ಕತೆ ಇಲ್ಲದ ಚಿತ್ರಕ್ಕೆ ಮಾಂತ್ರಿಕ ಸ್ಪರ್ಶ ನೀಡಿದ ಪೂರಿ ಜಗನ್ನಾಥ್ರ ಅಪರೂಪದ ಹಾಸ್ಯ ಪ್ರಜ್ಞೆಯೇ ಚಿತ್ರಕತೆಯ ಕೊಂಡಿಗಳು. ಉಂಡಾಡಿ ಗುಂಡ ಅಪ್ಪುಗೆ ಯಥಾ ಪ್ರಕಾರ ಪ್ರಾಣಕ್ಕಿಂತ ನ್ಯಾಯ ಮೇಲು !
ಬೈಗಳು ತಿಂದ ರಾಜ್ಬ್ಯಾನರ್ ಚಿತ್ರದ ಮೊದಲ ಹೀರೋ
ಹೆಸರಿಗೆ ಇದೊಂದು ಪ್ರೇಮಕತೆ. ಅಸಲಿಗೆ ಇಲ್ಲಿ ಕತೆಯೇ ಇಲ್ಲ. ಇರುವುದು ಅಪ್ಪು, ಅಪ್ಪು ಮತ್ತು ಅಪ್ಪು. ಆತನ ರೋಷ ಪ್ರೀತಿಯ ರೂಪಗಳೇ ಚಿತ್ರವನ್ನು ತುಂಬಿದೆ. ಹೀಗೆ ಕತೆ ಇಲ್ಲದ ಚಿತ್ರಕ್ಕೆ ತಮ್ಮ ಮಾಂತ್ರಿಕ ಸ್ಪರ್ಶ ನೀಡಿದವರು ಪೂರಿ ಜಗನ್ನಾಥ್. ಹೊಸ ಹೀರೋನ ಆರ್ರಂಗೇಟಂ ಹೇಗಿರಬೇಕೆಂಬುದನ್ನು ಇವರು ಅರೆದು ಕುಡಿದಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಮಸಾಲೆಯನ್ನು ಸಮಪ್ರಮಾಣದಲ್ಲಿ ಬೆರೆಸಿದ್ದಾರೆ. ಪ್ರತಿಯಾಂದು ಫ್ರೇಮ್ನಲ್ಲಿ ಪುನೀತ್ ಜಾದೂ ಸೃಷ್ಟಿಸಲು ತಕ್ಕ ವೇದಿಕೆ ನಿರ್ಮಿಸಿದ್ದಾರೆ.
ಅಂದ ಹಾಗೆ ಚಿತ್ರಕ್ಕೆ ಕೊಂಡಿಯಂತೆ ಕೆಲಸ ಮಾಡಿದ್ದು ನಿರ್ದೇಶಕರ ಅಪರೂಪದ ಹಾಸ್ಯ ಪ್ರಜ್ಞೆ. ಗಂಭೀರ ದೃಶ್ಯಗಳನ್ನು ತೆಳುವಾಗಿಸುವ ಮತ್ತು ಅದರ ಮೂಡ್ ಕೆಡದಂತಹ ಸೆನ್ಸ್ ಆಫ್ ಹ್ಯೂಮರ್ ವಂಡರ್ಫುಲ್. ಒಬ್ಬ ನಟನನ್ನು ಬರೀ ಸ್ಟಾರ್ ಆಗಿಸುವುದಕ್ಕಿಂತ ಕಲಾವಿದನನ್ನಾಗಿ ರೂಪಿಸುವ ಯತ್ನವನ್ನೂ ಪೂರಿ ಮಾಡಿದ್ದಾರೆ. ಈಡಿಯಟ್, ರ್ಯಾಸ್ಕಲ್, ಸ್ಟುಪಿಡ್, ಎಮ್ಮೆ ತರ್ಲೆ ಮಗ... ಇವೆಲ್ಲ ಅಪ್ಪುವನ್ನು ಉಳಿದ ಪಾತ್ರಗಳು ತೆಗಳುವ ಶಬ್ದಗಳು. ರಾಜ್ ಬ್ಯಾನರಿನ ಚಿತ್ರಗಳ ಹೀರೋ ಈ ರೀತಿ ಬೈಯಿಸಿಕೊಳ್ಳೋದು ನಿಷಿದ್ಧ. ಹಾಗೊಂದು ಮಾತು ಮತ್ತು ನೀತಿ ಅವರಿಗಿದೆ. ಅದನ್ನು ಮುರಿದು ಹೊಸ ಸಂಪ್ರದಾಯ ಶುರು ಮಾಡಿದ್ದೂ ಅವರೇ ಅನ್ನೋದು ಪುನೀತ್ಗೆ ಶುಭ ಸೂಚನೆಯೇ. ಇನ್ನು ಪುನೀತ್ ಕುಣಿತ, ಹೊಡೆದಾಟಗಳಲ್ಲಿ ಪಕ್ಕಾ ಪ್ರೊಫೆಷನಲ್ ಅನ್ನುವುದರಲ್ಲಿ ಎರಡು ಮಾತಿಲ್ಲ.
