ನಕ್ಕು ನಲಿಸಿ ಸುಸ್ತಾಗಿಸುತ್ತೆ ಮಸ್ತ್ ಮಜಾ ಮಾಡಿ
*ರಾಜೇಂದ್ರ ಚಿಂತಾಮಣಿ

ವಿನಿ ವಿಂಕ್ ಶಾಸ್ತ್ರಿ ತರಹ ಚಿತ್ರದಲ್ಲೊಬ್ಬ ಶಾಸ್ತ್ರಿ ಬರುತ್ತಾನೆ. ಕಾರನ್ನು ಯರ್ರಾ ಬಿರ್ರಿಯಾಗಿ ಓಡಿಸಿಕೊಂಡು ಬಂದ ಅವನು ಅಪಘಾತಕ್ಕೀಡಾಗುತ್ತಾನೆ. ಈ ದೃಶ್ಯವನ್ನು ಅಲ್ಲೇ ಇದ್ದ ಈ ನಾಲ್ವರು ನೋಡುತ್ತಾರೆ.ಶಾಸ್ತ್ರಿ ಕೊನೆಯುಸಿರೆಳೆಯುತ್ತಾ, ತಾನು ಜನಕ್ಕೆ ಮೋಸ ಮಾಡಿ ಗಳಿಸಿದ 20 ಕೋಟಿ ರು.ಗಳನ್ನು ಊಟಿ ಬೊಟಾನಿಕಲ್ ಪಾರ್ಕ್ ನಲ್ಲಿ ಬಚ್ಚಿಟ್ಟಿದ್ದೇನೆ. ಅದು ಪಾಪದ ಹಣ ಒಳ್ಳೆ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಹೇಳಿ ಕಣ್ಮುಚ್ಚುತ್ತಾನೆ. ಮೊದಲೆ ಅಬ್ಬೇಪಾರಿಗಳಾಗಿದ್ದ ಇವರು ಕಣ್ಣು ಬಾಯಿ ಬಿಟ್ಟುಕೊಂಡು ಕೋಟ್ಯಾಂತರ ಹಣವನ್ನು ಸಮವಾಗಿ ಹಂಚಿಕೊಳ್ಳುವ ಬಗ್ಗೆ ಪ್ಲಾನ್ ಮಾಡುತ್ತಿರುತ್ತಾರೆ. ಅದೇ ಸಮಯಕ್ಕೆ ಪೊಲೀಸ್ ಅಧಿಕಾರಿ ಸುದೀಪ್ ಬಂದು ಇವರ ಪ್ಲಾನೆಲ್ಲಾ ಉಲ್ಟಾ ಆಗುತ್ತದೆ. ಇವರಿಗೆ ಅಷ್ಟೂ ದುಡ್ಡು ಸಿಗುತ್ತಾ? ಅಥವಾ ಪೊಲೀಸರ ಕೈಸೇರುತ್ತಾ? ಎಂಬ ಪ್ರಶ್ನೆಗಳಿಗಳಿಗೆ ಉತ್ತರವೇ 'ಮಸ್ತ್ ಮಜಾ ಮಾಡಿ.'
ಸುದೀಪ್ ಮೇಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಉಮಾಶ್ರೀ ಡೈಲಾಗ್ ಗಳು ಕಚಗುಳಿ ಇಡುತ್ತವೆ. ಆಕೆಯದು ಇದರಲ್ಲಿ ಉತ್ತರ ಕನ್ನಡ ಭಾಷೆ. ಕೋಮಲ್, ವಿಜಯ ರಾಘವೇಂದ್ರ, ನಾಗಕಿರಣ್ ನಟನೆ ಹರಳೆಣ್ಣೆ ಮೊಗದವರನ್ನು ಪಕ್ಕೆಗೆ ತಿವಿದು ನಗಿಸುತ್ತದೆ. ನಾಗಕಿರಣ್ ಮೂಕಾಭಿನಯಕ್ಕೆ ಗೆಳೆಯರ ಡಬ್ಬಿಂಗ್ ಚೆನ್ನಾಗಿದೆ. ಸ್ವಲ್ಪ ಸಪ್ಪೆ ಎನ್ನಿಸಿದರೂ ದಿಗಂತ್ ಪರ್ವಾಗಿಲ್ಲ. ದಿಗಂತ್ ಅಪ್ಪನ ಪಾತ್ರದಲ್ಲಿ ರಂಗಾಯಣ ರಘು ಸ್ವಲ್ಪ ವಿಭಿನ್ನವಾಗಿ ನಟಿಸಿದ್ದಾರೆ.ಮಗನನ್ನು ಅಪ್ಪ ಬೈಯ್ಯುವ ದೃಶ್ಯಗಳು ಮತ್ತೆ ಮತ್ತೆ ಚಪ್ಪರಿಸುವಂತಿವೆ. ಚಿತ್ರದಲ್ಲಿ ಸಾಧು ಕೋಕಿಲ ಇದ್ದರೆ ಬೇರೆ ಹೇಳಬೇಕಾಗಿಲ್ಲ. ವಿಮಾ ನ ನಿಲ್ದಾಣದ ಅಧಿಕಾರಿಯಾಗಿ ಕನ್ನಡದಲ್ಲಿ ಅವರು ಕೊಡುವ ಸೂಚನೆಗಳಿಗೆ ಪ್ರೇಕ್ಷಕ ಬಿದ್ದು ಬಿದ್ದು ನಗುತ್ತಾನೆ.

ಹಾಡುಗಳ ಚಿತ್ರೀಕರಣಕ್ಕೆ, ಸಾಹಸ ದೃಶ್ಯಗಳಿಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಧಾರಾಳವಾಗಿ ಖರ್ಚು ಮಾಡಿದ್ದಾರೆ.ಚುರುಕಾದ ಸಂಭಾಷಣೆ,ವೇಗವಾಗಿ ಸಾಗುವ ಕಥೆ ಪ್ರೇಕ್ಷಕರಿಗೆ ಎಲ್ಲೂ ಬೋರು ಹೊಡೆಸುವುದಿಲ್ಲ. ಕೊಟ್ಟ ಕಾಸಿಗೆ ಮೋಸ ಇಲ್ಲ.ಆಫೀಸಿನಲ್ಲಿ ಬಾಸ್ ಕೈಲಿ ಬೈಸಿಕೊಂಡು ಬಾಡಿ ಹೋದವರು ಸೇರಿದಂತೆ ಹಾಸ್ಯಕ್ಕಾಗಿ ಹಂಬಲಿಸುವವರು ಚಿತ್ರವನ್ನು ನೋಡಿ ಮಸ್ತ್ ಮಜಾ ಮಾಡಿ ಸುಸ್ತಾಗಬಹುದು.
ಜೆನ್ನಿಫರ್ ಕೊತ್ವಾಲ್ ವಾಲ್ ಪೇಪರ್
ಪೂರಕ ಓದಿಗೆ:


Click it and Unblock the Notifications











