Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೈಲೇಂದ್ರ ಬಾಬು, ಸುಮಂತ್ 'ಆಟ' ಚಿತ್ರವಿಮರ್ಶೆ
ನಿರ್ಮಾಪಕ ಶೈಲೇಂದ್ರ ಬಾಬು ತಮ್ಮ ಮಗ ಸುಮಂತ್ ಶೈಲೇಂದ್ರನ ಸ್ಯಾಂಡಲ್ ವುಡ್ 'ಆಟ' ಕ್ಕಾಗಿ ಮಾಡಿದ ಚಿತ್ರ ಈ 'ಆಟ'. ಬೆಂಗಳೂರು ಹಾಗೂ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಮೇನ್ ಮ್ಯಾಜಿಕ್ 'ಮೇಕಿಂಗ್' ಎನ್ನಬಹುದು. ಮಗ ಸುಮಂತ್ ಆಟಕ್ಕೆ ಅಪ್ಪ ಶೈಲೇಂದ್ರ ಸಾಕಷ್ಟು ಖರ್ಚುಮಾಡಿದ್ದಾರೆ. ಎಲ್ಲೆಲ್ಲೂ ಕಂಡುಬರುತ್ತಿದೆ, ಪೋಸ್ಟರ್ಸ್ ಹಾಗೂ ಧಾರಾಳ ಪಬ್ಲಿಸಿಟಿ.
ನಿರ್ದೇಶಕ ವಿಜಯಕುಮಾರ್ ನಿರ್ದೇಶನ ಲಯ ತಪ್ಪದಿದ್ದರೂ ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಚಿತ್ರತಂಡದಿಂದ ಸರಿಯಾದ ನಟನೆ ತೆಗೆಯುವಲ್ಲಿ ಅವರು ಎಡವಿದ್ದಾರೆ. ನಿರ್ದೇಶಕ 'ಶಶಾಂಕ್'ರ ಒಳ್ಳೆ ಲವ್ ಸ್ಟೋರಿಯನ್ನು ಉತ್ತಮ ಚಿತ್ರಕಥೆ ಮಾಡಿರುವ ವಿಜಯಕುಮಾರ್ ಗೆ ಸಂಭಾಷಣೆಕಾರ ರಘುಚರಣ್ ಉತ್ತಮ ಸಾಥ್ ಕೊಟ್ಟಿದ್ದಾರೆ. ಅತ್ಯುತ್ತಮ ಚಿತ್ರವನ್ನಾಗಿ ಮಾಡಬಹುದಾಗಿದ್ದ ಕಥೆಯನ್ನು ಪರ್ವಾಗಿಲ್ಲ ಎನ್ನುವಂತೆ ನಿರೂಪಿಸಿದ್ದಾರೆ ವಿಜಯಕುಮಾರ್.
ಹೊಸ ಹುಡುಗನನ್ನು ನಾಯಕನನ್ನಾಗಿ ಪರಿಚಯಿಸಲು ಪಟ್ಟ ಶ್ರಮ, ಕಥೆ ಹಾಗೂ ನಿರೂಪಣೆಯಲ್ಲಿ ಎದ್ದು ಕಾಣುತ್ತದೆ. ಆಟಗಾರ ನಾಯಕನ ಜೀವನದಲ್ಲಿ ಆಕಸ್ಮಿಕವಾಗಿ ನಾಯಕಿಯ ಪ್ರವೇಶವಾಗುತ್ತದೆ. ನಾಯಕನಿಗಾಗಿ ಮನೆಬಿಟ್ಟು ಬರುವ ನಾಯಕಿ ಕೊನೆಗೆ ನಾಯಕನ ಮಾತಿನಂತೆ ಪೋಷಕರ ಮುಂದೆ ನಿಲ್ಲುವಂತಾಗುತ್ತದೆ. ಮಧ್ಯೆ ಮಾಮೂಲಿಯಂತೆ ಪ್ರೇಮಿಗಳ ಪರದಾಟ ಇದ್ದೇ ಇದೆ.
