twitter
    For Quick Alerts
    ALLOW NOTIFICATIONS  
    For Daily Alerts

    ಏಪ್ರಿಲ್‌ಗೆ ಮುನ್ನವೇ ‘ಫೂಲ್‌’ ಮಾಡಲು ಬಂದ ಚಿತ್ರ!

    By Staff
    |
    • ಚೇತನ್‌ ನಾಡಿಗೇರ್‌
    ನಿರ್ದೇಶಕ ಜಯರಾಮಯ್ಯನವರಿಗೂ ಮೂರ್ಖತನಕ್ಕೂ ಏನೋ ಒಂದು ರೀತಿಯ ನಂಟು. ಬಹಳ ವರ್ಷಗಳ ಹಿಂದೆ ಅವರು ‘ಏಪ್ರಿಲ್‌ ಫೂಲ್‌’ ಚಿತ್ರ ಮಾಡಿ ಜನರನ್ನು ಮೂರ್ಖರನ್ನಾಗಿಸಿದ್ದರು. ಈಗ ಅವರು ಏಪ್ರಿಲ್‌ಗೆ ಮುನ್ನವೇ. ಎಲ್ಲಾ ಕಾಲಕ್ಕೂ ಸರಿ ಹೊಂದುವ ‘ಮೂರ್ಖ’ ಎಂಬ ಹಾಸ್ಯಮಯ ಚಿತ್ರವನ್ನು ಮಹಾಜನತೆಗೆ ಅರ್ಪಿಸಿದ್ದಾರೆ.

    ಶೀರ್ಷಿಕೆ ಹಾಗೂ ನಾಯಕಿಯ ವಿಚಿತ್ರ ಉಡುಪುಗಳನ್ನು ನೋಡಿ, ಚಿತ್ರದಲ್ಲಿ ಹೊಸತೇನೋ ಇದೆ ಎಂದು ನಂಬಿ ಹೋದ ಪ್ರೇಕ್ಷಕರನ್ನು ಜಯರಾಮಯ್ಯ ಸಖತ್ತಾಗಿ ಮೂರ್ಖರನ್ನಾಗಿಸುತ್ತರೆ. ಏಕೆಂದರೆ ಚಿತ್ರ ನೋಡಿದರೆ ಜಯರಾಮಯ್ಯನವರಿಗೆ ‘ಓಲ್ಡ್‌ ಈಸ್‌ ಗೋಲ್ಡ್‌’ ಎಂಬ ತತ್ವದಲ್ಲಿ ನಂಬಿಕೆ ಹೆಚ್ಚಿರಬಹುದೆಂದು ಅನ್ನಿಸದೇ ಇರುವುದಿಲ್ಲ. ಮೂರ್ನಾಲ್ಕು ದಶಕಗಳ ಹಿಂದೆ ಬಂದಿದ್ದರೆ ಯಶಸ್ವಿಯಾಗಬಹುದಾಗಿದ್ದದಂಥ ಅತೀ ಓಲ್ಡಾದ ಕಥೆಯನ್ನು ಅವರು ಗೋಲ್ಡ್‌ ಮಾಡಲು ಹೊರಟಿರುವುದೇ ಅದಕ್ಕೆ ಸಾಕ್ಷಿ.

    ಚಿತ್ರದ ಆರಂಭ ನೋಡಿದರೆ ಸಾಕು ಮುಂದಿನ ದೃಶ್ಯಗಳಲ್ಲಿ ಏನೆಲ್ಲಾ ನಡೆಯಬಹುದು ಎಂಬುದನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದಾದಷ್ಟು ಹಳೆಯ ಕಥೆಯನ್ನು ಅವರು ಪುನಃ ಹೆಕ್ಕಿ ತಂದಿದ್ದಾರೆ. ಯಾವುದೇ ಪರಭಾಷಾ ಚಿತ್ರದ ರೀಮೇಕ್‌ ಅಲ್ಲದಿದ್ದರೂ ಚಿತ್ರ ಸಾಗುತ್ತಿದ್ದಂತೆ ಮಾಲಾಶ್ರೀ ಅಭಿನಯದ ಹಲವು ಚಿತ್ರಗಳೂ ಸೇರಿದಂತೆ ಕನಿಷ್ಠ ಎರಡು ಡಜನ್‌ ಹಳೆಯ ಕನ್ನಡ ಚಿತ್ರಗಳು ಪ್ರೇಕ್ಷಕರ ಕಣ್ಮುಂದೆ ಹಾದು ಹೋದರೆ ಆಶ್ಚರ್ಯಪಡಬೇಕಿಲ್ಲ !

