Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಷ್ಟ ಚಿತ್ರ ವಿಮರ್ಶೆ: ನಿರ್ದೇಶಕರಿಗೆ ಇಷ್ಟ ಪ್ರೇಕ್ಷಕರಿಗೆ?
ಮೆಕಾನಿಕ್ ಹುಡುಗ ಕೃಷ್ಣನನ್ನು ಕಾಲೇಜು ಹುಡುಗಿ ನಂದಾ ಪ್ರೀತಿಸುವುದು 'ಗಣೇಶ್-ಅಮೂಲ್ಯಾ' ಜೋಡಿಯ ಚೆಲುವಿನ ಚಿತ್ತಾರವನ್ನು ನೆನಪಿಸುತ್ತದೆ. ನಂದಾಳ ಒನ್ ವೇ ಲವ್ ನಿಂದ ಪ್ರಾರಂಭವಾಗುವ ಸ್ಟೋರಿ, ಬರಬರುತ್ತಾ ಕೃಷ್ಣನನ್ನೂ ತೆಕ್ಕೆಗೆ ತೆಗೆದುಕೊಂಡು ಟೂ ವೇಗೆ ಜಾರುತ್ತದೆ. ಇಂಟರ್ ವೆಲ್ ನಂತರ ಕಥೆ 'ತ್ರಿಕೋನ' ಪ್ರೇಮಕಥೆಯಾಗಿ ಮಾರ್ಪಡುತ್ತದೆ.
ಬಾಲ್ಯದಲ್ಲೇ ತಂದೆಯ ಅನೈತಿಕ ವ್ಯವಹಾರವನ್ನು ಸ್ವತಃ ಕಣ್ಣಲ್ಲಿ ಕಂಡ ಮಗ ಕೃಷ್ಣ ತಂದೆಯನ್ನು ಕೊಂದು ಕಂಬಿಯ ಹಿಂದೆ ಸೇರುತ್ತಾನೆ. ಬಿಡುಗಡೆಯಾಗಿ ಬಂದ ಮೇಲೆ ತಾಯಿಯ ಮಡಿಲು ಸೇರಲು ಅಸಮರ್ಥನಾಗುತ್ತಾನೆ. ಇದೆಲ್ಲವನ್ನೂ ತಿಳಿದ (!) ಕಾಲೇಜು ಕನ್ಯೆ ನಂದಾ ಮೆಕ್ಯಾನಿಕ್ ಕೃಷ್ಣನನ್ನು ಪ್ರೀತಿಸಿ ಗೆಲ್ಲಲು ಪ್ರಯತ್ನಿಸುತ್ತಾಳೆ.
ಇಂಟರ್ ವಲ್ ನಂತರ ಕೃಷ್ಣನೂ ನಂದಾಳನ್ನು ಪ್ರೀತಿಸುವ ಮೂಲಕ ನಂದಾಗೆ ಗೆಲುವು. ಆದರೆ ಅವಳ ಸಂಬಂಧಿ ರವಿತೇಜ ಕೃಷ್ಣನನ್ನು ಪ್ರೀತಿಸುತ್ತಿರುವ ನಂದಾಳನ್ನು ತಿಳಿದೂ ಪ್ರೀತಿಸಲು ತೊಡಗಿ ತಾನು ಈ ಪ್ರೇಮಕಥೆಗೆ 'ವಿಲನ್' ಎಂದು ನಿರೂಪಿಸುತ್ತಾನೆ. ಅಲ್ಲಿಗೆ ಕಥೆ ಮಾಮೂಲಿ ಎನಿಸುವ ಪ್ರೇಮಕಥೆಯಾಗುತ್ತದೆ. ಎಲ್ಲವನ್ನೂ ಇಲ್ಲೇ ಹೇಳಿದರೆ ಹೇಗೆ ? ತೆರೆಯ ಮೇಲೆ ನೋಡಿ... ಬೇಸರಿಸಬೇಡಿ!
ಈ ತ್ರಿಕೋನ ಪ್ರೇಮಕಥಗೇ ಸುಸ್ತಾಗಿ ಸದ್ಯ ನಾಲ್ಕನೆಯ ಎಂಟ್ರಿ ತಪ್ಪಿದರೆ ಸಾಕು ಎಂದು ಪ್ರೇಕ್ಷಕರು(?) ನಿಟ್ಟುಸಿರು ಬಿಡುವುದು ಗ್ಯಾರಂಟಿ ಎಂಬಂತಿದೆ ನಿರ್ದೇಶಕರ ನಿರೂಪಣೆ. ಮೊದಲ ದೃಶ್ಯದಿಂದಲೇ ನಿರ್ದೇಶಕರ ಹಿಡಿತ ತಪ್ಪಿದಂತಿದೆ ಸಿನಿಮಾ. ಬರಬರುತ್ತಾ ನಿರ್ದೇಶಕರಿಂದ ಅಷ್ಟೇ ಅಲ್ಲದೇ ಛಾಯಾಗ್ರಾಹಕ, ಸಂಕಲನಕಾರರಿಂದಲೂ ತಪ್ಪಸಿಕೊಂಡು ಬಂದಿರುವುದು ಸ್ಪಷ್ಟವಾಗುತ್ತಾ ಸಾಗುತ್ತದೆ. ಸದ್ಯ ನಟ-ನಟಿಯರಿಂದ ತಪ್ಪಿಸಿಕೊಂಡಿಲ್ಲ ಅಂತ 'ಖುಷಿ' ಪಡಬೇಕು!
