ಭಟ್ಟರು ಇಂಥ ಕತೆಯಿಂದಾಚೆ ಬರುವ ಸಮಯ ಬಂದಿದೆ

ಸಂತೋಷ್ ಪಾತಾಜೆ ಟಾಪ್ ಆಂಗಲ್ಲಿನಲ್ಲಿ ಜಗತ್ತನ್ನೇ ತೋರಿಸುತ್ತಾರೆ. ಅವರ ಕೆಮರಾ ನಮ್ಮ ಕಣ್ಣಾಗುತ್ತದೆ. ಪುನೀತ್ ಕುಣಿಯುವಾಗಲೂ ತನ್ಮಯರಾಗುವುದನ್ನು ನೀವು ಯಾವಾನಿಗೊತ್ತು ಹಾಡಲ್ಲಿ ನೋಡಬಹುದು. ಹಳೆಯ ಗೆಳೆಯರ ಹಾಗಿರುವ ಅವಿನಾಶ್, ಅನಂತ್ನಾಗ್, ದತ್ತಣ್ಣ ಇವರೆಲ್ಲ ಕಾಣಿಸಿಕೊಂಡು ಸಿನಿಮಾವನ್ನು ಆಪ್ತವಾಗಿಸುತ್ತಾರೆ.
ಭಟ್ಟರ ಸಾಹಸ ಮತ್ತು ಸಂಕೋಚಗಳು ಚಿತ್ರದಲ್ಲೂ ಕಾಣಿಸುತ್ತವೆ. ಕರಡಿ ಪರಮ್ ಏಟು ತಿನ್ನುವುದು, ಅದನ್ನು ಅವಳು ನೋಡುವುದು, ಅವಳು ಇದ್ದಕ್ಕಿದ್ದಂತೆ ಕಣ್ಮರೆಯಾಗುವುದು, ಅನಂತ್ನಾಗ್ ಪಾತ್ರ ಸಾಯದೇ ಸತ್ತ ಎಫೆಕ್ಟ್ ಸೃಷ್ಟಿಸುವುದು ಇಂಥ ದೃಶ್ಯಗಳಲ್ಲಿ ಅತಿರೇಕ ಸಾಧ್ಯವಿತ್ತು. ಭಟ್ಟರು ಅವನ್ನೆಲ್ಲ ನಿಗ್ರಹಿಸಿದ್ದಾರೆ. ತುಂಬ ಭಾವುಕರಾದರೆ, ದಾಂಪತ್ಯದಲ್ಲಿ ಗಾಢ ನಂಬಿಕೆ ಇದ್ದರೆ ನಿಮಗಿದು ಇಷ್ಟವಾಗುತ್ತದೆ. ತಮಾಷೆಗೆ ಹಾಡುಗಳಿವೆ. ಹೊಡೆದಾಟವೂ ಇದೆ. ಚಿತ್ರವನ್ನು ಸುಖಿಸುತ್ತಾ ಹೊರಬಂದು ಯೋಚಿಸಿದರೆ ಎರಡು ಸಂಗತಿಗಳು ಕಣ್ಣೆದುರು ಸುಳಿಯುತ್ತವೆ.
ಭಟ್ಟರು ಇಂಥ ಕತೆಯಿಂದಾಚೆ ಬರುವ ಸಮಯ ಬಂದಿದೆ. ತಮಾಷೆ ಒಂದು ಹಂತದ ತನಕ ನಿರ್ದೇಶಕನನ್ನು ಕಾಪಾಡುತ್ತದೆ. ಭಟ್ಟರು ಬರಹಗಾರನೂ ಆಗಿರೋದರಿಂದ ಗೋಡೆ ಜಿಗಿಯಲೇ ಬೇಕು. ಜಿಗಿದಾಗೆಲ್ಲ ನೆಲವೇ ಸಿಗಬೇಕು ಎಂದು ಕಾಯುತ್ತಾ ಕೂರುವುದು ಜಾಣತನವಾಗುತ್ತದೆಯೇ ಹೊರತು ಸೃಜನಶೀಲತೆಯಲ್ಲ. (ಉದಯವಾಣಿಯಲ್ಲಿ ಪ್ರಕಟವಾದ ವಿಮರ್ಶೆ)


Click it and Unblock the Notifications











