'ಒರಟ'ಎರಡೂವರೆ ಗಂಟೆ ನಿಮ್ಮನ್ನು ಹಿಡಿದಿಡುತ್ತಾನೆ!
ಇರುವುದಿಲ್ಲ. ಆದರೂ ಎರಡೂವರೆ ಗಂಟೆ ನಿಮ್ಮನ್ನು ಹಿಡಿದಿಡುತ್ತದೆ. ಅದಕ್ಕೆ ಕಾರಣ ಚಿತ್ರಕತೆ. ಇದು ಸಾಧ್ಯವಾಗುವುದು ನಿರ್ದೇಶಕನಿಗೆ ಚಿತ್ರಕತೆ ಮೇಲಿನ ನಂಬಿಕೆ ಮತ್ತು ಅದನ್ನು ಅಷ್ಟೇ ಬಿಗಿಯಾಗಿ ತೋರಿಸುವ ತಾಕತ್ತು ಇದ್ದಾಗ ಮಾತ್ರ. ಈ ಎರಡೂ ಇದ್ದದ್ದಕ್ಕೆ ಒರಟ ಚಿತ್ರವನ್ನು ಎದುರಿಗೆ ಇಟ್ಟಿದ್ದಾರೆ ನಿರ್ದೇಶಕ ಶ್ರೀ. ಈ ಹುಡುಗನಿಗೆ ಇದು ಮೊದಲ ಚಿತ್ರ.ಆದರೆ ಅದಕ್ಕೆ ಯಾವುದೇ ರಿಯಾಯಿತಿ ಬೇಡದಂತೆ ಅವರು ಕೆಲಸ ಮಾಡಿದ್ದಾರೆ.
- ದೇವ್
ಪ್ರತಿಯೊಂದು ಫ್ರೇಮ್ ನಲ್ಲಿ ತಾವೇನು ಹೇಳಬೇಕು ಎನ್ನುವುದು ಶ್ರೀಗೆ ಚೆನ್ನಾಗಿ ಗೊತ್ತು. ಹೀಗಾಗಿ ನೋಡುಗರಿಗೆ ಬೋರ್ ಹೊಡೆಸಿಲ್ಲ. ಇನ್ನೇನು ಕತೆ ಕೆಳಗಿಳಿಯಿತು ಎನ್ನುವಾಗ ಒಂದು ಜಬರ್ ದಸ್ಟ್ ಹಾಡು ಮತ್ತೆ ಎತ್ತಿ ನಿಲ್ಲಿಸುತ್ತದೆ. ಒಂದು ಚಿತ್ರ ಇಷ್ಟವಾಗಲು ಹಲವು ಕಾರಣಗಳಿರುತ್ತವೆ. ಚೆಂದದ ಚಿತ್ರಕತೆ, ಮುದ ನೀಡುವ ಸಂಗೀತ, ಅದಕ್ಕೆ ತಕ್ಕಂತಿರುವ ಹಾಡು, ಏನೋ ಹೊಸದನ್ನು ಹೇಳುವ ಸಂಭಾಷಣೆ. ಇವೆಲ್ಲ ಇದೊಂದೇ ಚಿತ್ರದಲ್ಲಿ ಸಿಗುತ್ತದೆ. ಮತ್ತು ಹೊಸದಾಗಿ ಕಾಣಿಸುತ್ತದೆ. ಇದೇ ಈ ಚಿತ್ರದ ಗೆಲುವಿಗೆ ಮುಖ್ಯ ಕಾರಣ.
ಉಳಿದ ವಿವರಕ್ಕೂ ಮುನ್ನ ಕತೆ ಕೇಳಿಬಿಡಿ. ವರದ ಒಬ್ಬ ಅನಾಥ. ಹೀಗಾಗಿ ಒಳಗೊಂದು ಹೊರಗೊಂದು ಆತನಿಗೆ ಗೊತ್ತಿಲ್ಲ. ಅವನಿಗೆ ಒಂದು ಹುಡುಗಿ ಇಷ್ಟವಾಗುತ್ತಾಳೆ. ಆದರೆ ಆಕೆ ಇನ್ನೊಬ್ಬನ ಪ್ರೀತಿಯಲ್ಲಿ ಬಿದ್ದಿರುತ್ತಾಳೆ. ಹಾಗಂತ ಒರಟ ಸುಮ್ಮನಿರುವುದಿಲ್ಲ. ನಾನೂ ನಿನ್ನನ್ನೇ ಪ್ರೀತಿಸುತ್ತೇನೆ ಎಂದು ಹಿಂದೆ ಬೀಳುತ್ತಾನೆ. ಆಕಸ್ಮಿಕವಾಗಿ ಆಕೆಯ ಪ್ರಿಯಕರ ಮೋಸ ಮಾಡುತ್ತಾನೆ. ನಾಯಕನಿಂದ ಕೊಲೆಯಾಗುತ್ತಾನೆ. ಆಗ ಆಕೆಯನ್ನು ಆತ ತನ್ನ ಮನೆಯಲ್ಲಿ ತಂದಿಟ್ಟುಕೊಳ್ಳುತ್ತಾನೆ. ನಿಧಾನವಾಗಿ ಆಕೆ ಅವನ ಪ್ರೀತಿಯಲ್ಲಿ ಬೀಳುತ್ತಾಳೆ. ಇನ್ನೇನು ಅದನ್ನು ಆತನಿಗೆ ಹೇಳಬೇಕು ಎನ್ನುವಾಗ.. ಮುಂದಾಗುವುದನ್ನು ತೆರೆ ಮೇಲೆ ನೋಡಿ.