ಪೋಷಕರ ಸಮ್ಮತಿ ಪಡೆದು ಮದುವೆಯಾಗುತ್ತಾರೋ ಅಥವಾ ಪ್ರೇಮಿಗಳು ದೂರವಾಗುತ್ತಾರೋ ಎಂಬುದನ್ನು ತೆರೆಯ ಮೇಲೆ ನೋಡಿದರೇ ಚೆಂದ. ಚುರುಕಾಗಿರುವ ಚಿತ್ರಕಥೆ ಇದ್ದರೂ ಪ್ರೇಕ್ಷಕರಿಗೆ ಬೋರಾಗಲು ಕಾರಣ ಚಿತ್ರದ ಅವಧಿ ಹಾಗೂ ಅದೇ ಹಳೆಯ ವಿಲನ್ ಗಳ ಅಬ್ಬರ. ನಿರ್ಮಾಪಕರ ಮಗನೇ ನಾಯಕನಾಗಿರುವ ಕಾರಣ ಖರ್ಚುವೆಚ್ಚಕ್ಕೆ ಇಲ್ಲ ಕಡಿವಾಣ.
ನಾಯಕ ಸುಮಂತ್ ದೇಹದಲ್ಲಿರುವ ಉತ್ಸಾಹ ಮುಖದಲ್ಲಿಲ್ಲ. ಆಟ ಆಡುತ್ತಿರುವ ಹುಡುಗರನ್ನು ಪಾಠಕ್ಕೆ ಕರೆದಂತೆ ನಾಯಕ ಸುಮಂತ್ ಹಾಗೂ ನಾಯಕಿ ವಿಭಾ ನಟರಾಜ್ ನಟನೆ ಇದೆ. ಇಬ್ಬರದೂ ಒಂದೇ ಪ್ರಶ್ನೆ, 'ಆಟ' ಓಕೆ, ನಟನೆ ಯಾಕೆ? ಅವಿನಾಶ್, ಅಚ್ಯುತ್ ಹಾಗೂ ಸಾಧುಕೋಕಿಲ ಅಭಿನಯ ಆಟದಷ್ಟೇ ಲೀಲಾಜಾಲ. ಖಳನಟ ಶಂಕರ್ ಹೇಳಿದಷ್ಟು ಮಾಡಿದಂತಿದೆ. ರಾಘವನ್ ಛಾಯಾಗ್ರಹಣ, ಸಾಧುಕೋಕಿಲಾ ಸಂಗೀತ ಓಕೆ.
ಒಟ್ಟಿನಲ್ಲಿ, ಸುಮಂತ್ ಆಟಕ್ಕೆ ಮಾತ್ರ ಸರಿ. ಆಕ್ಟಿಂಗ್ ಗೆ ಅಲ್ಲ ಎನ್ನುವಂತಾದರೆ ಭವಿಷ್ಯ ಕಷ್ಟ. ಇನ್ನುಳಿದಂತೆ ಸಿನಿಮಾ ಪರ್ವಾಗಿಲ್ಲ. ಹಾಕಿದ ಹಣಕ್ಕೆ ನಿರ್ಮಾಪಕರಿಗೆ ಯೋಚನೆ ಇಲ್ಲದಿದ್ದರೂ ಕೊಟ್ಟ ಹಣಕ್ಕೆ ಪ್ರೇಕ್ಷಕರಿಗೆ ಯೋಚನೆ ಇದ್ದೇ ಇರುತ್ತದೆ ಎಂಬುದನ್ನು ಯಾವ ನಿರ್ಮಾಪಕ, ನಟರೂ ಮರೆಯಬಾರದು. ಇನ್ನೂ ಸಾಕಷ್ಟು ಚೆನ್ನಾಗಿ ಮಾಡಬಹುದಿತ್ತಲ್ಲ ಅಂತ 'ರಿಚ್ ನೆಸ್' ಹಾಗೂ 'ಪ್ರಚಾರ' ನೋಡಿ ಬೇಸರವಾಗುತ್ತದೆ. ಆಟವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬುದು ಸದ್ಯದ ಕತೂಹಲ. (ಒನ್ ಇಂಡಿಯಾ ಕನ್ನಡ)