ಚಾಕ್ಲೆಟ್ ಹೀರೋ ನವೀನ್ ಮಯೂರ್, ಬಿಚ್ಚಮ್ಮ ರುಚಿತಾ, ಚೆಂದದ ಹುಡುಗಿ ಭಾವನಾ ಪಾಣಿ, ಅಭಿನಯವನ್ನು ಇನ್ನೂ ಕಲಿಯುತ್ತಿರುವ ದರ್ಶನ, ಏನೋ ಮಾಡಲು ಹೋಗಿ ಏನೋ ಮಾಡುವ ನಿರ್ದೇಶಕ ಯೋಗೀಶ್ ಹುಣಸೂರು- ಇವರೆಲ್ಲರ ಸಂಗಮವೇ, ನಿನಗೋಸ್ಕರ !
ಕನ್ನಡದ ಮಟ್ಟಿಗೆ ಕತೆಯ ಕಲ್ಪನೆ ಹೊಚ್ಚ ಹೊಸತು. ನಿರೂಪಣೆಯಲ್ಲೂ ವಿಭಿನ್ನತೆ ಇದೆ. ಆದರೆ ನಿರ್ದೇಶಕ ಯೋಗೀಶ್ ಹುಣಸೂರ್ ಅವರಿಗೆ ಇದನ್ನು ಹಾಸ್ಯ ಚಿತ್ರ ಮಾಡಬೇಕೊ ಅಥವಾ ಗಂಭೀರತೆಯ ಲೇಪ ಕೊಡಬೇಕೊ ಎಂಬ ಗೊಂದಲ ಚಿತ್ರದುದ್ದಕ್ಕೂ ಕಾಡಿದಂತಿದೆ. ಕತೆಗೆ ತಕ್ಕಂತೆ ದೃಶ್ಯಗಳನ್ನು ರೂಪಿಸುವುದರಲ್ಲಿ ಅವರು ಸೋತಿದ್ದಾರೆ.
ದರ್ಶನ್ ಮೈ ಚಳಿ ಬಿಟ್ಟು ಅಭಿನಯಿಸುವುದನ್ನು ರೂಢಿಸಿಕೊಳ್ಳಬೇಕು. ನಿನಗೋಸ್ಕರ ದರ್ಶನ್ ಅಭಿನಯದ ಮೂರನೇ ಚಿತ್ರ. ತಮ್ಮದೇ ಆದ ಡೈಲಾಗ್ ಡೆಲಿವರಿ, ನಟನೆಯ ಪಂಚ್ ನೀಡುವಲ್ಲಿ ಸ್ವಲ್ಪವಾದರೂ ಪ್ರಯತ್ನಿಸಬೇಕು.
ಅನಿವಾಸಿ ಭಾರತೀಯನಂತೆ ಮಾತಾಡುವ ನವೀನ್ ಮಯೂರ್ ಸಂಭಾಷಣೆ ಒಪ್ಪುವುದು ಕಷ್ಟ. ಚಾಕೊಲೇಟ್ ಹುಡುಗನಾಗಿ ಮಾತ್ರ ಇಷ್ಟ. ರುಚಿತಾ ತನ್ನ ದೇಹದ ರುಚಿಯಾದ ಭಾಗಗಳನ್ನು ರುಚಿಗೆ ತಕ್ಕಷ್ಟು ತೋರಿಸಿದ್ದಾಳೆ. ಮತ್ತೊಮ್ಮೆ ಕಾಶೀನಾಥ್ ಚಿತ್ರ ಮಾಡಿದರೆ ಅದರಲ್ಲಿ ನಾಯಕಿಯಾಗುವ ಎಲ್ಲ ಪೂರ್ವ ತಯಾರಿ ಮಾಡಿದ್ದಾಳೆ.
ನಗಿಸುವ ಕೋಮಲ್, ಅಚ್ಚಕನ್ನಡಿಗ ಕಾಶಿ ನೆನಪಿನಲ್ಲಿ ಉಳಿಯುತ್ತಾರೆ. ಚೈತನ್ಯ ಹಿನ್ನೆಲೆ ಸಂಗೀತ ಕತೆಗೆ ತಕ್ಕಂತಿದೆ. ರಮೇಶ್ಬಾಬು ಫೋಟೊಗ್ರಫಿ ಚಿತ್ರದ ಹೈಲೈಟ್. ಕಲಾ ನಿರ್ದೇಶಕನ ಕುಸುರಿತನ ಕಣ್ಣಿಗೆ ಖುಷಿ ಕೊಡುತ್ತದೆ. ಹಾಗೆಯೇ ನವ ನಟ-ನಟಿಯರ ವಸ್ತ್ರ ವಿನ್ಯಾಸದ ಸೊಬಗು ಜೊತೆಗೆ ಚೆಂದದ ಲೊಕೇಶನ್ನುಗಳು.
ತನ್ನೆಲ್ಲ ಮಿತಿಗಳ ನಡುವೆಯೂ ಯೋಗೀಶ್ ಏನೋ ಮಾಡಲು ಹೊರಟಿದ್ದಾರೆ. ಆದರದು ಏನೇನೊ ಆಗಿದೆ. ಹಾಗಂತ ಹೇಳುವುದಕ್ಕಾದರೂ ಚಿತ್ರವನ್ನೊಮ್ಮೆ ನೋಡಬಹುದು. ನಂತರ ಅದು ಯಾರಿಗೋಸ್ಕರ ಅನ್ನುವುದನ್ನು ತೀರ್ಮಾನಿಸಬಹುದು.
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











