ಆರಕ್ಷಣ್ ಚಿತ್ರ ವಿಮರ್ಶೆ: ಹೊಗಳುವಂಗಿಲ್ಲ ತೆಗಳುವಂಗಿಲ್ಲ
ಪ್ರಕಾಶ್ ಝಾ ಚಿತ್ರವೆಂದರೆ ಹಾಗೆ. ಜನಸಾಮಾನ್ಯರ ದೈನಂದಿನ ಬದುಕು, ಸಾಮಾಜಿಕ ಆಗುಹೋಗುಗಳ ಬಗ್ಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಚಿತ್ರವನ್ನು ತೆರೆಗೆ ತರುವುದರಲ್ಲಿ ನಿಸ್ಸೀಮರು. ಇಂದು (ಆ.12) ಬಿಡುಗಡೆಗೊಂಡ ಈ ಚಿತ್ರದ ಕಥೆ ಕೂಡಾ ಹಾಗೇ... ದೇಶದಲ್ಲಿನ ಜಾತಿ ಆಧಾರಿತ ಮೀಸಲಾತಿ ಅಲ್ಲದೆ ವ್ಯಾಪಾರವಾಗಿರುವ ನಮ್ಮ ಶೈಕ್ಷಣಿಕ ವ್ಯವಸ್ಥೆ, ಎಲ್ಲದರಲ್ಲೂ ಸಮಾನತೆ ಬೇಕೆನ್ನುವ ಮತ್ತು ಜಾತಿ ಆಧಾರಿತ ವ್ಯಸ್ಥೆಯಲ್ಲೇ ಬದುಕುವ ಅನಿವಾರ್ಯತೆಯಲ್ಲಿರುವ ಯುವಕರ ಕಥೆ.
ಪ್ರಭಾಕರ್ ಆನಂದ್ (ಅಮಿತಾಬ್ ಬಚ್ಚನ್) ಆದರ್ಶ, ತತ್ವಗಳೇ ತನ್ನ ಉಸಿರೆಂದು ನಂಬಿ ಬದುಕುತ್ತಿರುವ ಕಾಲೇಜಿನ ಪ್ರಿನ್ಸಿಪಾಲ್. ಆತನ ಮುಂದಾಳತ್ವದಲ್ಲಿ ಕಾಲೇಜ್ ರಾಜ್ಯದ ಅತ್ಯುತ್ತಮ ಕಾಲೇಜಾಗಿ ಹೊರಹೊಮ್ಮುತ್ತದೆ. ಪ್ರಿನ್ಸಿಪಾಲ್ಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಯುವಕನಾಗಿ ದೀಪಕ್ ಕುಮಾರ್ (ಸೈಫ್ ಆಲಿ ಖಾನ್). ಈತ ಪ್ರಿನ್ಸಿಪಾಲ್ ಮಗಳಾದ ಪೂರ್ಬಿಯನ್ನು (ದೀಪಿಕಾ ಪಡುಕೋಣೆ) ಪ್ರೀತಿಸುತ್ತಿರುತ್ತಾನೆ. ಹಾಗೆಯೇ ಸುಶಾಂತ್ (ಪ್ರತೀಕ್) ಜೊತೆ ಗೆಳೆತನವೂ ಇರುತ್ತದೆ.
ಪ್ರೀತಿ, ಗೆಳೆತನ ಮತ್ತು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಸಾಗುವ ಚಿತ್ರಕಥೆಗೆ ಸುಪ್ರೀಂ ಕೋರ್ಟ್ ನೀಡಿದ್ದ ಮೀಸಲಾತಿ ಆದೇಶ ಹೊಸ ತಿರುವನ್ನು ಪಡೆಯುತ್ತದೆ. ಇದು ಇವರ ಪ್ರೀತಿ ಮತ್ತು ಗೆಳೆತನಕ್ಕೂ ಹೊಸ ಸವಾಲನ್ನು ಒಡ್ಡುತ್ತದೆ. ಅಲ್ಲದೆ ಪ್ರಿನ್ಸಿಪಾಲ್ ಮೇಲೆ ಇದ್ದ ಸಂಬಂಧಕ್ಕೂ ಧಕ್ಕೆ ಬರುವಂತೆ ಮಾಡುತ್ತದೆ. ಇವರ ಪ್ರೀತಿ, ಗೆಳೆತನ ಮತ್ತು ಪ್ರಿನ್ಸಿಪಾಲ್ ಮೇಲೆ ಇರುವ ಗೌರವಕ್ಕೆ ಕುಂದು ಬರುತ್ತದೋ ಇಲ್ಲವೋ ಚಿತ್ರ ವೀಕ್ಷಿಸಿದರೆ ತಿಳಿಯುತ್ತದೆ.