ಗುರುಗುಡುವ ಆ್ಯಂಗ್ರಿ ಯಂಗ್ ಮ್ಯಾನ್ ಪುನೀತ್ !
ಮೈನಸ್ ಆಗಬಹುದಾಗಿದ್ದ ಅವರ ತೆಳುವಾದ ಧ್ವನಿ ಡೈಲಾಗ್ ಒಪ್ಪಿಸುವ ಭಿನ್ನ ರೀತಿಯಿಂದಲೇ ಪಾಸಿಟಿವ್ ಆಗಿದೆ. ತಲೆಯಲ್ಲಿ ಬಂದಿದ್ದನ್ನು ಹಾಗ್ಹಾಗೆ ಬಾಯಿಯಲ್ಲಿ ಹೇಳುವ ಹುಡುಗನಾಗಿ, ದೇಹಕ್ಕಿಂತ ಹೃದಯ ಶ್ರೀಮಂತಿಕೆಯನ್ನು ಪ್ರೀತಿಸುವ ಪ್ರೇಮಿಯಾಗಿ, ತಪ್ಪು ಮಾಡದಿದ್ದರೆ ನಾನ್ಯಾಕೆ ಸುಮ್ಮನಿರಲಿ ಎಂದು ಗುರುಗುಡುವ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಪುನೀತ್ ಇಷ್ಟವಾಗತ್ತಾರೆ. ಶ್ರೀನಿವಾಸ ಮೂರ್ತಿ, ಸತ್ಯರಾಜ್, ಸುಮಿತ್ರಾ, ವಿನಾಯಕ ಜೋಷಿ, ಅವಿನಾಶ್ ತಮ್ಮ ಪಾತ್ರವನ್ನು ಚೊಕ್ಕವಾಗಿ ಮುಗಿಸಿದ್ದಾರೆ.
ಹಾಡುಗಳು ನೆನಪಿನಲ್ಲಿ ಉಳಿಯುವುದು ಸ್ವಲ್ಪ ಕಷ್ಟ. ಒಂದೆರಡು ಹಾಡು ಕೇಳುವಂತಿದ್ದರೂ ಓಹೋ ಅನ್ನುವಂತಿಲ್ಲ. ಅದು ಗುರುಕಿರಣ್ ಸಂಗೀತದ ಶೇಕಡಾ ಐವತ್ತರಷ್ಟು ಶಾಪ. ಏನೇ ಆದರೂ ಪುನೀತ್ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಹೊತ್ತು ನಿಭಾಯಿಸಿದ್ದಾರೆ. ಮೊದಲ ಚಿತ್ರದಲ್ಲೇ ಕಚಗುಳಿ ಇಟ್ಟಿರುವ ಪುನೀತ್ಗೆ ವೆಲ್ಕಮ್ ಹೇಳುವುದು ಉತ್ಪ್ರೇಕ್ಷೆಯಲ್ಲ.
(ವಿಜಯ ಕರ್ನಾಟಕ)
ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











