಫಿ, ಸಂಕಲನದ ಬಗ್ಗೆ ಹೇಳಿಕೊಳ್ಳುವಂಥದ್ದೇನೂ ಇಲ್ಲ . ಮೇಕಪ್ ಮಾಡಿದಾತನ ಬಗ್ಗೆ ಇನ್ನೊಂದು ಮಾತಾಡಿದರೆ ಜಗ್ಗೇಶ್ ನರಸಿಂಹನ ಅವತಾರ ತಾಳಬಹುದು. ಅಂದಹಾಗೆ, ಶಕ್ತಿಕಪೂರ್ರನ್ನು ಮುಂಬೈನಿಂದ ಯಾಕೆ ಕರೆಸಿದರು ಅನ್ನುವುದು ಸೂಟ್ಕೇಸಿನ ದಾಖಲೆಯ ರಹಸ್ಯದಷ್ಟೇ ನಿಗೂಢವಾಗಿ ಉಳಿಯುತ್ತದೆ.
ಸಿಂಗೀತಂ ಬದಲಿಗೆ ಜಗ್ಗೇಶ್ ತಾವೇ ನಿರ್ದೇಶನ ಮಾಡಿದ್ದರೆ ಇದಕ್ಕಿಂಥ ಉತ್ತಮ ಚಿತ್ರ ಕೊಡಬಹುದಿತ್ತೇನೊ ಅನ್ನುವುದು ಪ್ರೇಕ್ಷಕ ಪ್ರಭುಗಳ ಆಲಾಪ. ಆದರೆ ಸಮಯ ಮೀರಿದೆ. ಅವರ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂಗಡ ಶುಭ ಕೋರುವುದಷ್ಟೇ ಈಗ ಸಾಧ್ಯ.
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











