ಯಾವ ಯಾವ ಆ್ಯಂಗಲ್ಲಿನಲ್ಲಿ ಹೆಂಗರುಳನ್ನು ಕತ್ತರಿಸಬೇಕು, ಅವರಿಂದ ಎಷ್ಟೆಷ್ಟು ಟಿಎಂಸಿ ಕಣ್ಣೀರು ಸುರಿಸಬಹುದೆನ್ನುವ ಸದುದ್ದೇಶದಿಂದಲೇ ತಬ್ಬಲಿಯನ್ನು ನಿರ್ಮಿಸಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ.
ಹೆಂಗಸರ ಕರುಳನ್ನು ಯಾವ ಯಾವ ಆ್ಯಂಗಲ್ಲಿನಲ್ಲಿ ಕತ್ತರಿಸಬೇಕು, ಅವರಿಂದ ಎಷ್ಟೆಷ್ಟು ಟಿಎಂಸಿ ಕಣ್ಣೀರು ಸುರಿಸಬಹುದೆನ್ನುವ ಸದುದ್ದೇಶದಿಂದಲೇ ತಬ್ಬಲಿಯನ್ನು ನಿರ್ಮಿಸಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಈ ಕತೆ ಬಂದಿದ್ದರೆ ಯಾರೂ ಅಚ್ಚರಿಪಡುತ್ತಿರಲಿಲ್ಲ . ಆದರೂ ತವರು, ತಂಗಿ, ತೊಟ್ಟಿಲು, ಕರುಳು, ಉರುಳು... ಇವಕ್ಕೆಲ್ಲಾ ಯಾವುದೇ ಕಾಲವಿಲ್ಲ ಎನ್ನುವುದು ನಿರ್ದೇಶಕರ ಅಂಬೋಣ.
ಇಷ್ಟಾದರೂ ಚಿತ್ರವನ್ನು ಸಹನೀಯಗೊಳಿಸಿರುವುದು ನಿರ್ದೇಶಕ ಸಾಯಿಪ್ರಕಾಶ್ರ ಬಿಗಿಯಾದ ನಿರೂಪಣೆ. ಎದೆ ಒಡೆದುಹೋಗುವಂಥ ದೃಶ್ಯಗಳಿದ್ದರೂ ಅದನ್ನು ಸಾಯಿ ಹೆಚ್ಚು ನಾಟಕೀಯಗೊಳಿಸಿಲ್ಲ . ಅಳಿಸುವಲ್ಲಿಯೂ ರಿಯಾಯಿತಿ ತೋರಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ. ಒಟ್ಟಿನಲ್ಲಿ ಬೋರ್ ಹೊಡೆಸದಿರುವುದೇ ಚಿತ್ರದ ಹೈಲೈಟ್.
ಗ್ಲಿಸರಿನ್ ಹಚ್ಚಿಕೊಂಡೇ ಹುಟ್ಟಿದಂತಿರುವ ರಾಧಿಕಾ ಅಳುವುದಕ್ಕಷ್ಟೇ ಸೀಮಿತವಾಗಿದ್ದಾಳೆ. ಆದರೆ ಕೊನೆಯ ದೃಶ್ಯದಲ್ಲಿ ನಿರ್ಲಿಪ್ತವಾಗಿ ಮಾತನಾಡುವ ಶೈಲಿಯೇ ಆಕೆ ಮುಂದೆ ಬೆಳಯುವ ಲಕ್ಷಣ ತೋರಿಸಿದೆ.
ಅಪ್ಪನಾಗಿ ಶ್ರೀನಿವಾಸ ಮೂರ್ತಿ, ಮಾವನಾಗಿ ಅವಿನಾಶ್, ಮಲತಾಯಿ ಆಶಾಲತಾ, ಅಜ್ಜಿಯಾಗಿ ಲಕ್ಷ್ಮಿದೇವಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಖಳನಾಯಕ ರಾಜೇಶ್ ಜಬರ್ದಸ್ತ್ . ಸಾಧುಕೋಕಿಲ ವೆರಿ ಫನ್ನಿ . ಡ್ಯೂಯೆಟ್ ಇರುವುದರಿಂದ ಶಿವಧ್ವಜನನ್ನು ನಾಯಕ ಅನ್ನಲಿಕ್ಕಡ್ಡಿಯಿಲ್ಲ .
ಕತೆ ಬರೆದಿರುವ ರಮೇಶ್ ಯಾದವರಿಗೆ ಜನರಿಗೆ ಏನು ಬೇಕೆಂಬುದು ಗೊತ್ತಿದೆ. ಯಾವುದೇ ಒಂದು ದೃಶ್ಯ ವೀಕ್ ಆಗದಷ್ಟು ಎಚ್ಚರದಲ್ಲಿ ಮಧು ಸಂಭಾಷಣೆ ಬರೆದಿದ್ದಾರೆ. ಎರಡು ಮೆಲೋಡಿಯಸ್ ಹಾಡುಗಳನ್ನು ಕೊಟ್ಟಿರುವ ಹಂಸಲೇಖಾ, ಹಿನ್ನೆಲೆಯಲ್ಲಿ ಭಾವಗೀತೆಯ ಲಯ ಉಳಿಸಿಕೊಂಡಿದ್ದಾರೆ. ಸುಂದರನಾಥ್ ಸುವರ್ಣರ ಛಾಯಾಗ್ರಹಣ ಯಾವತ್ತೂ ನಂ.1.
ಒಂದು ಚಿತ್ರ ಯಶಸ್ಸು ಕಂಡೊಡನೆಯೇ ಅದೇ ರೀತಿ ಕತೆ ಇಟ್ಟುಕೊಂಡು ಸಿನಿಮಾ ಮಾಡುವುದು ಗಾಂಧಿನಗರದ ಚಳಿ. ತಬ್ಬಲಿ ಕೂಡ ಇದೇ ವರಸೆಯದು. ಸೃಜನಶೀಲತೆ ಕಡಿಮೆಯಾಗಿ ದುಡ್ಡೊಂದೇ ಮುಖ್ಯವಾದಾಗ ಹೀಗಾಗುತ್ತದೆ. ನಿನ್ನೆಯ ಅನ್ನಕ್ಕೆ ಇಂದು ಒಗ್ಗರಣೆ ಹಾಕಿ ಬಿಸಿ ಮಾಡಿದಂತೆ...
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











