‘ಪೂಜಾರಿ’ ಜಾರದೆ ಎದ್ದು ನಿಂತ!
ಕತೆ ಕೇಳಿದ ತಕ್ಷಣ ನಿಮಗೆ ಓಂ, ಜೋಗಿ ಮತ್ತು ಕೆಲವು ರೌಡಿಸಂ ಚಿತ್ರಗಳು ನೆನೆಪಾದರೆ ಅಚ್ಚರಿಯಿಲ್ಲ. ಆದರೂ ನಿರ್ದೇಶಕ ಶರಣ್ ಕೆಲವು ಹೊಸ ವಿಷಯಗಳನ್ನು ಸೇರಿಸಿದ್ದಾರೆ!
ಚಿತ್ರ : ಪೂಜಾರಿ
ನಿರ್ಮಾಣ : ಮೋಹನ್ ಕುಮಾರ್ ಹಾಗೂ ಮಲ್ಲಿಕಾರ್ಜುನ
ಕತೆ-ಚಿತ್ರಕತೆ-ನಿರ್ದೇಶನ : ಶರಣ್
ಸಂಗೀತ : ಅಭಿಮನ್
ತಾರಾಗಣ : ಆದಿ ಲೋಕೇಶ್, ನೀತಾ, ರಮೇಶ್ ಭಟ್, ಮುನಿರಾಜು, ತುಳಸಿ ಮತ್ತಿತರರು.
ಲಾಂಗಾ? ಲೈಫಾ? ಹೀಗಂತ ಕೇಳುತ್ತದೆ ‘ಪೂಜಾರಿ’ ಚಿತ್ರದ ಜಾಹೀರಾತು. ಅಲ್ಲಿಗೆ ಇದೊಂದು ರೌಡಿಸಂ ಕತೆಯೆಂದು ಗೊತ್ತಾಗುತ್ತದೆ.
‘ಪೂಜಾರಿ’ ಹೆಸರಿಗೂ ರೌಡಿಗೂ ಎಲ್ಲಿಯ ಸಂಬಂಧ ಎನ್ನುವಂತಿಲ್ಲ. ನಮ್ಮ ಗಾಂಧಿನಗರಕ್ಕೆ ಕ್ಯಾಚಿ ಟೈಟಲ್ ಬೇಕು. ಅದಕ್ಕೆ ಸರಿಯಾಗಿ ಕತೆ ಹೆಣೆಯುತ್ತಾರೆ.
ಪೂಜಾರಿಯಾಗಿದ್ದ ನಾಯಕನನ್ನು ಹುಡುಗಿಯಾಬ್ಬಳು ಪ್ರೀತಿಸುತ್ತಾಳೆ. ಆದರೆ ಆಕೆಯ ಮಾವ ಒಬ್ಬ ರೌಡಿ. ತಾನು ಮದುವೆಯಾಗಬೇಕೆಂದಿದ್ದ ಹುಡುಗಿ ಇನ್ನೊಬ್ಬನನ್ನು ಪ್ರೀತಿಸುವುದನ್ನು ಸಹಿಸದ ಆತ ಅವನ ಮನೆಗೆ ನುಗ್ಗಿ ಗಲಾಟೆ ಮಾಡುತ್ತಾನೆ. ಹೊಡೆಯುತ್ತಾನೆ. ಅವನ ತಂಗಿಯ ಮದುವೆಯನ್ನು ನಿಲ್ಲಿಸುತ್ತಾನೆ. ಅದರಿಂದ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅಪ್ಪ ಸಾಯುತ್ತಾನೆ.
ಪೂಜಾರಿ ಲಾಂಗ್ ಕೈಗೆತ್ತಿಕೊಳ್ಳಲು ಇನ್ನೆಷ್ಟು ಹೊತ್ತು ಬೇಕು? ಅಲ್ಲಿಂದ ರಕ್ತಪಾತ ಶುರು. ಪೂಜಾರಿಯನ್ನು ಮುಗಿಸಲು ಎರಡು ತಂಡಗಳು ತಯಾರಾಗುತ್ತವೆ. ಮುಂದೇನಾಗುತ್ತದೆ... ತೆರೆ ಮೇಲೆ ನೋಡಿ...
