ಮೊದಲ ಸಲ ರಾಜಕಾರಣಿಯಾಗಿ ಕಾಣಿಸಿರುವ ಸುದೀಪ್ ಒನ್ಸ್ ಅಗೇನ್ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.
ಇದೊಂದು ರಾಜಕೀಯ ಚಿತ್ರ. ರಾಜಕಾರಣಿಗಳ ಹಲಾಲುಕೋರತನವನ್ನು ಉತ್ಪ್ರೇಕ್ಷೆಯಿಲ್ಲದೆ ಬಿಚ್ಚಿ ತೋರಿಸಿದ ಚಿತ್ರ. ವ್ಯವಸ್ಥೆಯನ್ನು ಸುಧಾರಿಸಲು ಯುವಕನೊಬ್ಬ ಎಲ್ಲವನ್ನು ತೊರೆದು ನಿಂತ ಚಿತ್ರ. ರಾಜಕೀಯವೆಂದೊಡನೆ ಇದನ್ನು ‘ಚಕ್ರವ್ಯೂಹ’, ‘ಶಿವಸೈನ್ಯ’, ಅಥವಾ ತಮಿಳಿನ ‘ಮುದಲವನ್’ ಚಿತ್ರಗಳಿಗೆ ಹೋಲಿಸುವ ಅಗತ್ಯವಿಲ್ಲ. ಸಮಯ ಬದಲಾದಂತೆ ಬದಲಾಗುವ ವ್ಯವಸ್ಥೆಯನ್ನು ಹೀಗೂ ತೋರಿಸಬಹುದೆನ್ನುವುದಕ್ಕೆ ‘ಕಿಚ್ಚ’ ತಾಜಾ ಉದಾಹರಣೆಯಂತಿದ್ದಾನೆ. ಚಿತ್ರದ ಮೊದಲ ಭಾಗ ಪ್ರೇಮ ಮತ್ತು ನಿರುದ್ಯೋಗದ ಆಘಾತಗಳಲ್ಲಿ ಉರುಳುತ್ತದೆ. ಎರಡನೇ ಭಾಗ ಅದೆಲ್ಲವನ್ನು ಮರೆಸಿ ಕತೆಗೊಂದು ಫೋರ್ಸ್ ತಂದುಕೊಡುತ್ತದೆ. ನಾಯಕ ಬಳಸುವ ತಂತ್ರಗಳಿಂದ ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುತ್ತದೆ. ಅದನ್ನು ಅಷ್ಟೇ ಶ್ರದ್ಧೆಯಿಂದ ನಿರೂಪಿಸುವಲ್ಲಿ ನಿರ್ದೇಶಕ ಅರುಣ್ ಪ್ರಸಾದ್ ಗೆದ್ದಿದ್ದಾರೆ.
ಮುಖ್ಯಮಂತ್ರಿಯ ಕಾಲು ಹಿಡಿಯುವ ಚಿಕ್ಕ ದೃಶ್ಯ ಈ ಹುಡುಗನ ಅಭಿನಯದ ತಾಕತ್ತಿಗೆ ಸಾಕ್ಷಿಯಾಗುತ್ತದೆ. ಅದು ಕುಣಿತವಿರಲಿ, ಹೊಡೆದಾಟವಿರಲಿ ಎಲ್ಲೆಲ್ಲೂ ಸುದೀಪ್ ಛಾಪು ಇದ್ದೇ ಇದೆ. ಪ್ರೇಮಿಯಾಗಿ ಶ್ವೇತಾ, ಅಮ್ಮನಾಗಿ ಸುಜಾತ, ಮುಖ್ಯಮಂತ್ರಿಯಾದ ಅವಿನಾಶ್ ಖುಷಿ ಕೊಡುತ್ತಾರೆ.
ಸುಂದರನಾಥ್ ಸುವರ್ಣ ಛಾಯಾಗ್ರಹಣದ ಶ್ರಮ ಹೊಡೆದಾಟ ಮತ್ತು ಹಾಡಿನಲ್ಲಿ ನಂಬರ್ ಒನ್. ಕನಲ್ ಕಣ್ಣನ್ ಮತ್ತು ಕೆ.ಡಿ.ವೆಂಕಟೇಶ್ ಸ್ಟಂಟಿನಲ್ಲಿ ಅದ್ಧೂರಿತನವಿದೆ. ರವಿ ಶ್ರೀವತ್ಸ ಬರೆದ ಮಾತುಗಳಲ್ಲಿ ಸಹಜತೆ ಇದೆ. ಹಂಸಲೇಖ ಸಂಗೀತದಲ್ಲಿ ಎರಡು ಹಾಡುಗಳನ್ನು ಕೇಳಬಹುದು. ಅಂದಹಾಗೆ ಒಂದೇ ಒಂದು ಡೈಲಾಗ್ ಇಲ್ಲದ ಪಾತ್ರಕ್ಕೆ ಹಿರಿಯ ನಟ ಅಶ್ವತ್ಥರನ್ನು ಯಾಕೆ ಬಳಸಿಕೊಂಡರೋ ಅರ್ಥವಾಗುವುದಿಲ್ಲ. ಹಾಗೆಯೇ ನಾಯಕ ಮೇಯರ್ ಮತ್ತು ಮಂತ್ರಿಯಾಗುವ ಪ್ರಕ್ರಿಯೆಗೆ ಇನ್ನಷ್ಟು ಪೂರಕ ಅಂಶಗಳನ್ನು ಸೇರಿಸಿಬೇಕಿತ್ತು.
‘ದೇವರ ಚಿತ್ರ’ ಕೇಳಲು ಬರುವ ಸಿತಾರಾ, ‘ಗಂಡು ಪ್ರೇಮಿ’ ಮಂಡ್ಯ ರಮೇಶ್ ಕೊಂಚ ಮುಜುಗರ ಹುಟ್ಟಿಸುತ್ತಾರೆ. ಒಟ್ಟಿನಲ್ಲಿ ನಿರ್ಮಾಪಕ ರಾಮು ಸುರಿದ ದುಡ್ಡು ಪ್ರತಿಯಾಂದು ಫ್ರೇಮಿನಲ್ಲಿ ಕಾಣುತ್ತದೆ. ಸಾಮಾನ್ಯವಾಗಿ ಇವರ ಚಿತ್ರಗಳನ್ನು ನೋಡಿದವರು ಅದರ ಶ್ರೀಮಂತಿಕೆ ಬಗ್ಗೆ ಮಾತನಾಡುತ್ತಾರೆ. ಫಾರ್ ಎ ಚೇಂಜ್, ಇಲ್ಲಿ ಸುದೀಪ್ ನಟನೆ ಪ್ಲಸ್ ಕತೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದು ಚಿತ್ರದ ಯಶಸ್ಸಿಗೆ ಕಾರಣವಾಗಬಹುದು. ಹಾಗೆಯೇ ರಾಮು ಮುಂದೆ ನಡೆಯಬೇಕಾದ ಹಾದಿಗೆ ದಿಕ್ಸೂಚಿಯಾಗಲೂಬಹುದು.
(ವಿಜಯ ಕರ್ನಾಟಕ)
ಇದನ್ನೂ ಓದಿ
ಸುದೀಪನಿಗೆ ಯಾಕೆ ಸಿಟ್ಟು ಬರುತ್ತದೆ ?
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











