‘ಆಪ್ತಮಿತ್ರ’ನಿಗೊಂದು ವಿಶ್ ಮಾಡಿ
- ಮಹೇಶ ದೇವಶೆಟ್ಟಿ
ಅದೇ ಡ್ಯೂಯೆಟ್ಟು, ಅದೇ ಕಾಲೇಜು, ಅದೇ ಸೆಂಟಿಮೆಂಟು ನೋಡಿ ಬೇಸತ್ತವರಿಗೆ ಆಪ್ತಮಿತ್ರ ವೆಕೇಶನ್ ಗಿಫ್ಟ್ ರೂಪದಲ್ಲಿ ಬಂದಿದೆ. ಈ ವಷ ರ್ ತೆರೆಕಂಡ ಕೆಲವೇ ಉತ್ತಮ ಚಿತ್ರಗಳಲ್ಲಿ ನಿರೂಪಣೆ ಮಟ್ಟಿಗೆ ಮಾತ್ರಇದಕ್ಕೇ ಫಸ್ಟ್ ಫ್ರೆೃಜು ಕೊಡುವಂತಿದೆ.
ಹಾಗಾದರೆ ಇದರಲ್ಲಿ ಅದ್ಭುತವಾದ ಕತೆ ಇರಲೇ ಬೇಕು ಅಂತ ತಿಳಿದರೆ ಅದು ನಿಮ್ಮ ತಪ್ಪು. ಯಾಕೆಂದರೆ ಇದೊಂದು ಸಾಮಾನ್ಯ ಕತೆ. ಒಂದು ಊರು . ಅಲ್ಲಿ ದೊಡ್ಡ ದೊಂದು ಬಂಗಲೆ. ನೂರೈವತ್ತು ವರ್ಷಗಳ ಹಿಂದೆ ರಾಜ ಮನೆತನ ಅಲ್ಲಿ ವಾಸವಾಗಿರುತ್ತದೆ. ರಾಣಿ, ಪಕ್ಕದ ಮನೆಯ ಹುಡುಗನೊಂದಿಗೆ ಸಂಬಂಧ ಬೆಳೆಸಿರುತ್ತಾಳೆ. ಇದು ಗೊತ್ತಾದ ನಂತರ ಅವರಿಬ್ಬರನ್ನು ರಾಜ ಏನು ಮಾಡಿದನೆಂದು ಹೇಳೋದೇ ಬೇಕಾಗಿಲ್ಲ. ಅದೇ ಮನೆಗೆ ರಮೇಶ್- ಸೌಂದರ್ಯ ಬರುತ್ತಾರೆ. ರಾಣಿ ಇದ್ದ ರೂಮಿನ್ ಬಾಗಿಲು ತಗೆದಾಗಿನಿಂದ ಆ ಬಂಗಲೆಯಲ್ಲಿ ಚಿತ್ರವಿಚಿತ್ರ ಘಟನೆಗಳು ಶುರುವಾಗುತ್ತವೆ. ಅಲ್ಲಿಗೆ ಬರುವ ಸೈಕಿಯಾಟ್ರಿಸ್ಟ್ ಆ ರಹಸ್ಯ ಭೇದಿಸಲು ಮುಂದಾಗುತ್ತಾನೆ. ಆ ಮನೆಯ ಒಬ್ಬರಲ್ಲಿ ದೆವ್ವ ಹೊಕ್ಕಿದೆ ಅನ್ನುವುದು ಎಲ್ಲರಿಗೂ ಖಾತ್ರಿಯಾಗುತ್ತದೆ. ಮುಂದಾಗುವುದನ್ನು ಇಲ್ಲಿಯೇ ಹೇಳಿಬಿಟ್ಟರೆ ನೋಡೋದಿಕ್ಕೆ ನಿಮಗೇನೂ ಉಳಿಯಾಲ್ಲ , ಸೋ, ಇಲ್ಲಿಗೇ ಇಂಟರ್ವೆಲ್..
ದೆವ್ವ- ಭೂತ ಕನ್ನಡಕ್ಕೆ ಹೊಸತಲ್ಲ. ದೆವ್ವವನ್ನು ದೇವರಿಂದ ಮಾತ್ರ ಸೋಲಿಸಲು ಸಾಧ್ಯ ಅನ್ನುವುದೇ ಇದುವರೆಗೆ ಬಂದ ಚಿತ್ರಗಳ ಹೂರಣವಾಗಿತ್ತು. ಅದು ಬಲುಬೇಗ ‘ ಮಾರಾಟ’ ವಾಗುವ ಹಾಗೂ ಜನರನ್ನು ಮೋಸಮಾಡುವ ಸುಲಭ ಸಾಧನವೂ ಹೌದು. ಆದರೆ ಅದನ್ನು ಕೈಬಿಟ್ಟು ಹಾರರ್ ಕಥೆಗೊಂದು ವಾಸ್ತವದ ಟಚ್ ಕೊಟ್ಟಿರುವುದು ಅಪ್ತಮಿತ್ರನ ಹೆಗ್ಗಳಿಕೆ. ಮಂತ್ರವಾದಿಗಿಂತ ಸೈಕಿಯಾಟ್ರಿಸ್ಟ್ ಇಲ್ಲಿ ಮೇಲುಗೈ ಸಾಧಿಸುತ್ತಾನೆ. ದೇವರನ್ನು ಕರೆದು ದೆವ್ವವನ್ನು ಓಡಿಸುವ ಬದಲಿಗೆ ದೆವ್ವಕ್ಕೆ ಮೋಸ ಮಾಡಿ ವೈಚಾರಿಕತೆಗೆ ಗೆಲವು ತರುತ್ತಾನೆ.
