Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಯ್ 'ಕಂಠೀರವ' ಚಿತ್ರ ವಿಮರ್ಶೆ
ತೆಲುಗಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ್ದ'ಸಿಂಹಾದ್ರಿ' ಚಿತ್ರದ ನಕಲು 'ಕಂಠೀರವ'. ತೆಲುಗಿನ ರೆಡಿಮೇಡ್ ಸರಕನ್ನು ಕನ್ನಡಕ್ಕೆ ಲೀಲಾಜಾಲವಾಗಿ ತರುವಲ್ಲಿ ತುಷಾರ್ ರಂಗನಾಥ್ ಯಶಸ್ವಿಯಾಗಿದ್ದಾರೆ. ಚಿತ್ರದ ನಿರ್ಮಾಪಕ ರಾಮು ಕೂಡ ಅದ್ದೂರಿಯಾಗಿಯೇ ಚಿತ್ರವನ್ನು ತೆರೆಗೆ ತಂದಿದ್ದಾರೆ.
ಆಂಧ್ರದ ರಾಯಲಸೀಮೆಯ ರೆಡ್ಡಿ, ನಾಯ್ಡು ಜನಾಂಗದ ಫ್ಯಾಕ್ಷನ್ ಕತೆಯಾಧಾರಿತ ಚಿತ್ರಗಳು ಮಿತಿಮೀರಿದಪರಿಣಾಮ ಪ್ರೇಕ್ಷಕರಿಗೆ ವಾಕರಿಗೆಕೆ ಬಂದಂತಾಗಿತ್ತು. ಅಂತಹ ಸಂದಿಗ್ಧ ಸಂದರ್ಭದಲ್ಲಿ ಬಂದಂತಹ ಚಿತ್ರ ಸಿಂಹಾದ್ರಿ. ಚಿತ್ರದಲ್ಲಿ ಹೊಡೆದಾಟ, ಬಡಿದಾಟದ ಅಬ್ಬರವಿದ್ದರೂ, ಕತೆ ಒಂಚೂರು ಭಿನ್ನವಾಗಿದ್ದ ಕಾರಣ ತೆಲುಗು ಪ್ರೇಕ್ಷಕರು ಒಪ್ಪಿದ್ದರು.
ಆದರೆ ಅದೇ ಕತೆಯನ್ನು ಕನ್ನಡ ಪ್ರೇಕ್ಷಕರಿಗೆ ತುರುಕಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕಾಡುತ್ತದೆ. ಚಿತ್ರದ ಅಡಿಬರಹ 'ಕೆಚ್ಚೆದೆಯ ಕನ್ನಡಿಗ' ಎಂದಿದೆ. ಚಿತ್ರದ ಕೊನೆಯಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ, ಕರ್ನಾಟಕ ಬಗ್ಗೆ ಚುಚ್ಚಿ ಮಾತನಾಡುವ ಸಂಭಾಷಣೆಯನ್ನು ಹೆಣೆದು ನಾಯಕ ನಟನನ್ನು ರೊಚ್ಚಿಗೆಬ್ಬಿಸುವಲ್ಲಿ ಸಂಭಾಷಣೆಕಾರತುಷಾರ್ ರಂಗನಾಥ್ ಸ್ವಂತಿಕೆ ಮೆರೆದಿದ್ದಾರೆ.
ಚಿತ್ರದಲ್ಲಿ ಅದ್ದೂರಿತನವಿದೆ. ಮೈ ಝುಂ ಎನ್ನಿಸುವ ಥ್ರಿಲ್ಲರ್ ಮಂಜು ಸಾಹಸವಿದೆ.ಪ್ರೇಕ್ಷಕರನ್ನು ಹಿಡಿದಿಡುವ ಕತೆಯಿದೆ.ಆದರೆ ಹೊಸತನವಿಲ್ಲ. ಕನ್ನಡ ನೇಟಿವಿಟಿಗೆ ತಕ್ಕಂತೆ ಕತೆ ಹೆಣೆದಿದ್ದರೂ ಸ್ವಂತಿಕೆಯ ಕೊರತೆ ಕಾಣುತ್ತದೆ. ಚಕ್ರಿ ಅವರ ಅಬ್ಬರದ ಸಂಗೀತದ ನಡುವೆ ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಸಾಹಿತ್ಯ ಕಾಣೆಯಾಗಿದೆ.
ಚಿತ್ರದ ನಾಯಕ ನಟ ಅನಾಥ. ಹಳ್ಳಿಯ ಮುಖ್ಯಸ್ಥ ರಾಮಚಂದ್ರಪ್ಪ(ಶ್ರೀನಿವಾಸಮೂರ್ತಿ) ಪ್ರೀತಿಗೆ ಪಾತ್ರನಾಗುವ ಕಂಠೀರವನಿಗೆ(ವಿಜಯ್) ಅವರ ಮನೆಯಲ್ಲೇ ಸ್ಥಾನ ಸಿಗುತ್ತದೆ. ಮನೆ ಮಗನಂತೆ ನೋಡಿಕೊಳ್ಳುತ್ತಾನೆ ರಾಮಚಂದ್ರಪ್ಪ. ಯಜಮಾನನ್ನು ಕಂಡರೆ ಕಂಠೀರವನಿಗೆ ಎಲ್ಲಿಲ್ಲದ ಅಕ್ಕರೆ,ಪ್ರೀತಿ. ಯಜಮಾನನಿಗೂ ಅಷ್ಟೇ ಕಂಠೀರವನ ಮಾತೆಂದರೆ ಲಕ್ಷ್ಮಣ ರೇಖೆ ಇದ್ದಂತೆ.