ಕತೆ ಕೇಳಿದ ತಕ್ಷಣ ನಿಮಗೆ ಓಂ, ಜೋಗಿ ಮತ್ತು ಕೆಲವು ರೌಡಿಸಂ ಚಿತ್ರಗಳು ನೆನೆಪಾದರೆ ಅಚ್ಚರಿಯಿಲ್ಲ. ಅದಲ್ಲದೆ ಭೂಗತ ಲೋಕವೆಂದರೆ ಇನ್ನೆಂಥ ವಿಭಿನ್ನ ಕತೆ ತರಲು ಸಾಧ್ಯ. ಆದರೂ ನಿರ್ದೇಶಕ ಶರಣ್ ಕೆಲವು ಹೊಸ ವಿಷಯಗಳನ್ನು ಸೇರಿಸಿದ್ದಾರೆ.
ಅದಕ್ಕೆ ಮೊದಲ ಬಾರಿ ನಾಯಕನಾದ ಆದಿ ಲೋಕೇಶ್ ಸಾಥ್ ನೀಡಿದ್ದಾರೆ. ಈಗಾಗಲೇ ‘ಜೋಗಿ’ಯ ಬಿಡ್ಡನಾಗಿ ಹೆಸರು ಮಾಡಿದ್ದ ಆದಿ ಇಲ್ಲಿ ಅದನ್ನು ಮುಂದುವರಿಸಿದ್ದಾರೆ. ಹೊಡೆದಾಟ ಮತ್ತು ಸಂಭಾಷಣೆ ಹೇಳುವ ಶೈಲಿಯಲ್ಲಿ ಮಿಂಚಿದ್ದಾರೆ. ಆದರೆ ಸೆಂಟಿಮೆಂಟ್ ಮತ್ತು ಕುಣಿತ ಅವರಿಗಿನ್ನೂ ಹಿಡಿತಕ್ಕೆ ಸಿಕ್ಕಿಲ್ಲ. ಸುಂದರ ಹೂವಂತೆ ನೀತು ಅಭಿನಯಿಸಿದ್ದಾರೆ. ಮುಖ್ಯ ವಿಲನ್ ಮುನಿ ಭರವಸೆ ಮೂಡಿಸುತ್ತಾರೆ. ಅವರ ಹೊಸ ಮ್ಯಾನರಿಸಂ ಮಾಸ್ಗೆ ಇಷ್ಟವಾಗುತ್ತದೆ. ಆದರೆ ಅವರನ್ನು ಸರಿಯಾಗಿ ಬಳಸಿಕೊಳ್ಳಬೇಕಷ್ಟೇ.
ಅಭಿಮನ್ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ಆದರೆ ಹಿನ್ನೆಲೆ ಸಂಗೀತದಲ್ಲಿ ಗದ್ದಲ ಜಾಸ್ತಿಯಾಯಿತು. ಚಿತ್ರಕತೆಯಲ್ಲಿ ಇನ್ನಷ್ಟು ಬಿಗಿ ಇದ್ದರೆ ಚೆನ್ನಾಗಿತ್ತು. ಎಲ್ಲವನ್ನೂ ಮಾತಿನಲ್ಲೇ ಹೇಳುವ ಅಗತ್ಯ ಇರಲಿಲ್ಲ. ಒಟ್ಟಿನಲ್ಲಿ ಹೊಡೆದಾಟ ಪ್ರಿಯರಿಗೆ ಪೂಜಾರಿ ಸಕತ್ ತೀರ್ಥ ಪ್ರಸಾದ ಕೊಡ್ತಾನೆ ಬಿಡಿ...
(ಸ್ನೇಹ ಸೇತು -ವಿಜಯ ಕರ್ನಾಟಕ)


Click it and Unblock the Notifications