ಇದಿಷ್ಟೇ ಆಗಿದ್ದರೆ ಇದೊಂದು ಡಾಕ್ಯುಮೆಂಟರಿ ಆಗುವ ಅಪಾಯವಿತ್ತು . ಹಾಗಾಗದಂತೆ ತಡೆ ಹಿಡಿದದ್ದು ನಿರ್ದೇಶಕ ಪಿ. ವಾಸು ಅವರ ಸ್ಕಿೃಪ್ಟ್ ಮೇಲಿನ ಹಿಡಿತ. ಅದಕ್ಕಿಂತ ಹೆಚ್ಚಾಗಿ ನಿರೂಪಣೆಗೆ ದಕ್ಕಿರುವ ಬಿಗಿತ. ಯಾವುದನ್ನು ಎಷ್ಟು ಹೇಳಬೇಕು ಅನ್ನುವುದು ಅವರಿಗೆ ಗೊತ್ತು. ಯಾವ ದೃಶ್ಯ ಎಳೆಯಬಾರದೆಂದೂ ಗೊತ್ತು. ಅವರ ಸಮಸಮ ನಿಂತದ್ದು ಕ್ಯಾಮರಾಮನ್ ರಮೇಶ್ಬಾಬು. ಒಂದೇ ಒಂದು ಮನೆಯಲ್ಲಿ ನಡೆವ ಇಡೀ ಕತೆಯನ್ನು ಎರಡೂವರೆ ಗಂಟೆ ಅವರೂ ಕ್ಯಾಮರಾ ಕಣ್ಣು ಅಡ್ಡಾಡಿದ್ದಿದೆಯಲ್ಲಾ.. ಅದನ್ನು ನೋಡಿಯೇ ಸವಿಸಬೇಕು. ಇವರೊಂದಿಗೆ ನಾನೇನು ಕಡಿಮೆ ಎಂದು ಬಂದು ನಿಲ್ಲುತ್ತಾರೆ ಸಂಗೀತ ನಿರ್ದೇಶಕ ಗುರುಕಿರಣ್, ಹಿನ್ನೆಲೆ ಸಂಗೀತದಲ್ಲಿ ಅವರು ತೋರಿಸಿದ ತನ್ಮಯತೆ ಮಾರ್ವೆಲಸ್. ಶಾಸ್ತ್ರೀಯ ಸಂಗೀತದ ಧಾಟಿಯ ಎರಡು ಹಾಡುಗಳು ಸಂಗೀತದ ಬಗ್ಗೆ ಪ್ರೀತಿ ಮೂಡಿಸುತ್ತದೆ. ಹಾಗೆಯೇ ಚಿತ್ರದ ಎಡಿಟಿಂಗ್ ಕೂಡಾ ಎಲ್ಲರ ಜೊತೆ ಹೆಜ್ಜೆ ಹಾಕಿದೆ.
ಬಹಳ ವರ್ಷದ ನಂತರ ವಿಷ್ಣು ಜೋವಿಯಲ್ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಾಷೆ ವ್ಯಕ್ತಿಯಂತೆ ಕಂಡರೂ ಅದಕ್ಕೊಂದು ಗಂಭೀರತೆ ತರುವುದು ಅವರೊಳಗಿನ ಸೈಕಿಯಾಟ್ರಿಸ್ಟ್. ಮೊದಮೊದಲು ಏನೇನೂ ಅಲ್ಲವೆನಿಸುವ ಸೌಂದರ್ಯ ಕೊನೆಯ ಅರ್ಧ ಗಂಟೆಯಲ್ಲಿ ಮೆದುಳಿಗೇ ಕೈ ಹಾಕಿ ಅಲ್ಲಾಡಿಸಿ ಬಿಡುತ್ತಾರೆ.
ನರಳುವ ರಮೇಶ, ಹೆದರುವ ಪ್ರೇಮಾ, ಕೊರಗುವ ಸಯ್ಯದ್, ಥರಗುಡುವ ದ್ವಾರಕೀಶ್, ವಟಗುಡುವ ಪ್ರಮೀಳಾ ಜೋಷಾಯ್... ಎಲ್ಲರೂ ಆಪ್ತರಾಗುತ್ತಾರೆ. ಇದುವರೆಗೆ ತಾವೇ ನಿರ್ಮಿಸಿದ ಚಿತ್ರಗಳ ಜಾಡನ್ನು ಬಿಟ್ಟು ಹೊಸ ಹಾಡಿಗೆ ಹೆಜ್ಜೆ ಹಾಕಿರುವ ದ್ವಾರಕೀಶ್ ಸೂಪರ್ ಲೊಟ್ಟೊ ಹೊಡೆವ ಎಲ್ಲ ಲಕ್ಷಣಗಳೂ ಇದರಲ್ಲಿದೆ. ಅದಕ್ಕೆ ‘ಆಪ್ತಮಿತ್ರ’ ನೀವೊಂದು ವಿಶ್ ಮಾಡಬೇಕಷ್ಟೆ .
(ಸ್ನೇಹಸೇತು : ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











