twitter
    For Quick Alerts
    ALLOW NOTIFICATIONS  
    For Daily Alerts

    ಸುಮ್ನಿದ್ರೆ ಚಿನ್ನ ಅಟಕಾಯಿಸಿಕೊಂಡ್ರೆ‘ಗುನ್ನ’

    By Staff
    |
    • ಚೇತನ್‌ ನಾಡಿಗೇರ್‌
    ಒಂದು ತ್ರಿಕೋನ ಪ್ರೇಮ ಕಥೆಯನ್ನು ಅದೆಷ್ಟು ವಿಧಗಳಲ್ಲಿ ತೋರಿಸಬಹುದು?

    ಉತ್ತರ ಸುಲಭ. ಆ್ಯಕ್ಷನ್‌ ಚಿತ್ರವಾಗಿಸಬಹುದು, ಕಾಮಿಡಿಯಾಗಿಸಬಹುದು, ಟ್ರಾಜಿಡಿಯಾಗಿಸಬಹುದು, ರಕ್ತಪಾತವಾಗಿಸಬಹುದು, ತ್ಯಾಗಮಯವಾಗಿಸಬಹುದು...ಹೀಗೆ ಏನು ಬೇಕಾದರೂ ಮಾಡಬಹುದು. ಆದರೆ ಇವೆಲ್ಲವೂ ಒಂದೇ ಚಿತ್ರದಲ್ಲಿದ್ದರೆ? ಮತ್ತು ಎಷ್ಟು ಬೇಕೋ ಅಷ್ಟಿದ್ದರೆ? ಈ ಮಾತಿಗೊಂದು ಒಳ್ಳೆಯ ಉದಾಹರಣೆ ‘ಗುನ್ನ.’

    ಕಥೆ ಇಷ್ಟೇ. ಒಬ್ಬನ ಹೆಸರು ಶಂಭು(ಮಯೂರ್‌). ದಿ ಫೈರ್‌ ತರಹದವನು. ಒಂಥರಾ ಸುಮ್ನಿದ್ರೆ ಚಿನ್ನ, ಅಟಕಾಯಿಸಿಕೊಂಡ್ರೆ ಗುನ್ನ ಜಾತಿಯವನು. ಬುದ್ಧಿಯಲ್ಲೂ ಗುನ್ನ, ಮಾತಿನಲ್ಲೂ ಗುನ್ನ, ಹೊಡೆದಾಟದಲ್ಲೂ ಗುನ್ನ, ಅದೇ ಅವನ ಸ್ಪೆಷಾಲಿಟಿ. ಇನ್ನೊಬ್ಬ ಶರ್ಮ(ರಂಗಾಯಣ ರಘು). ಅಂಡರ್‌ ವರ್ಲ್ಡ್‌ ಡಾನ್‌. ಎಷ್ಟೇ ದೊಡ್ಡ ಡಾನ್‌ ಆದರೂ ಅವನೂ ಮನುಷ್ಯನಲ್ಲವೇ? ಮನುಷ್ಯ ಎಂದು ಮೇಲೆ ಅವನೂ ಯಾರಿಗಾದರೂ ಮನಸ್ಸು ಕೊಡಬೇಕಲ್ಲವೇ? ಶರ್ಮ ಕೂಡಾ ಭಾವನಾ(ಚೈತ್ರ)ಗೆ ತನ್ನ ಮನಸ್ಸು ಕೊಟ್ಟಿರುತ್ತಾನೆ. ಆದರೆ ಭಾವನಾಗೆ ಅಂಥ ಭಾವನೆಯೇ ಇಲ್ಲ. ಒಮ್ಮೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತನ್ನ ಜಾಣ್ಮೆಯಿಂದ ಶಂಭು ತಪ್ಪಿಸುವುದನ್ನು ಶರ್ಮ ನೋಡುತ್ತಾನೆ. ಸರಿ ನನ್ನ ಪ್ರೀತಿಯನ್ನು ಕೂಡಾ ಹೀಗೆ ಪಟಾಯಿಸು ಎಂದು ಶರ್ಮ, ಶಂಭುಗೆ ಡೀಲ್‌ ಒಪ್ಪಿಸುತ್ತಾನೆ. ಬದಲಿಗೆ ಶಂಭು ಕಟ್ಟಿಸಬೇಕೆಂದು ಕೊಂಡಿರುವ ಅನಾಥಾಶ್ರಮಕ್ಕೆ ಹಣ ನೀಡುವುದಕ್ಕೆ ಮುಂದಾಗುತ್ತಾನೆ. ಇನ್ನು ಮುಂದೆ ಏನಾಗುತ್ತದೆ ಎಂಬುದನ್ನು ಚಿತ್ರಮಂದಿರದಲ್ಲಿಯೇ ನೋಡಿ.