ವಿಮರ್ಶೆಯಲ್ಲೇ ಕಥೆಯೆಲ್ಲವನ್ನೂ ಹೇಳಿಬಿಟ್ಟರೆ ಇನ್ನು ಥಿಯೇಟರ್ ಹೋಗಿ ನೋಡುವುದೇನು ಎಂಬ ತರ್ಕವನ್ನಿಟ್ಟು ಕಥೆಯ ಹೊರತಾಗಿ ಸಿನಿಮಾ ಮೇಕಿಂಗ್ ಬಗ್ಗೆ ಹೇಳಲೇಬೇಕು. ನಿರ್ಮಾಪಕರಿಗೆ ಸಿನಿಮಾ ಗಂಧಗಾಳಿಯೇ ಗೊತ್ತಿರಲಿಕ್ಕಿಲ್ಲ. ಛಾಯಾಗ್ರಾಹಕ ಮಹದೇವ್ ಇನ್ನೂ ಮೊದಲ ತರಗತಿಯ ವಿದ್ಯಾರ್ಥಿ. ಕ್ಯಾಮೆರಾ ಜೊತೆ ಇನ್ನೂ ಸಾಕಷ್ಟು ಪಳಗಬೇಕು. ನಾಯಕಿಯನ್ನು ಸರಿಯಾಗಿ ತೆರೆಯ ಮೇಲೆಯೇ ತೋರಿಸಬೇಕು.
ಸಂಗೀತ ನೀಡಿರುವ ಇಂದ್ರಾಣಿ ಛಾಬ್ರಿಯಾ 'ನಿನ್ನ ಕಣ್ಣಲಿ ನನ್ನ ಕಣ್ಣಿತ್ತು' ಹಾಗೂ 'ನಾ ಪಾಪಿ ಲೋಕದಲ್ಲಿ ನಾಯಕನು' ಹಾಡಿನ ಮೂಲಕ ಗಮನ ಸೆಳೆಯುತ್ತಾರೆ. ಆದರೂ ಅದನ್ನು ದೃಶ್ಯ ಮಾಧ್ಯಮದಲ್ಲಿ ಬಳಸಿಕೊಳ್ಳುವಲ್ಲಿ ವಿಫಲವಾಗಿರುವುದರಿಂದ ಅವರೂ ಊಟಕ್ಕಾಗದ ಉಪ್ಪಿನಕಾಯಿಯಂತಾಗಿದ್ದಾರೆ. ಇದ್ದುದರಲ್ಲಿ 'ನೀ ಇಷ್ಟಾನೇ' ಹಾಡು ಓಕೆ.
'ನಾಯಕ ಕಲ್ಲನ್ನು ಎತ್ತಿ ಹಾಕುವ' ಮೊದಲ ದೃಶ್ಯದಿಂದಲೇ ಗೊಂದಲ ಸೃಷ್ಟಿಸುವ ಕಥೆ 'ನಿರ್ದೇಶಕ ಆರ್ ಪಿ ಕೃಷ್ಣ' ಅವರ ಅಸಮರ್ಪಕ ನಿರೂಪಣೆಯಿಂದ ಗೊಂದಲದ ಗೂಡಾಗಿದೆ. ಕಥೆ-ಚಿತ್ರಕಥೆ-ಸಂಭಾಷಣೆ ಮೂರರಲ್ಲೂ ಎಡವಿರುವ ನಿರ್ದೇಶಕರು ಸಹಜವಾಗಿಯೇ ನಿರ್ದೇಶನದಲ್ಲೂ ಮುಗ್ಗರಿಸಿದ್ದಾರೆ. ಅದನ್ನು ಅವರು ಸ್ಪಷ್ಟವಾಗಿ ಅರಿತುಕೊಂಡರೆ ಮುಂದಿನ ಸಿನಿಮಾ ಹಬ್ಬದೂಟ ಗ್ಯಾರಂಟಿ.