    ಕಾಶೀನಾಥ್‌ ನಾಯಕ ಎಂದರೆ ಅವರು ಯಥಾಪ್ರಕಾರ ಪೆದ್ದನಾಗಿರಲೇಬೇಕು. ಅದರಿಲ್ಲಿ ಅವರು ಮೂರ್ಖರಾಗಿದ್ದಾರೆ. ಚಿತ್ರದುದ್ದಕ್ಕೂ ಎಲ್ಲರಿಂದಲೂ ಮೂರ್ಖನೆನಸಿಕೊಂಡು, ಅಂತ್ಯದಲ್ಲಿ ಬೇರೆಯವರನ್ನು ಹೇಗೆ ಅವರು ಮೂರ್ಖರನ್ನಾಗಿಸುತ್ತಾರೆ ಎನ್ನುವುದೇ ಈ ಚಿತ್ರದ ಒಟ್ಟಾರೆ ಸಾರಾಂಶ. ಈ ಮಧ್ಯೆ ಹಲವಾರು ಘಟನೆಗಳು ನಡೆಯುತ್ತವೆ. ಚಿತ್ರದಲ್ಲಿ ವರದಕ್ಷಿಣೆ ಸಮಸ್ಯೆಯಿದೆ, ಅತ್ತೆ-ಸೊಸೆ ಘರ್ಷಣೆಯಿದೆ, ಅತ್ತಿಗೆ-ಮೈದುನ ಸೆಂಟಿಮೆಂಟಿದೆ, ಕಿರುಕುಳವಿದೆ, ನಗುವಿದೆ, ಕಣ್ಣೀರಿದೆ, ಹಾಸ್ಯವಿದೆ, ಅಪಹಾಸ್ಯವಿದೆ, ರೋಚಕತೆಯಿದೆ, ಬೆಡ್‌ ರೂಂ ಸೀನಿದೆ. ಐಟಂ ಸಾಂಗಿದೆ ಇತ್ಯಾದಿ ಇತ್ಯಾದಿ. ಆದರೆ ಇಷ್ಟೆಲ್ಲಾ ಇದ್ದರೂ ಚಿತ್ರದಲ್ಲಿ ಹೊಸತನವಿಲ್ಲವೆನ್ನುವುದೇ ಚಿತ್ರದ ಮೈನಸ್‌ ಪಾಯಿಂಟು.

    ಅಭಿನಯದ ವಿಷಯಕ್ಕೆ ಬಂದರೆ ಅನ್ನಪೂರ್ಣಮ್ಮನ್ನಾಗಿ ಉಮಾಶ್ರೀ ಅವರ ಅಭಿನಯ ಫಸ್ಟ್‌ಕ್ಲಾಸ್‌. ಬಹಳ ದಿನಗಳ ನಂತರ ಘಟವಾಣಿ ಅತ್ತೆ ಯಾಗಿ ನಟಿಸಿರುವ ಅವರು ಮಿಂಚುತ್ತಾರೆ. ಕಾಶೀನಾಥ್‌ ತಮ್ಮ ಮಾಮೂಲಿನ ಪೆಕರಾವತಾರ ದಲ್ಲಿ ಕಾಣಸಿಗುತ್ತಾರೆ. ಒಂದು ದಶಕದ ಹಿಂದೆಯೇ ಕಾಶೀನಾಥ್‌ ಪ್ರತಿಭೆ ನಿಂತ ನೀರಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಇಲ್ಲೂ ಆ ನೀರು ಹರಿದಿಲ್ಲ ಎಂಬುದು ಬೇಸರದ ಸಂಗತಿ. ನಾಯಕಿ ನಮ್ರತಾ ಹಾಡುಗಳಲ್ಲಿ ವಿಚಿತ್ರವೆನಿಸುವ ಕಾಸ್ಟ್ಯೂಮ್‌ಗಳನ್ನು ತೊಟ್ಟು ಕುಣಿಯುವುದಕ್ಕೆ ಮಾತ್ರ ಇಲ್ಲಿ ಮೀಸಲಾಗಿಲ್ಲ. ಅತ್ತೆ - ಮಾವನನ್ನು ಸರಿ ದಾರಿಗೆ ತರುವ ಸೊಸೆಯಾಗಿ ಕೂಡಾ ಅವರು ಗಮನ ಸೆಳೆಯುತ್ತಾರೆ. ಕರಿಬಸವಯ್ಯ ಅಕ್ಷಿ ಎಂದು ಸೀನುತ್ತಲೇ ಎದುರಿಗಿರುವ ಹೆಂಗಸರ ಸೀರೆ ಬಿಚ್ಚುವ ಸೀನು ಕೆಲವರಿಗಾದರೂ ನಗು ತರಿಸಬಹುದು ? ಇನ್ನು ಬ್ಯಾಂಕ್‌ ಜನಾರ್ಧನ್‌, ರೇಖಾದಾಸ್‌, ಭವ್ಯರವರ ನಟನೆಯಲ್ಲಿ ಹೊಸತನವಿಲ್ಲ.

    ‘ಮೂರ್ಖ’ ನಿರ್ಮಾಪಕ ಬಿ. ಎಂ.ನಾಗರಾಜ್‌ ಕೂಡಾ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಅಭಿನಯದಲ್ಲಿ ಇಷ್ಟವಾಗುವು ದು ಅವರ ಸ್ಥಿತಪ್ರಜ್ಞತೆ. ದುಃಖವಾದಾಗ ಅವರ ಮುಖ ಬಾಡುವುದಿಲ್ಲ. ಸಂತೋಷವಾದಾಗ ಮಂದಹಾಸ ಮೂಡುವುದಿಲ್ಲ. ಹೆಂಡತಿ ಸತ್ತಾಗ, ಸಾವಿರಾರು ರೂಪಾಯಿ ಕಳೆದುಕೊಂಡಾಗ, ಹತ್ತಾರು ರೌಡಿಗಳೊಂದಿಗೆ ಹೊಡೆದಾಡುವಾಗ, ಚೂರಾದ ಸಂಸಾರ ಒಂದಾದಾಗ, ಹೀಗೆ ಯಾವು ದೇ ಸನ್ನಿವೇಶವಿರಲಿ ಅವರ ಮುಖದಲ್ಲಿ ಹಾಗೂ ಅಭಿನಯದಲ್ಲಿ ಏರಿಳಿತಗಳು ಕಾಣಲು ಸಾಧ್ಯವೇ ಇಲ್ಲ !

    ವಿ. ಮನೋಹರ್‌ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಛಾಯಾಗ್ರಹಣ ಓಕೆ.

    (ಸ್ನೇಹ ಸೇತು : ವಿಜಯ ಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Tuesday, April 23, 2024, 19:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X