...ಯಾಕೆಂದರೆ ಇದೊಂದು ಪಕ್ಕಾ ಕಮರ್ಶಿಯಲ್ ಚಿತ್ರ. ಪತ್ರಿಕೋದ್ಯಮ ಕುರಿತ ಚಿತ್ರ. ಜುಬ್ಬಾ- ಸೋಡಾಗ್ಲಾಸು ಕೈಬಿಟ್ಟು ಜೀನ್ಸ್ ಪ್ಯಾಂಟು- ಟೀ ಶರ್ಟುತೊಟ್ಟ ಪತ್ರಕರ್ತನೊಬ್ಬನ ಚಿತ್ರ. ಪೆನ್ನಿನಿಂದ ಆಗದ ಕೆಲಸವನ್ನು ಗನ್ನಿನಿಂದಾದರೂ ಮಾಡಬೇಕೆಂದು ನೀತಿ ಹೇಳುವ ಚಿತ್ರ.
ಕತೆ ಇರೋದು ಇಷ್ಟೆಂದರೆ ಇಷ್ಟೆ. ಬರೀ ಪತ್ರಿಕೆ, ಪತ್ರಕರ್ತನ ಬಗ್ಗೆ ಕೊರೆದರೆ ಅದನ್ನು ಯಾರೂ ನೋಡುವುದಿಲ್ಲವೆಂದು ಇಂದ್ರಜಿತ್ಗೆ ಗೊತ್ತು. ಅದಕ್ಕಾಗಿ ವಸುಂಧರಾ ದಾಸ್ ಎಂಬ ಶೋಕೇಸ್ ಗೊಂಬೆಯನ್ನು ತಂದಿದ್ದಾರೆ. ಎಂಟಿವಿ ತರಹದ ಹಾಡುಗಳನ್ನು ಫಿಕ್ಸ್ ಮಾಡಿದ್ದಾರೆ. ಪಾಶ್ ಲೊಕೇಶನ್ಗಳನ್ನು ಬಳಸಿಕೊಂಡಿದ್ದಾರೆ. ಬಣ್ಣ ಬಣ್ಣದ ಪೇಂಟಿಂಗ್ನಂತಿರುವ ಕೆಲವು ದೃಶ್ಯಗಳನ್ನು ಚಿತ್ರಿಸಿದ್ದಾರೆ. ಆದರೆ ಒಂದು ಚಿತ್ರಕ್ಕೆ ಇವೆಲ್ಲ ಪೂರಕವೆನಿಸೋದು ಇಡೀ ಚಿತ್ರದಲ್ಲಿ ಧಮ್ ಇದ್ದಾಗ ಮಾತ್ರ. ಅದಿಲ್ಲವೆಂದರೆ ಇಂದ್ರಜಿತ್ ಮುನಿಸಿಕೊಳ್ಳಬಾರದು.
ನಗೆ ಹುಟ್ಟಿಸುವ ತಮಾಷೆ, ಕಂಟಿನ್ಯೂಟಿ ಇಲ್ಲದ ಘಟನೆಗಳು, ಗಂಭೀರತೆ ಕಳಕೊಂಡ ಗಂಭೀರ ದೃಶ್ಯಗಳು, ಒಮ್ಮೆ ಜಗಿದು ತೆಗೆದ ಚ್ಯೂಯಿಂಗ್ಗಮ್ ಮತ್ತೊಮ್ಮೆ ಜಗಿದರೆ ಹೇಗಿರುತ್ತೋ ಹಾಗಿರುವ ನಿರೂಪಣೆ. ಹಾಗಾದರೆ ಇಂದ್ರಜಿತ್ಗೆ ನಿರ್ದೇಶಕನಾಗುವ ಅರ್ಹತೆ ಇಲ್ಲವೇ? ಹಾಗೆ ಹೇಳುವುದೂ ತಪ್ಪು. ಯಾಕೆಂದರೆ ‘ಎಂದೋ ಕಂಡ ಕನಸು’ ಹಾಡನ್ನು ಇವರು ಚಿತ್ರಿಸಿದ ರೀತಿ ಮಣಿರತ್ನಂ ಚಿತ್ರದ ಹಾಡನ್ನು ನೆನಪಿಗೆ ತಂದುಕೊಡುತ್ತದೆ. ಹಾಗೆಯೇ ಲೈಟಿಂಗ್, ಕಲಾ ನಿರ್ದೇಶಕನನ್ನು ಬಳಸಿಕೊಂಡದ್ದು ಆಧುನಿಕ ಮನಸ್ಸಿನ ಒಳತೋಟಿಯನ್ನು ತೋರಿಸುತ್ತದೆ. ಕೆಮೆರಾಮನ್ ಸುಂದರನಾಥ ಸುವರ್ಣರನ್ನು ಅವರಿಗೇ ಅಚ್ಚರಿಯಾಗುವಂತೆ ಛಾಯಾಗ್ರಹಣ ಮಾಡಿಸಿದ್ದಾರೆ.
ಬಾಬ್ಜಿ ಸಂದೀಪ್ ಸಂಗೀತದಲ್ಲಿ ಹುಚ್ಚು ಹಿಡಿಸುವ ಫೋರ್ಸ್ ಹುಟ್ಟಿಸಿದ್ದಾರೆ. ಕೆಲವೇ ಕಡೆ ತೋರಿಸಿದ ಸಿನಿಮಾದ ಫ್ಯಾಶನ್ ಇಡಿಯಾಗಿ ಅವರಿಗೆ ದಕ್ಕಿಲ್ಲ. ಎಲ್ಲ ಇದ್ದೂ ಏನೋ ಇಲ್ಲದಂತಿದ್ದರೆ ಅದು ಹುಡುಕಿದರೂ ಸಿಗದ ಗುಪ್ತಗಾಮಿನಿಯಂಥ ಚೇತನ, ಭಾವಗೀತೆಯ ಲಯ....
ಅನಂತನಾಗ್, ದರ್ಶನ್ ತೂಗುದೀಪ ತಮ್ಮ ಪಾತ್ರವನ್ನು ನೀಟಾಗಿ ನಿಭಾಯಿಸಿದ್ದಾರೆ. ವಸುಂಧರಾ ದಾಸ್ ಇನ್ನು ಮುಂದೆ ಕನ್ನಡ ಚಿತ್ರಗಳಿಂದಲೂ ಮಾಯವಾದರೆ ಆಶ್ಚರ್ಯವಿಲ್ಲ. ಪಡ್ಡೆ ಹೈಕಳಿಗೆ ‘ಆಂಟಿ’ ಅದಿತಿ ಗೋವಿತ್ರಿಕರ್ ಅಮಲು ಹಿಡಿಸೋದು ಗ್ಯಾರಂಟಿ. ಖಾಕಿ ಡ್ರೆಸ್ ತೊಟ್ಟಿದ್ದೇ ದೇವರಾಜ್ ಪಡೆದ ಭಾಗ್ಯ. ಕಡಿಮೆ ಮಾತುಗಳಿಂದಲೇ ತಣ್ಣನೆಯ ಕ್ರೌರ್ಯ ತೋರಿಸುವ ರಂಗಾಯಣ ರಘು ಎಕ್ಸಲೆಂಟ್.
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