ಇನ್ನು ಅಭಿನಯದ ವಿಷಯಕ್ಕೆ ಬರಲೇಬಾರದು. ನಟನೆಯಲ್ಲಿ ಸಂತೋಷ್ ಸ್ವರ್ಭಿ ಓಕೆ. ಸರಿಯಾದ ನಿರ್ದೇಶನ ಸಿಕ್ಕರೆ ನಟ ಅನ್ನಿಸಿಕೊಳ್ಳಬಹುದು. ಅವರ ನಟನೆಯನ್ನು ನೋಡಿದರೆ ಹೇಳಿಕೊಟ್ಟಿದ್ದನ್ನು ಮಾಡದೇ ಹೇಳಿಕೊಡದೇ ಇದ್ದುದನ್ನೇ ಮಾಡಿ ಬಚಾವ್ ಆದಂತಿದೆ. ಅದಕ್ಕೆ ಸಾಕ್ಷಿ ಬೇಕಾದರೆ ಉಳಿದವರ ನಟನೆ ನೋಡಿ, ಶ್ರೀಕಾಂತ್ ಹೆಬ್ಳೀಕರ್ ಬಿಟ್ಟು.
ಇನ್ನು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಒಳ್ಳೆ ಕಲಾವಿದ ಅನ್ನಿಸಿಕೊಂಡಿರುವ 'ರವಿತೇಜ' ಆ ಪಾತ್ರಕ್ಕೆ ಹೊಂದಿಕೆ ಆಗಿಲ್ಲ. ಅವರು ಪಾತ್ರಗಳ ಆಯ್ಕೆಯಲ್ಲಿ ಜಾಣರಾಗಬೇಕು. ನಾಯಕಿ ಭೂಮಿಕಾ ಎತ್ತರ ದೈಹಿಕವಾಗಿ ತೀರಾ ಕಮ್ಮಿಯಾದರೆ ನಟನೆಯಲ್ಲಿ ನಾಟ್ ಬ್ಯಾಡ್. ಕ್ಯಾಮೆರಾ ಸೆನ್ಸ್ ಇನ್ನೂ ಸಾಕಷ್ಟು ಬೇಕು. ಉಳಿದವರು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ. ಹಾಗೆ ಬಂದು ಹೀಗೆ ಹೋಗಿದ್ದಾರೆ.
ಸಿನಿಮಾ ಮಾಡಬೇಕೆಂಬ ನಿರ್ಮಾಪಕ ಹಾಗೂ ನಿರ್ದೇಶಕರ ಮಹತ್ವಾಕಾಂಕ್ಷೆಗೆ ಹಾಟ್ಸ್ ಅಪ್. ಆದರೆ ಏನೇ ಮಾಡುವುದಿದ್ದರೂ ಪೂರ್ವ ತಯಾರಿ ಹಾಗೂ ಪ್ಲಾನ್ ತುಂಬಾ ಮುಖ್ಯ ಎನ್ನುವುದನ್ನು ತಿಳಿಸಲು ಮಾಡಿದ ಜಾಹೀರಾತಿಗೆ(!) ಇವರು ರೂಪದರ್ಶಿಗಳು ಆಗಬೇಕಾಗಿರಲಿಲ್ಲ. ಪ್ರಯೋಗವನ್ನು ಪ್ರೇಕ್ಷಕರ ಮೇಲೆ ಮಾಡಿದರೆ ಹೇಗೆ..? ಆದರೂ ಒಮ್ಮೆ ನೋಡಿ ಹರಸಿಬಿಡಿ, ಇನ್ನೊಮ್ಮೆ ಚೆನ್ನಾಗಿ ಮಾಡುವುದಕ್ಕೆ ಅವಕಾಶ ಬೇಕಲ್ಲಾ! ಯಾವನಿಗೊತ್ತು! ಕೆಲವರು ಒಂದೊಂದೇ ತಪ್ಪಿಗೇ ಪಾಠ ಕಲಿಯುತ್ತಾರೆ.
ಬ್ಯಾನರ್: RMV ಫಿಲಂಸ್
ನಿರ್ಮಾಪಕರು: ವಿಜಯಕುಮಾರ್ ಟಿ ಛಾಬ್ರಿಯಾ
ನಿರ್ದೇಶನ: ಆರ್ ಪಿ ಕೃಷ್ಣ
ತಾರಾಗಣ: ಸಂತೋಷ್ ಸ್ವರ್ಬಿ ಭೂಮಿಕಾ ಛಾಬ್ರಿಯಾ, ರವಿತೇಜ, ಶ್ರೀಕಾಂತ್ ಹೆಬ್ಳೀಕರ್, ಪ್ರೇಮಲತಾ, ಹನುಮಕ್ಕ, ಕರಿಬಸವಯ್ಯ, ಮುಂತಾದವರು.
ಸಂಗೀತ: ಇಂದ್ರಾಣಿ ಛಾಬ್ರಿಯಾ
ಛಾಯಾಗ್ರಹಣ: ಸಿ ಎಸ್ ಮಹಾದೇವ್
ಸಂಕಲನ: ಶ್ರೀ - ಕ್ರೇಝಿ ಮೈಂಡ್ಸ್