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಜಾತಿ ಆಧಾರಿತ ರಾಜಕೀಯ, ಡೊನೇಶನ್ ಮುಂತಾದ ಅವ್ಯವಸ್ಥೆಗಳನ್ನು ತಲೆಗೆ ಹೊಡೆದ ಹಾಗೇ ಹೇಳುವುದು ಪ್ರಕಾಶ್ ಝಾ ಸ್ಟೈಲ್. ಅಮಿತಾಬ್ ಮತ್ತು ಮನೋಜ್ ಬಾಜಪೇಯಿ ನಡುವಣ ಸಂಭಾಷಣೆ ವಾಸ್ತವತೆಗೆ ಕನ್ನಡಿ ಹಿಡಿದಂತಿದೆ. ಚಿತ್ರದ ಸಂಗೀತದ (ಶಂಕರ್ - ಎಹಸಾನ್- ಲಾಯ್) ಬಗ್ಗೆ ಹೇಳುವಂತದ್ದೇನೂ ಇಲ್ಲ. ಸಚಿನ್ ಕೃಷ್ಣ ಅವರ ಕ್ಯಾಮೆರಾ ವರ್ಕ್ ಚೆನ್ನಾಗಿದೆ. ವಾದ ವಿವಾದ ಸೃಷ್ಟಿಸ ಬಹುದಾದ ಹಲವಾರು ದೃಶ್ಯ, ಸನ್ನಿವೇಶ, ಸಂಭಾಷಣೆ ಚಿತ್ರದಲ್ಲಿದೆ. ಇನ್ನು ಅಮಿತಾಬ್ ನಟನೆ ಬಗ್ಗೆ ಕೆಮ್ಮಂಗಿಲ್ಲ. ದೀಪಿಕಾ ನಟನೆ ಕೂಡ ಲವಲವಿಕೆಯಿಂದ ಕೂಡಿದೆ.
ಚಿತ್ರದ ಮೊದಲ ಒಂದು ಗಂಟೆ ಪ್ರೇಕ್ಷಕರನ್ನು ಗೊಂದಲದ ಗೂಡಾಗಿಸುತ್ತದೆ. ಬಹಳಷ್ಟು ಪಾತ್ರಗಳು ಬಂದು ಹೋಗುತ್ತವೆ. ಉದ್ದುದ್ದದ ಸಂಭಾಷಣೆಗಳು ಕೆಲವೊಮ್ಮೆ ಕಿರಿಕಿರಿ ಎನಿಸದೆ ಇರದು. ಸಂತೋಷ್ ಮಂಡಲ್ ಅವರ ಎಡಿಟಿಂಗ್ ಕೆಲಸ ಇನ್ನೂ ಪಳಗ ಬೇಕಿತ್ತು. ಇದೊಂದು ಸಮಾಜಕ್ಕೆ ಮೆಸೇಜ್ ನೀಡುವ ಚಿತ್ರ. 2 .45 ಗಂಟೆಯಷ್ಟು ಕಾಲ ಸಾಗುವ ಚಿತ್ರ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲೂ ಬಹುದು. ಒಟ್ಟಾರೆ ಚಿತ್ರ Don't miss it ಎನ್ನುವ ಹಾಗಿಲ್ಲ.


Click it and Unblock the Notifications