ಮೊದಲೇ ಹೇಳಿದಂತೆ ಇದೊಂದು ಸಾಮಾನ್ಯ ಕತೆ. ಅದಕ್ಕೆ ಚಿತ್ರಕತೆಯನ್ನು ಪ್ರಶಸ್ತವಾಗಿ ಹೆಣೆದು ನಿರೂಪಿಸಿದ್ದಾರೆ ಶ್ರೀ. ಇವರ ಜತೆಗೆ ನಿಂತದ್ದು ಸಂಭಾಷಣೆ ಬರೆದ ಅನಿಲ್. ಕೆಲವೊಂದು ಮಾತುಗಳಂತೂ ಶಿಳ್ಳೆ ಗಿಟ್ಟಿಸುವಷ್ಟು ಸೊಗಸಾಗಿವೆ. ಇನ್ನು ಕೆಲವು ಕನ್ನಡ ಚಿತ್ರರಂಗಕ್ಕೆ ಹೊಸ ಥರದ ದನಿ ನೀಡುತ್ತವೆ. ಪಡ್ಡೆ ಹೈಕಳಿಗೆ ಕಿಕ್ ನೀಡುವುದು ಗ್ಯಾರಂಟಿ. ರವಿ ಶಂಕರ್ ಎನ್ನುವ ಹುಡುಗ ನೀಡಿರುವ ಸಂಗೀತದಲ್ಲಿ ಒಂದು ಹಾಡೂ ಮಿಸ್ ಹೊಡೆದಿಲ್ಲ. ಅವರಿಗೆ ಜನರ ನಾಡಿ ಮಿಡಿತ ನಿಖರವಾಗಿ ಗೊತ್ತಿರುವುದರಿಂದ ಸೂಪರ್ ಹಾಡುಗಳು ಹುಟ್ಟಿವೆ. ವಿಶೇಷ ಅಂದರೆ ಈ ಟ್ಯೂನ್ ಗಳನ್ನು ಅವರು ಎಲ್ಲಿಯೂ ಕದ್ದಿಲ್ಲ. ಪಕ್ಕಾ ಫ್ರೆಶ್ ಸಂಗೀತ ಇಡೀ ಚಿತ್ರಕ್ಕೆ ಬೋನಸ್.
ಇನ್ನು ನಾಯಕ ಪ್ರಶಾಂತ್ ತನ್ನ ಶಕ್ತಿ ಮೀರಿ ಅಭಿನಯಕ್ಕೆ ಜೀವ ತುಂಬಲು ಯತ್ನಿಸಿದ್ದಾನೆ. ಕೆಲವು ಕಡೆ ಇಷ್ಟವಾಗುತ್ತಾನೆ. ಕೆಲವು ಕಡೆ ಕಷ್ಟಪಡುತ್ತಾನೆ. ಪಳಗುವ ಕೆಲಸಕ್ಕೆ ಇನ್ನಷ್ಟು ತಯಾರಿ ಮಾಡಲಿ. ನಾಯಕಿ ಸೌಮ್ಯ ಕೂಡ ಇನ್ನೂ ಇದನ್ನೇ ಮಾಡಬೇಕಿದೆ. ಉಳಿದಂತೆ ಸಯ್ಯದ್, ಮಂಡ್ಯ ರಮೇಶ್ ರಿಲ್ಯಾಕ್ಸ್ ನೀಡುತ್ತಾರೆ. ಮುಂಬೈ ಹುಡುಗಿ ಮುಮೈತ್ ಖಾನ್ ಬಳಕುವ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಎಂ.ಡಿ.ಪಲ್ಲವಿ ಹಾಡಿರುವ 'ಶಂಭು ಶಂಭು..' ಹಾಡಂತೂ, ಚಿತ್ರಮಂದಿರದಿಂದ ಹೊರಬಂದರೂ ಹಿಂಬಾಲಿಸುತ್ತಲೇ ಇರುತ್ತದೆ.
ಗ್ಯಾಲರಿ : ಒರಟ ಚಿತ್ರದ ನಾಯಕಿ ಸೌಮ್ಯ


Click it and Unblock the Notifications