    ಮಯೂರ್‌ಗೆ ನಾಯಕನಾಗಿ ಇದು ಮೂರನೇ ಚಿತ್ರ. ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಅವರ ಅಭಿನಯ ಸಲೀಸು. ಫೈಟ್ಸ್‌ ಹಾಗೂ ಡ್ಯಾನ್ಸ್‌ಗಳಲ್ಲಿ ಸಾಕಷ್ಟು ಮಿಂಚಿದ್ದಾರೆ. ಚಿತ್ರದ ಹೀರೋ ಮಯೂರ್‌ ಆದರೂ ಅವರನ್ನು ಮೀರಿ ನಿಲ್ಲುವುದು ರಂಗಾಯಣ ರಘು. ಎಂದಿನಂತೆ ಅವರ ಟೈಮಿಂಗ್‌ ಅದ್ಭುತ. ಅವರು ನಾಚಿಕೊಳ್ಳುವ ರೀತಿ, ಆರ್ಭಟಿಸುವ ಶೈಲಿ, ಮೂರ್ಛೆ ಹೋಗುವ ಪರಿ ಎಲ್ಲವೂ ಸೊಗಸು. ರಘು ಇಲ್ಲಿ ಪ್ರೇಮಿಯಾಗಿದ್ದಾರೆ, ವಿರಹಿಯಾಗಿದ್ದಾರೆ, ನಾಯಕನಾಗಿದ್ದಾರೆ, ಹಾಗೆಯೇ ಖಳನಾಯಕನಾಗಿದ್ದಾರೆ. ನಾಯಕ ಹೊಡೆದಾಟದಲ್ಲಿ ಗುನ್ನ ಕೊಟ್ಟರೆ, ರಘು ತನ್ನ ಅಭಿನಯದಲ್ಲಿ ಗುನ್ನ ತೋರಿಸಿದ್ದಾರೆ. ಅವರ ‘ವಾರ್ಹೆವಾ ಶರ್ಮಾ, ಹಳೇ ಹುಡುಗಿ, ಹೊಸ ಹುಡುಗ, ಹೊಸ ಗುನ್ನ’ ಎನ್ನುವ ದೃಶ್ಯವಂತೂ ಚಿತ್ರದ ಹೈಲೈಟು. ಅಲ್ಲದೇ, ಉಪೇಂದ್ರ ಹಾಗೂ ದರ್ಶನ್‌ ತರಹವೇ ‘ಮಸ್ತು ಮಸ್ತು ಹುಡುಗಿ ಬಂದ್ಲು’ ಹಾಗೂ ‘ಕೆಂಚಾಲೋ ಮಂಚಾಲೋ’ ಹಾಡುಗಳಿಗೆ ಹೆಜ್ಜೆ ಹಾಕಿರುವ ದೃಶ್ಯಗಳೂ ಸಾಕಷ್ಟು ಚಪ್ಪಾಳೆ ಗಿಟ್ಟಿಸುತ್ತವೆ.

    ಸುದೀಪ್‌ ಇಲ್ಲಿ ನಟ ಸುದೀಪ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಅವರು ಕನ್ನಡದ ಬಗ್ಗೆ ಭಾಷಣ ಮಾಡಿದ್ದಾರೆ, ಹಾಡಿದ್ದಾರೆ, ಕುಣಿದಿದ್ದಾರೆ, ಹೊಡೆದಾಡಿದ್ದಾರೆ. ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಆದರೆ ಚಿತ್ರವನ್ನು ಸಮಗ್ರವಾಗಿ ನೋಡಿದರೆ ಸುದೀಪ್‌ ಎಪಿಸೋಡ್‌ಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವೆಂಬುದು ಸ್ಪಷ್ಟವಾಗುತ್ತದೆ.‘ ನಿನ್ನ ಸಹಾಯಕ್ಕೆ ನಾನು ಸದಾ ಸಿದ್ಧ. ನಿನ್ನ ಮದುವೆಗೆ ಕರಿ ಬರ್ತೀನಿ’ಎಂದು ಸುದೀಪ್‌ ಪ್ರೀತಿಯಿಂದ ನಾಯಕನಿಗೆ ಆಶ್ವಾಸನೆ ನೀಡುತ್ತಾರಾದರೂ ಕೊನೆಗೆ ದರ್ಶನ ಭಾಗ್ಯ ನೀಡುವುದಿಲ್ಲ. ಹಾಗಾಗಿ ಸುದೀಪ್‌ ಅವರನ್ನು ಬಳಸಿಕೊಂಡಿರುವುದು ಕೇವಲ ಗಿಮಿಕ್‌ ಎನಿಸಿದರೆ ಆಶ್ಚರ್ಯವಿಲ್ಲ. ನಾಯಕಿ ಚೈತ್ರ ಚಿತ್ರದ ತುಂಬಾ ಚೆನ್ನಾಗಿ ಕಾಣುತ್ತಾರೆ. ಭವ್ಯ, ರಮೇಶ್‌ಭಟ್‌, ತುಳಸಿ ಶಿವಮಣಿ, ಕಾಫಿ ರಾಘವೇಂದ್ರ ಮುಂತಾದ ಕಲಾವಿದರಿಗೆ ಹೆಚ್ಚಿನ ಕೆಲಸವಿಲ್ಲ.

    ದ್ವಾರ್ಕಿ ‘ಗುನ್ನ’ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ನಿರ್ದೇಶನವಲ್ಲದೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯದ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಈ ಐದು ವಿಭಾಗಗಳಲ್ಲಿ ಯಾವುದು ಉತ್ತಮ, ಯಾವುದು ಮಧ್ಯಮ ಎಂದು ವಿಂಗಡಿಸುವುದು ತುಸು ಕಷ್ಟವೇ. ಏಕೆಂದರೆ, ಎಲ್ಲಾ ವಿಭಾಗಕ್ಕೂ ಅವರು ತಮ್ಮ ಶಕ್ತಿ ಮೀರಿ ನ್ಯಾಯ ಸಲ್ಲಿಸಿದ್ದಾರೆ. ಅದರಲ್ಲೂ ಸಂಭಾಷಣೆಗಳು ಚಿತ್ರದ ಪ್ಲಸ್‌ಪಾಯಿಂಟ್‌

    (ಸ್ನೇಹ ಸೇತು : ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, April 19, 2024, 6:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X