ಯೋಗರಾಜ್...ಬಟ್ ಒಂದ್ ಕಿತ ಹೋಗಿ ನೋಡಿ
ಮೊದಲಾರ್ಧದಲ್ಲಿರುವ ಲವಲವಿಕೆ ಇಂಟರ್ವಲ್ ನಂತರ ಇದ್ದಿದ್ದರೆ ಚಿತ್ರ ಅದ್ಭುತ ಎನಿಸುವಂತಿತ್ತು. ದ್ವಿತೀಯಾರ್ಧದಲ್ಲಿ ನಿರ್ದೇಶಕರು ಕೆಲವೊಂದು ಅನಗತ್ಯ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವ ಹೋಮ್ ವರ್ಕ್ ನಡೆಸಿದ್ದರೆ, ವಾಸ್ತವತೆಯ ಬಗ್ಗೆ ಆಲೋಚಿಸಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಚಿತ್ರದಲ್ಲಿನ ನ್ಯೂನತೆ ನೋಡದೆ ಪ್ಲಸ್ ಪಾಯಿಂಟ್ ಬಗ್ಗೆ ಗಮನಿಸಿದರೆ ಚಿತ್ರ ಒಂದು ಪಕ್ಕಾ ಒನ್ ಟೈಮ್ ನೋಡೆಬಲ್ ಕಾಮಿಡಿ ಚಿತ್ರ.
ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ನವೀನ್ ಕೃಷ್ಣ ಮ್ಯಾನರಿಸಂಗೆ ಒಳ್ಳೆ ಕಥೆ ಮತ್ತು ಚಿತ್ರಕಥೆಯನ್ನೇ ಹಣೆದಿದ್ದಾರೆ. ಇಡೀ ಚಿತ್ರದಲ್ಲಿ ನವೀನ್ ಅವರ ನಟನೆ ಮಾತ್ರ ಮೈಂಡ್ ಬ್ಲೋಯಿಂಗ್. ನಿರಾಯಾಸವಾಗಿ ಪಾತ್ರದಲ್ಲಿ ತನ್ನನ್ನು ತೊಡಗಿಸಿ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ. ಮಿಲಿಂದ್ ಕೃಷ್ಣ ಅವರ ಸಂಗೀತ, ಗೌತಮ್ ಶ್ರೀವಾಸ್ತವ ಅವರ ಬ್ಯಾಕ್ ಗ್ರೌಂಡ್ ಸಂಗೀತ, ರಾಕೇಶ್ ಅವರ ಕ್ಯಾಮೆರಾ ಕೈಚಳಕದ ಬಗ್ಗೆ ಕೆಮ್ಮುವಂಗಿಲ್ಲ.
ಯೋಗರಾಜ್ (ನವೀನ್ ಕೃಷ್ಣ ) ಮನಶಾಸ್ತ್ರದಲ್ಲಿ ಪದವೀಧರ. ತಾನು ಓದಿದ ವಿದ್ಯೆಗೆ ಸೂಕ್ತ ಕೆಲಸ ಸಿಗದೇ ಇದ್ದಾಗ ನಿರ್ವಾಹವಿಲ್ಲದೆ ಜೀವನನಿರ್ವಹಣೆಗೆ ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗುತ್ತಾನೆ. ಒಮ್ಮೆ ಉನ್ನತ ವ್ಯಾಸಂಗಕ್ಕೆ ಹೊರಡಲು ಅಣಿಯಾಗಿರುವ ಸಿಹಿ (ನೀತೂ) ಭೇಟಿಯಾಗುತ್ತೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗೆ ಯೋಗರಾಜ್ಗೆ ಸಿಹಿಯ ಮೇಲೆ ಪ್ರೇಮಾಂಕುರವಾಗಿ ಅದನ್ನು ಅವಳಿಗೆ ತಿಳಿಸುತ್ತಾನೆ. ಸಿಹಿಯಿಂದ ಲವ್ ಪ್ರಪೋಸಲ್ಗೆ ಗ್ರೀನ್ ಸಿಗ್ನಲ್ ಬರುತ್ತೆ ಎನ್ನುವ ಸುದ್ದಿ ಬರುವಷ್ಟರಲ್ಲಿ ಯೋಗರಾಜ್ ಅಪಘಾತದಲ್ಲಿ ಸಾವನ್ನಪ್ಪುತ್ತಾನೆ. ಚಿತ್ರ ಇಲ್ಲಿಗೆ ಮುಗಿಯುವುದಿಲ್ಲ ನಂತರ ಏನಾಗುತ್ತೆ... ಚಿತ್ರ ಒಂದ್ ಕಿತ ನೋಡಿ.
