ಬೇವು-ಬೆಲ್ಲದ ಮಿಶ್ರಣ ರವಿಚಂದ್ರನ್ ಚಿತ್ರ 'ನರಸಿಂಹ'
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯ ಮತ್ತು ಎಸ್ ಮೋಹನ್ ನಿರ್ದೇಶನದ ಚಿತ್ರ 'ನರಸಿಂಹ' ಕಳೆದ ಶುಕ್ರವಾರ, ಮಾರ್ಚ್ 23, 2012 ರ ಯುಗಾದಿಯಂದು ರಾಜ್ಯಾದ್ಯಂತ ತೆರೆಕಂಡಿದೆ. 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ರವಿಚಂದ್ರನ್ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿರುವ ಚಿತ್ರವಾಗಿತ್ತು.
ನರಸಿಂಹ ಕಥೆ ತೀರಾ ಹಳೆಯದು ಮತ್ತು ಈಗಿನ ಯಂಗ್ ಜನರೇಶನ್ ಗೆ ಓಲ್ಡ್ ಅನ್ನಿಸುವಂತದ್ದು. ಚಿತ್ರದುದ್ದಕ್ಕೂ ಕೇಳುವ "ಗುಡಿಯಲ್ಲಿರುವ ನರಸಿಂಹನಿಗೆ ಕೈ ಮುಗಿದು ಹೋಗು, ಕಂಬದಲ್ಲಿರುವ ನರಸಿಂಹನ ಕರೀಬೇಡ..." ಡೈಲಾಗ್ ಅನ್ನು ಪ್ರೇಕ್ಷಕರಿಗೂ "ಸುಮ್ಮನೆ ಚಿತ್ರ ನೋಡಿ ಹೋಗು, ಹಾಗಿದೆ, ಹೀಗಿದೆ ಅನ್ನಬೇಡ..." ಎಂದು ಅನ್ವಯಿಸಿಕೊಳ್ಳಬಹುದು. ಕಾರಣ, ಹಳೆಯ ದಾನ, ಧರ್ಮ ಹಾಗೂ ಊರುದ್ಧಾರದ ಕಥೆ ಅಷ್ಟೇ.
ಚಿತ್ರ ನಿರೂಪಣೆಯನ್ನು ನಿರ್ದೇಶಕ ಮೋಹನ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಳೆಯ ಕಥೆಯನ್ನೂ ವೇಗವಾಗಿ ನಿರೂಪಿಸುವ ಮೂಲಕ ಬಹಳಷ್ಟು ಬೋರಾಗಬಹುದಾಗಿದ್ದ ಚಿತ್ರವನ್ನು ಸ್ವಲ್ಪ ಮಾತ್ರ ಬೋರಾಗುವಂತೆ ಮಾಡಿದ್ದಾರೆ. ಮೊದಲಾರ್ಧ ಯಾವ ಏರಿಳಿತಗಳಿಲ್ಲದೇ ಸಾಗುವ ಕಥೆ ದ್ವಿತೀಯಾರ್ಧದಲ್ಲಿ ತಿರುವು ಪಡೆದುಕೊಂಡು ಎಲ್ಲಾ ಕಡೆ ರವಿಚಂದ್ರನ್ ಮಯ ಆಗುವುದರ ಜೊತೆಗೆ ಔದಾರ್ಯದ ಉಪದೇಶದತ್ತ ಸಾಗುತ್ತದೆ.
ಏನೇ ಆಗಲಿ, ಈ ಚಿತ್ರದಲ್ಲಿ ರಸಿಕ ರವಿಚಂದ್ರನ್ ಅವರನ್ನು ಅವರ ವಿರುದ್ಧ ಗುಣಗಳಿರುವ ಪಾತ್ರದಲ್ಲಿ ನೋಡಬಹುದು. ಅಭಿಮಾನಿಗಳಿಗೆ ಇದರಿಂದ ನಿರಾಸೆಯೂ ಆಗಬಹುದು. ರವಿಚಂದ್ರನ್ ಚಿತ್ರಗಳಲ್ಲಿರುವ 'ಮಾಮೂಲಿ ಮಸಾಲ' ಇಲ್ಲಿ ಪ್ರೇಕ್ಷಕರಿಗೆ ನೆಕ್ಕುವುದಕ್ಕೂ ಸಿಗುವುದಿಲ್ಲ. ನಿರ್ದೇಶಕರು ಹೇಳಿದಷ್ಟನ್ನು ಮಾಡುವ ಮೂಲಕ ರವಿಚಂದ್ರನ್ ನರಸಿಂಹದಲ್ಲಿ ನಿರ್ದೇಶಕರ ನಟ ಎನಿಸಿಕೊಂಡಿದ್ದಾರೆ.
ಇನ್ನು ನಾಯಕಿ ನಿಕೇಶಾ ಪಟೇಲ್ ಅವರ ಪಾತ್ರವಾಗಲೀ, ಅಭಿನಯವಾಗಲೀ ಎಲ್ಲೂ ರಜಿಸ್ಟರ್ ಆಗುವಂತಿಲ್ಲ. ನಟಿ ಸಂಜನಾ ಒಂದು ಹಾಡಲ್ಲಿ ಕಾಣಿಸಿಕೊಂಡಿದ್ದಾರೆ. ಖಳನಟನಾಗಿ ರವಿಶಂಕರ್ ಅವರದು ಎಂದಿನ ಅಬ್ಬರ. ಲೀಲಾವತಿ ಖಡಕ್ ತಾಯಿಯಾಗಿ ಇಷ್ಟವಾದರೆ ಸಾಧುಕೋಕಿಲಾ ಕಾಮಿಡಿ ಮನಸ್ಸಿಗೆ ಹತ್ತಿರವಾಗುವಂತಿದೆ. ಒಟ್ಟಿನಲ್ಲಿ ನರಸಿಂಹ, ಯುಗಾದಿಯ ಹಬ್ಬದಂತೆ ಬೇವು-ಬೆಲ್ಲದ ಮಿಶ್ರಣ ಎನ್ನಬಹುದು. ಆದರೂ ಈಗ ಇಂತಹುದೊಂದು ಚಿತ್ರದ ಅಗತ್ಯ ಪ್ರೇಕ್ಷಕರಿಗಿರಲಿಲ್ಲ ಎಂಬುದಂತೂ ಸತ್ಯ.


Click it and Unblock the Notifications











