500 ವರ್ಷಗಳ ಹಿಂದೆ ಪೆಟ್ರಾರ್ಕ್ ಎಂಬ ಕವಿ ಲಾರಾ ಎಂಬಾಕೆಯನ್ನು ಒಂದೇ ಒಂದು ಸಲ ನೋಡಿ 25 ವರ್ಷ ಅವಳನ್ನು ಧ್ಯಾನಿಸುತ್ತಾ ಕವಿತೆ ಬರೆದಿದ್ದ. ಅದರ ಮುಂದಿನ ಕಂತಿನ ಗುಣಲಕ್ಷಣಗಳು ಈ ಚಿತ್ರದ ನಾಯಕ ನಾಯಕಿಯಲ್ಲಿ ಮೇಳೈಸಿತಾ?
ಕಣ್ಣುಗಳ ಮಾತ್ರ ಪ್ರೀತಿಸುವಾಕೆ..
ಬ್ಯಾಂಕ್ ಮ್ಯಾನೇಜರ್ ಆಗಿ ಊರಿಗೆ ಬರುವ ರಮೇಶನನ್ನು ರಾಶಿ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ಯಾವುದೇ ಸಂಬಂಧವಿರದ ತನ್ನನ್ನು ಇಷ್ಟು ಪ್ರೀತಿಯಿಂದ ನೋಡಿಕೊಂಡಿರುವಾಗ ಖಂಡಿತ ಆಕೆ ತನ್ನನ್ನು ಪ್ರೇಮಿಸುತ್ತಾಳೆಂದು ರಮೇಶ್ ತಿಳಿಯುತ್ತಾನೆ. ಮದುವೆ ಆಫರ್ ಮಾಡಿದಾಗ ಆಕೆ ‘ನಾನು ನಿಮ್ಮನ್ನು ಪ್ರೀತಿಸಿಲ್ಲ. ನಿಮ್ಮ ಕಣ್ಣನ್ನು ಮಾತ್ರ ಪ್ರೀತಿಸಿದೆ ’ಅಂತಾಳೆ. ಅದರ ಮರ್ಮ ಅರಿಯಲು ಫ್ಲಾಶ್ ಬ್ಯಾಕ್ ಇದೆ. ಅಲ್ಲಿ ಶಿವಣ್ಣನಿದ್ದಾನೆ. ರಾಶಿ- ಶಿವಣ್ಣನಿಗೆ ನಿಶ್ಚಿತಾರ್ಥವಾಗಿರುತ್ತದೆ. ಶಿವಣ್ಣ ಅಪಘಾತದಲ್ಲಿ ಸಾಯುತ್ತಾನೆ. ಅದೇ ಸಮಯದಲ್ಲಿ ರಮೇಶ್ ಕೂಡ ಅಪಘಾತದಲ್ಲಿ ಕುರುಡನಾಗಿರುತ್ತಾನೆ. ಶಿವಣ್ಣನ ಕಣ್ಣನ್ನು ರಮೇಶ್ಗೆ ಅಂಟಿಸುತ್ತಾರೆ...
ಇದು ಕತೆಯ ಒಟ್ಟಾರೆ ಹೂರಣ. ಕಮರ್ಶಿಯಲ್ ಚಿತ್ರಗಳಲ್ಲಿ ಏನು ಬೇಕಾದರೂ ನಡೆಯಬಹುದೆಂದು ಕತೆಯನ್ನು ಒಪ್ಪಿಕೊಂಡರೆ ಇದು ತೀರಾ ಕೆಟ್ಟ ಚಿತ್ರವಲ್ಲ. ಯಾಕೆಂದರೆ ಚಿತ್ರದ ಮೊದಲಾರ್ಧ ಮುಗಿದದ್ದೇ ಗೊತ್ತಾಗುವುದಿಲ್ಲ. ಶರಣ್, ರಮೇಶ್ ಜೋಡಿಯ ಹಾಸ್ಯ ಹೊಟ್ಟೆ ಹುಣ್ಣಾಗಿಸುತ್ತದೆ. ರಮೇಶ್ನ್ನು ಪಕ್ಕಕ್ಕೆ ಸರಿಸಿ ಮಿಂಚಿದ್ದು ಶರಣ್.
2ನೇ ಭಾಗದಲ್ಲಿ ಶಿವಣ್ಣನ ಸಂಯಮದ ನಟನೆಯಿಂದ ಲವಲವಿಕೆ ಸಾಗುತ್ತದೆ. ಕ್ಲೈಮ್ಯಾಕ್ಸ್ ಜಗ್ಗಿರುವುದನ್ನು ನೋಡಿದರೆ ನಿರ್ದೇಶಕರಿಗೆ ರಿಮೇಕ್ ಮೇಲೆ ಸಿಟ್ಟಿರಬೇಕು. ನಿರ್ಮಾಪಕರ ಮೇಲೆ ಕೋಪವಿರಬೇಕೆಂದು ಅನಿಸೋದು ನಿಜ.
ರಮೇಶ್ ಮಾಮೂಲಿಯಾಗಿ ನಟಿಸಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯವೊಂದರಲ್ಲಿ ಮಾತ್ರ ಅವರ ನಟನೆ ನೋಡುವ ಅವಕಾಶ ಒದಗಿಸಿದ್ದಾರೆ. ರಾಶಿ ಸುಂದರವಾಗಿ ಕಾಣಿಸುತ್ತಾಳೆ. ಚೆಂದವಾಗಿ ನಟಿಸಿದ್ದಾಳೆ. ಇನ್ನಷ್ಟು ಚೆಂದ ಮಾಡುವ ಅವಕಾಶದಿಂದ ತಪ್ಪಿಸಿಕೊಂಡಿದ್ದಾಳೆ. ಹಾಡು ಮತ್ತು ಸಂಭಾಷಣೆ ಕೂಡ ರಿಮೇಕ್ ಆದ್ದರಿಂದ ಅದರ ಕ್ರೆಡಿಟ್ ಮೂಲನಿವಾಸಿಗಳಿಗೆ ಹೋಗುತ್ತದೆ. ಆದರೂ ಎರಡು ಹಾಡುಗಳು ಗುನುಗುನಿಸುವಂತಿವೆ. ಬಿ. ಎ. ಮಧು ಸಂಭಾಷಣೆ ಚಪ್ಪಾಳೆ ಗಿಟ್ಟಿಸುವಷ್ಟು ಸಶಕ್ತವಾಗಿದೆ. ಕ್ಲೈಮ್ಯಾಕ್ಸ್ ಮುಂಚಿನ ಇಪ್ಪತ್ತು ನಿಮಿಷ ಹಲ್ಲು ಕಚ್ಚಿ ಸಿಹಿಸಿಕೊಂಡರೆ ಉಳಿದದ್ದನ್ನು ಮನಸು ಬಿಚ್ಚಿ ನೋಡಬಹುದು.
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