ನಿಜಜೀವನದಲ್ಲಿ ಸಾಧ್ಯವಾಗದ ಸಬ್ಜೆಕ್ಟ್ ಅನ್ನು ದ್ವಿತೀಯಾರ್ಧದಲ್ಲಿ ಯಾಕೆ ನಿರ್ದೇಶಕರು ಆರಿಸಿಕೊಂಡರು? ಪುರಾಣದಲ್ಲಿ ಬರುವ ಕಥೆಯಲ್ಲಿ ಸತಿ ಸಾವಿತ್ರಿಯ ಪ್ರಾರ್ಥನೆಯಂತೆ ಯಮರಾಜ ತನ್ನ ಪಾಷಾಣ ಬೀಸದೆ ವಾಪಾಸು ಹೋಗುವ ಕಥೆಯನ್ನು ಈಗಿನ 21ನೇ ಶತಮಾನಕ್ಕೆ ಅಳವಡಿಸಿಕೊಂಡರೆ ಹೇಗೆ ಸ್ವಾಮಿ ಎನ್ನುವುದು ದಯಾಳ್ ಅವರಲ್ಲಿ ನಮ್ಮ ಪ್ರಶ್ನೆ. ಕೆಲವೊಂದು ದೃಶ್ಯಗಳು ದಿ. ವಿಷ್ಣು ಅವರ 'ಸಿರಿವಂತ' ಚಿತ್ರವನ್ನು ನೆನಪಿಸುತ್ತದೆ.ಖ್ಯಾತ ಹಿಂದಿ ಹಾಡು "ಬೊಂಬ್ಸೆ ಆಯಾ ಮೆರಾ ದೋಸ್ತ್..." ಟ್ಯೂನ್ ಅನ್ನು ಬಳಸಿಕೊಳ್ಳಲಾಗಿದೆ.
ಚಿತ್ರದ ಪ್ಲಸ್ ಪಾಯಿಂಟ್ ಅಂದರೆ ಲವಲವಿಕೆಯಿಂದ ಸಾಗುವ ಮೊದಲಾರ್ಧ. ನವೀನ್ ಮತ್ತು ನೀತು ನಟನೆ ಸುಪರ್ಬ್. ನವೀನ್ ಡೈಲಾಗ್ ಡೆಲಿವರಿ, ಕಾಮಿಡಿ ದೃಶ್ಯದಲ್ಲಿನ ಸ್ವರ ಬದಲಾವಣೆಗೆ ಶಹಬಾಸ್ ಎನ್ನಲೇ ಬೇಕು. ಅತಿಥಿ ಪಾತ್ರದಲ್ಲಿ ಬರುವ ಶ್ರೀನಿವಾಸ್ ಮೂರ್ತಿ ನಟನೆ ಮನೋಜ್ಞ. ಉಳಿದ ತಾರಾಗಣದಲ್ಲಿ ಬರುವ ಸಿಹಿಕಹಿ ಚಂದ್ರು, ಸುಚೇಂದ್ರ ಪ್ರಸಾದ್, ತರುಣ್ ಶ್ರೀಧರ್, ನವೀನ್ ಕೃಷ್ಣ ಸಹೋದರಿ ಅಮೃತಾ ಮುಂತಾದವರ ನಟನೆ ಚೆನ್ನಾಗಿದೆ.


Click it and Unblock the Notifications