ಚಿಕ್ಕಂದಿನಲ್ಲಿ ಊರಿನ ಯಜಮಾನ ಹೇಳಿದ "ನೂರು ಜನಕ್ಕೆ ಒಳ್ಳೆದಾಗುವುದಾದರೆ ಪ್ರಾಣ ತೆಗೆಯುವುದಕ್ಕೂ ಸಿದ್ಧ ಇಲ್ಲಾ ಪ್ರಾಣ ಕೊಡಲಿಕ್ಕೂ ಸಿದ್ಧ" ಎಂಬ ಮಾತಿಗೆ ಕಂಠೀರವ ಬದ್ಧನಾಗಿರುತ್ತಾನೆ. ಆ ಮಾತಿನಂತೆ ಅವನು ನಡೆದುಕೊಳ್ಳುತ್ತಿರುತ್ತಾನೆ. ಇಂತಹ ಕಂಠೀರವನ ಹಿಂದೆ ಕೇರಳ ರೌಡಿಗಳು ಬೆನ್ನಿಗೆ ಬಿದ್ದಿರುತ್ತಾರೆ. ಅವರಿಗೂ ಕಂಠೀರವನಿಗೂ ಏನು ಸಂಬಂಧ, ಅವರೆಲ್ಲಾ ಯಾರು ಎಂಬುದೇ ಚಿತ್ರದಹೂರಣ.
ಕಂಠೀರವನಾಗಿ ವಿಜಯ್ ಚಿಂದಿ ಉಡಾಯಿಸಿದ್ದಾರೆ. ಸಾಹಸ ಸನ್ನಿವೇಶಗಳು ಮೈನವಿರೇಳಿಸುವಂತಿವೆ. ಹಳ್ಳಿಯ ಮುಗ್ಧ ಬೆಡಗಿ ಇಂದಿರಾಳಾಗಿ ಶುಭಾ ಪೂಂಜಾ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ರಿಷಿಕಾ ಸಿಂಗ್ ಅವರನ್ನು 'ಪ್ರದರ್ಶನ'ದ ಗೊಂಬೆಯಾಗಿ ಬಳಸಿಕೊಳ್ಳಲಾಗಿದೆ. ಶ್ರೀನಿವಾಸಮೂರ್ತಿಅವರು ಎಂದಿನಂತೆ ನಟಿಸಿದ್ದಾರೆ.
ಬೆಂಗಳೂರಿನ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಸೆರೆಸಿಕ್ಕಿರುವ ನಟಿ ಯಮುನಾ ಅವರೂ ಚಿತ್ರದಲ್ಲಿ ಗಮನಾರ್ಹ ಪಾತ್ರದಲ್ಲಿ ನಟಿಸಿದ್ದಾರೆ. ಖಳನಟರಾಗಿ ಬಾಲಸಾಹೇಬ್ ಮತ್ತು ಬಾಲ ನಾಯರ್ನಾಗಿ ಮುಖೇಷ್ ರಿಷಿ ಮತ್ತು ರಾಹುಲ್ ದೇವ್ ಮಿಂಚಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ಸಾಧು ಕೋಕಿಲ ಕಾಮಿಡಿ ಟೈಮ್ ಸಾಂದರ್ಭಿಕವಾಗಿದೆ.
ಅರುವತ್ತರ ದಶಕದಲ್ಲಿ ತೆರೆಕಂಡ ಐತಿಹಾಸಿಕ ಚಿತ್ರ 'ರಣಧೀರ ಕಂಠೀರವ' ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲು. ಚೆನ್ನೈನಲ್ಲಿ ನೆಲೆನಿಂತಿದ್ದ ಕನ್ನಡ ಚಿತ್ರರಂಗವನ್ನು ಕರ್ನಾಟಕ್ಕೆ ಸ್ಥಳಾಂತರವಾಗುವಂತೆ ಮಾಡಿದ ಚಿತ್ರ. ವರನಟ ಡಾ.ರಾಜ್ ಕುಮಾರ್, ಜಿ ವಿ ಅಯ್ಯರ್, ಬಾಲಕೃಷ್ಣ, ನರಸಿಂಹ ರಾಜು ಮುಂತಾದವರು ಅಭಿನಯಿಸಿದ್ದ ಚಿತ್ರ ಪ್ರೇಕ್ಷಕರ ಅಪಾರ ಮೆಚ್ಚಿಗೆ ಪಾತ್ರವಾಗಿತ್ತು. ಆದರೆ ಈಗ ತೆರೆಕಂಡಿರುವ 'ಕಂಠೀರವ' ಇದಕ್ಕೆ ತದ್ವಿರುದ್ಧವಿದ್ದಂತಿದೆ. [ಚಿತ್ರ ವಿಮರ್ಶೆ]